ಗೋಕುಲ ನಿರ್ಗಮನ 23
ಗೋಕುಲ ನಿರ್ಗಮನ 23
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಬಲರಾಮಾದಿ ಗೋಪರು
ಹಾಡು : ರಾಗ - ಜುಂಜೋಟಿ
ಬನ್ನಿರೋ ನಾವೆಲ್ಲ ಮಧುರೆಗೆ ಬಿಲ್ಲ ಹಬ್ಬಕೆ ಹೋಗುವ
ಹಳುವ ಹಳ್ಳಿಯ ಬಿಡುತ ಸೊಗಸಿನ ಹೊಳಲಜಾತ್ರೆಗೆ ಹೋಗುವ
ಬಲರಾಮ
ಹೈ ಹಚಚ್ಚಾ ಎಂದು ತುರುಗಳ ಹಣ್ಣು ಮುದುಕರೆ ಕಾಯಲಿ
ಹಟ್ಟಿಯೊಳೆ ನಿಟ್ಟುಸಿರನಿಡುತ ಹೆಂಗಳುಳಿಯಲಿ ಊರಲಿ - ಬನ್ನಿರೋ
ಮಿಕ್ಕವರೊಬ್ಬೊಬ್ಬರು
ಮಗುಟವುಟ್ಟು ಶಲ್ಯಹೊದೆದು ಮುಡಿಗೆ ಗರಿಯನು ಸೆಕ್ಕಿಸಿ
ಕಣ್ಣು ಮಾಡುವ ಮಧುರೆ ಹೆಂಗಳ ಸೆಡಕುನೋಟವ ಸೊಕ್ಕಿಸಿ - ಬನ್ನಿರೋ
ನಂದಗೋಕುಲಬಾಲರೆ ಇವರೆಲ್ಲರಾಡುವ ಧೀರರು
ಅಹುದಹುದು ಮತ್ತಾರು ಎನ್ನುವ ಠೀವಿಯೊಳು ನಾವೆಲ್ಲರು - ಬನ್ನಿರೋ
ತೋಳ ಬಂದಿಯ ಹೊನ್ನು ಮಿರುಗಲು ಜಟ್ಟಿಗಳ ನಗುವಂದದಿ
ಬೀಸಿ ನಡೆವ ದಿಟ್ಟರೇ ಸೈ ಎನ್ನೆ ಜನವಾನಂದದಿ - ಬನ್ನಿರೋ
ಬಲರಾಮ
ಅರರೆ ಏನಾಗಿಹುದೋ ಕೃಷ್ಣ ಆರು ಮಂಕನು ತಳಿದರೊ
ಹೆಣ್ಣ ನಂಜೇರಿಹುದೆ ಮುರಳಿಯು ಸಾಕುಸಾಕಿನ್ನೇಳೆಲೋ
ಗೋಪಾಲಕರು
ಏಳು ಕೃಷ್ಣ – ಏಳಿರೆಲ್ಲ –
ಕೃಷ್ಣ
ಏಕೆ ಏನಿದು ಗಡಿಬಿಡಿ
ಹೋಗುವೆಡೆ ಹೋಗಯ್ಯ ನನ್ನನ್ನು ನನ್ನ ಪಾಡಿಗೆಯೇ ಬಿಡಿ
ಬಲರಾಮ
ಬಿಲ್ಲ ಹಬ್ಬದೊಳು ಬೀರವ ತೋರಲು
ಬನ್ನಿರಿ ಗೋಕುಲವೀರರೇ -
ಕಿವಿಗೊಡು ಅಹಹಾ ಎಂಥ ಕರೆ
ಬಿಲ್ಗಳ ಬಗ್ಗಿಸಿ ಮಲ್ಲರ ಜಗ್ಗಿಸಿ
ಮದ್ದಾನೆಯ ಮದ ಕುಗ್ಗಿಸಿ
ತೇಜವ ಮೆರೆಸಲು ಕರೆ ಬಂದಿದೆ ಬಾ
ಬಿನದದ ಬೆಸನವ ತಗ್ಗಿಸಿ
ಗೋಪಾಲಕರು
ಕೇಶಿಯ ಕೊಂದವನೇ
ನಾಗರ ಹೆಡೆಯೊಳು ನಿಂದವನೇ
ಹೆಬ್ಬಾವನೆ ಹೊಕ್ಕವನೇ
ಮಲೆಯನೆತ್ತಿ ಮುಗಿಲೊಡೆಯನ ನಕ್ಕವನೇ ದೊರೆ ನಿನಗೆಂದೇ ಈ ಮುಖ್ಯನ ಕಳಿಸಿಹನೇ ಎಲ್ಲರ ಮೀರುವ ಬೀರವ ತೋರಲು
ಹೊರಡೆಲೊ ಗೋಕುಲವೀರನೇ
ಕೃಷ್ಣ
ಕಂಸನಿಂದ ಆಹ್ವಾನ
ಎಂದು ಇಲ್ಲದೀ ಮಾನ !
