ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭೈರಪ್ಪನವರ ಕಾದಂಬರಿಗಳು


 ಭೈರಪ್ಪನವರ ಕಾದಂಬರಿಗಳು


ಇಂದು  ನನ್ನ ಓದು ಮತ್ತು ಬದುಕೆರಡನ್ನೂ ಪ್ರಭಾವಿಸಿದ  ಭೈರಪ್ಪನವರ ಕಾದಂಬರಿಗಳ ಓದನ್ನು ಒಂದಿನಿತು ಧ್ಯಾನಿಸಿಕೊಳ್ಳುತ್ತಿದ್ದೇನೆ.  

ನಾನು ಗಂಭೀರವಾಗಿ ಓದಿದ ಪ್ರಥಮ ಕಾದಂಬರಿಗಳೆಂದರೆ ಭೈರಪ್ಪನವರ ಗೃಹಭಂಗ, ಅನ್ವೇಷಣ ಮತ್ತು ಧರ್ಮಶ್ರೀ.  ಈ ಓದುಗಳು ನನಗೆ ರುಚಿ ಹತ್ತಿಸಿದ ರೀತಿಯನ್ನು ಸವಿಯುವುದೇ ಒಂದು ವಿಶಿಷ್ಟ ಅನುಭವ.  ನನ್ನ ಕೊನೆಯ ಡಿಗ್ರಿ ಪರೀಕ್ಷೆ ಬರೆದು ಮುಂದೇನು ಅಂತ ಗೊತ್ತಿಲ್ಲದೆ ಅಣ್ಣನ ಊರಿಗೆ ಹೋಗಿ ಏನೂ ಮಾಡದೆ ಕುಳಿತಿದ್ದಾಗ ಅಲ್ಲಿ ಕಪಾಟಿನಲ್ಲಿ ಸಿಕ್ಕ ಪುಸ್ತಕಗಳು ಎಂದು ತೆಗೆದು ಓದಿದ ಪುಸ್ತಕಗಳಿವು.  ಯಾವುದೇ ಒಂದು ಗಂಭೀರ ಓದು, ನಾವು ಓದಿದ  ವಸ್ತುವಿಗೆ ಸಂಬಂಧ ಇಲ್ಲದಿದ್ದಾಗ್ಯೂ ಸಹ ನಮ್ಮಲ್ಲಿ ಯಾವುದೋ ರೀತಿಯ ಹೊಸತನವನ್ನು ಹುಟ್ಟುಹಾಕಿರುತ್ತೆ.  ನನಗೆ ಅಂತಹ ಒಂದು ಹೊಸತನವನ್ನು ಕೊಟ್ಟ ಓದುಗಳಿವು. ನಾನು ಕಾಲೇಜು ಮುಗಿಸಿದ ಸಂದರ್ಭದಲ್ಲಿಯೇ “ಕಲಿಕೆ ಎನ್ನುವುದು ನಾನು ಏನೋ ಒಂದು ಅನಿವಾರ್ಯ ಎಂಬಂತೆ ಶಾಲಾ ಕಾಲೇಜುಗಳಿಗೆ ಹೋಗಿ ಮಾಡಿದ್ದಕ್ಕಿಂತ  ಇನ್ನೂ ವಿಶಾಲ ವ್ಯಾಪ್ತಿಯದು” ಎಂದು ಪ್ರಥಮ ಬಾರಿಗೆ ಗೋಚರಿಸುವಂತೆ ಮಾಡಿದ ಅನುಭವಗಳಿವು.  

ಭೈರಪ್ಪನವರ ಆತ್ಮಚರಿತ್ರೆ ‘ಭಿತ್ತಿ’ ಓದಿದ ಕ್ಷಣದಲ್ಲಿ, ಅದಕ್ಕೆ ‘ಗೃಹಭಂಗ’ ಮತ್ತು ‘ಅನ್ವೇಷಣ’ ಕಾದಂಬರಿಗಳಲ್ಲಿನ ಬದುಕು ಸಾಕಷ್ಟು ಮಟ್ಟಿಗೆ ಹೊಂದಿಕೊಂಡಿದ್ದನ್ನು ಕಂಡು ದಿಗ್ಭ್ರಮೆಗೊಂಡೆ.   ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರ ಈ ಎಲ್ಲಾ ಪ್ರತೀಕೂಲ ಸಂದರ್ಭಗಳ ನಡುವೆಯೂ ಸಣ್ಣವಯಸ್ಸಿನಿಂದಲೇ ಅವರು   ‘ಗೃಹಭಂಗ’ ಕಾದಂಬರಿಯಲ್ಲಿನ  ನಂಜಮ್ಮನ ಪಾತ್ರಧಾರಿಯಂತೆ ಇದ್ದಿರಬಹುದಾದ ಅವರ ತಾಯಿಯಲ್ಲಿದ್ದ  ಧೀಮಂತಿಕೆಯನ್ನು ಮೈಗೂಡಿಸಿಕೊಂಡು ಬೆಳೆದ ರೀತಿ ವಿಶಿಷ್ಟವಾದದ್ದು. ಇನ್ನೂ ಐದು ವಯಸ್ಸಿನಲ್ಲಿದ್ದಾಗಲೇ  ಅವರ ತಾಯಿಯೂ ಬಡತನ - ಪ್ಲೇಗ್ ಗಳಿಗೆ ಜೀವವನ್ನು ಬಿಟ್ಟುಕೊಟ್ಟಾಗ, ಬದುಕಿನ ವಿಶ್ವ ವಿಶಾಲತೆಯ ಈ ರಂಗದಲ್ಲಿ ತಮ್ಮ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಂಡ ಅವರ ಬೆಳವಣಿಗೆ ಅಚ್ಚರಿ ಮತ್ತು ಮೆಚ್ಚುಗೆಗಳನ್ನು  ಹುಟ್ಟಿಸುವಂತದ್ದು.

ಸುಮಾರು 39 ವರ್ಷಗಳ ಹಿಂದೆ ಓದಿದ ಅನ್ವೇಷಣದಲ್ಲಿ ಬರುವ 'ಡೈರಿ' ಬರಹದ ಕುರಿತಾದ ವ್ಯಾಖ್ಯಾನಗಳು ನನ್ನಲ್ಲಿ ಇಂದೂ ಆಳವಾಗಿ ಬೇರೂರಿವೆ. ಇಂದೂ ನನ್ನನ್ನು ನಾನೇ ಕನ್ನಡಿಯಲ್ಲಿ ಕಾಣುವಂತೆ ಮನಸ್ಸನ್ನು ಕಾಣಲು ಮಾಡಿಕೊಳ್ಳಲು ಬಳಸುವ ಪ್ರಮುಖ ಸಾಧನ 'ಡೈರಿ'.  ನನಗೆ ಬೇಕು ಅನ್ನಿಸಿದಾಗ 'ಡೈರಿ' ಎಂಬುದು ಸನಿಹದಲ್ಲಿ ಇಲ್ಲದಿರುವುದನ್ನು ತಾಳಿಕೊಳ್ಳಲಾರೆ ಎನ್ನಿಸುವಷ್ಟು  ಈ ಸನ್ನಿವೇಶಗಳು ಇಂದೂ ನನ್ನನ್ನು ಹಿಡಿದಿಟ್ಟಿವೆ.  ಭೈರಪ್ಪನವರ ಆವರಣ, ಯಾನ ಮುಂತಾದ ಇತ್ತೀಚಿನ ವರ್ಷಗಳ ಕಾದಂಬರಿಗಳಲ್ಲೂ ಮೂಡಿಬಂದಿರುವ  ಈ ತಂತ್ರ ನನ್ನನ್ನು ಮತ್ತಷ್ಟು ಮೀಟಿವೆ.  

