ಸ್ವಾತಂತ್ರ್ರ್ಯ ನೋಟ - 11
ಸ್ವಾತಂತ್ರ್ಯ ನೋಟ - 11
ಕಾಕೋರಿಯಲ್ಲಿ ರೈಲು ಲೂಟಿ ಪ್ರಕರಣದಲ್ಲಿ 40 ಜನರ ಬಂಧನವಾಗಿ ಅಶ್ಭಾಖ್ ಉಲ್ಲಾಖಾನ್, ರಾಮಪ್ರಸಾದ್ ಬಿಸ್ಮಿಲ್, ರೋಶನ್ಸಿಂಗ್, ರಾಜೆಂದ್ರಲಾಹಿರಿ ಇವರುಗಳಿಗೆ ಫಾಶಿಯಾಯಿತು (1927). ಪಂಜಾಬಿನಲ್ಲಿ ಭಗತ್ಸಿಂಗ್ ಮುಂತಾದವರು ಸಂಘಟಿಸಿದ್ದ ನೌಜವಾನ್ ಭಾರತ ಸಭಾ (1925) 1928ರಲ್ಲಿ ಉತ್ತರ ಪ್ರದೇಶದ ಸಂಘಟನೆಯಲ್ಲಿ ಐಕ್ಯವಾಗಿ ಹಿಂದೂಸ್ಥಾನ ಸೋಷಲಿಷ್ಟ್ ರಿಪಬ್ಲಿಕನ್ ಆರ್ಮಿ ಅಸ್ತಿತ್ವಕ್ಕೆ ಬಂತು. ಲಾಹೊರಿನಲ್ಲಿ ಸ್ಯಾಂಡ್ರ್ಸನ ಕೂಲೆ, ದೆಹಲಿ ಕೇಂದ್ರ ಶಾಸನ ಸಭೆಯಲ್ಲಿ ಬಾಂಬ್ ಎಸೆತ ಇವುಗಳ ಸಂಬಂಧವಾಗಿ ಭಗತ್ಸಿಂಗ್, ರಾಜಗುರು, ಸುಖದೇವ ಇವರುಗಳನ್ನು 1931ರಲ್ಲಿ ಫಾಶಿಗೇರಿಸಲಾಯಿತು ಅವರ ಜೊತೆಗಾರ ಹಾಗೂ ಅಗ್ರಗಣ್ಯ ಹೋರಾಟಗಾರ ಚಂದ್ರಶೆಖರ ಆಝಾದ್ 1931ರಲ್ಲಿ ಅಲಹಾಬಾದ್ನಲ್ಲಿ ಪೊಲೀಸರ ವಿರುದ್ಧ ಹೋರಾಡುತ್ತ ಅಸು ನೀಗಿದರು. ಈ ಎಲ್ಲ ಕ್ರಾಂತಿಕಾರಿಗಳ ಚಟುವಟಿಕೆಗಳು ದೇಶದ ತರುಣರಿಗೆ ದೇಶ ಭಕ್ತಿಯ ದೀಕ್ಷೆ ನೀಡಿದುವು.
ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ತಂದ ರೌಲೆಟ್ ಕಾಯಿದೆ ಪ್ರತಿಭಟನೆಯ ಜಲಿಯನವಾಲಾ ಬಾಗ್ನ ಸಭೆಯ ಮೇಲೆ ನಡೆಸಿದ ಅಮಾನುಷ ಗುಂಡಿನ ದಾಳಿ ಆಂಗ್ಲರ ಉದಾರ ನೀತಿಯ ಪೊಳ್ಳುತನವನ್ನು ಬಯಲು ಮಾಡಿ ಅಸಂಖ್ಯ ಜನರನ್ನು ಬ್ರಿಟಿಷರ ವಿರುದ್ಧ ಬಡಿದೆಬ್ಬಿಸಿತು. ಮರು ವರ್ಷವೇ ತಿಲಕರು ತೀರಿಕೊಂಡು ಗಾಂಧೀಜಿಯವರು ಭಾರತದ ರಾಜಕೀಯ ರಂಗದ ನಾಯಕರಾಗಿ 1920ರ ನಾಗಪುರ ಕಾಂಗ್ರೆಸ್ಸಿನಲ್ಲಿ ಅಹಿಂಸಾತ್ಮಕ ಅಸಹಕಾರದ ಠರಾವು ಸತ್ಯಾಗ್ರಹದ ರೂಪರೇಷೆ ಸಿದ್ಧವಾದುವು.