ಇದಕೇ ಇಷ್ಟು ಸುಮಾನ?
ಹೊರನಾಡಿನ ಕರೆ ಕೇಡಿನ ಕರೆ -
ಅದು ತಾಯಿಯಂತೆ ಮೊಲೆಯನೂಡೆ ಬಂದಿತ್ತು
ಕುದುರೆಯಂತೆ ಕೆನೆದಾಡುತ ನಿಂದಿತ್ತು ದಿನಬಳಕೆಯ ಗಾಳಿಯಂತೆ ಮೈಸೋಕಿ
ನಮ್ಮ ಕೊಲ್ಲಲೆತ್ತಿ ಬಿತ್ತು ಬಾನ್ ತಾಕಿ
ತೆರೆತೆರೆ ಅರೆಅರೆಗೆರಗೆರಗಿ ಬೀಳ್ವಂತು
ಕೇಡು ಬಂದು ನಮ್ಮ ಸೋಕಿ ಸೋತಿತ್ತು ಗೋಕುಲದ ತಾಯ್ಕೆಲದ ಕಾಪಿರಲು
ಎಡರೆಲ್ಲ ಹುಡಿಹುಡಿಯಾಯ್ತು ಬಯಲು ಮಧುರೆಯ ಕರೆ ಕೇಡಿನ ಕರೆ ಅನಿವಾರ್ಯದೊಳದು ನಿಂತೆಡೆಗೇ ಬರೆ ಸೆಣಸುವುದನಿವಾರ್ಯ
ಅದು ಕರೆವೆಡೆಗೋಗುಡುತಡಿಯಿಡೆ
ಅನುಚಿತವಾ ಕಾರ್ಯ
ಬಲರಾಮ
ಹಾಡುಕುಣಿತಗಳಿಂದ ಮೆದುವಾದೆಯೋ ಕೃಷ್ಣ
ಕೇಡು ಕೇಡೆಂದು ನೀ ಹೇಡಿಯಾದೆ
ಬಿಲ್ಲ ಹಬ್ಬಕೆ ಬನ್ನಿರೆಂದರಸು ಕರೆಕಳುಹೆ ಒಲ್ಲೆನೆಂದೊಡೆ ಅದು ಎಂಥ ಮರ್ಯಾದೆ ನೋಡು ನೋಡೀ ಮುಖ್ಯ ಕೇಡಿನಾಳಂತಿಹನೆ ನೋಡಿದೊಡನೆಯೇ ನೇಹಕೆಡೆಯಾದೆ ನಾನು ಅನ್ವರ್ಥನಾಮನೆನೆ ಅಕ್ರೂರನೀ ಸೌಮ್ಯ
ನಿನ್ನ ಬಹುಮಾನಿಸುತ ಇಲ್ಲಿ ಬಂದಿಹನು ಆತಂಗೆ ಕಿವಿಗೊಡು
ಸಂದೆಗಂಗಳ ಬಿಡು
ಅಕ್ರೂರ
ಕೃಷ್ಣ, ನಂದಗೋಪಕುಮಾರ, ವೀರ
ಬಾ ಬಾ ಮಧುರೆಗೆ ಬಾ
(ಹಾಡುತ್ತಾನೆ.)
