ಸ್ವಾತಂತ್ರ್ಯ ನೋಟ - 12
ಸ್ವಾತಂತ್ರ್ಯ ನೋಟ - 12
ಕ್ರಾಂತಿಕಾರಕ ಹೋರಾಟ
ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಕ ಹೋರಾಟ ಸಾಧ್ಯತೆ ಭಾರತದಲ್ಲಿತ್ತೆ?
ಅದು ಇದ್ದದಾದರೂ ಹೇಗೆ?
ಒಂದು ಬೃಹತ್ ಶಕ್ತಿಯ ವಿರುದ್ಧ ಹೋರಾಡುವಾಗ ಅದರಲ್ಲಿದ್ದ ಸಂಕಲ್ಪ ಬಲ ಏನಿದ್ದಿರಬಹುದು?
ಅದಕ್ಕೆ ತನ್ನ ಮಿತಿಯ ಅರಿವು ಇರದಿರುವಷ್ಟು ಕುರುಡಾಗಿತ್ತೆ?
ಇತ್ಯಾದಿ ಪ್ರಶ್ನೆಗಳು ನಮ್ಮಲ್ಲಿ ಮೂಡಿ ಹೋಗಿರುತ್ತದೆ.
ಈ ನಿಟ್ಟಿನ ಒಂದು ಚಿಂತನೆಗೆ ಹೊಳಹು ಇಲ್ಲಿರಬಹುದು ಎಂದು ಇಂದು ಈ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಕ ಹೋರಾಟದ ಕುರಿತು ಪ್ರಸ್ತಾಪಿಸುತ್ತಿದ್ದೇನೆ. ಇದು ಒಂದು ನಿಟ್ಟಿನ ನೋಟ ಅಷ್ಟೇ.
ಕ್ರಾಂತಿಕಾರಕ ಹೋರಾಟ ಎಂಬುದನ್ನು ಎರಡು ವಿಧದಲ್ಲಿ ನೋಡೋಣ. ಈ ಎರಡೂ ಪರಿಯಲ್ಲೂ ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಭಾರತೀಯ ಸ್ವಾತಂತ್ರ್ಯದ ಕನಸಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಎರಡು ರೀತಿಯ ಕ್ರಾಂತಿಕಾರಕ ಹೋರಾಟಗಳಲ್ಲಿ ಒಂದು, ಘಟನೆಗಳಿಗೆ ಪ್ರತಿಕ್ರಿಯೆಯಾಗಿ ರೂಪುಗೊಂಡ ಹೋರಾಟ. ಉದಾಹರಣೆಗೆ ಲಾಲಾ ಲಜಪತರಾಯ್ ಸಾವಿಗೆ ಕಾರಣನಾದ ಸಾಂಡರ್ಸ್ ಎಂಬುವನನ್ನು ಕೊಂದ ಕ್ರಾಂತಿಕಾರಿ ಪ್ರತೀಕಾರ.
ಮತ್ತೊಂದು ಶತ್ರುವಿನ ಹೊರ ಶತ್ರುವನ್ನು ಮಿತ್ರನನ್ನಾಗಿಸಿಕೊಂಡು ಯುದ್ಧ ಸನ್ನದ್ಧನಾಗಿ ಹೋರಾಡುವ ಪರಿ. ಸುಭಾಶ್ ಚಂದ್ರಬೋಸರು ಮಾಡಿದ ಪ್ರಯತ್ನ ಎರಡನೇ ತರದ್ದು.
****
ಸುಭಾಶ್ಚಂದ್ರ ಬೋಸ್ರು 1897ರ ಜನವರಿ 23ರಂದು ಜನಿಸಿದರು. ಅವರು ಅಂದಿನ ಅತ್ಯುನ್ನತ ಪರೀಕ್ಷೆಯಾದ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ನಾಲ್ಕನೇ ರಾಂಕ್ ಗಳಿಸಿದ್ದರೂ, ಅದೆಲ್ಲವನ್ನೂ ಬದಿಗೊತ್ತಿ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಸೇರಿ ಅದರ ಯುವಜನ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು.
ಗಾಂಧೀಜಿಯವರು ಸಂಘಟಿಸಿದ ಅಸಹಕಾರ ಚಳವಳಿಯಿಂದ ಆಕರ್ಷಿತಗೊಂಡು, ಅವರ ಸಲಹೆಯ ಮೇರೆಗೆ ಕೋಲ್ಕತ್ತಾದಲ್ಲಿ ಚಿತ್ತರಂಜನ್ ದಾಸ್ ಅವರ ಮಾರ್ಗದರ್ಶನದಲ್ಲಿ ಚಳವಳಿಯ ಕೆಲಸ ಮಾಡಲು ತೆರಳಿದರು. 1921 ರಲ್ಲಿ ವೇಲ್ಸ್ನ ರಾಜಕುಮಾರ ಭಾರತಕ್ಕೆ ಭೇಟಿ ನೀಡುವುದರ ವಿರುದ್ಧ ಪ್ರತಿಭಟನೆ ಆಯೋಜಿಸಿ ಬಂಧಿಸಲ್ಪಟ್ಟರು. ನಂತರದಲ್ಲಿ ಭಯೋತ್ಪಾದನಾ ಸಂಶಯದ ಮೇಲೆ ಅವರನ್ನು ಅಲಿಪೋರ್ ಸೆರೆಮನೆಯಲ್ಲೂ ಕ್ರಮೇಣ, ಬರ್ಮಾಕ್ಕೂ ಗಡಿಪಾರು ಮಾಡಲಾಯಿತು. ಸೆರೆಮನೆಯಿಂದ ಬಿಡುಗಡೆ ಹೊಂದಿದ ಮೇಲೆ ಕೋಲ್ಕತ್ತಾ ನಗರದ ಮೇಯರ್ ಆಗಿ ಚುನಾಯಿತರಾದರು.
