ಪುಲಕೇಶಿ
ಪುಲಕೇಶಿ
ಬಾದಾಮಿಯ ಚಾಳುಕ್ಯ ವಂಶದ ಅರಸರ ಪೈಕಿ ಈ ಹೆಸರಿನ ದೊರೆಗಳು ಇಬ್ಬರಿದ್ದಾರೆ.
ಮೊದಲನೆ ಪುಲಕೇಶಿಯ ಕಾಲ ಸುಮಾರು ಕ್ರಿ. ಶ. 540-566. ಇವನು ಚಾಲುಕ್ಯ ವಂಶದ ನಿಜವಾದ ಸ್ಥಾಪಕ. ರಣರಾಗನ ಮಗ. ಕದಂಬರನ್ನು ಸೋಲಿಸಿ ತನ್ನದೇ ಆದ ರಾಜ್ಯವನ್ನು ಸ್ಥಾಪಿಸಿದ. ಇವನ ರಾಜಧಾನಿ ಬಾದಾಮಿ. ಇವನು ಹಲವು ಯುದ್ಧಗಳಲ್ಲಿ ಗೆದ್ದು ಅಶ್ವಮೇಧವೇ ಮುಂತಾದ ಯಾಗಗಳನ್ನಾಚರಿಸಿದ. ಬಾದಾಮಿಯಲ್ಲಿ ಭದ್ರವಾದ ಕೋಟೆಯನ್ನು ಕಟ್ಟಿಸಿದ. ವಲ್ಲಭ ಅಥವಾ ವಲ್ಲಭೇಶ್ವರ ಅಥವಾ ಪೃಥ್ವೀವಲ್ಲಭ ಎಂಬುದು ಈತನ ಬಿರುದು. ಇವನ ಅನಂತರ ಬಂದ ಅರಸರೂ ಈ ಬಿರುದನ್ನು ತಳೆದರು. ಇವನು 566ರ ವರೆಗೂ ರಾಜ್ಯವಾಳಿದನೆಂದೂ ಹೇಳಬಹುದು. ಪುಲಕೇಶಿಯ ಅನಂತರ 1 ನೆಯ ಕೀರ್ತಿವರ್ಮ ಪಟ್ಟಕ್ಕೆ ಬಂದ.
ಇಮ್ಮಡಿ ಪುಲಕೇಶಿಯ ಕಾಲ ಸುಮಾರು ಕ್ರಿ. ಶ. 610-642. ಈತ ಬಾದಾಮಿ ಚಾಲುಕ್ಯ ಸಾಮ್ರಾಟರಲ್ಲೆಲ್ಲ ಅತ್ಯಂತ ಸುಪ್ರಸಿದ್ಧ ಚಕ್ರವರ್ತಿ. ಇವನು 1 ನೆಯ ಕೀರ್ತಿವರ್ಮನ ಹಿರಿಯ ಮಗ. ತಂದೆಯ ಮರಣದ ಕಾಲದಲ್ಲಿ ಇವನು ಇನ್ನೂ ಚಿಕ್ಕ ವಯಸ್ಸಿನವನಾದ್ದರಿಂದ ಇವನ ಚಿಕ್ಕಪ್ಪ ಮಂಗಲೇಶ ಆಡಳಿತ ಸೂತ್ರವನ್ನು ವಹಿಸಿಕೊಂಡ. ಮಂಗಲೇಶ ತನ್ನ ಕೊನೆಯ ಕಾಲದಲ್ಲಿ ಸಿಂಹಾಸನವನ್ನು ನಿಜವಾದ ಹಕ್ಕುದಾರನಾದ ಪುಲಕೇಶಿಯಿಂದ ತಪ್ಪಿಸಿ ತನ್ನ ಮಗನಿಗೆ ಕೊಡಬೇಕೆಂಬ ಉದ್ದೇಶದಿಂದ ಪುಲಕೇಶಿಯನ್ನು ದೂರವಿಟ್ಟನೆಂದೂ ಪ್ರಾಪ್ತ ವಯಸ್ಕನಾಗಿದ್ದ ಪುಲಕೇಶಿ ಈ ಸಂಚನ್ನು ತಿಳಿದು ತನ್ನ ಹಕ್ಕನ್ನು ಸ್ಥಾಪಿಸಲು ಬಂಡೆದ್ದನೆಂದೂ ಹೇಳಲಾಗಿದೆ. ಈ ಅಂತರ್ಯುದ್ಧದ ವಿವರಗಳು ದೊರೆಯುವುದಿಲ್ಲ. ಮಂಗಲೇಶ ಈ ಹೋರಾಟದಲ್ಲಿ ಮರಣ ಹೊಂದಿದ.