ಹಾಡು : ರಾಗ - ಸಿಂಧುಭೈರವಿ
ಗೋಕುಲ ಬಾಲಕ
ಸ್ವಜನ ಪಾಲಕ
ಬಾ ಬಾ ಮಧುರೆಗೆ ಬಾ
ಮುಗಿಲ ತೇರಂತೆ ಬಾ
ಮಿಂಚ ತೋರುತ್ತ ಬಾ
ಸೊದೆಯ ತರುವ ವಿನತಾಸುತನಂದದಿ -
ಬಾ ಬಾ ಮಧುರೆಗೆ ಬಾ
ಹಗಲ ರವಿಯಂತೆ ಬಾ
ಇರುಳ ಪೆರೆಯಂತೆ ಬಾ
ತೇಜಃಪೂರಕ ತಾರಕ ಬಾರೈ_
ಬಾ ಬಾ ಮಧುರೆಗೆ ಬಾ
ಬಾನ ಹೊಳೆಯಂತೆ ಬಾ
ಬನದ ನೆರೆಯಂತೆ ಬಾ
ಗೋಕುಲವುಳಿದೀ ಜಗಕ್ಕೆ ಬಾರೈ -
ಬಾ ಬಾ ಮಧುರೆಗೆ ಬಾ
ಎಲ್ಲ ಕಂಗಳನು ತುಂಬಲು ಬಾ
ಎಲ್ಲರಾಸೆಗಿಂಬಾಗಿ ಬಾ
ಎಲ್ಲರ ನಚ್ಚನು ಹೊತ್ತಿಸೆ ಬಾರೈ -
ಬಾ ಬಾ ಮಧುರೆಗೆ ಬಾ
ನಂದಕುಮಾರನೆ ಬಾ
ನಯನಮನೋಹರ ಬಾ
ಎಲ್ಲರು ಹೊಗಳುವ ವೀರನೆ ಬಾರೈ -
ಬಾ ಬಾ ಮಧುರೆಗೆ ಬಾ
ಬಲರಾಮ
ಮಂದಿಯ ಬಿನದದ ನಟನೇ ನೀನು
ಸನ್ನೆಗೆ ಹಾಡುವ ಗಾಯಕನೇನು
ಅರಸರಂತೆ ಬಾಲ್ಗೊಳ್ಳುವ ಬಾರೈ -
ಬಾ ಬಾ ಮಧುರೆಗೆ ಬಾ
ಹಳುವನುಳಿದು ಬಾ
ಕೊಳಲನೆಸೆದು ಬಾ
ಹೆಂಗಳ ಹಂಬಲ ತೊರೆಯುತ ಬಾರೈ -
ಬಾ ಬಾ ಮಧುರೆಗೆ ಬಾ
ನಿನ್ನ ಮನವುಳಿವ ಹಳೆಪೊರೆಯಂತೆ
ಹಳುವಿಗಾಗಲಿದು ಬಾ
ಹೊಸ ಮನದೊಳು ಬಾ
ಹೊಸ ಬಾಳಿಗೆ ಬಾ
ಜಸಕೇರಲು ಬಾ -
ಬಾ ಬಾ ಮಧುರೆಗೆ ಬಾ
( ನಡುವಿಗೆ ಕೃಷ್ಣನು ಸಿಕ್ಕಿಸಿಕೊಂಡಿರುವ ಕೊಳಲನ್ನು ಬಲರಾಮ ಕಿತ್ತೆಸೆಯಲು ಹೋಗುತ್ತಾನೆ. ಕೃಷ್ಣನು ತಡೆಯುತ್ತಾನೆ. ಆದರೆ ಕೊಳಲು ಇವರ ಸೆಣಸಾಟದಲ್ಲಿ ಕೆಳಗೆ ಬೀಳುತ್ತದೆ. ಎಲ್ಲರೂ ಹಾ ರಾಮ ಹಾ ಕೃಷ್ಣ ಅಣ್ಣ ಅಣ್ಣ ಎಂದು ಉಗ್ಗಡಿಸುತ್ತಾರೆ.)
***********
ಬಲರಾಮ ಮತ್ತು ಇತರರು ಬಿಲ್ಲ ಹಬ್ಬಕ್ಕೆ ಹೋಗುವಾ ಬನ್ನಿರಿ ಎಂದು ಎಲ್ಲರನ್ನೂ ಕರೆದು ಹುರಿದುಂಬಿಸಿ ಹಾಡುತ್ತಾರೆ. ಇಲ್ಲಿರುವ ಮುದುಕರು ದನಕರುಗಳನ್ನು ನೋಡಿಕೊಳ್ಳಲಿ. ಹೆಂಗಸರು ಮನೆಯಲ್ಲಿರಲಿ. ನಾವೆಲ್ಲರೂ ಹೋಗುವಾ ಎನ್ನುವರು.
ಸುಂದರವಾಗಿ ಅಲಂಕರಿಸಿಕೊಂಡು ಮಧುರೆಯ ಹೆಂಗಸರ ಗಮನ ಸೆಳೆಯುವಾ. ನಂದಗೋಪರು ಯಾರಿಗೇನೂ ಕಡಿಮೆಯಿಲ್ಲ. ಅವರೆಲ್ಲ ಆಶ್ಚರ್ಯಪಡುವಂತೆ ಮೆರೆಯೋಣ.
ಕೃಷ್ಣನ ನಿರಾಸಕ್ತಿಯನ್ನು ಬಲರಾಮ ಗುರುತಿಸುವನು. ಹೆಣ್ಣಿನ ಮೋಹದ ನಂಜು ಏರಿರುವುದೇ, ಸಾಕು ಈ ಮುರಳಿಗಾನ. ಹೊರಡು ಎನ್ನುವನು. ಎಲ್ಲರೂ ಒತ್ತಾಯ ಮಾಡುವರು.