ಗಾಂಧೀಜಿಯವರ ಅಹಿಂಸಾ ಚಳವಳಿಯ ಮೂಲಕ ಸ್ವಾತಂತ್ರ್ಯ ಗಳಿಸುವುದು ಅಸಾಧ್ಯವೆಂದು, ಅದಕ್ಕಾಗಿ ರಾಜಕೀಯ ಮತ್ತು ಮಿಲಿಟರಿ ಶಕ್ತಿ ಗಳಿಸುವುದು ಅತ್ಯವಶ್ಯವೆಂದು ಬೋಸ್ ಅವರು ನಂಬಿದ್ದರು. ಬೋಸ್ ಅವರು ಹೆಚ್ಚೆಚ್ಚು ಸಾಮೂಹಿಕ ಹೋರಾಟಗಳನ್ನು ಹೂಡಬೇಕೆಂದು ಬಯಸಿದರೆ, ಗಾಂಧೀಜಿಯವರ ಗುಂಪಿಗೆ ಅಂಥ ಸಾಮೂಹಿಕ ತಳಮಟ್ಟದ ಹೋರಾಟದ ಬಗ್ಗೆ ವಿಶ್ವಾಸವಿರಲಿಲ್ಲ. ಗಾಂಧೀಜಿಯ ವಿರೋಧದ ನಡುವೆಯೂ ಅವರು ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾದರು. ಬೇಕಿದ್ದ ಸಹಕಾರ ಮೂಡದೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅಖಿಲ ಭಾರತ ಫಾರ್ವರ್ಡ್ಬ್ಲಾಕ್ ಎಂಬ ಹೆಸರಿನ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. ಆ ಮೂಲಕ ಜನಾಂದೋಲನ ಹೂಡುವಂತೆ ಪರೋಕ್ಷವಾಗಿ ಕಾಂಗ್ರೆಸ್ಸಿನ ಮೇಲೆ ಒತ್ತಾಯ ಹೇರಿದರು. 1940ರ ಜುಲೈನಲ್ಲಿ ಸರ್ಕಾರ ಅವರನ್ನು ಬಂಧಿಸಿತು. ಅವರು ನವೆಂಬರಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದ ಕಾರಣ ಅವರ ಆರೋಗ್ಯ ಕಳವಳಕಾರಿಯಾಯಿತು. ಬ್ರಿಟಿಷ್ಸರ್ಕಾರ ಅವರನ್ನು ಬಿಡುಗಡೆ ಮಾಡಿತು.
1941ರ ಜನವರಿ 17ರಂದು ಬೋಸರು ನಡುರಾತ್ರಿಯಲ್ಲಿ ಕೋಲ್ಕತ್ತಾವನ್ನು ಬಿಟ್ಟರು. ಅಲ್ಲಿಂದ ಪರಾರಿಯಾಗಿ ನೇರವಾಗಿ ಬರ್ಲಿನ್ನಿಗೆ ತೆರಳಿ, ಜರ್ಮನ್ನರು ಸೆರೆಹಿಡಿದಿದ್ದ ಭಾರತೀಯ ಯುದ್ಧ ಕೈದಿಗಳಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಸೇನೆ ಕಟ್ಟಲು ಜರ್ಮನಿಯ ವಿದೇಶಾಂಗ ಮಂತ್ರಿಯಿಂದ ಅವಕಾಶ ಪಡೆದರು. ಮೊದಮೊದಲು ನಿರೀಕ್ಷಿತ ಮಟ್ಟದಲ್ಲಿ ಸೇನೆ ನಿರ್ಮಿಸಲು ಸಾಧ್ಯವಾಗದಿದ್ದರೂ 1942ರ ಜನವರಿ ವೇಳೆಗೆ ಎರಡು ತುಕಡಿಗಳನ್ನು ರಚಿಸುವುದು ಸಾಧ್ಯವಾಯಿತು.
ಎರಡನೇ ವಿಶ್ವ ಮಹಾಯುದ್ಧ ಸಮಯದಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರಗಳು ಎರಡು ಬಣಗಳಾಗಿ ನಿಂತವು. ಜಪಾನೀಯರು 1941ರಲ್ಲಿ ಉತ್ತರ ವಲಯದಲ್ಲಿ ದಾಳಿ ಮಾಡಿದಾಗ ಬ್ರಿಟಿಷರು ಸೋತರೂ, ಕ್ಯಾಪ್ಟನ್ ಮೋಹನ್ಸಿಂಗ್ ಮತ್ತು ಹಲವು ಅಧಿಕಾರಿಗಳು ಹಾಗೂ ಸೈನಿಕರೊಂದಿಗೆ ಕಾಡಿಗೆ ಪರಾರಿಯಾದರೂ ಜಪಾನೀಯರಿಗೆ ಶರಣಾಗಬೇಕಾಯಿತು. ಬ್ಯಾಂಕಾಕಿನಲ್ಲಿದ್ದ ಭಾರತೀಯ ಪ್ರೀತಮ್ ಸಿಂಗ್ ಮತ್ತು ಮೇಜರ್ ಪುಜಿಹಾರಾ ಎಂಬ ಜಪಾನಿ ಸೇನಾಧಿಕಾರಿ ಮೋಹನ್ ಸಿಂಗ್ ಅವರೊಂದಿಗೆ ವಿಫುಲವಾಗಿ ಚರ್ಚಿಸಿ, ಜಪಾನೀಯರ ನೆರವಿನಿಂದ, ಭಾರತೀಯ ಯುದ್ಧ ಕೈದಿಗಳನ್ನು ಒಲಿಸಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದು ಸೈನ್ಯವನ್ನು ಕಟ್ಟುವ ಹೊಣೆಯನ್ನು ಹೊರುವಂತೆ ಒಪ್ಪಿಸಿದರು. 1942ರ ಸೆಪ್ಟೆಂಬರ್ 1 ರಂದು ಅಧಿಕೃತವಾಗಿ ಇಂಡಿಯನ್ ನ್ಯಾಷನಲ್ಆರ್ಮಿ ಸ್ಥಾಪನೆಯಾಯಿತು. ಐಎನ್ಎ ಎಂಬದು ಸೇನಾ ವಿಭಾಗ ಮಾತ್ರ. ರಾಜಕೀಯ ಬೆಂಬಲ ಗಳಿಸಲು ರಚಿತವಾದ ಸಂಸ್ಥೆ ಇಂಡಿಯನ್ ಇಂಡಿಪಂಡೆನ್ಸ್ ಲೀಗ್.
ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಸೈನಿಕ ದಂಗೆಯೆಬ್ಬಿಸಲು ಯತ್ನಿಸಿ ವಿಫಲರಾದ ರಾಸ್ಬಿಹಾರಿ ಬೋಸ್ ಜಪಾನಿನಲ್ಲಿ ನೆಲೆಸಿ ಅಲ್ಲಿನ ನಾಗರಿಕರಾಗಿದ್ದರು. ಅವರು ಇಂಡಿಪೆಂಡೆನ್ಸ್ ಲೀಗ್ನ್ನು ಸ್ಥಾಪಿಸಲು ಮುಂದೆ ನಿಂತರು. 1942ರ ಮಾರ್ಚ್ನಲ್ಲಿ ಟೋಕಿಯೋವಿನಲ್ಲಿ, ಜೂನ್ನಲ್ಲಿ ಬ್ಯಾಂಕಾಕಿನಲ್ಲಿ ಸಮ್ಮೇಳನಗಳನ್ನು ನಡೆಸಿ ಅದನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಬ್ಯಾಂಕಾಕಿನ ಸಮ್ಮೇಳನ ಸುಭಾಷ್ ಬೋಸರನ್ನು ಪೂರ್ವ ಏಷ್ಯಾಕ್ಕೆ ಬಂದು ನಾಯಕತ್ವ ವಹಿಸುವಂತೆ ಕೇಳಿಕೊಂಡಿತು. ಮಲಯ, ಸಿಂಗಪುರ, ಸಯಾಂ ಮುಂತಾದ ಪೂರ್ವ ಏಷ್ಯಾ ದೇಶಗಳಲ್ಲಿ ನೆಲೆಸಿದ್ದ ಭಾರತೀಯರು ಉತ್ಸಾಹದಿಂದ ಈ ಲೀಗಿಗೆ ಸೇರಿದರು. ಸಾವಿರಾರು ತರುಣರು ಐಎನ್ಎಗೆ ಸೇರಲು ಮುಂದೆ ಬಂದು ತರಬೇತಿ ಪಡೆದರು. ರಾಸ್ ಬಿಹಾರಿ ಬೋಸ್ ಲೀಗಿನ ಅಧ್ಯಕ್ಷರಾದರು. ಮೋಹನ್ಸಿಂಗ್ ಕಾರ್ಯ ಸಮಿತಿಯಲ್ಲಿ ಸೇನಾ ವ್ಯವಸ್ಥೆಯ ಹೊಣೆ ಹೊತ್ತ ಸದಸ್ಯರೂ, ಪ್ರಧಾನ ಸೇನಾಪತಿಯೂ ಆದರು.
ಕೆಲವೇ ದಿನಗಳಲ್ಲಿ ಜಪಾನ್ ಸರ್ಕಾರಕ್ಕೂ, ಮೋಹನ್ಸಿಂಗರಿಗೂ ವಿರಸ ಹುಟ್ಟಿತು. ಐಎನ್ಎಯ ಗರಿಷ್ಟ ಸಂಖ್ಯಾಬಲ ಎಷ್ಟಿರಬೇಕು ಮತ್ತು ಭಾರತದತ್ತ ಜಪಾನಿನ ನೀತಿಯನ್ನು ಕುರಿತು ಬಹಿರಂಗ ಘೋಷಣೆ, ಈ ವಿಚಾರಗಳಲ್ಲಿ ಅಭಿಪ್ರಾಯ ಭೇದ ಹುಟ್ಟಿತು. ರಾಸ್ಬಿಹಾರಿಯವರು ಒಮ್ಮತ ಮೂಡಿಸಲು ಮಾಡಿದ ಪ್ರಯತ್ನ ಮುರಿದು ಬಿತ್ತು. ಮೋಹನ್ಸಿಂಗರನ್ನು ಜಪಾನ್ ಸರ್ಕಾರ ಬಂಧಿಸಿತು. ಆದರೆ ಬಂಧನವನ್ನು ನಿರೀಕ್ಷಿಸಿದ್ದ ಸಿಂಗ್, ತಾವು ಬಂಧನಕ್ಕೊಳಗಾದರೆ ಇಂಡಿಯನ್ ನ್ಯಾಷನಲ್ಆರ್ಮಿಯನ್ನು ವಿಸರ್ಜಿಸಬೇಕೆಂಬ ಆದೇಶವನ್ನು ಇತರೆ ಸೇನಾಧಿಕಾರಿಗಳಿಗೆ ಮೊಹರು ಮಾಡಿದ ಕವರಿನಲ್ಲಿಟ್ಟು ನೀಡಿದ್ದರು. ಅದರ ಪ್ರಕಾರ ಮೊದಲ ಐಎನ್ಎ ವಿಸರ್ಜನೆಯಾಯಿತು.
