ಸ್ವಾತಂತ್ರ್ಯ ನೋಟ -13
ಗಾಂಧೀಜೀ ಎಂಬ ಪ್ರವೇಶ
ಸ್ವಾತಂತ್ರ್ಯ ನೋಟ -13
ವೈಯಕ್ತಿಕವಾಗಿ ನನಗೆ ಮೊದಲು ಭಾರತ ಎಂಬುದು ಸಮಗ್ರವಾಗಿ ಕಂಡದ್ದು ಇಬ್ಬರು ಮಹಾನ್ ವ್ಯಕ್ತಿಗಳಲ್ಲಿ. ಮೊದಲನೆಯದು ಸ್ವಾಮಿ ವಿವೇಕಾನಂದರು. ಎರಡನೆಯದು ಮಹಾತ್ಮ ಗಾಂಧಿ.
ವಿವೇಕಾನಂದರು ಎಲ್ಲವನ್ನೂ ಕರತಲಾಮಲಕ
ಮಾಡಿಕೊಂಡ ಆತ್ಮವಿಶ್ವಾಸದ ಪ್ರತೀಕ. ಗಾಂಧೀಜಿ ಯಾವುದಕ್ಕೂ ಹೆದರದ ಪ್ರಯತ್ನಶೀಲ. ಅವರು ಬದುಕೇ experiment. An experiment with truth.
ನನಗೆ ಗೊತ್ತು ಒಂದು ತೆರನಾದ ಮಡಿವಂತರಿಗೆ ನಾನು ಹೇಳುವುದು ಇಷ್ಟವಾಗುವುದಿಲ್ಲ. ಗಾಂಧೀಜಿಯವರನ್ನು ಅನೈತಿಕ ನೆಲೆಯಲ್ಲಿ ನೋಡುವಷ್ಟು, ತಾವು ಶ್ರೇಷ್ಠವಾಗಿ ಬದುಕುತ್ತಿದ್ದೇವೆ ಎಂದುಕೊಂಡಿರುವ ಲೋಕವಿದು.
ನನಗೆ ನನ್ನಲ್ಲಿರುವ ತಪ್ಪುಗಳನ್ನು ಕಂಡುಕೊಳ್ಳುವ ಪ್ರಾಮಾಣಿಕ ಕನ್ನಡಿಯಾಗಿ ನನ್ನೊಳಗೆ ಗಾಂಧೀ ಇದ್ದಾರೆ. ನನಗೆ ನಾನು ನೈತಿಕನೊ-ಅನೈತಿಕನೊ, ಸತ್ಯನೊ-ಅಸತ್ಯನೊ ಎಂದು ಇಬ್ಬಗೆ ಹೆಚ್ಚು ಕಾಡದಿರುವಷ್ಟು, ನನ್ನನ್ನು ನಾನು ನೋಡಿಕೊಳ್ಳಲು ಗಾಂಧೀಜಿ ಎಂಬ ಕನ್ನಡಿ ನನಗೆ ಸದಾ ಸಹಾಯ ಮಾಡಿದೆ.
ಗಾಂಧೀಜಿ ಅವರ ಬದುಕನ್ನು ಅವರು ಭಾಗವಹಿಸಿದ ಘಟನೆಗಳ ಮಾತ್ರದಿಂದ ನೋಡಿದರೆ ಅವು ಚಾರಿತ್ರಿಕ ಘಟನೆಗಳಾಗಿ, ಅವು ಯಶಸ್ವಿಯಾಗಿಯೋ, ಅಯಶಸ್ವಿಯಾಗಿಯೋ ಕಂಡು ಗಾಂಧೀಜಿ ಎಂಬುವವನಿಂದಲೇ ಎಲ್ಲಾ ಅನಾಹುತವಾಯ್ತು ಎಂದು ಚಿತ್ರವನ್ನು ಕಂಡುಕೊಳ್ಳುವ ಜನ ಸಾಕಷ್ಟು ಇದ್ದಾರೆ. ಮಹಾಭಾರತದಲ್ಲಿ ಎಲ್ಲಾ ಅನಾಹುತಕ್ಕೂ ಶ್ರೀಕೃಷ್ಣನೇ ಕಾರಣ ಎಂದು ಅರ್ಥೈಸುವ ಜನರೂ ಹಾಗೆಯೇ. ಲೋಕದಲ್ಲಿ ಯಾವುದೂ ಯಾರಿಂದಲೂ ಘಟಿಸುತ್ತದೆ ಎಂಬುದು ಸರಿಯಾದ ನೋಟವಲ್ಲ.
