ಟಿ.ಪ್ರಕಾಶಂ
ಟಿ. ಪ್ರಕಾಶಂ
ಟಂಗುಟೂರಿ ಪ್ರಕಾಶಂ ಭಾರತದ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ, ಸಮರ್ಥ ಆಡಳಿತಗಾರ ಮತ್ತು ಪ್ರಸಿದ್ಧ ಪತ್ರಕರ್ತರೆನಿಸಿದ್ದವರು. ಪಂಜಾಬಿನಲ್ಲಿ ಲಾಲ್ ಲಜಪತರಾಯ್ ಹೇಗೆ ಪಂಜಾಬಿನ ಸಿಂಹ ಎಂದು ಜನಪ್ರಿಯ ವ್ಯಕ್ತಿಯಾಗಿದ್ದರೋ ಅಂತೆಯೇ ಹಳೆಯ ಮದ್ರಾಸಿನಲ್ಲಿ ಆಂಧ್ರ ಕೇಸರಿ ಎಂದು ಇವರು ಜನಾನುರಾಗಿಯೆನಿಸಿದ ವ್ಯಕ್ತಿ. ಅಸಾಮಾನ್ಯ ದೇಶಭಕ್ತರಾಗಿದ್ದವರು.
ಪ್ರಕಾಶಂ ಅವರು ಆಂಧ್ರಪ್ರದೇಶದ ಒಂಗಲ್ ಜಿಲ್ಲೆಯ ಒಂಗಲ್ ತಾಲ್ಲೂಕಿಗೆ ಸೇರಿದ ಕನುಪರ್ತಿ ಎಂಬ ಹಳ್ಳಿಯಲ್ಲಿ ಗ್ರಾಮ ಮುಖಂಡ ಟಿ. ಗೋಪಾಲಕೃಷ್ಣಯ್ಯನವರ ಮಗನಾಗಿ 1872ರ ಆಗಸ್ಟ್ 23 ರಂದು ಜನಿಸಿದರು. ಪ್ರಕಾಶಂ ಅವರಿಗೆ 12 ವರ್ಷ ಆಗಿದ್ದಾಗ ಇವರ ತಂದೆ ತೀರಿಕೊಂಡರು. ತಾಯಿಯೇ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು. ಪ್ರಕಾಶಂ ಅವರ ಪೂರ್ವ ವಿದ್ಯಾಭ್ಯಾಸ ವಲ್ಲೂರು, ನಾಯ್ಡು ಪೇಟ, ಒಂಗಲ್ ಹಾಗೂ ರಾಜಮಹೇಂದ್ರಿಗಳಲ್ಲಿ ಆಯಿತು. ಇವರು ಪ್ರತಿಭಾಶಾಲಿಯಾಗಿದ್ದರು. ಅಭಿನಯದಲ್ಲೂ ಇವರ ಸಾಮರ್ಥ್ಯ ಪ್ರಕಟವಾಯಿತು. ಇವರು ಕುಸ್ತಿಯನ್ನೂ ಚೆನ್ನಾಗಿ ಕಲಿತರು. ಮದ್ರಾಸ್ ನ್ಯಾಯಶಾಸ್ತ್ರ ಕಾಲೇಜಿನ ಉನ್ನತ ಶಿಕ್ಷಣ ಪಡೆದ ಮೇಲೆ ಇವರು ಎರಡನೆಯ ದರ್ಜೆಯ ಪ್ಲೀಡರ್ ಡಿಪ್ಲೊಮೋವನ್ನು ಪಡೆದುಕೊಂಡು ನ್ಯಾಯವಾದಿಯಾಗಿ ಒಂಗಲ್ನಲ್ಲಿ ವೃತ್ತಿಯನ್ನಾರಂಭಿಸಿದರು. ಅನಂತರ ರಾಜಮಹೇಂದ್ರಿಯಲ್ಲಿ ಮುಂದುವರಿಸಿದರು. ಈ ಕಾಲದಲ್ಲೇ ಇವರು ರಾಜಮಹೇಂದ್ರಿಯ ಪುರಸಭಾಧ್ಯಕ್ಷರಾಗಿ, ಸ್ಥಳೀಯ ಸಂಸ್ಥೆಯ ವಿದ್ಯಮಾನಗಳನ್ನು ಸಾಮರ್ಥ್ಯದಿಂದ ನಿರ್ವಹಿಸಿದರು.