ಸುಭಾಷ್ಚಂದ್ರ ಬೋಸರು ಪೂರ್ವ ಏಷ್ಯಕ್ಕೆ ಬರುವ ಪ್ರಯತ್ನ ಕೈಗೂಡಲು ಎಂಟು ತಿಂಗಳುಗಳಾದವು. ಅಲ್ಲಿ ಯುದ್ಧ ಕಾಲದ ಜಪಾನಿ ಪ್ರಧಾನಿ ಟೋಜೋ, ಮತ್ತು ಬೋಸರ ನಡುವೆ ಚರ್ಚೆ ನಡೆದು ಒಂದು ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಸುಭಾಷರು 1943ರ ಜುಲೈ 2ರಂದು ಸಿಂಗಪುರಕ್ಕೆ ಬಂದಾಗ ಅಲ್ಲಿನ ಭಾರತೀಯರು ಭವ್ಯ ಸ್ವಾಗತ ನೀಡಿದರು. 4ನೆಯ ತಾರೀಕು ರಾಸ್ ಬಿಹಾರಿಯವರು ಇಂಡಿಪೆಂಡೆನ್ಸ್ ಲೀಗಿನ ಮುಖಂಡತ್ವವನ್ನು ಸುಭಾಷರಿಗೆ ವಹಿಸಿಕೊಟ್ಟರು. ಅವರು ಆಜಾದ್ ಹಿಂದ್ ಫೌಜ್ ಎಂಬ ಹೆಸರಿನಲ್ಲಿ ಐಎನ್ಎಯನ್ನು ಪುನಃಸಂಘಟಿಸಿದರು. ತಾವೇ ಸರ್ವೋಚ್ಚ ಸೇನಾಪತಿಯಾಗಿ ‘ಡೆಲ್ಲಿ ಚಲೋ’ ಎಂಬ ಘೋಷಣೆಯನ್ನು ಆ ಸೇನೆಗೆ ನೀಡಿದರು. ನಾನಾ ಕಾರಣಗಳನ್ನು ಮುಂದೊಡ್ಡಿ ಐಎನ್ಎ ಪ್ರತ್ಯಕ್ಷವಾಗಿ ಯುದ್ಧರಂಗಕ್ಕೆ ಇಳಿಯದಿರುವಂತೆ ಮಾಡಲು ಜಪಾನೀಯರು ವಿಶ್ವ ಪ್ರಯತ್ನ ಮಾಡಿದರು. ಬಲವಾದ ಐಎನ್ಎ, ಬ್ರಿಟಿಷರ ವಿರುದ್ಧ ಹೋರಾಡುವಂತೆ ತಮ್ಮ ಎದುರಿಗೂ ಹೋರಾಡಬಹುದು ಎಂಬುದು, ಹಾಗೂ ಸೇನಾಬಲ ಅಧಿಕವಾದಷ್ಟು ಬೋಸರು ರಾಜಕೀಯವಾಗಿ ಸ್ವತಂತ್ರರಾಗಿ ನಿರ್ಧಾರ ಕೈಗೊಳ್ಳಲು ಅವಕಾಶ ಒದಗುತ್ತದೆ ಎಂಬುದು ಜಪಾನಿನ ಸರ್ಕಾರಕ್ಕೆ ತಿಳಿದಿತ್ತು. ಆದರೆ ಬೋಸರು ಅದ್ಕಕೆ ಒಪ್ಪದೆ, ಎಲ್ಲ ಐಎನ್ಎ ದಳಗಳು ಭಾರತೀಯ ಅಧಿಕಾರಿಗಳ ಹಿಡಿತದಲ್ಲೇ ಇರುವಂತೆ ಮತ್ತು ಅದಕ್ಕೆ ಕಾರ್ಯಾಚರಣೆಯ ಸಲುವಾಗಿ ಸ್ವತಂತ್ರ ಕ್ಷೇತ್ರ ದೊರೆಯುವಂತೆ ಮಾಡಿದರು.
1944ರ ಆರಂಭದಲ್ಲಿ ಜಪಾನಿ ಹಾಗೂ ಐಎನ್ಎ ಪಡೆಗಳು ಈಶಾನ್ಯ ಭಾರತವನ್ನು ಪ್ರವೇಶಿಸಿದವು. ಆದರೆ, ಅಮೆರಿಕದ ಸೈನ್ಯ ಫಿಲಿಫೈನ್ಸಿನಲ್ಲಿ ಭಾರಿ ಕಾರ್ಯಾಚರಣೆಯನ್ನು ಆರಂಭಿಸಿದ ಕಾರಣ ಜಪಾನೀಯರ ವಿಮಾನ ಬಲ ಅಲ್ಲಿಗೆ ಹೋಗಬೇಕಾಯಿತು. ಮಳೆಗಾಲವೂ ಆರಂಭವಾಗಿ ಬರ್ಮಾದ ಕಡೆಗೆ ಹಿಂದೆ ಸರಿಯತೊಡಗಿತು ಐಎನ್ಎ. 1944ರ ಕೊನೆಯಲ್ಲಿ ಬ್ರಿಟಿಷ್ಸೇನೆಗಳೇ ಮುನ್ನುಗ್ಗಿದವು. ಹಿಂದೆ ಸರಿದ ಐಎನ್ಎ ರಂಗೂನಿಗೆ ಹೋಯಿತು. ಜಪಾನೀಯರು ರಂಗೂನನ್ನು ತೆರವು ಮಾಡಿದಾಗ ನಗರವನ್ನು ಐಎನ್ಎಗೆ ಒಪ್ಪಿಸಿದರು. 1945ರ ಮೇ ತಿಂಗಳ ಆರಂಭದಲ್ಲಿ ರಂಗೂನನ್ನು ಬ್ರಿಟಿಷ್ ಸೇನೆಗಳು ವಶಪಡಿಸಿಕೊಂಡಾಗ ಐಎನ್ಎಯನ್ನು ನಿಶ್ಯಸ್ತ್ರಗೊಳಿಸಿ, ಬಂಧಿಸಲಾಯಿತು. ಬೋಸರು 1945ರ ಆಗಸ್ಟ್ 18ರಂದು ಒಂದು ವಿಮಾನಾಪಘಾತದಲ್ಲಿ ಮಡಿದರೆಂದು ಜಪಾನಿನ ಸರ್ಕಾರ ಅಧಿಕೃತವಾಗಿ ತಿಳಿಸಿತು.