ಕೆಲವರು ಕೆಲವೊಂದು ಘಟನಾತ್ಮಕ ಸನ್ನಿವೇಶಗಳಲ್ಲಿ ಹಾದುಹೋಗುತ್ತಾರಲ್ಲ ಅಲ್ಲೊಂದು ಶಕ್ತಿ ಪ್ರವಹಿಸಿರುತ್ತದೆ. ಆ ಪ್ರವಹಿನಿಯಲ್ಲಿ ಮಿಂದವರಿಗಷ್ಟೇ ಅದರ ಭಾಗ್ಯ. ಅದನ್ನು ಮುಂದೆ ಬಂದ ಜನಾಂಗಗಳಲ್ಲಿ ಸಹಾ ಅರಿತವರಿಗಷ್ಟೇ ಅದರ ಲಾಭ. ಆ ಲಾಭ ಸಹಾ ಆಂತರಿಕವಾದದ್ದು. ಸ್ವರೂಪರಹಿತವಾದದ್ದು.
ಗಾಂಧೀಜಿಯ ಬಗ್ಗೆ ಭಾವನೆ ಹೊಂದಿದ ಮಾತ್ರಕ್ಕೆ ಕ್ರಾಂತಿಕಾರಕ ಹೋರಾಟ ನಡೆಸಿದ ಮಹನೀಯರ ತ್ಯಾಗ ಕಡಿಮೆಯಂದರ್ಥವೇನಲ್ಲ. ಅವರ ಹೋರಾಟದ ರೀತಿ ಸರಿಯಲ್ಲವೆಂದೂ ಅರ್ಥವಲ್ಲ. ಲೋಕದಲ್ಲಿ ಯಾವುದೇ ಜೀವಿಯ ಉದ್ದೇಶ ತನ್ನ ನಾಡಿಗಾಗಿ, ತನ್ನ ಸ್ವಾತಂತ್ರ್ಯಕ್ಕೆ, ತನ್ನ ಸಮಾಜದ ಆತ್ಮಾಭಿಮಾನಕ್ಕೆ ಎಂದಾದಾಗ ಆ ಬಾಳು ಅದನ್ನು ಹೇಗೇ ತಲುಪಿದ್ದರೂ ಶ್ರೇಷ್ಠವೇ. ಆ ಪ್ರತಿಯೊಂದು ಬಾಳೂ ತನ್ನದೇ ಆದ ರೀತಿಯಲ್ಲಿ ಸಾರ್ಥಕ್ಯ ಪಡೆದುಕೊಂಡಿರುವಂತದ್ದು. ಆ ಜೀವಿಗಳು ಮಾಡಿದ ತ್ಯಾಗಗಳು ಮುಂದಿನ ಜನಾಂಗಗಳು ತಮ್ಮನ್ನು ಫೇಸ್ಬುಕ್ ಮಾಧ್ಯಮದಲ್ಲಿ ಹೊಗಳುತ್ತವೆ ಎಂದು ಮಾಡಿರುವಂತಹದ್ದಲ್ಲ. ನಮ್ಮನ್ನೊಳಗೊಂಡಂತೆ ಎಲ್ಲ ಜೀವಿಗಳಿಗೂ ತಾವು ಬದುಕಿದ ರೀತಿಗೆ ಸರ್ಟಿಫಿಕೇಟ್ ಸಿಗಬೇಕಾದದ್ದು ಅದರೊಳಗಿನ ಆತ್ಮಸಂತೃಪ್ತಿಯಿಂದ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಪ್ರತಿ ಜೀವಿಯೂ ಅಂತಹ ಆತ್ಮಸಂತೃಪ್ತಿಯನ್ನು ಅನುಭವಿಸಿರುತ್ತದೆ.
ಗಾಂಧೀಜಿ ಎಂಬುದೇ ಒಂದು ಯುಗ. ಗಾಂಧೀಜಿ ಎಂಬುವರು ಸ್ವಾತಂತ್ರ್ಯದ ಹೋರಾಟದಲ್ಲಿದ್ದ ವ್ಯಕ್ತಿಯಲ್ಲ. ಗಾಂಧೀಜಿಯಿಂದಲೇ ಸ್ವಾತಂತ್ರ್ಯ ಬಂತೆ ಎಂಬ ಮಾತೂ ಅಪಕ್ವವಾದದ್ದು. ದೇಶದಲ್ಲಿ ಬ್ರಿಟಿಷರು ಹೋಗಿ ಭಾರತದವರೇ ಪಾರ್ಲಿಮೆಂಟು, ವಿಧಾಸಭೆ, ಪಂಚಾಯ್ತಿ ಮಾಡಿಕೊಂಡು ವರ್ಷಕ್ಕೊಮ್ಮೆ ಜನಗಣಮನ ಹಾಡುವುದು ಮಾತ್ರವೇ ಸ್ವಾತಂತ್ರ್ಯದ ಪರಿಕಲ್ಪನೆಯಲ್ಲ. ಹಾಗೆ ನೋಡಿದರೆ 1880ರ ಅವಧಿಯಿಂದ 1940ರ ಒಂದು ಪೂರ್ಣ ಸಂವತ್ಸರದಲ್ಲಿದ್ದ ಮೈಸೂರು ಸಂಸ್ಥಾನದ ಆಡಳಿತ ಶ್ರೇಷ್ಠ ಆಡಳಿತಕ್ಕೆ ಮಾದರಿಯಾಗಿತ್ತು ಎಂಬುದನ್ನು ಎಲ್ಲರೂ ಇಂದಿಗೂ ಕೊಂಡಾಡುತ್ತಾರೆ. ಅಂತಹ ಸಂಸ್ಥಾನಗಳು ಕೆಲವು ದೇಶದ ಇತರೆಡೆಗಳಲ್ಲೂ ಇದ್ದವು. ಆಗ ಅದು ಇದ್ದದ್ದು ನಾವಿರುವ ಸ್ವತಂತ್ರ ಭಾರತದಲ್ಲೆ?. ಹಾಗಾಗಿ ಸ್ವಾತಂತ್ರ್ಯ ಎಂಬುದರ ರಾಜಕೀಯ ಪರಿಕಲ್ಪನೆಗಿಂತ ಮೀರಿದ, ನಮ್ಮೊಳಗೆ ನಾವು ಏನನ್ನೋ ಕಂಡುಕೊಂಡಂತೆ ಅದನ್ನು ಲೋಕದೊಳಗೂ ಕಾಣುವಂತೆ ಮಾಡಿದ ಶಕ್ತಿ ಪ್ರವಹಿನಿಯಾಗಿ ಭಾರತದಲ್ಲಿ ಹಾದುಹೋದವರು ಗಾಂಧಿ.
ಸ್ವಾಮಿ ವಿವೇಕಾನಂದರು ಮತ್ತು ಮಹಾತ್ಮ ಗಾಂಧೀಜಿ ಎಂಬ ಎರಡು ತೇಜಃಕಿರಣಗಳು ಯಾವುದೇ ಮಾಧ್ಯಮಗಳು ತಲೆ ಎತ್ತುವ ಮೊದಲೇ ಲೋಕದೆಲ್ಲೆಡೆಯ ಮನಸ್ಸುಗಳನ್ನು ಒಂದೇ ನೆಲೆಯಲ್ಲಿ ತಮ್ಮನ್ನು ಎಲ್ಲೆಡೆಯಲ್ಲಿ ಕಂಡುಕೊಳ್ಳುವಂತೆ ಮಾಡಿದ್ದು ಭಾರತಕ್ಕೆ ಮಾತ್ರವೇ ಅಲ್ಲ, ಇಡೀ ಜಗತ್ತಿಗೆ ಸಂದ ಅತ್ಯಮೂಲ್ಯ ಘಳಿಗೆಗಳು.
ಗಾಂಧೀಜಿ 1869ರ ಅಕ್ಟೋಬರ್ 2ರಂದು ಕಾಠಿಯಾವಾಡದ ಪೋರ್ಬಂದರಿನಲ್ಲಿ ಜನಿಸಿದರು. ತಂದೆ ಕರಮ್ಚಂದ್ ಗಾಂಧೀ ರಾಜಕೋಟೆಯಲ್ಲೂ ವಾಂಕನೀರಿನಲ್ಲೂ ದಿವಾನರಾಗಿದ್ದರು. ಗಾಂಧಿಯವರ ತಾಯಿ ಪುತಲಿಬಾಯಿ. ತಂದೆ ಸ್ವಾಮಿಭಕ್ತ, ಸತ್ಯನಿಷ್ಠ, ಧೈರ್ಯಶಾಲಿ, ಉದಾರಿ. ತಾಯಿಯ ಧರ್ಮಶ್ರದ್ಧೆ ಅನುಪಮವಾದ್ದು. ಗಾಂಧಿಯವರು ಆಕೆಯಿಂದ ಬಹಳಮಟ್ಟಿಗೆ ಪ್ರಭಾವಿತರಾಗಿದ್ದರು.
