ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಮಿರಾಜ ಮಲ್ಲ


 ಸೇವ ನಮಿರಾಜ ಮಲ್ಲ

ಸೇವ ನಮಿರಾಜ ಮಲ್ಲ ಅವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿ ಮತ್ತು ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು.   ನ್ಯಾಯಾಲಯದ ಕಲಾಪಗಳೆಲ್ಲವೂ ಕನ್ನಡದಲ್ಲೇ ನಡೆಯಬೇಕು ಎನ್ನುತ್ತಿದ್ದ ಅವರು ಕನ್ನಡದಲ್ಲೇ ತೀರ್ಪುಗಳನ್ನು ಪ್ರಕಟಿಸಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದವರು.

ನಮಿರಾಜ ಮಲ್ಲರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ಗ್ರಾಮದ ಸೇವ ಎಂಬಲ್ಲಿ 1925ರ ಜನವರಿ 26ರಂದು ಜನಿಸಿದರು. ತಂದೆ ಕಿಜನಾರು ದೇವರಾಜ ಶೆಟ್ಟರು. ತಾಯಿ ತಿನ್ಯಮ್ಮ (ನಾಗಮ್ಮ).  ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿ ಹಾಗೂ ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಪ್ರಾರಂಭಿಕ ಶಿಕ್ಣಣ ಪೂಂಜಾ ಕಟ್ಟೆ ಎಂಬಲ್ಲಿ ಮುಗಿಸಿ ಪುತ್ತೂರು ಬೋರ್ಡ್‌ಹೈಸ್ಕೂಲಿನಲ್ಲಿ ಪ್ರೌಢಶಾಲಾಭ್ಯಾಸ ನಡೆಸಿದರು.   ಓದು ಮುಂದುವರೆಸಲಾಗದೆ ವೈನಾಡು ಎಂಬಲ್ಲಿ ದಿನಸಿ ಅಂಗಡಿಯಲ್ಲಿ ಕೆಲಸ ಮಾಡಲಾರಂಭಿಸಿದರು. 

ನಮಿರಾಜ ಮಲ್ಲ ಎಳವೆಯಿಂದಲೇ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದ್ದರು. ಅವರು  ಬರೆದ ಮೊದಲ ಕಥೆ ‘ನಾನು ಬಯಸಿದ ಹುಡುಗಿ’. ಇದು ಪ್ರಜಾಮತ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ನಂತರ ಬರೆದ ಹಲವಾರು ಕತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡವು. 

ಪುನ: ವಿದ್ಯಾಭ್ಯಾಸಕ್ಕೆ ತೊಡಗಿದ ನಮಿರಾಜ ಮಲ್ಲರು ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜು ಹಾಗೂ ಮದರಾಸಿನ ಕ್ರಿಷ್ಚಿಯನ್ ಕಾಲೇಜುಗಳಲ್ಲಿ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿ ಪಡೆದರು. ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ ಇವರ ಸಹಪಾಠಿಗಳಾಗಿದ್ದವರು ಬಾಗಲೋಡಿ ದೇವರಾಯರು, ಜಿ.ಟಿ. ನಾರಾಯಣರಾಯರು, ಕು.ಶಿ. ಹರಿದಾಸಭಟ್ಟರು ಮುಂತಾದವರು. 

ನಮಿರಾಜ ಮಲ್ಲರು ಕೆಲ ಕಾಲ ಮದರಾಸಿನ ಅಮೇರಿಕನ್‌ವಾರ್ತಾ ಸಂಸ್ಥೆಯಲ್ಲಿ (USIS) ಭಾಷಾಂತರ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಮದರಾಸಿನಿಂದ ಪ್ರಕಟವಾಗುತ್ತಿದ್ದ ಲಿಬರೇಟ್ ಮತ್ತು ಟೈಂಸ್ ಆಫ್ ಇಂಡಿಯಾ ಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ಕೆಲಸಮಾಡುತ್ತಲೇ ಬಿ.ಎಲ್. ಪದವಿಯನ್ನು ಗಳಿಸಿದರು.  ಮದರಾಸು ಸರಕಾರದ ಪ್ರಚಾರ ಇಲಾಖೆಯಲ್ಲಿ ಕೆಲಕಾಲ ಕಾರ‍್ಯ ನಿರ್ವಹಿಸಿದರು. 