ಬೋಸ್ ಸ್ಥಾಪಿಸಿದ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪಕ್ಷವು ಇತರೆ ಎಡ ಪಕ್ಷಗಳಂತೆ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆಯನ್ನು ಹೊಂದಿದ್ದರೂ, ಅದಕ್ಕೆ ಕಾರ್ಮಿಕರು ಮತ್ತು ರೈತಾಪಿ ಹೋರಾಟದ ಧೋರಣೆಯಿನ್ನೂ ಮೈಗೂಡಿರಲಿಲ್ಲವಾದ್ದರಿಂದ ಅದಿನ್ನೂ ಹೋರಾಟಕ್ಕಾಗಿ ಮಧ್ಯಮ ವರ್ಗವನ್ನೇ ನೆಚ್ಚಿಕೊಂಡಿತ್ತು. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಾಸಿಸ್ಟ್ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಇತರೆ ಎಡಪಕ್ಷಗಳು ಎಲ್ಲ ಕ್ರಾಂತಿಕಾರಿ ಶಕ್ತಿಗಳ ಐಕ್ಯತೆಗಾಗಿ ಯತ್ನಿಸುತ್ತಿದ್ದರೆ, ಫಾರ್ವರ್ಡ್ ಬ್ಲಾಕ್ ಪಕ್ಷರು ‘ಶತ್ರುವಿನ ಶತ್ರು ಮಿತ್ರ’ ಎಂಬ ಸರಳ ಸೂತ್ರಕ್ಕೆ ಕಟ್ಟುಬಿದ್ದು, ಬ್ರಿಟಿಷ್ ಸಾಮ್ರಾಜ್ಯಶಾಹಿಯೊಂದೇ ತನ್ನ ಪ್ರಮುಖ ಶತ್ರುವೆಂದು ಪರಿಗಣಿಸಿ, ಜರ್ಮನಿ ಮತ್ತು ಜಪಾನಿನ ಫ್ಯಾಸಿಸ್ಟ್ ಶಕ್ತಿಗಳೊಂದಿಗೆ ಕೈಜೋಡಿಸಲು ಯತ್ನಿಸಿತ್ತು. ಆದರೆ, ನೆಹರೂ ಅವರು ಫಾಸಿಸ್ಟ್ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿ ಎರಡೂ ಅವಳಿ ಜವಳಿಗಳೆಂದು ಅಂದಾಜು ಮಾಡಿದ್ದರು.
ಎರಡನೇ ಮಹಾಯುದ್ಧದಲ್ಲಿ ಜಪಾನೀಯರು ಮೈತ್ರಿಕೂಟದ ಸೇನೆಗೆ ಶರಣಾಗತಗೊಂಡಾಗ ಇಂಡಿಯನ್ ನ್ಯಾಷನಲ್ ಆರ್ಮಿಯ ಭಾರತೀಯ ಸೈನಿಕರು ಬ್ರಿಟಿಷರ ಕೈದಿಗಳಾಗಬೇಕಾಯಿತು. ಹೀಗೆ ಬಂಧಿಸಲ್ಪಟ್ಟ ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರನ್ನು ನವೆಂಬರ್ 1945ರಲ್ಲಿ ಬ್ರಿಟಿಷ್ ಸರ್ಕಾರ ವಿಚಾರಣೆ ನಡೆಸಲು ಮುಂದಾದಾಗ ದೇಶವ್ಯಾಪಿ ಪ್ರತಿಭಟನೆ ಶುರುವಾಯಿತು. ಇನ್ನೂ ಮಹತ್ತರ ಬೆಳವಣಿಗೆಯೆಂದರೆ, ಐ.ಎನ್.ಎ. ಅನುಭವ ಮತ್ತು ಬ್ರಿಟಿಷರ ಭಾರತೀಯ ಸೇನೆಯಲ್ಲಿದ್ದ ಅಸಮಾಧಾನ, ಇವೆರಡರ ನಡುವಿನ ಕೊಂಡಿಯಿಂದಾಗಿ, 1945-46ರಲ್ಲಿ ಬಾಂಬೆ ನೌಕಾ ಮುಷ್ಕರ ಬೃಹತ್ ಮಟ್ಟದಲ್ಲಿ ಜರುಗಿತು.
ಆರಂಭದಲ್ಲಿ ಬ್ರಿಟಿಷರು ನೂರಾರು ಸಂಖ್ಯೆಯ ಐ.ಎನ್.ಎ. ಸೈನಿಕರನ್ನು ವಿಚಾರಣೆಗೆ ಗುರಿಪಡಿಸಲು ನಿರ್ಧರಿಸಿದರು. ಅದರಂತೆ, ಹಲವರನ್ನು ವಿಚಾರಣೆಗೊಳಪಡಿಸುವುದು, ಗಲ್ಲಿಗೇರಿಸುವುದು, ಸೇವೆಯಿಂದ ಕಿತ್ತೊಗೆಯುವುದು ಮತ್ತು ಯಾವುದೇ ವಿಚಾರಣೆಯಿಲ್ಲದೆ ಸುಮಾರು 7000 ಕ್ಕೂ ಹೆಚ್ಚು ಜನರನ್ನು ಬಂಧನದಲ್ಲಿರಿಸುವುದು. ನವೆಂಬರ್ 1945ರಲ್ಲಿ ಮೊದಲ ವಿಚಾರಣೆಯನ್ನು ದೆಹಲಿಯ ಕೆಂಪುಕೋಟೆಯಲ್ಲಿ ನಡೆಸಿ ಹಿಂದೂ, ಮುಸ್ಲಿಮ್ ಮತ್ತು ಸಿಖ್ ಎಲ್ಲರನ್ನೂ ಒಂದೇ ಸೆರೆಮನೆಯಲ್ಲಿ ಕೂಡಿ ಹಾಕಿದರು. ಭೂಲಭಾಯಿ ದೇಸಾಯಿ, ತೇಜ್ ಬಹದ್ದೂರ ಸಪ್ರು, ನೆಹರು ಮುಂತಾದ ಮುಂಚೂಣಿ ಲಾಯರುಗಳು ಐ.ಎನ್.ಎ. ಸೈನಿಕರ ನ್ಯಾಯಾಂಗ ರಕ್ಷಣೆಗೆ ಮುಂದಾದರೆ, ದೇಶವ್ಯಾಪಿ ಮುಷ್ಕರಕ್ಕೆ ಮುಸ್ಲಿಮ್ ಲೀಗ್ ಕೂಡ ಸೇರಿಕೊಂಡಿತು. ಅದೇ ವೇಳೆ, ಬ್ರಿಟಿಷ್ ಭಾರತೀಯ ಸೇನೆಯ ಹಲವಾರು ಸೈನಿಕರು ಐ.ಎನ್.ಎ. ಸೈನಿಕರ ವಿಷಯದಲ್ಲಿ ಆಸ್ಥೆ ವಹಿಸುತ್ತಿದ್ದು, ಅದರ ಸ್ಫೂರ್ತಿಯನ್ನು ತನ್ನೆಲ್ಲ ನೆಲೆಗಳಲ್ಲಿ ಹಂಚುತ್ತಿದೆಯೆಂದು ಬ್ರಿಟಿಷರ ಗೂಢಾಚಾರ ಸಂಸ್ಥೆಯ ವರದಿಯಿಂದ ಬ್ರಿಟಿಷರು ಆತಂಕಕ್ಕೊಳಗಾಗಿದ್ದರು. ಮತ್ತೊಂದೆಡೆ, ಡಚ್ಚರು ಮತ್ತು ಫ್ರೆಂಚರ ವಸಾಹತುಶಾಹಿ ಪರವಾಗಿ ವಿಯೆಟ್ನಾಂ ಮತ್ತು ಇಂಡೋನೇಷ್ಯಾ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ಸಾಮ್ರಾಜ್ಯಶಾಹಿ-ವಿರೋಧಿ ಪ್ರಜ್ಞೆಯು ಮಹತ್ತರ ಬೆಳವಣಿಗೆ ಕಂಡಿತ್ತು. ಇದರೊಂದಿಗೆ ಯುದ್ಧಾನಂತರ ಕಂಡುಬಂದ ನಿರುದ್ಯೋಗ, ಬೆಲೆಯೇರಿಕೆ, ಬಾಂಬೆ ಮತ್ತು ಬಂಗಾಳದಲ್ಲಿ ಬೆಳೆ ವೈಫಲ್ಯ, ಮದ್ರಾಸಿನಲ್ಲಿ ಚಂಡಮಾರುತ ಮತ್ತು ಪಂಜಾಬ್ನಲ್ಲಿ ಕಡಿಮೆ ಫಸಲು ಇವೆಲ್ಲವೂ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಿದ್ದವು. ಬ್ರಿಟಿಷರಿಗೆ ನಡುಕ ಹುಟ್ಟಿಸತೊಡಗಿದ್ದು 1942ರಲ್ಲಿ ಜರುಗಿದಂತೆ ಇನ್ನೂ ಬೃಹತ್ ರೀತಿಯಲ್ಲಿ ಸಂವಹನ ವ್ಯವಸ್ಥೆಯ ಮೇಲೆ ದಾಳಿ, ರೈತರ ಬಂಡಾಯ, ಕಾರ್ಮಿಕರ ಮುಷ್ಕರಗಳು, ಐ.ಎನ್.ಎ. ಮತ್ತು ಭಾರತೀಯ ಸೇನೆಯ ನಡುವಿನ ಕೆಲಮಟ್ಟದ ಒಡಂಬಡಿಕೆ ಜರುಗಬಹುದೆಂಬ ಭೀತಿ.
1942ರ ವೀರ ಸೇನಾನಿಗಳನ್ನು ವೈಭವೀಕರಿಸುತ್ತಾ, ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಮತ್ತು ತಕ್ಷಣವೇ ಐ.ಎನ್.ಎ. ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ನೆಹರೂ ಒಳಗೊಂಡಂತೆ ಕಾಂಗ್ರೆಸ್ ನಾಯಕರ ಹಿಂಸೆ ಪ್ರಚೋದನಾ ಹೇಳಿಕೆಗಳ ಕುರಿತು ಬ್ರಿಟಿಷ್ ಗೌವರ್ನರ್ ಅಸಮಾಧಾನ ವ್ಯಕ್ತಪಡಿಸಿದರು.
ಕೋಲ್ಕತ್ತಾದಲ್ಲಿ ಫಾರ್ವಡ್ ಬ್ಲಾಕ್ ಮತ್ತು ಕಮ್ಯುನಿಷ್ಟರ ವಿದ್ಯಾರ್ಥಿ ಫೆಡರೇಷನ್ನಿನ ಕಾರ್ಯಕರ್ತರು ಐ.ಎನ್.ಎ. ಸೈನಿಕರನ್ನು ಬಿಡುಗಡೆ ಮಾಡಬೇಕೆಂದು ನಿರಂತರ ಮುಷ್ಕರ ನಡೆಸುತ್ತಿದ್ದರು. ಕಾರು, ಲಾರಿ ಸುಡುವುದು, ರಸ್ತೆ ತಡೆ, ರೈಲು ತಡೆ ಇತ್ಯಾದಿ ಮೂಲಕ ನಗರದಾದ್ಯಂತ ಮುಷ್ಕರವು ವ್ಯಾಪಿಸಿತು. ಪೊಲೀಸರು, ವಿದ್ಯಾರ್ಥಿಗಳು ನಾಗರೀಕರನ್ನು ಒಳಗೊಂಡಂತೆ ಸುಮಾರು 33 ಮಂದಿಯನ್ನು ಕೊಂದರು ಮತ್ತು 200 ಕ್ಕೂ ಹೆಚ್ಚು ಜನ ಗಾಯಗೊಂಡರು. 150 ಪೊಲೀಸ್ ಮತ್ತು ಸೇನೆಯ ವಾಹನಗಳು ನಾಶಗೊಂಡವು, 70 ಬ್ರಿಟಿಷ್ ಮತ್ತು 37 ಅಮೆರಿಕನ್ ಸೈನಿಕರು ಗಾಯಗೊಂಡರು.
