ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ18


 

ತಿರುಪ್ಪಾವೈ 18

ನೀನವನ ಬಂಧಿಸಿಹೆಯಮ್ಮಾ ನಿನ್ನ ಭಕುತಿಯಾ ಸೆರೆಯಲ್ಲಿ 

Thiruppavai 18


ಉನ್ದು ಮದಕಳಿತ್ತನ್ ಓಡಾದ ತೋಳ್ವಲಿಯನ್,

ನನ್ದಗೋಪಾಲನ್ಮರುಮಗಳೇ ನಪ್ಪಿನ್ನಾಯ್,

ಕನ್ದಂ ಕಮಳುಮ್ ಕುಳಲೀ ಕಡೈತಿರವಾಯ್,

ವನ್ದೆಂಗುಂ ಕೋಳೆಯಳೈತ್ತನ ಕಾಣ್

ಮಾಧವಿ

ಪ್ಪಂದಲ್ ಮೇಲೆಪಲ್‍ಕಾಲ್ ಕುಯಿಲನಂಗಳ್ ಕೂವಿನಕಾಣ್,

ಪಂದಾರ್ ವಿರಲಿ ಉನ್ ಮೈತ್ತುನನ್ ಪೇರ್ ಪ್ಪಾಡ,

ಶೆನ್ದಾಮರೈಕ್ಕೈಯಾಲ್ ಶೀರಾರ್ ವಳೈಯೊಲಿಪ್ಪ,

ವಂದು ತಿರವಾಯ್ ಮಕಿಳೆನ್ದೇಲೇರೆಂಬಾವಾಯ್


ಭಾವಾನುವಾದ 18


ನೀಳ ನೀನತಿ ಚೆಲುವೆ ನಂದನಂದನನ ಮನದನ್ನೆ ಸಿರಿವಾರಿಜಾತೆ

ಚೆಲುವ ಚೆನ್ನಿಗನ ಪತಿತಪಾವನನ ಬಂಧಿಸಿಹೆ ನಿನ್ನ ಭಕುತಿಯಾ ಸೆರೆಯಲ್ಲಿ ಹಾಸಿಹಳು ಪುಷ್ಪರಾಶಿಯ ವಸುಧೆ ನೀ ಬರುವ ದಾರಿಯಲಿ ಜಿಂಕೆ ಸಾರಂಗ ಕೇಸರಿಗಳತಿಶಯದಿ ಕಾದಿಹುವು ನಿನ್ನ ದರುಶನಕೆ 

ಮಂಗಳದ ಕಂಕಣಾಭರಣ ಭೂಷಿತಳೆ ಚಂದ್ರ ಸೋದರಿಯೇ 

ನೆರವಾಗು ಬಾ ನಮ್ಮನೋಂಪಿಯೊಳು ಶ್ರೀ ಕೃಷ್ಣ ದರ್ಶನಕೆ ಅಗ್ರಣೀಯನ ದರುಶನವ ನೀಡೆಮಗೆ ಸಲಹು ಸಲಹೆಮ್ಮನನುನಯದಿ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು


ಭಾವಾರ್ಥ 18

ದ್ವಾರಪಾಲಕರು ತಂದೆ ತಾಯಿ ಅಣ್ಣ ಎಲ್ಲರನ್ನೂ ಪ್ರಾರ್ಥಿಸಿದ್ದಾಯ್ತು. ಇನ್ನು ಶ್ರೀ ಕೃಷ್ಣನ ಹೃತ್ಕಮಲವಾಸಿನಿಯಾದ ನೀಳಾದೇವಿಯನ್ನು ಗೋದಾದೇವಿ ಇಲ್ಲಿ ಪ್ರಾರ್ಥಿಸುತ್ತಿದ್ದಾಳೆ. 

ಅಮ್ಮಾ ನೀಳಾದೇವಿ, ನವಿಲುಗರಿಗಳಂತೆ ನಿನ್ನ ಕೇಶರಾಶಿ ಕಂಗೊಳಿಸುತ್ತಿದೆ. ನೀನು ಎಷ್ಟು ಸುಂದರಳಾಗಿ ಕಂಗೊಳಿಸುತ್ತಿದ್ದೀಯೆ. ನಿನಗೆ ನೀನೇ ಸಾಟಿ. ಶ್ರೀ ಕೃಷ್ಣನ ಪ್ರೀತಿಗೆ ನೀನೇ ಒಡೆಯಳಲ್ಲವೆ? ನಿನ್ನಂತಹ ಸೌಭಾಗ್ಯವತಿ ಬೇರೆ ಯಾರೂ ಇಲ್ಲ. ನೀನು ಸರ್ವಮಂಗಳೆ, ಸರ್ವರಿಗೂ ಮಂಗಳವನ್ನುಂಟುಮಾಡುವವಳು, ಕಾರುಣ್ಯಮಯಿ.

ನಿನ್ನ ಭಕ್ತಿ ಚೆಲುವಿಗೆ ಶ್ರೀ ಕೃಷ್ಣ ನಿನಗೆ ಬಂಧಿಯಾಗಿದ್ದಾನೆ. ನೀನು ಬೇಗೆದ್ದು ಬಾ, ನೀನು ಬರುತ್ತೀಯೆಂದು ನಿನ್ನ ಪಾದಗಳಿಗೆ ಯಾವ ರೀತಿಯಲ್ಲೂ ನೋವಾಗಬಾರದೆಂದು ವಸುಂಧರೆಯು ಹೂವಿನ ನಡೆಮುಡಿ ಹಾಸಿದ್ದಾಳೆ. ತಂಗಾಳಿ ಮೃದುವಾಗಿ ಬೀಸುತ್ತಿದೆ. ಜಿಂಕೆ ಸಾರಂಗ ಕೇಸರಿಗಳಾದಿಯಾಗಿ ಸಕಲ ಮೃಗಪಕ್ಷಿಗಳೂ ಆ ನಿನ್ನ ಲೋಕ ಮೋಹಕ ರೂಪವನ್ನು ಕಾಣಲು ನಿನ್ನೊಡನಿರುವ ಶ್ರೀಕೃಷ್ಣನ ದರ್ಶನಭಾಗ್ಯದಿಂದ ಪುನೀತರಾಗಲು ತುದಿಗಾಲಿನಲ್ಲಿ ನಿಂತಿವೆ.

ಓ ನೀಳಾದೇವಿ ನೀನು ನಮ್ಮೊಡನಿದ್ದರೆ ಸಾಕು, ನಿನ್ನಂತರಂಗದ ಗೆಳತಿಯರು ನಾವು ಎಂದು ಕರುಣೆಯಿಂದ ಶ್ರೀ ಕೃಷ್ಣನು ನಮಗೆ ಮುಕ್ತಿಯನ್ನು ಕರುಣಿಸುತ್ತಾನೆ. ಇದರಿಂದ ನಮ್ಮವ್ರತವೂ ಈಡೇರಿ ಸಕಲ ಲೋಕಕ್ಕೂ ಮಂಗಳವನ್ನುಂಟುಮಾಡಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