ಪ್ರಕಾಶಂ ಅವರು 1904ರಲ್ಲಿ ಇಂಗ್ಲೆಂಡಿಗೆ ಹೋಗಿ ನ್ಯಾಯಶಾಸ್ತ್ರದಲ್ಲಿ ಉನ್ನತ ಪದವಿ ಗಳಿಸಿ ಭಾರತಕ್ಕೆ ಹಿಂದಿರುಗಿ ಮದ್ರಾಸಿನಲ್ಲಿ ನ್ಯಾಯವಾದಿಯಾಗಿ ಯಶಸ್ಸು ಗಳಿಸಿದರು. ಅಂದಿನ ನ್ಯಾಯವಾದಿಗಳಲ್ಲಿ ಪ್ರಮುಖರೆನಿಸಿ ಹೇರಳವಾಗಿ ಧನ ಸಂಪಾದಿಸಿದರು. ಇದೇ ಸಮಯದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟು ಇವರು ವಕೀಲಿಯನ್ನು ತೊರೆದು ಚಳವಳಿಯಲ್ಲಿ ಪಾಲ್ಗೊಂಡರು. 1928ರಲ್ಲಿ ಮದ್ರಾಸಿನಲ್ಲಿ ಸೈಮನ್ ಆಯೋಗವನ್ನು ಬಹಿಷ್ಕರಿಸಲು ಮುಂದಾದರು. ಬ್ರಿಟಿಷ್ ಬಂದೂಕದ ತುದಿಗೆ ತೆರೆದ ಎದೆಯನ್ನೊಡ್ಡಿ ಸಿಂಹದಂತೆ ಗರ್ಜಿಸಿದರು. ಹೀಗೆ ಆಂಧ್ರಕೇಸರಿ ಎಂದು ಪ್ರಸಿದ್ಧರಾದರು.
ಪ್ರಕಾಶಂ ಪತ್ರಕರ್ತರೂ ಆಗಿದ್ದರು. ಇವರು ಸ್ವರಾಜ್ಯ ಎಂಬ ರಾಷ್ಟ್ರೀಯ ದಿನ ಪತ್ರಿಕೆಯನ್ನಾರಂಭಿಸಿದರು. ಇಂಗ್ಲಿಷಿನಲ್ಲಿ ಅರಂಭವಾದ ಈ ಪತ್ರಿಕೆ ಅನಂತರ ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಪ್ರಕಟವಾಗತೊಡಗಿತು. ಇಂಗ್ಲಿಷ್ ಪತ್ರಿಕೆ ಹನ್ನೆರಡು ವರ್ಷಗಳ ಕಾಲ ದಕ್ಷಿಣ ಭಾರತದಲ್ಲೆಲ್ಲ ಜನರಿಗೆ ಸ್ಫೂರ್ತಿಯ ನೆಲೆಯಾಯಿತು. ಸ್ವಾತಂತ್ರ್ಯ ಹೋರಾಟಕ್ಕೆ ಉತ್ತೇಜನವಿತ್ತಿತು. ಅದು ಪತ್ರಿಕೋದ್ಯಮದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.
1937ರಲ್ಲಿ ಬ್ರಿಟಿಷ್ ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲಾಯಿತು. ಮದ್ರಾಸ್ ಪ್ರಾಂತ್ಯಕ್ಕೆ ಸಿ. ರಾಜಗೋಪಾಲಚಾರಿಯವರು ಪ್ರಧಾನ ಮಂತ್ರಿಯಾದರು. ಅವರ ಮಂತ್ರಿಮಂಡಲದಲ್ಲಿ ಪ್ರಕಾಶಂ ಕಂದಾಯ ಮಂತ್ರಿಯಾದರು. ಜಮೀನ್ದಾರಿ ಪದ್ಧತಿ ರದ್ದು, ಉಳ್ಳವರಿಗೆ ಜಮೀನು, ಮಧ್ಯವರ್ತಿಗಳ ನಿವಾರಣೆ-ಇವನ್ನೆಲ್ಲ ಒಳಗೊಂಡ ದೀರ್ಘ ವರದಿಯೊಂದು ಇವರ ನಾಯಕತ್ವದಲ್ಲಿ ತಯಾರಾಯಿತು. ಅನೇಕ ವಿಧಗಳಲ್ಲಿ ಈ ವರದಿ ಮುಂದಿನ ಭೂ ಸುಧಾರಣೆಗಳಿಗೆ ಮಾರ್ಗದರ್ಶಕವಾಯಿತು.