ಬಂಗಾಳದ ಗೌವರ್ನರ್ ಜೊತೆಯಲ್ಲಿ ಸ್ನೇಹಪೂರ್ವಕ ಮಾತುಕತೆ ನಡೆಸಿದ ಗಾಂಧೀಜಿ, ಅಹಿಂಸಾತ್ಮಕ ಚಳವಳಿಗೆ ಮಾತ್ರವೇ ತನ್ನ ಬೆಂಬಲ ಎಂದು ಪುನರುಚ್ಚರಿಸಿದರು. ಇತ್ತ ಕಡೆ, ಐ.ಎನ್.ಎ. ಸೈನಿಕರ ವಿಚಾರಣೆ ಕುರಿತು ಬ್ರಿಟಿಷರು ವಿನಾಯಿತಿ ತೋರಿಸಲೇಬೇಕೆಂಬ ವಾಸ್ತವವನ್ನು ಅರಿತುಕೊಂಡರು. ಅದರಂತೆ ಕೊಲೆ ಅಥವಾ ಗಂಭಿರ ಆರೋಪಗಳಲ್ಲಿ ಭಾಗಿಯಾದ ಸೈನಿಕರನ್ನು ಮಾತ್ರವೇ ವಿಚಾರಣೆ ಮಾಡಲಾಗುವುದೆಂದು ತಿಳಿಸಲಾಯಿತು. ಆದರೆ 1946ರ ಫೆಬ್ರುವರಿಯಲ್ಲಿ ಐ.ಎನ್.ಎ.ಯ ಅಬ್ದುಲ್ ರಷೀದ್ ಮೇಲೆ 7 ವರ್ಷಗಳ ಕಠಿಣ ಸಜೆ ವಿಧಿಸಿದ್ದರ ವಿರುದ್ಧ ಕೊಲ್ಕತ್ತಾದಲ್ಲಿ ಮುಸ್ಲಿಮ್ ಲೀಗ್ ನೀಡಿದ ಕರೆಗೆ ವಿದ್ಯಾರ್ಥಿ ಫೆಡರೇಷನ್ ಮತ್ತು ಕಮ್ಯುನಿಸ್ಟರು ಬೆಂಬಲ ನೀಡಿದರು. ಇದರಿಂದಾಗಿ ನಗರದೆಲ್ಲೆಡೆ ಸಂಪೂರ್ಣ ಅಸ್ತವ್ಯಸ್ತ ಉಂಟಾಯಿತು. ಬೃಹತ್ ರ್ಯಾಲಿ ನಡೆಸಲಾಯಿತು. ಬ್ರಿಟಿಷ್ ಸೇನೆಯು ಮುಷ್ಕರನಿರತ 84 ಮಂದಿಯನ್ನು ಕೊಂಡು 300 ಮಂದಿಯನ್ನು ಗಾಯಗೊಳಿಸಿತು. ಇದರೊಂದಿಗೆ ಬೆಲೆಯೇರಿಕೆ ವಿರುದ್ಧ ಮತ್ತು ಪಡಿತರ ಸೌಲಭ್ಯಕ್ಕಾಗಿ ಆಗ್ರಹಿಸಿ ಸರ್ಕಾರಿ ನೌಕರರು, ಅಂಚೆ ಮತ್ತು ರೈಲ್ವೇ ಕಾರ್ಮಿಕರು ಮುಷ್ಕರವನ್ನು ತೀವ್ರಗೊಳಿಸಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರೋಚಿತವಾಗಿ ಮತ್ತು ಅಷ್ಟೇ ಅಪಾಯಕಾರಿಯಾಗಿ ಮೂಡಿಬಂದ ಘಟನೆಯೆಂದರೆ 1946ರ ಫೆಬ್ರುವರಿಯಲ್ಲಿ ಮುಂಬೈಯಲ್ಲಿ ಜರುಗಿದ ರಾಯಲ್ ಇಂಡಿಯನ್ ನೌಕಾದಳದ ಬಂಡಾಯ. ದ್ವಿತೀಯ ಮಹಾಯುದ್ಧ ಸಮಯ ಕಾಲವಾದ್ದರಿಂದ ದೇಶದ ಎಲ್ಲಡೆಯಿಂದ ರಾಯಲ್ ಇಂಡಿಯನ್ ನೌಕಾದಳಕ್ಕೆ ನೇಮಕಾತಿ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಯುದ್ಧದಲ್ಲಿ ಪಾಲ್ಗೊಂಡಿದ್ದರಿಂಧಾಗಿ ವಿಶ್ವದ ಬೆಳವಣಿಗೆಗಳೊಂದಿಗೆ ಸಂಪರ್ಕ, ಐ.ಎನ್.ಎ. ವಿಚಾರಣೆಗಳು, ಯುದ್ಧಾನಂತರದಲ್ಲಿ ಭಾರತ ವಿಮೋಚನಾ ಹೋರಾಟಗಳು ಒಂದು ಶಕ್ತಿಯುತ ಪ್ರಭಾವವನ್ನುಂಟು ಮಾಡಿದ್ದವು. ಫೆಬ್ರುವರಿ 18ರಂದು ಕಳಪೆ ಆಹಾರ ಮತ್ತು ಜನಾಂಗೀಯ ನಿಂದನೆ ವಿರುದ್ಧ ನೌಕಾದಳದ ಸದಸ್ಯರು ದನಿಯೆತ್ತಿದ್ದರು. ಎಂ.ಎಸ್. ಖಾನ್ ನಾಯಕತ್ವದಲ್ಲಿ ಕೇಂದ್ರಿಯ ನೌಕಾದಳ ಮುಷ್ಕರ ಸಮಿತಿಯು ಉತ್ತಮ ಆಹಾರ, ಬಿಳಿಯರು ಮತ್ತು ಭಾರತೀಯರಿಗೆ ಸಮಾನ ವೇತನ, ಇತ್ಯಾದಿಗಳೊಂದಿಗೆ ಐ.ಎನ್.