ಕೃಷ್ಣನು ನನ್ನನ್ನು ನನ್ನ ಪಾಡಿಗೆ ಬಿಡಿ. ನೀವು ಹೋಗಿರಿ ಎನ್ನುವನು. ಆದರೆ ಬಲರಾಮ ಬಿಲ್ಲ ಹಬ್ಬದ ಬಗ್ಗೆ ವರ್ಣಿಸುವನು. ಕರೆ ಬಂದಿರುವಾಗ ಹೋಗಬೇಕು ಎನ್ನುವನು. ಗೋಪಾಲಕರು ಕೃಷ್ಣನ ಹಿಂದಿನ ಸಾಹಸಗಳನ್ನು ನೆನಪಿಸುವರು. ಕೇಶಿಯನ್ನು ಕೊಂದದ್ದು, ಕಾಳಿಂಗನ ದಮನ, ಗೋವರ್ಧನಗಿರಿಯನ್ನು ಎತ್ತಿದ್ದು ಇತ್ಯಾದಿ.
ಕೃಷ್ಣನಿಗೆ ಕೇಡಿನ ಶಂಕೆ. ಕಂಸನಿಂದ ಕರೆಯೆಂದರೆ ಅದು ಸಂಚಿನ ಇನ್ನೊಂದು ರೂಪ. ಈ ಹಿಂದೆಯೂ ಪೂತನಿಯಾಗಿ, ಕುದುರೆಯಾಗಿ, ಬಂಡಿಯಾಗಿ ನಮ್ಮನ್ನು ಕಾಡಿ ಗೋಕುಲದ ನೆಲದ ಪುಣ್ಯದಿಂದ ಅವೇ ಸೋತಿದ್ದವು...ಆದರೀಗ ಇದು ಅನಿವಾರ್ಯ.
ಕೃಷ್ಣನ ಮೆದುತನವನ್ನು ಬಲರಾಮ ಹೀಯಾಳಿಸುವನು. ಹೇಡಿಯೆಂದು ಜರೆಯುವನು. ಅಕ್ರೂರನು ಕೇಡಿಗನೆಂದು ತೋರುವನೆ? ಅನ್ವರ್ಥನಾಮವೇ ಆಗಿಹನು. ಸಂದೇಹಗಳನ್ನು ಬಿಡು ಎನ್ನುವನು.
ಅಕ್ರೂರನು ಕೃಷ್ಣನನ್ನು ಅನುನಯಿಸುತ್ತ ಮಧುರೆಗೆ ಬಾ ಎನ್ನುವನು. ಮುಗಿಲಿನ ತೇರಿನಂತೆ, ಮಿಂಚುತ್ತ ಬಾ. ಅಮೃತವನ್ನು ಹೊತ್ತು ತಂದ ಗರುಡನಂತೆ ಬಾ. ಹಗಲಿನ ರವಿಯಂತೆ, ಇರುಳ ಚಂದ್ರನಂತೆ ಬಾ. ಕಾಡಿನ ತುಂಬು ಪ್ರವಾಹದಂತೆ, ಎಲ್ಲರ ಕಂಗಳನ್ನೂ ತುಂಬಲು ಬಾ. ಎಲ್ಲರ ಆಸೆಗಳಿಗೆ ಆಸರೆಯಾಗಿ ಬಾ. ನಯನಮನೋಹರನೆ, ನಂದಕುಮಾರನೆ, ಎಲ್ಲರೂ ಹೊಗಳುವ ವೀರನೆ ಬಾ ಎನ್ನುವನು.
ಬಲರಾಮನು ಧ್ವನಿಗೂಡಿಸುತ್ತ ಜನರ ಮುಂದಿನ ನಿನ್ನ ನಟನೆ ಸಾಕು. ಅರಸರಂತೆ ಹೋಗುವಾ ಬಾ. ಈ ಹಳ್ಳಿ, ಕಾಡು ಎಲ್ಲ ಬಿಟ್ಟು ಕೊಳಲನ್ನು ಎಸೆದು, ಹೆಣ್ಣುಗಳ ಹಂಬಲ ಬಿಟ್ಟು ಬಾ. ಪೊರೆ ಕಳಚಿದ ಹಾವಿನಂತೆ ಹೊಸ ಮನದಿಂದ ಹೊಸಬಾಳಿಗೆ ಬಾ. ಯಶಸ್ಸು ಗಳಿಸಲು ಬಾ ಎನ್ನುತ್ತ ಕೃಷ್ಣನ ಕೊಳಲನ್ನು ಕಿತ್ತು ಎಸೆಯಲು ನೋಡುವನು. ಕೃಷ್ಣ ತಡೆಯುವನು. ಈ ಸೆಣಸಾಟದಲ್ಲಿ ಕೊಳಲು ಕೆಳಗೆ ಬೀಳುವುದು. ಎಲ್ಲರಿಗೂ ಗಾಬರಿ. ಹಾ ಹಾ ಎನ್ನುವರು.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್ಗಳು