1946ರಲ್ಲಿ ಪ್ರಕಾಶಂ ಸಂಯುಕ್ತ ಅವಿಭಜಿತ ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯಾದರು. ಆಗ ಇವರು ಗಾಂಧಿಯವರ ರಚನಾತ್ಮಕ ಕಾರ್ಯಕ್ರಮಗಳನ್ನು ಅಂದರೆ ಖಾದಿ, ಗ್ರಾಮೋದ್ಯೋಗ, ಹಜಿಜನೋದ್ಧಾರ, ಸಹಕಾರ ಚಳವಳಿ ಇವನ್ನು ಜಾರಿಗೆ ತರಲು ಯತ್ನಿಸಿದರು. ಇದು ಅಲ್ಪಕಾಲದಲ್ಲಿ ಗ್ರಾಮಾಂತರ ಜೀವನದಲ್ಲಿ ಪ್ರಚಂಡ ಕ್ರಾಂತಿ ತರುವ ಉದ್ದೇಶವುಳ್ಳ ಒಂದು ಪ್ರಯೋಗವಾಯಿತು. ಗಾಂಧಿ ಮಾರ್ಗದಿಂದ ದೇಶವನ್ನು ಪುನರ್ರಚಿಸುವುದು ಇವರ ಆಶಯವಾಗಿತು.
ಪ್ರಕಾಶಂ ಅಧಿಕಾರ ತ್ಯಜಿಸಿದ ಮೇಲೆ ಇವರ ಜೀವನ ಪ್ರಚಂಡ ಬದಲಾವಣೆಗಳನ್ನು ಕಂಡಿತು. ಭಾಷೆಯ ಆಧಾರದ ಮೇಲೆ ಆಂಧ್ರದ ಪ್ರತ್ಯೇಕ ರಾಜ್ಯವನ್ನು ರಚಿಸಬೇಕೆಂಬ ಚಳವಳಿ ಬಿರುಸಾಯಿತು. ಅದಕ್ಕಾಗಿ ಪೋಟ್ಟಿ ಶ್ರೀರಾಮುಲು ಎಂಬುವರು ಉಪವಾಸ ಮಾಡಿ ಹುತಾತ್ಮರಾದರು. 1953ರ ಅಕ್ಟೋಬರ್ 1 ರಂದು ಮದ್ರಾಸಿನಿಂದ ಪ್ರತ್ಯೇಕವಾದ ಆಂಧ್ರ ರಾಜ್ಯ ರಚಿತವಾಯಿತು. ಪ್ರಕಾಶಂ ಆಗ ಕಾಂಗ್ರೆಸ್ಸಿನಲ್ಲಿರಲಿಲ್ಲ. ನೂತನ ರಾಜ್ಯದ ಪ್ರಥಮ ಮಂತ್ರಿ ಸಂಪುಟವನ್ನು ರಚಿಸಲು ಇವರು ಆಹ್ವಾನಿತರಾದರು. ಶ್ರೀ ವೆಂಕಟೇಶ್ವರ ವಿದ್ಯಾಲಯ ಹೊಸ ರಾಜ್ಯಕ್ಕೆ ಪ್ರತ್ಯೇಕವಾದ ಉಚ್ಚ ನ್ಯಾಯಾಲಯ, ನೀರಾವರಿ ಯೋಜನೆಗಳು-ಇವು ಆರಂಭವಾದವು. ಇವರ ಸೇವೆಯ ಸಂಕೇತವಾಗಿ, ಇವರು ಹುಟ್ಟಿದ ಒಂಗಲ್ ಜಿಲ್ಲೆಗೆ ಪ್ರಕಾಶಂ ಜಿಲ್ಲೆ ಎಂಬುವುದಾಗಿ ಹೆಸರಿಡಲಾಗಿದೆ.
ಪ್ರಕಾಶಂ ಬದುಕಿದ್ದಾಗಲೇ 1956ರ ನವೆಂಬರ್ 1ರಂದು ಈಗಿನ ಆಂಧ್ರಪ್ರದೇಶದ ರಚನೆಯಾಯಿತು. ಇದರಲ್ಲಿ ಹಳೆಯ ಮದ್ರಾಸ್ ರಾಜ್ಯದ ಆಂಧ್ರ ಭಾಗವಲ್ಲದೆ ತೆಲುಗು ಮಾತಾಡುವ ಜನರಿರುವ ಇತರ ಭಾಗಗಳೂ ಸೇರಿದವು. ಹಳೆಯ ಹೈದರಾಬಾದ್ ಸಂಸ್ಥಾನ ಒಡೆಯಿತು. ಪ್ರಕಾಶಂ ಕಂಡ ಕನಸು ಸಂಪೂರ್ಣವಾಗಿ ನನಸಾಯಿತು. ಪ್ರಕಾಶಂ 1957ರ ಮೇ 20ರಂದು ಹೈದರಾಬಾದಿನಲ್ಲಿ ತೀರಿಕೊಂಡರು. ಆಂಧ್ರ ಪ್ರದೇಶದ ಇತಿಹಾಸದಲ್ಲಿ ಪ್ರಕಾಶಂ ಹೆಸರು ಸ್ಥಿರವಾಗಿದೆ.
On the birth anniversary of great freedom fighter, journalist, jurist and administrator T. Prakasham
ಕಾಮೆಂಟ್ಗಳು