ಮುಸಲ್ಮಾನರನ್ನು ಚಳವಳಿಯೆಡೆ ಸೆಳೆಯಲೆಂದು ಪದಚ್ಯುತನಾದ ಟರ್ಕಿಯ ಖಲೀಫನ ಪುನಃ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿತು. ಹೀಗೆ ಕಾಂಗ್ರೆಸ್ ಖಿಲಾಫತ್ ಚಳವಳಿ ಹೂಡಿತು. ವಿದೇಶಿ ವಸ್ತುಗಳ ಬಹಿಷ್ಕಾರ, ವಿದೇಶಿ ವಸ್ತು ಮತ್ತು ಮದ್ಯ ಮಾರುವ ಅಂಗಡಿಗಳ ಮುಂದೆ ಧರಣಿ, ಸರ್ಕಾರಿ ನೌಕರಿಯ ತ್ಯಾಗ, ವಕೀಲಿ ತ್ಯಾಗ, ಬಿರುದು ಬಾವಲಿಗಳ ತ್ಯಾಗ, ಶಾಸನ ಸಭೆ ನ್ಯಾಯಾಲಯ, ಶಾಲಾ ಕಾಲೇಜುಗಳ ಬಹಿಷ್ಕಾರ ಮುಂತಾದ ಹಲವು ರೂಪದಲ್ಲಿ ಚಳುವಳಿ ದೇಶದಲ್ಲಿ ಎಲ್ಲೆಡೆ ಸಾಗಿತು. ರಾಷ್ಟ್ರೀಯ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳ ಸ್ಥಾಪನೆ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ, ಪ್ರತಿಭಟನೆ, ಬಂಧನ, ಲಾಠಿಚಾರ್ಜ್, ಗೋಳಿಬಾರ್, ದೇಶದ ಮುಖ್ಯ ಕೇಂದ್ರಗಳಲ್ಲಿ ಆದುವು.
1921 ನವೆಂಬರ್ 17ರಂದು ಭಾರತಕ್ಕೆ ಇಂಗ್ಲೆಂಡ್ ರಾಜಕುಮಾರ ಬಂದ ಸಂದರ್ಭದಲ್ಲಿ ಎಲ್ಲೆಡೆ ಹರತಾಳ ಆಚರಿಸಲಾಯಿತು. ಆದರೆ ಮುಂಬೈಯಲ್ಲಿ ಆದಿನ ನಡೆದ ಹಿಂಸಾಚಾರದಿಂದಾಗಿ ಗಾಂಧೀಜಿ ಉಪವಾಸ ಆಚರಿಸಬೇಕಾಯಿತು.
ಮುಂದೆ ಚೌರಿಚೌರ ಎಂಬಲ್ಲಿ ನಡೆದ ಹಿಂಸಾಚಾರದಿಂದ 22ಮಂದಿ ಪೊಲೀಸರ ಸಜೀವ ದಹನದಿಂದ ಗಾಂಧೀಜಿ ಚಳವಳಿಯನ್ನು ಹಿಂತೆಗೆದುಕೊಂಡರು. ಇದರಿಂದ ಮಹಾತ್ಮರನ್ನು ಕಾಂಗ್ರೆಸ್ ನಾಯಕರೇ ಟೀಕಿಸಿದರಲ್ಲದೆ, ಮುಸಲ್ಮಾನ ನಾಯಕರು ತೀವ್ರ ನಿರಾಶೆಗೆ ಒಳಗಾದರು. ಇದರ ಅನಂತರ ದೇಶದಲ್ಲಿ ಹಿಂದೂ-ಮುಸ್ಮಿಮ್ ದಂಗೆಗಳು ಹೆಚ್ಚಿದುವು. ಆದರೆ ಕಾಂಗ್ರೆಸ್ ಒಂದು ಸುಸಂಘಟಿತ ಸಂಸ್ಥೆಯಾಗಲು ಹಾಗೂ ಒಂದು ಕ್ರಾಂತಿಕಾರೀ ಸಂಘಟನೆಯಾಗಿ ಬೆಳೆಯಲು ಚಳವಳಿ ನೆರವಾಯಿತು. ಗಾಂಧೀಜಿಯವರ ಕ್ರಮದಿಂದ ಅಸಮಾಧಾನಗೊಂಡ ಮೋತಿಲಾಲನೆಹರೂ ಹಾಗೂ ಚಿತ್ತರಂಜನದಾಸ್ ಇವರುಗಳು ಸ್ವರಾಜ್ಯ ಪಕ್ಷ ರಚಿಸಿ 1923ರ ಚುನಾವಣೆಯಲ್ಲಿ ಸ್ಪರ್ಧಿಸಿ ಕೇಂದ್ರಶಾಸನಸಭೆಯಲ್ಲಿ 45 ಸ್ಥಾನಗಳನ್ನು ಗೆದ್ದರಲ್ಲದೆ ಎರಡು ಪ್ರಾಂತಗಳಲ್ಲಿ ಬಹುಮತ ಪಡೆದರು ಕೂಡ.
ಆದರೆ ಮುಂದಿನ ಅವಧಿಯಲ್ಲಿ ಚಳವಳಿ ತಣ್ಣಗಾಗಿತ್ತು.
