ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಬರಿ


 ಕಾದಿರುವಳು ಶಬರಿ,

ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು

ವನವನವ ಸುತ್ತಿ ಸುಳಿದು
ತರುತರುವನಲೆದು ತಿರಿದು
ಬಿರಿವೂಗಳಾಯ್ದು ತಂದು
ತನಿವಣ್ಗಳಾಯ್ದು ತಂದು;

ಕೊಳದಲ್ಲಿ ಮುಳುಗಿ ಮಿಂದು
ಬಿಳಿ ನಾರು ಮುಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸತಿಲಲಿ ಕಾದು ನಿಂದು.

ಎಳಗಾಳಿ ತೀಡುತಿರಲು
ಕಿವಿಯೆತ್ತಿ ಆಲಿಸುವಳು
ಎಲೆಯಲುಗೆ ಗಾಳಿಯಲ್ಲಿ
ನಡೆ ಸಪ್ಪುಳೆಂದು ಬಗೆದು.

ದೂರಕ್ಕೆ ನೋಳ್ಪೆನೆಂದು
ಮರವೇರಿ ದಿಟ್ಟಿಸುವಳು
ಗಿರಿ ಮೇಲಕೈದಿ ಕೈಯ
ಮರೆ ಮಾಡಿ ನೋಡುತಿಹಳು

ಬಾ ರಾಮ, ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸಿಹಳು
ಕಳೆದಿಹವು ವರುಷ ಹಲವು.

-೨-
ಶಬರಿವೊಲು ಜನವು, ದಿನವೂ
ಯುಗಯುಗವು ಕರೆಯುತಿಹುದು
ಕರೆ ಇಳೆಗಳೇಳಲರಸಿ
ತವಕದಲಿ ತಪಿಸುತಿಹುದು.

ಭರವಸೆಗಳಳಿಯವಾಗಿ
ಮನವೆಲ್ಲ ಬಯಕೆಯಾಗಿ
ಹಗಲೆಲ್ಲ ಕಾದು ಕೂಗಿ
ಇರುಳೆಲ್ಲ ಜಾಗರಾಗಿ;

ಬಂದಾನೊ ಬಾರನೋ ಓ
ಕಂಡಾನೊ ಕಾಣನೋ ಓ
ಎಂದೆಂದು ಜಪಿಸಿ ತಪಿಸಿ
ಶಂಕಾತುರಂಗಳೂರಿ.

ಬಾ ರಾಮ, ಬಾರ, ಬಾರಾ
ಬಡವರನು ಕಾಯು ಬಾರಾ
ಕಂಗಾಣದಿವರ ಪ್ರೇಮ
ನುಡಿಸೋತ ಮೂಕ ಪ್ರೇಮ.

-ಕಾದಿರುವುದು ಜನವು
ರಾಮ ಬರುವನೆಂದು
ತಮ್ಮ ಪೂಜೆಗೊಳುವನೆಂದು

ಕವಿತೆ: ಶಬರಿ
ಸಾಹಿತ್ಯ:  ವಿ. ಸೀತಾರಾಮಯ್ಯ

(ನಮ್ಮ'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಕವಿತೆಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ'  ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