ಪುಲಕೇಶಿ 610ರಲ್ಲಿ ಬಾದಾಮಿಯ ಚಾಳುಕ್ಯ ಅರಸನಾಗಿ 642ರವರೆಗೂ ಆಳಿದ. ಇವನು ಪಟ್ಟಕ್ಕೆ ಬಂದಾಗ ಅಂತರ್ಯುದ್ಧದಿಂದ ರಾಜ್ಯದಲ್ಲಿ ಅನಾಯಕತ್ವ ಉಂಟಾಗಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಚಾಳುಕ್ಯರ ವೈರಿಗಳು ಪ್ರಬಲರಾಗಿ, ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದ್ದರು. ಪುಲಕೇಶಿ ಅಧಿಕಾರ ವಹಿಸಿಕೊಂಡ ಕೂಡಲೇ ಅರಾಜಕತೆಯನ್ನು ಕೊನೆಗೊಳಿಸಿ ಸಾಮ್ರಾಜ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ. ಪುಲಕೇಶಿಯ ಸಾಧನೆಗಳನ್ನು ತಿಳಿಯಲು ಇವನ ಐಹೊಳೆ ಶಾಸನ ಮತ್ತು ಹ್ಯೂಯೆನ್ತ್ಸಾಂಗನ ಬರವಣಿಗೆ ಅಮೂಲ್ಯ ದಾಖಲೆಗಳಾಗಿವೆ. ಜೈನ ಕವಿ ರವಿಕೀರ್ತಿ ರಚಿಸಿದ ಐಹೊಳೆ ಪ್ರಶಸ್ತಿಯೂ ಚಾಳುಕ್ಯರ ಪೂರ್ವಚರಿತ್ರೆ ಹಾಗೂ ಪುಲಕೇಶಿಯ ದಿಗ್ವಿಜಯಗಳನ್ನು ಚಿತ್ರಿಸುತ್ತದೆ.
ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿಯ ಲಾಭವನ್ನು ಪಡೆದು ಅಪ್ಪಾಯಿಕ ಮತ್ತು ಗೋವಿಂದ ಎಂಬ ರಾಷ್ಟ್ರಕೂಟ ಪ್ರಮುಖರು ಪುಲಕೇಶಿಯ ವಿರುದ್ಧ ದಂಗೆ ಎದ್ದರು. ಪುಲಕೇಶಿ ತನ್ನ ಸೈನ್ಯದ ಸಹಾಯದಿಂದ ದಂಗೆಕೋರರನ್ನು ಭೀಮಾ ನದಿಯ ದಂಡೆಯಲ್ಲಿ ಎದುರಿಸಿದ. ಅಪ್ಪಾಯಿಕ ಹೆದರಿ ರಣರಂಗದಿಂದ ತಲೆಮರೆಸಿಕೊಂಡು ಓಡಿದ. ಗೋವಿಂದ ಶರಣಾಗತನಾದ. ಅನಂತರ ಪುಲಕೇಶಿ ಕದಂಬರ ವಿರುದ್ಧ ದಂಡೆತ್ತಿ ಹೋಗಿ ಆವರನ್ನು ಸೋಲಿಸಿ ಬನವಾಸಿಯನ್ನು ಮುತ್ತಿ ವಶಪಡಿಸಿಕೊಂಡನೆಂದು ಐಹೊಳೆ ಶಾಸನ ಹೇಳುತ್ತದೆ. ಮುಂದೆ ಇವನು ಗಂಗರನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಳುಪರನ್ನು ಸೋಲಿಸಿದ. ತನ್ನ ಸೈನ್ಯವನ್ನು ಕೊಂಕಣದ ಕಡೆಗೊಯ್ದು ಮೌರ್ಯರನ್ನು ಸೋಲಿಸಿ, ಲಾಟ, ಮಾಳವ ಮತ್ತು ಗುಜರಾತಿನ ರಾಜರನ್ನು ಗೆದ್ದು, ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದ. ಐಹೊಳೆಯ ಶಾಸನದ ಪ್ರಕಾರ ಪುಲಕೇಶಿ ಉತ್ತರ ದೇಶದ ಸಮರ್ಥ ಹರ್ಷ ಚಕ್ರವರ್ತಿಯನ್ನು ಎದುರಿಸಿದ. ಹುಯನ್ತ್ಸಾಂಗನೂ ಈ ಬಗ್ಗೆ ವಿವರಣೆ ನೀಡಿದ್ದಾನೆ. ಮಗಧ ದೇಶಾಧಿಪತಿ ಹರ್ಷನ ಹಾಗೂ ದಕ್ಷಿಣಾಪಥಾಧಿಪತಿ ಪುಲಕೇಶಿಯ ಅಧಿಕಾರ ವಿಸ್ತರಣೆಯ ಉತ್ಕಟಾಕಾಂಕ್ಷಿಗಳೇ ಈ ಘರ್ಷಣೆಗೆ ಮೂಲ. ಹರ್ಷಪೂರ್ಣ ವಿಶ್ವಾಸದಿಂದ ತನ್ನ ದೊಡ್ಡ ಸೈನ್ಯದೊಡನೆ ಪುಲಕೇಶಿಯ ಮೇಲೆ ದಂಡೆತ್ತಿ ಹೊರಟ. ಆದರೆ, ಅವನು ಜಯ ಸಾಧಿಸುವುದರಲ್ಲಾಗಲೀ ಪುಲಕೇಶಿಯನ್ನು ಹತ್ತಿಕ್ಕುವುದರಲ್ಲಾಗಲೀ ವಿಫಲನಾದನೆಂದು ಹುಯನ್ತ್ಸಾಂಗ್ ತಿಳಿಸುತ್ತಾನೆ. ಈ ಯುದ್ಧ 630-634ರ ಅವಧಿಯಲ್ಲಿ ನಡೆಯಿತೆಂದು ತಿಳಿದುಬರುತ್ತದೆ. ಯುದ್ಧದಲ್ಲಿ ಹರ್ಷ ಸೋತು ಹಿಂದಿರುಗಿದ. ವಿಜಯಿಯಾದ ಪುಲಕೇಶಿ ಪರಮೇಶ್ವರ ಎಂಬ ಬಿರುದನ್ನು ಧರಿಸಿದ. ನರ್ಮದಾ ನದಿ ಚಾಳುಕ್ಯ ಸಾಮ್ರಾಜ್ಯದ ಗಡಿಯಾಯಿತು. ಈ ದಂಡಯಾತ್ರೆಗಳಿಂದ ಪುಲಕೇಶಿ ಸುಮಾರು 99,000 ಗ್ರಾಮಗಳನ್ನೊಳಗೊಂಡ ಮಹಾರಾಷ್ಟ್ರಕಗಳ ಅಧಿಪತಿಯಾದನೆಂದು ಹೇಳಲಾಗಿದೆ. ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಕರಾವಳಿಯ ಕೊಂಕಣ ಪ್ರದೇಶ ಇವೇ ಮೂರು ಮಹಾರಾಷ್ಟ್ರಕಗಳೆಂದು ಹೇಳಲಾಗಿದೆ.
ಪುಲಕೇಶಿ ಅನಂತರ ಪೂರ್ವಾಭಿಮುಖವಾಗಿ ಮುನ್ನಡೆದ. ಕೋಸಲ, ಕಳಿಂಗದ ಹಲವು ಭಾಗಗಳನ್ನು ಗೆದ್ದುಕೊಂಡು, ಪೂರ್ವತೀರದ ಪಿಷ್ಟಪುರವನ್ನು ವಶಪಡಿಸಿಕೊಂಡು ವೆಂಗಿಮಂಡಲವನ್ನು ಗೆದ್ದುಕೊಂಡ. ತಮ್ಮನಾದ ವಿಷ್ಣುವರ್ಧನನ್ನು ವೆಂಗಿಮಂಡಲದ ಯುವರಾಜನನ್ನಾಗಿ ನೇಮಿಸಿದ. ಕ್ರಮೇಣ ವಿಷ್ಣುವರ್ಧನ ಸ್ವತಂತ್ರ ರಾಜನಂತೆ ವೆಂಗಿಮಂಡಲವನ್ನು ಆಳಿದ. ಇವನ ವಂಶಕ್ಕೆ ವೆಂಗಿ ಚಾಳುಕ್ಯ ವಂಶವೆಂದು ಹೆಸರು ಬಂತು. ಇದು ಪೂರ್ವ ಚಾಳುಕ್ಯ ಮನೆತನ ಎಂದೂ ಹೆಸರಾಗಿದೆ. ವೆಂಗಿಮಂಡಲದ ವಿಜಯದ ಅನಂತರ ಪುಲಕೇಶಿ ವಿಷ್ಣುಕುಂದಿನ್ ರಾಜ್ಯವನ್ನು ಮುತ್ತಿದ. ವಿಷ್ಣುಕುಂದಿನ್ ರಾಜ್ಯದ ದಕ್ಷಿಣಕ್ಕೆ ಪಲ್ಲವರ ರಾಜ್ಯವಿತ್ತು. ಪುಲಕೇಶಿ ಪಲ್ಲವ ರಾಜ 1 ನೆಯ ಮಹೇಂದ್ರವರ್ಮನನ್ನು ಸೋಲಿಸಿ ಅವನು ಆತ್ಮ ರಕ್ಷಣೆಗಾಗಿ ತನ್ನ ರಾಜಧಾನಿಯಾದ ಕಂಚಿಯ ಕೋಟೆಯನ್ನು ಸೇರುವಂತೆ ಮಾಡಿದ. ಪುಲಕೇಶಿ ಕಾವೇರಿ ನದಿಯನ್ನೂ ದಾಟಿ ಚೋಳರನ್ನು ಸೋಲಿಸಿ ಪಾಂಡ್ಯರು ಮತ್ತು ಚೇರರು ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದ. ಈ ದಿಗ್ವಿಜಯಗಳ ಅನಂತರ ಪುಲಕೇಶಿ ತನ್ನ ರಾಜಧಾನಿಯಾದ ಬಾದಾಮಿಗೆ ಹಿಂದಿರುಗಿ ವೈಭವದಿಂದ ವಿಜಯೋತ್ಸವ ಸಮಾರಂಭವನ್ನು ಆಚರಿಸಿದನೆಂದು ಐಹೊಳೆ ಪ್ರಶಸ್ತಿಯಿಂದ ತಿಳಿದುಬರುತ್ತದೆ. ಈ ವಿಜಯಗಳೆಲ್ಲ ಒಂದೇ ದಂಡಯಾತ್ರೆಯ ಕಾಲದಲ್ಲಿ ಲಭಿಸಿದವೇ ಅಥವಾ ಬೇರೆ ಬೇರೆ ದಂಡಯಾತ್ರೆಗಳ ಫಲವೇ ಎಂಬುದರಲ್ಲಿ ಭಿನ್ನಾಭಿಪ್ರಾಯಗಳಿವೆ. ಒಟ್ಟಿನಲ್ಲಿ ಪುಲಕೇಶಿ ತನ್ನ ದಿಗ್ವಿಜಯಗಳನ್ನು 634ರ ವೇಳೆಗೆ ಪೂರ್ಣಗೊಳಿಸಿದನೆಂದು ಗೊತ್ತಾಗಿದೆ.
ಇಮ್ಮಡಿ ಪುಲಕೇಶಿ ಬಾದಾಮಿ ಚಾಳುಕ್ಯ ಮನೆತನದ ಅತ್ಯಂತ ಶ್ರೇಷ್ಠನೂ ಪ್ರಾಚೀನ ಭಾರತದ ಅಗ್ರಗಣ್ಯ ಪ್ರಭುಗಳಲ್ಲೊಬ್ಬನೂ ಆಗಿದ್ದ. ಈತನ ಕಾಲದಲ್ಲಿ ಚಾಳುಕ್ಯ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿ ಮುಟ್ಟಿತು. ಇವನ ರಾಜ್ಯ ಬನವಾಸಿ, ಗಂಗಮಂಡಲ, ಆಳುಪ ರಾಜ್ಯ, ಕೊಂಕಣ, ಲಾಟ, ಮಾಳವ, ಕಳಿಂಗದ ಸ್ವಲ್ಪ ಭಾಗ, ಪಿಷ್ಟಪುರ, ಕಂಚಿಯ ಪಲ್ಲವ ನಾಡಿನ ಸ್ವಲ್ಪ ಭಾಗ ಇವನ್ನೊಳಗೊಂಡಿತ್ತು. ಅಲ್ಲದೆ, ಚೋಳ, ಚೇರ ಮತ್ತು ಪಾಂಡ್ಯರು ಪುಲಕೇಶಿಗೆ ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದರು. ಪುಲಕೇಶಿ ಗೆದ್ದ ಹಲವು ರಾಜ್ಯಗಳ ರಾಜರುಗಳನ್ನು ಅವರವರ ರಾಜ್ಯಗಳಲ್ಲೇ ಉಳಿಸಿ ಆಶ್ರಿತರನ್ನಾಗಿ ಮಾಡಿಕೊಂಡ. ಇನ್ನು ಕೆಲವು ರಾಜ್ಯಗಳ ಆಡಳಿತ ನಿರ್ವಹಣೆಗೆ ತನ್ನ ಆಪ್ತೇಷ್ಟರನ್ನೂ ಸಹೋದರರನ್ನೂ ನೇಮಿಸಿದ. ನರ್ಮದಾ ನದಿಯ ತೀರದಲ್ಲಿ ಭದ್ರತೆಗಾಗಿ ಸೈನ್ಯದ ತುಕಡಿಗಳನ್ನು ನೆಲೆಗೊಳಿಸಿದ. ಸುಮಾರು 641 ರಲ್ಲಿ ಇವನ ಸಾಮ್ರಾಜ್ಯವನ್ನು ಪ್ರಸಿದ್ಧ ಚೀನೀ ಯಾತ್ರಿಕ ಹುಯನ್ತ್ಸಾಂಗ್ ಸಂದರ್ಶಿಸಿದ. ಇವನು ಪುಲಕೇಶಿಯ ಶೌರ್ಯವನ್ನೂ ಉದಾರ ಗುಣಗಳನ್ನೂ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ವಾಯುಗುಣವನ್ನು ಜನರ ಗುಣಾವಗುಣಗಳನ್ನೂ ವಿವರಿಸಿದ್ದಾನೆ. ಇವನ ಬರಹಗಳ ಪ್ರಕಾರ ಪುಲಕೇಶಿಗೆ ಪ್ರಜೆಗಳು ವಿಧೇಯರಾಗಿದ್ದರು. ಇವನ ಯೋಜನೆಗಳು ಹಾಗೂ ಕೆಲಸ ಕಾರ್ಯಗಳು ಜನಪ್ರಿಯವಾಗಿದ್ದುವು, ಜನೋಪಯುಕ್ತವಾಗಿದ್ದವು. ಜಮೀನು ಕ್ರಮಬದ್ಧ ಬೇಸಾಯಕ್ಕೆ ಒಳಪಟ್ಟಿತ್ತು. ಅದು ಫಲವತ್ತಾಗಿತ್ತು. ಇಲ್ಲಿ ಬೆಚ್ಚನೆಯ ವಾಯುಗುಣವಿತ್ತು. ಜನರು ದೃಢಕಾಯರೂ ನ್ಯಾಯನಿಷ್ಠುರರೂ ವೈರ ಸಾಧಕರೂ ಪ್ರಾಮಾಣಿಕರೂ ಸರಳ ಜೀವಿಗಳೂ ಆಗಿದ್ದರು. ವಿದ್ಯಾಭ್ಯಾಸದಲ್ಲಿ ಅಭಿರುಚಿ ಇತ್ತು. ಒಬ್ಬ ಸೇನಾನಿ ಯುದ್ಧದಲ್ಲಿ ಸೋಲನ್ನನುಭವಿಸಿದರೆ ಅವನಿಗೆ ಯಾವ ರೀತಿಯ ಶಿಕ್ಷೆಯನ್ನು ವಿಧಿಸುತ್ತಿರಲಿಲ್ಲ; ಆದರೆ, ಅವನಿಗೆ ಸ್ತ್ರೀಯರ ಉಡುಪನ್ನು ನೀಡಲಾಗುತ್ತಿತ್ತು. ಆದ್ದರಿಂದ ದಂಡನಾಯಕರು ಶೌರ್ಯದಿಂದ ಕಾದಾಡುತ್ತಿದ್ದರು; ಸೋಲುವ ಪ್ರಮೇಯ ಬಂದಾಗ ರಣರಂಗದಲ್ಲೇ ಮಡಿಯುತ್ತಿದ್ದರು-ಎಂದು ಹುಯನ್ತ್ಸಾಂಗ್ ವಿವರಿಸಿದ್ದಾನೆ.