ಸುಮಾರು ಐದು ವರ್ಷಗಳ ಸ್ಥಿರ ಪರಿಸ್ಥಿತಿಯ ಅನಂತರ 1928ರಲ್ಲಿ ಸೈಮನ್ ಆಯೋಗದ ವಿರುದ್ಧ ನಡೆದ ಪ್ರತಿಭಟನಾ ಪ್ರದರ್ಶನದಿಂದ ಮತ್ತೆ ಕಾಂಗ್ರೆಸ್ ಚಟುವಟಿಕೆಗಳು ವರ್ಧಿಸಿದುವು. ಬ್ರಿಟಿಷರು 1929ರಲ್ಲಿ ಕರೆದ ಚಕ್ರಗೋಷ್ಠಿಗೆ ಕಾಂಗ್ರೆಸ್ ಹೋಗಲಿಲ್ಲ. ಲಾಹೋರ್ ಕಾಂಗ್ರೆಸ್ಸಿನ (1929) ಅಧ್ಯಕ್ಷ ಜವಾಹರ್ಲಾಲ್ ನೆಹರೂ ಅವರು 'ಪೂರ್ಣಸ್ವರಾಜ್ಯದ ಗುರಿ' ಸಾರಿದರು. ಗಾಂಧೀಜಿ ದಂಡೀಯಾತ್ರೆಯನ್ನು 1930 ಮಾರ್ಚ್ 12ರಂದು ಪ್ರಾರಂಭಿಸಿ ಏಪ್ರಿಲ್ 6ರಂದು ದಂಡಿಯಲ್ಲಿ ಉಪ್ಪನ್ನು ತಯಾರಿಸಿ ಕಾನೂನು ಭಂಗ ಚಳವಳಿ ಪ್ರಾರಂಭಿಸಿದರು. ಏಪ್ರಿಲಿನಿಂದ ಒಂದು ವರ್ಷಕಾಲ ನಡೆದ ಈ ಚಳುವಳಿ ಕಾಲದಲ್ಲಿ ಸರ್ಕಾರೀ ಲೆಕ್ಕಾಚಾರದಂತೆ 29 ಕಡೆ ಗೋಳೀಬಾರು, 103 ಸಾವು, 60,000 ಜನರ ಬಂಧನ ಆಯಿತು.
ಮುಂದೆ ಗಾಂಧಿ-ಇರ್ವಿನ್ ಒಪ್ಪಂದವಾಗಿ ಚಳವಳಿಯನ್ನು ಸ್ಥಗಿತಗೊಳಿಸಿ, ಗಾಂಧೀಜಿ ಲಂಡನ್ನಿಗೆ ಎರಡನೆಯ ಚಕ್ರಗೋಷ್ಠಿಗೆ ಹೋಗಿ ಬರಿಗೈಯಲ್ಲಿ ಮರಳಿ ಬಂಧಿತರಾದರು. ಕಾನೂನುಭಂಗ ಚಳವಳಿ ಮತ್ತೆ ಉಗ್ರವಾಗಿ 1932 ಜನವರಿಯಲ್ಲಿ ಆರಂಭವಾಯಿತು. ಹಿಂದೆಂದೂ ಕಾಣದ ಪ್ರಮಾಣದಲ್ಲಿ ಭಾರತ ಜನಸಮುದ್ರದಲ್ಲಿ ರಾಜಕೀಯ ಜಾಗೃತಿಯನ್ನು ಇದು ಉಂಟುಮಾಡಿತು.
1933 ಮೇ ತಿಂಗಳಲ್ಲಿ ಗಾಂಧೀಜಿಯ ಬಿಡುಗಡೆ ಆದಾಗ ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ ವೈಸರಾಯರು ಮಾತುಕತೆಗೆ ಒಪ್ಪದ್ದರಿಂದ 1933 ಆಗಸ್ಟನಿಂದ 1934 ಮಾರ್ಚ್ ತನಕ ಕಾನೂನುಭಂಗ ಚಳವಳಿ ನಡೆದು ಮತ್ತೆ ಹಲವು ಸಾವಿರ ಜನ ಜೈಲು ಕಂಡರು.
ಮುಂದೆ 1935 ಫೆಡರಲ್ ಕಾಯ್ದೆಯಂತೆ 1937ರಲ್ಲಿ ಪ್ರಾಂತೀಯ ಶಾಸನ ಸಭೆಗಳಿಗೆ ಚುನಾವಣೆಗಳಾಗಿ ಆರು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ಸು ಪೂರ್ಣ ಬಹುಮತ ಪಡೆದು ಮತ್ತು ಮೂರು ಪ್ರಾಂತ್ಯಗಳಲ್ಲಿ ಇತರ ಪಕ್ಷಗಳ ಜೊತೆ ಸೇರಿ ಅಧಿಕಾರ ಪಡೆಯಿತು. ಆದರೆ ಮುಸ್ಲಿಮ್ ಲೀಗ್ ಕಾಂಗ್ರೆಸ್ ಜೊತೆ ಸಹಕರಿಸದೆ ಹಿಂದು ಮುಸ್ಲಿಮ್ ಒಗ್ಗಟ್ಟು ಕನಸಿನ ಮಾತಾಗಿ ದೇಶ ವಿಭಜನೆ ಅನಿವಾರ್ಯವೆನ್ನುವ ಭಾವನೆ ಬೆಳೆಯಲಾಂಭಿಸಿತು.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
ಸ್ವಾತಂತ್ರ್ಯ ನೋಟವನ್ನು ನಾಳೆ ಮುಂದುವರೆಸೋಣ...
ಕಾಮೆಂಟ್ಗಳು