ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಎಂ. ಕೃಷ್ಣೇಗೌಡ


 ಹೊರಟುಹೋದ ಬಿ. ಎಂ. ಕೃಷ್ಣೇಗೌಡರು


ಬಿ. ಎಂ. ಕೃಷ್ಣೇಗೌಡರು ಅಂದರೆ ಸುಸ್ಪಷ್ಟ ಮಾತುಗಾರಿಕೆಯ ಎತ್ತರದ ನಿಲುವಿನ, ಅವರು ನಿರ್ವಹಿಸಿದ ಪೋಷಕ ಪಾತ್ರಗಳು ನನಗೆ ನೆನಪಾಗುತ್ತವೆ.  ನನಗಂತೂ ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳಲ್ಲಿ ಅವರನ್ನು ನೋಡಿದ ನೆನಪು.  ನಿನ್ನೆಯ ದಿನ (2021ರ ಮೇ 25ರಂದು) ಬಿ. ಎಂ. ಕೃಷ್ಣೇಗೌಡರು ತಮ್ಮ 81ರ ವಯಸ್ಸಿನಲ್ಲಿ ಈ ಲೋಕಕ್ಕೆ ವಿದಾಯ ಹೇಳಿದ್ದಾರೆ.

'ಮುಖ್ಯಮಂತ್ರಿ’ ನಾಟಕದಲ್ಲಿ ಪಕ್ಷದ ಅಧ್ಯಕ್ಷನ ಪಾತ್ರ ನಿರ್ವಹಿಸಿ ಖ್ಯಾತಿಯಾಗಿದ್ದ ಹಿರಿಯ ನಟ ಕೃಷ್ಣೇಗೌಡರು ಹವ್ಯಾಸಿ ರಂಗಭೂಮಿ ಕಲಾವಿದರಾಗಿ, ಕಲಾಗಂಗೋತ್ರಿ ತಂಡದೊಂದಿಗೆ 45 ವರ್ಷದ ನಂಟು ಹೊಂದಿದ್ದರು. ‘ಮುಖ್ಯಮಂತ್ರಿ’ ನಾಟಕದ 450ಕ್ಕೂ ಅಧಿಕ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ ಖ್ಯಾತಿ ಅವರದ್ದು. 

ಕೃಷ್ಣೇಗೌಡರು ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ (ಎಜಿಎಸ್‌) ಕಾರ್ಯನಿರ್ವಹಿಸುತ್ತಿರುವ ವೇಳೆಗೆ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡ ಭಾಷೆಯ ವಿಷಯದಲ್ಲಿ ಹಲವು ಹೋರಾಟಗಳನ್ನು ನಡೆಸಿದ್ದರು.

ಸಿ.ಆರ್‌.ಸಿಂಹ ಅವರ ನಿರ್ದೇಶನದ ‘ಸಿಂಹಾಸನ’ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಕೃಷ್ಣೇಗೌಡರು ‘ಚಕ್ರವ್ಯೂಹ’, ‘ಹಾಲುಂಡ ತವರು’, ‘ಒಲವಿನ ಉಡುಗೊರೆ’, ‘ಸಂಸಾರ ನೌಕೆ’ ಹೀಗೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ‘ಕರಿಮಲೆಯ ಕಗ್ಗತ್ತಲು’ ಚಿತ್ರದ ಅಭಿನಯಕ್ಕೆ ಅವರಿಗೆ ರಾಜ್ಯ ಪ್ರಶಸ್ತಿಯೂ ಸಂದಿತ್ತು.  ಕೃಷ್ಣೇಗೌಡರು ಅನೇಕ ಚಿತ್ರಗಳಲ್ಲಿ ರಾಜಕಾರಣಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ‘ಒಂದು ಮುತ್ತಿನ ಕಥೆ’ ಹಾಗೂ ‘ಆಕಸ್ಮಿಕ’ ಚಿತ್ರದಲ್ಲಿ ಡಾ.ರಾಜ್‌ಕುಮಾರ್‌ ಜೊತೆಯೂ ಕೃಷ್ಣೇಗೌಡರು ನಟಿಸಿದ್ದರು.

ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಾಲಿಬಾಲ್‌ ಪಟುವಾಗಿದ್ದ ಕೃಷ್ಣೇಗೌಡರು, ವಿಶ್ವವಿದ್ಯಾಲಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ತಂಡದ ನಾಯಕರಾಗಿ ಸಹಾ ಮಿಂಚಿದ್ದರು.

ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಯಂತಹ ಗೌರವಗಳು ಕೃಷ್ಣೇಗೌಡರಿಗೆ ಸಂದಿದ್ದವು.

ಕಾಲ ಯಾರನ್ನೂ ಉಳಿಸುವುದಿಲ್ಲ.  ಕರೋನಾ ಕೆಲವರನ್ನು ನಿರ್ದಾಕ್ಷಿಣ್ಯವಾಗಿ ಕೊಂಡೊಯ್ದಿದೆ.  ಅದಕ್ಕಿಂತ ಕ್ರೂರ ಈ ನಮ್ಮ ನೆನಪುಗಳು.  ಅನೇಕ ಮಹನೀಯರು ಹೋದಾಗ ಮಾತ್ರವೇ ಅವರು ನಮಗೆ ಸುದ್ಧಿಯಾಗುವುದು.  ಅವರು ಬದುಕಿರುವುದು ನಮಗೆ ಹೊಳೆಯುವುದೇ ಅತಿ ಕಡಿಮೆ.

Respects to departed soul B. M. Krishnegowda 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