ನಮಿರಾಜ ಮಲ್ಲರು ಮಂಗಳೂರಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ್ದಲ್ಲದೆ ರಾಜಕೀಯದಲ್ಲಿಯೂ ಆಸಕ್ತರಾಗಿದ್ದು ಪ್ರಜಾಸೋಷಿಯಲಿಸ್ಟ್ ಪಕ್ಷದ ಕಾರ‍್ಯಕರ್ತರಾಗಿದ್ದರು. ರಾಜಕೀಯ ಸಂಬಂಧವಿದ್ದರೂ ನ್ಯಾಯಾಧೀಶರಾಗಿ ದುಡಿದು ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಶಿಸ್ತು ಬದ್ಧ ಜೀವನವನ್ನು ರೂಢಿಸಿಕೊಂಡಿದ್ದರು. ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ‘ನೀವು ಮತ್ತು ಕಾನೂನು’, ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕಡೆಂಗೋಡ್ಲು ಶಂಕರ ಭಟ್ಟರ ‘ರಾಷ್ಟ್ರಮತ’ ಮತ್ತು ‘ಸಂಗಾತಿ’ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತುಳು ಭಾಷೆಯ ‘ಎಂಕ್ಲೆ ಸುಖೋ ದು:ಖೋ’, ‘ಕೊದ್ದೆಲ್’ ಅಂಕಣಗಳು, ಸುಧಾ ವಾರ ಪತ್ರಿಕೆಗೆ ಬರೆಯುತ್ತಿದ್ದ ‘ನ್ಯಾಯಾಲಯದ ತೀರ್ಪುಗಳು’ ಇವರ ಜನಪ್ರಿಯ ಅಂಕಣಗಳಾಗಿದ್ದವು. ಕಾರ್ನಾಡ ಸದಾಶಿವರಾಯರು, ಅ.ನ. ಕೃಷ್ಣರಾಯರು ಮೊದಲಾದ ವ್ಯಕ್ತಿ ಚಿತ್ರ ಕೃತಿಗಳನ್ನು ರಚಿಸಿದ್ದಲ್ಲದೆ ಇವರು ‘ಸೇತುವೆಯಲ್ಲಿ ಮರಣ ಕಾದಿತ್ತು’, ‘ಸ್ವಾತಂತ್ರ‍್ಯದ ಕಿಡಿ’ , ಎಮರ್‌ಸನ್ನನ ಮೂಲ ಬರಹಗಳು’ , ಜಫರ್‌ಸನ್ನ್‌ನ ಬರಹಗಳು, ನ್ಯಾಯಾಲಯದಲ್ಲಿ ತೀರ್ಪುಗಳು ಮತ್ತು ಪ್ರಜಾಪ್ರಭುತ್ವ  ಮುಂತಾದ ಬಹುಮುಖ್ಯ ಕೃತಿಗಳನ್ನು ಬರೆದರು. ಇವರು ಬರೆದ ಕಾದಂಬರಿಗಳೆಂದರೆ ದೇವರದಾರಿ, ಬಂಧನ ಬಾಂಧವ್ಯ, ಬದುಕಿನ ಸುಳಿಯಲ್ಲಿ , ತೀರದ ಆಸೆ, ಕುರುಡು ಚಕ್ರ, ಭ್ರಮಾಧೀನ, ನಿಜಸುತ, ರಕ್ತದ ರೂಪಾಯಿ, ಕರಿಚರ್ಮ, ತಲ್ಲಣಿಸದಿರು, ವಿಲಾಸ, ಉಳಿವುದೇ ಮುಂತಾದವು.  ಕಾಯಿದೆ ಹಾಗೂ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದಂತೆ ‘ಅಬಕಾರಿ ಕಾಯಿದೆ’, ಮತ್ತು ‘ನ್ಯಾಯ ತತ್ತ್ವ ಶಾಸ್ತ್ರ’ ವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ‘ಭೂತಾರಾಧನೆಯ ಕತೆಗಳು’ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿದೆ. ಇವರ ಲೋಹದ ಜೀವ, ಮರದ ಮರೆಯಲ್ಲಿ ಕಥಾಸಂಕಲನಗಳು ಮದರಾಸು ಸರಕಾರದಿಂದ ಬಹುಮಾನ ಪಡೆದಿದ್ದವು. ತಮ್ಮದೇ ಅಮೃತ ಪ್ರಕಾಶನದಡಿಯಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದರು. 

ನ್ಯಾಯಮೂರ್ತಿ ಸೇವ ನಮಿರಾಜ ಮಲ್ಲ ಅವರು 1991ರ ಜನವರಿ 18ರಂದು ನಿಧನರಾದರು.

On the birth anniversary of Jurist and novelist  Seva Namiraj Malla 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