ಎ. ಬಂಧಿಗಳ ಬಿಡುಗಡೆ, ಇಂಡ್ಯೋನೇಷ್ಯಾದಿಂದ ಸೇನೆ ವಾಪಸಾತಿಯಂಥಹ ರಾಷ್ಟ್ರೀಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸಿತು. ಆದರೆ, ಫೆಬ್ರುವತಿ 20 ರಂದು ರಾಯಲ್ ಇಂಡಿಯನ್ ನೌಕಾದಳವನ್ನು ಬ್ರಿಟಿಷ್ ಸೇನೆಯು ಸುತ್ತುವರಿಯಿತು ಹಾಗೂ ಬ್ರಿಟಿಷ್ ಅಡ್ಮಿರಲ್ ಗಾಡ್ಫ್ರೆ ಬಾಂಬರುಗಳನ್ನು ಆಯೋಜಿಸಿ ನೌಕಾದಳವನ್ನು ನಾಶಪಡಿಸುವುದಾಗಿ ಬೆದರಿಕೆ ಒಡ್ಡಿದನು. ಅದೇ ಮಧ್ಯಾಹ್ನ, ಸಾಮಾನ್ಯ ಜನ ಮತ್ತು ಅಂಗಡಿ ಮಾಲೀಕರು ಇಂಡಿಯನ್ ನೌಕಾದಳಕ್ಕೆ ಆಹಾರ ಸರಬರಾಜು ಮಾಡಿ ತಮ್ಮ ಒಗ್ಗಟ್ಟು ಮೆರೆದರು. ಇದರಿಂದ ಇನ್ನಷ್ಟು ಉತ್ತೇಜಿತಗೊಂಡು, ಇಡೀ ದೇಶದ ತುಂಬೆಲ್ಲ ಇದ್ದ ನೌಕಾದಳದ ನೆಲೆಗಳಿಗೂ ಮುಷ್ಕರ ವ್ಯಾಪಿಸಿತು. ಕರಾಚಿಯಲ್ಲಿ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಪೊಲೀಸ್ ಮತ್ತು ಸೇನೆಯೊಂದಿಗೆ ಹಿಂಸಾತ್ಮಕವಾಗಿ ಸೆಣಸಿ ನೌಕಾದಳಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ನೌಕಾದಳಕ್ಕೆ ಬೆಂಬಲವಾಗಿ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ಸಮಾಜವಾದಿ ನಾಯಕರು ಮುಂಬೈನಲ್ಲಿ ಮುಷ್ಕರ ನಡೆಸಿ ಮೂರು ಲಕ್ಷ ಹೆಚ್ಚು ಕಾರ್ಮಿಕರು ಅದರಲ್ಲಿ ಭಾಗಿಯಾದರು. ಇದರಲ್ಲಿ 228 ಸಾವು, 1046 ಗಾಯಾಳುಗಳು ಮತ್ತು ಮೂವರು ಪೊಲೀಸರು ಮರಣ ಹೊಂದಿದರು. ಇನ್ನೊಂದೆಡೆ ಕಾಂಗ್ರೆಸ್ಸಿನ ಮುಖಂಡರು ರಾಯಲ್ ಇಂಡಿಯನ್ ನೌಕಾದಳಕ್ಕೆ ಬೆಂಬಲ ನೀಡದೆ ಬ್ರಿಟಿಷರಿಗೆ ಅವರು ಶರಣಾಗುವಂತೆ ಸೂಚನೆ ನೀಡಿದರು. ಸರ್ದಾರ್ ಪಟೇಲರು ಆಂಧ್ರ ಕಾಂಗ್ರಸ್ಸಿನ ನಾಯಕ ವಿಶ್ವನಾಥನ್ರಿಗೆ ತಾವು 1946ರ ಮಾರ್ಚ್ 1ರಂದು ಬರೆದ ಪತ್ರದಲ್ಲಿ ‘ಸೇನೆಯ ಶಿಸ್ತನ್ನು ಹಾಳುಗೆಡವಬಾರದು, ಸ್ವಾತಂತ್ರ್ಯಾ ನಂತರವೂ ಕೂಡ ನಮಗೆ ಸೇನೆ ಬೇಕಾಗುತ್ತದೆ’ ಎಂದಿದ್ದರು.
* * *
ಆರಂಭಿಕ ಕಾಲಘಟ್ಟದಲ್ಲಿ ಪ್ರಮುಖವಾಗಿ ಅರಬಿಂದೋ ಘೋಷರ ಕ್ರಾಂತಿಕಾರದ ಸಿದ್ಧಾಂತಗಳ ಹಿನ್ನೆಲೆಯಿಂದ ಆರಂಭವಾಗಿ ನೌಕಾದಳದ ಬಂಡಾಯದವರೆಗಿನ ಕಾಲಘಟ್ಟದ ವಿವಿಧ ಪ್ರತಿಭಟನೆಗಳು ಭಾರತದ ರಾಷ್ಟ್ರೀಯ ಹೋರಾಟದ ಪ್ರಮುಖ ಘಟ್ಟವಾಗಿದೆ. ಅವುಗಳು ಕೇವಲ ‘ವೈಯಕ್ತಿಕ ಸಾಹಸಗಳಾಗಿರದೇ’ ತ್ಯಾಗ, ಬಲಿದಾನ ಮತ್ತು ಆದರ್ಶಗಳ ಹಿನ್ನೆಲೆಯಲ್ಲಿ ರೂಪುಗೊಂಡ ಸೈದ್ಧಾಂತಿಕವಾಗಿತ್ತು. ಈ ಹೋರಾಟಗಳೊಂದಿಗೆ ಆ ಕಾಲಘಟ್ಟದಲ್ಲಿ ರೈತ ಹೋರಾಟಗಳ ತೀವ್ರ ಪ್ರತಿಭಟನೆಗಳು ಬ್ರಿಟಿಶ್ ಸಾಮ್ರಾಜ್ಯಶಾಹಿಯನ್ನು ಕಂಗೆಡಿಸಿತ್ತು ಎನ್ನುವುದು ಗಮನಾರ್ಹವಾಗಿದೆ.
(ಮಾಹಿತಿ ಆಧಾರ: ಭಾರತ ಉಪಖಂಡದ ಆಧುನಿಕ ಚರಿತ್ರೆ – ವಿವಿಧ ಆಯಾಮಗಳು: ೯. ಕ್ರಾಂತಿಕಾರಿ ಹೋರಾಟಗಳು ಭಗತ್ಸಿಂಗ್ ಮತ್ತು ಸುಭಾಶ್ಚಂದ್ರ ಬೋಸ್)
ಕಾಮೆಂಟ್ಗಳು