ಭೈರಪ್ಪನವರ ಕಾದಂಬರಿಗಳಲ್ಲಿ ಕಾಣುವ ಬದುಕಿನ ಪಾತ್ರಗಳು ಎಲ್ಲೆಲ್ಲೂ  ಕಣ್ಣ ಮುಂದೆ ಕಾಣುತ್ತಿರುವ ವ್ಯಕ್ತಿಗಳ ಹಾಗೇ ನನಗೆ ಕಾಣುತ್ತವೆ.  ಮಹಾಭಾರತದ ಕಥೆಯನ್ನು  ಇಂದಿನ ಕಾಲಕ್ಕೆ ಹೊಂದಿಸಿ ನೋಡುವಂತಹ ಅವರ 'ಪರ್ವ' ಕಾದಂಬರಿಯ ಪಾತ್ರಗಳನ್ನು ಓದುವಾಗಲೂ ಹಾಗನಿಸಿದೆ. ಅವರ ಕಾದಂಬರಿಗಳ ಭಾಷೆಯಲ್ಲಿರುವ ಗ್ರಾಮೀಣ, ನಗರ ಮತ್ತು ಇತ್ತೀಚಿನ ಆಧುನಿಕತೆಯವರೆಗಿನ ವರಸೆಯ ಸೊಗಡುಗಳಂತೂ ಅಪೂರ್ವ ರೀತಿಯಲ್ಲಿ ಹಿಡಿದಿಟ್ಟುಕೊಂಡುಕೊಂಡು ಬಿಡುತ್ತವೆ. ಅವರ ಪ್ರತಿಯೊಂದು ಕಾದಂಬರಿಯೂ  ಅದನ್ನು ತೆರೆದಾಗಿನಿಂದ ಅದನ್ನು ಓದು ಮುಗಿಸುವ ತನಕ ಕೆಳಗಿರಿಸಲು ಬಿಡುವುದೇ ಇಲ್ಲ. 

ಭೈರಪ್ಪನವರ ವಿಚಾರಗಳ ಆಯ್ಕೆ ಬೆರಗು ಹುಟ್ಟಿಸುವಷ್ಟು ವಿಶಾಲವಾದ್ದು. ಆಧ್ಯಾತ್ಮ, ಮನಃ ಶಾಸ್ತ್ರ,  ತರ್ಕ ಶಾಸ್ತ್ರ, ಸಮಾಜ ಶಾಸ್ತ್ರ, ನ್ಯಾಯಮೀಮಾಂಸೆ, ಸೌಂದರ್ಯ ಮೀಮಾಂಸೆ, ಇತಿಹಾಸ, ರಾಜಕೀಯ, ದೈನಂದಿನ ಘಟನೆಗಳು, ವೇದ ಪುರಾಣಗಳು ಇವು ನಮ್ಮ ಚಿಂತನೆಗಳಲ್ಲಿ ಹುಟ್ಟಿಸುವ ತಾದ್ಯಾತ್ಮಗಳನ್ನು ಕಂಡುಕೊಳ್ಳುವುದರ ಜೊತೆಗೇ, ಅವುಗಳು ವಿವಿಧ ಮನಸ್ಸುಗಳ ನಡುವೆ ತರುವ ಸಂಘರ್ಷಗಳನ್ನು ಕೂಡಾ ನಮ್ಮ ಮನಸ್ಸಿಗೆ ತಂದುಕೊಡುವ  ಎಸ್. ಎಲ್. ಭೈರಪ್ಪನವರ  ಮೋಡಿ ಅಪೂರ್ವವಾದದ್ದು. ಭಾರತದಂತಹ ಹಲವು ಧರ್ಮಗಳ, ಪರಂಪರೆಗಳ, ಮಾರ್ಕ್ಸ್, ಕಮ್ಯುನಿಸ್ಟ್, ಸಮಾಜವಾದ, ಪ್ರಜಾಪ್ರಭುತ್ವ, ಬಂಡವಾಳಶಾಹಿ, ಬಹು ರಾಜಕೀಯ ವ್ಯವಸ್ಥೆ, ಅಂತರರಾಷ್ಟ್ರೀಯ ಮಾರುಕಟ್ಟೆ ಪರಿಣಾಮ ಇತ್ಯಾದಿ ಹತ್ತು ಹಲವು ಚಿಂತನೆಗಳ ಬದುಕಿನ ರೀತಿ ಮತ್ತು ವೈರುಧ್ಯಗಳ ಸಮಾಜದಲ್ಲಿ, ಭೈರಪ್ಪನವರು ಎಲ್ಲ ರೀತಿಯ ವಿಚಾರಗಳನ್ನೂ ಮುಕ್ತವಾಗಿ ತೆರೆದಿಟ್ಟಿದ್ದಾರೆ. ಮನಸ್ಸಿನ ಚಿಂತನೆಗಳನ್ನು ಭಾಷೆಯಾಗಿ ಅಭಿವ್ಯಕ್ತಿಸುವ ಅವರ ರೀತಿ ಮಾತ್ರಾ ನನಗೆ ಇನ್ಯಾವುದೇ ಓದಿನಲ್ಲೂ ದೊರಕುವುದಿಲ್ಲ ಎನ್ನುವಷ್ಟು ಅಪ್ಯಾಯಮಾನ.  ಅವರ ಪ್ರತಿಯೊಂದೂ ಕೃತಿಯ ಹಿಂದೆ ಸಂಶೋಧನೆಯ ತಪಸ್ಸಿದೆ.  'ಯಾನ' ಕಾದಂಬರಿಯಲ್ಲಿ ವಿಜ್ಞಾನದ ಆಳವನ್ನು ಅವರು ಮುಟ್ಟುವ ರೀತಿ ನನಗಂತೂ ಮರೆಯಲಾಗದಂತದ್ದು.