ಪುಲಕೇಶಿಯ ಕೀರ್ತಿ ವಿದೇಶಗಳಲ್ಲೂ ವ್ಯಾಪಿಸಿತು. ಪರ್ಷಿಯದ ಅರಸ ಇಮ್ಮಡಿ ಖುಸ್ರು 625-26 ರಲ್ಲಿ ಚಾಳುಕ್ಯ ರಾಜನ ರಾಯಭಾರಿಯನ್ನು ಸ್ವಾಗತಿಸಿದನೆಂದು ತಿಳಿದುಬರುತ್ತದೆ. ಖುಸ್ರು ಪುಲಕೇಶಿಯ ಆಸ್ಥಾನಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದ್ದ. ಖುಸ್ರುವಿನ ರಾಯಭಾರಿಗಳು ಪುಲಕೇಶಿಗೆ ತಮ್ಮ ರಾಜನ ನಿರೂಪಗಳನ್ನು ಅರ್ಪಿಸುತ್ತಿರುವ ಚಿತ್ರ ಅಜಂತ ಗುಹಾಲಯದಲ್ಲಿದೆ.
ಪುಲಕೇಶಿ ಮೂವತ್ತು ವರ್ಷಗಳ ಜಯಪ್ರದ ಆಳ್ವಿಕೆಯ ಅನಂತರ ಕಂಚಿಯ ಪಲ್ಲವರಿಂದ ಅಪಾಯವನ್ನು ಎದುರಿಸಬೇಕಾಯಿತು. ಪಲ್ಲವ ಮಹೇಂದ್ರವರ್ಮನ ಅನಂತರ ಪಟ್ಟಕ್ಕೆ ಬಂದ 1 ನೆಯ ನರಸಿಂಹವರ್ಮ ತನ್ನ ತಂದೆಯನ್ನು ಸೋಲಿಸಿದ ಪುಲಕೇಶಿಯ ವಿರುದ್ಧ ಸೈನ್ಯವನ್ನು ಕಳುಹಿಸಿದ. ಅನೇಕ ಕಡೆಗಳಲ್ಲಿ ಘೋರ ಯುದ್ಧಗಳು ನಡೆದುವು. ಈ ಯುದ್ಧಗಳಲ್ಲಿ ಪಲ್ಲವ ರಾಜನದೇ ಮೇಲುಗೈ ಆಯಿತು. ಪುಲಕೇಶಿಯ ಸೈನ್ಯ ಸೋತು ಹಿಮ್ಮೆಟ್ಟತೊಡಗಿತು. ನರಸಿಂಹವರ್ಮ ಚಾಳುಕ್ಯ ಸೈನ್ಯವನ್ನು ಬೆನ್ನಟ್ಟಿ ರಾಜಧಾನಿಯನ್ನೇ ಮುತ್ತಿದ. ತನ್ನ ವಿಜಯದ ಕುರುಹಾಗಿ ಬಾದಾಮಿಯ ಕೋಟೆಯ ಕಲ್ಲಿನ ಮೇಲೆ ಒಂದು ಶಾಸನವನ್ನು ಕೆತ್ತಿಸಿ, ವಾತಾಪಿಕೊಂಡ ಎಂಬ ಬಿರುದನ್ನು ಪಡೆದ. ಸಿಂಹಳದ ದೊರೆ ಮಾನವವರ್ಮನೂ 642 ರಲ್ಲಿ ನಡೆದ ಕದನಗಳಲ್ಲಿ ಪಲ್ಲವರ ಪರ ವಹಿಸಿದ್ದನೆಂದು ತಿಳಿದುಬರುತ್ತದೆ. ಈ ಘಟನೆಯ ಅನಂತರ ಪುಲಕೇಶಿಯ ಬಗ್ಗೆ ಏನೂ ತಿಳಿದುಬರುವುದಿಲ್ಲ. ಬಹುಶಃ ತನ್ನ ರಾಜಧಾನಿಯನ್ನು ರಕ್ಷಿಸುವ ಸಂದರ್ಭದಲ್ಲಿ ಇವನು ವೀರಾವೇಶದಿಂದ ಕಾದಾಡಿ ಮಡಿದಿರಬಹುದು. ಪುಲಕೇಶಿಗೆ ಆದಿತ್ಯವರ್ಮ, ಚಂದ್ರಾದಿತ್ಯ, ವಿಕ್ರಮಾದಿತ್ಯ, ರಣರಾಗವರ್ಮ, ಧಾರಾಶ್ರಯ ಜಯಸಿಂಹ ಎಂಬ ಪುತ್ರರೂ ಅಂಬೇರಾ ಎಂಬ ಪುತ್ರಿಯೂ ಇದ್ದರೆಂದು ತಿಳಿದುಬರುತ್ತದೆ.
ಮಾಹಿತಿ ಆಧಾರ:. ಮೈಸೂರು ವಿಶ್ವಕೋಶ
Photo credits: Bharat M. Kumar
ಕಾಮೆಂಟ್ಗಳು