ನಾನು ಓದಿದ ಭೈರಪ್ಪನವರ ಕಾದಂಬರಿಗಳೆಂದರೆ  ‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’,  ‘ಗೃಹಭಂಗ’,  ‘ದಾಟು’, ‘ಅನ್ವೇಷಣ’, ‘ಪರ್ವ’,  ‘ಸಾಕ್ಷಿ’,  ‘ಅಂಚು’, ‘ತಂತು’, ‘ಸಾರ್ಥ’, ‘ಮಂದ್ರ’, ‘ಆವರಣ’, ‘ಕವಲು’ ಮತ್ತು  'ಯಾನ'.  ತುಂಬಾ ಇಷ್ಟಪಟ್ಟಿದ್ದು  ‘ಗೃಹಭಂಗ’, ‘ಅನ್ವೇಷಣ’, ‘ಧರ್ಮಶ್ರೀ’, ‘ದಾಟು’, ‘ದೂರ ಸರಿದರು’, ‘ವಂಶವೃಕ್ಷ’, ‘ಆವರಣ’, ‘ಯಾನ’ ಮತ್ತು ಅವರ ಆತ್ಮಚರಿತ್ರೆ ‘ಭಿತ್ತಿ’.  ನಾನು ಯಾವುದನ್ನು ಅನುಭಾವಿಸುತ್ತೇನೋ ಅದು ನನ್ನ ಮಿತಿಯೂ ಆಗಿರುವ ಸಾಧ್ಯತೆ ಇರುವುದರಿಂದ ನಾನು ಎಲ್ಲವನ್ನೂ ಇಷ್ಟಪಟ್ಟಿದ್ದೇನೆ, ಅರಗಿಸಿಕೊಂಡಿದ್ದೇನೆ, ನಾನು ಸ್ವೀಕರಿಸಿರುವ ರೀತಿಯೇ ಶ್ರೇಷ್ಠ ಎನ್ನಲಾರೆ.  ಮತ್ತೊಮ್ಮೆ ಓದಿದಾಗ ಅರಗಿಸಿಕೊಳ್ಳುತೀನೇನೋ!  ಓದೂ ಒಂದು ಪಯಣ.  ಬದುಕೆಂಬ ಪಯಣದಲ್ಲಿ ಓದೂ ಅತಿ ಮುಖ್ಯವಾದದ್ದು.  ಒಬ್ಬ ಮಹತ್ವದ ಬರಹಗಾರನ ಓದಿಗೆ ಸಿಗುವುದಂತೂ ದೊಡ್ಡ ಸೌಭಾಗ್ಯ.  

(ಈ ಹಿಂದೆ ಇತ್ತೀಚಿನ ವರ್ಷಗಳಲ್ಲಿ ಓದಿದ ಭೈರಪ್ಪನವರ ಯಾನ, ವಂಶವೃಕ್ಷ  ಮುಂತಾದವುಗಳ ಬಗ್ಗೆ ಈ ಹಿಂದೆ ಬರೆದಿದ್ದದ್ದು 'ಕನ್ನಡ ಸಂಪದ' ಮತ್ತು 'ಸಲ್ಲಾಪ.ಕಾಂ’ನಲ್ಲಿವೆ)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