ಗಾಂಧಿಯವರ ವಿದ್ಯಾಭ್ಯಾಸ ಪೋರ್ಬಂದರ್ ಮತ್ತು ರಾಜಕೋಟೆಗಳಲ್ಲಿ ನಡೆಯಿತು. ಶಾಲೆಯಲ್ಲಿ ಅವರು ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಅವರು ಎಂದಿಗೂ ಕಾಲ ತಪ್ಪಿ ನಡೆಯುತ್ತಿರಲಿಲ್ಲ. ಹಿರಿಯರಲ್ಲಿ ವಿಧೇಯತೆ, ಎಲ್ಲ ಬಾಲಕರಂತೆ ಅವರೂ ಕೆಟ್ಟ ಸಹವಾಸ ಸೇರಿ, ಹೊಗೆ ಸೇದಿದರು, ಕಳ್ಳತನವನ್ನೂ ಮಾಡಿದರು, ಕೌಟುಂಬಿಕ ನಂಬಿಕೆಗಳಿಗೆ ಸಲ್ಲದಾಗಿದ್ದ ಮಾಂಸ ಕೂಡ ತಿಂದರು. ಬಹಳ ಬೇಗ ಅರಿತುಕೊಂಡು ಪಶ್ಚಾತ್ತಾಪಪಟ್ಟು, ಇವನ್ನು ತ್ಯಜಿಸಿದರು.
ಗಾಂಧಿಯವರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಹದಿಮೂರನೆಯ ವಯಸ್ಸಿನಲ್ಲಿ, ಕಸ್ತೂರ ಬಾ ಒಂದಿಗೆ ಅವರ ವಿವಾಹವಾಯಿತು. ಕಸ್ತೂರ ಬಾ ಅವರಿಗೂ ಗಾಂಧಿಯವರಿಗಾಗಿದ್ದಷ್ಟೇ ವಯಸ್ಸಾಗಿತ್ತು. ಉತ್ತರೋತ್ತರದಲ್ಲಿ ಅವರಿಗೆ ನಾಲ್ವರು ಗಂಡುಮಕ್ಕಳಾದರು. ಗಾಂಧಿಯವರ ಎಳಮನಸ್ಸಿನ ಮೇಲೆ ಅದ್ಭುತ ಪರಿಣಾಮ ಮಾಡಿದ ನಾಟಕ ಹರಿಶ್ಚಂದ್ರ. ತಾವೂ ಸತ್ಯಸಂಧರಾಗಬೇಕೆಂಬುದು ಅವರು ಮನಸ್ಸು ಮಾಡಿದರು. ರಂಭಾ ಎಂಬ ದಾದಿ ಅವರಿಗೆ ರಾಮನಾಮ ಕಲಿಸಿದ್ದಳು. ಸತ್ಯ, ರಾಮನಾಮ, ಇವೆರಡೂ ಗಾಂಧೀ ಜೀವನದ ಪರಮ ಆದರ್ಶಗಳಾಗಿದ್ದುವು.
ಗಾಂಧಿಯವರು 18ನೆಯ ವಯಸ್ಸಿನಲ್ಲಿ ರಾಜಕೋಟೆಯ ಆಲ್ಫ್ರೆಡ್ ಪ್ರೌಢಶಾಲೆಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿದರು. ಅನಂತರ ಅವರು ಕಾಲೇಜು ಸೇರಿದರಾದರೂ ಅವರ ವಿದ್ಯಾಭ್ಯಾಸ ಚೆನ್ನಾಗಿ ಆಗಲಿಲ್ಲ. ಆಗ ಹಿತೈಷಿಗಳೊಬ್ಬರ ಸಲಹೆಯಂತೆ ಅವರು ಇಂಗ್ಲೆಂಡಿಗೆ ಹೋಗಿ ನ್ಯಾಯಶಾಸ್ತ್ರ ವ್ಯಾಸಂಗ ಮಾಡಿಬರಬೇಕೆಂದು ನಿರ್ಧಾರವಾಯಿತು. ವಿದೇಶದಲ್ಲಿರುವಾಗ ಮಧ್ಯಪಾನ, ಪರಸ್ತ್ರೀಸಂಗ, ಮಾಂಸಾಹಾರಸೇವನೆ ಮಾಡುವುದಿಲ್ಲವೆಂದು ತಾಯಿಗೆ ವಚನವಿತ್ತು, 1888ರ ಸೆಪ್ಟೆಂಬರ್ 4ರಂದು ಗಾಂಧಿಯವರು ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಮೋಧ್ಬನಿಯ ಜಾತಿಯಲ್ಲಿ ಮೊಟ್ಟಮೊದಲು ಸಮುದ್ರಯಾನ ಮಾಡಿದವರು ಅವರೇ. ಇದು ಜಾತಿಪದ್ಧತಿಗೆ ನಿಷಿದ್ಧವೆಂದು ಮುಖಂಡರು ಅವರಿಗೆ ಬಹಿಷ್ಕಾರ ಹಾಕಿದರು. ಆಗ ಗಾಂಧಿಯವರಿಗೆ 19 ವರ್ಷ. ಕಸ್ತೂರ ಬಾ ಆ ವೇಳೆಗೆ ಒಂದು ಗಂಡು ಮಗುವಿನ ತಾಯಿಯಾಗಿದ್ದರು. ಗಾಂಧಿಯವರು ಲಂಡನಿನಲ್ಲಿ ಮೂರು ವರ್ಷಗಳ ಕಾಲ ಇದ್ದರು. ಅಪ್ಪಟ ಆಂಗ್ಲ ಗೃಹಸ್ಥನಂತೆ ಆಗಬೇಕೆಂಬುದು ಆರಂಭದಲ್ಲಿ ಇವರ ಪ್ರಯತ್ನವಾಗಿತ್ತು. ನೃತ್ಯ, ಫ್ರೆಂಚ್, ಉಪನ್ಯಾಸ ಕಲೆ ಇವನ್ನು ಅಭ್ಯಸಿಸಬೇಕೆಂದು ಪ್ರಯತ್ನಿಸಿ, ಅವು ತಮಗೆ ಸಾಧ್ಯವಿಲ್ಲವೆಂದು ಕೈಬಿಟ್ಟರು. ಕರ್ತವ್ಯದ ಕಡೆ ಚೆನ್ನಾಗಿ ಗಮನವಿಟ್ಟು ವ್ಯಾಸಂಗ ಮಾಡಿದರು. ಗಾಂಧಿಯವರು ತಮ್ಮ ತಾಯಿಗೆ ಕೊಟ್ಟಿದ್ದ ವಚನಗಳನ್ನು ಈಡೇರಿಸಲು ಬಹಳ ಶ್ರಮಪಟ್ಟರು. ಮಾಂಸಾಹಾರ ಸೇವಿಸದೆ ಲಂಡನಿನಲ್ಲಿ ಇರುವುದಾದರೂ ಹೇಗೆ ಎಂದು ಸಂಶಯ ಪಡುತ್ತಿದ್ದ ಅವರು ಒಂದು ನಿದರ್ಶನವಾದರು. ಮೊದಮೊದಲು ಶಾಕಾಹಾರದ ಭೋಜನಗೃಹಗಳಲ್ಲಿ ಊಟಮಾಡುತ್ತಿದ್ದರು. ಕೊನೆಗೆ ತಾವೇ ಅಡಿಗೆ ಮಾಡಿಕೊಳ್ಳಲಾರಂಭಿಸಿ ಸಸ್ಯಾಹಾರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳನ್ನು ಮಾಡಿದರು. ರುಚಿಯ ಅಧಿಷ್ಠಾನ ಮನಸ್ಸೇ ಹೊರತು ನಾಲಗೆಯಲ್ಲವೆಂಬುದು ಅವರ ಅರಿವಿಗೆ ಬಂತು. ಅಸ್ವಾದ ಅವರ ಜೀವನದ ಒಂದು ನಿಯಮವಾಯಿತು. ನೀತಿ ತಪ್ಪುವಂಥ ಪ್ರಸಂಗವೂ ಒಮ್ಮೆ ಗಾಂಧಿಯವರಿಗೆ ಬರುವುದರಲ್ಲಿತ್ತು. ಲಂಡನಿನಲ್ಲಿದ್ದಾಗಲೇ ಗಾಂಧಿಯವರು ಭಗವದ್ಗೀತೆಯನ್ನು ಮೊದಲನೆಯ ಬಾರಿಗೆ ಓದಿದ್ದು. ಆ ಮಹಾಗ್ರಂಥ ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿತು. ಅವರು ಬೈಬಲಿನ ಹೊಸ ಒಡಂಬಡಿಕೆಯನ್ನು ಓದಿದ್ದೂ ಅದೇ ಕಾಲದಲ್ಲಿ. ಕೆಡುಕಿಗೆ ಕೆಡುಕನ್ನು ಮಾಡಬೇಡ-ಎಂಬ ಸೂಕ್ತ ಅವರಿಗೆ ಬಹಳ ಹಿಡಿಸಿತು. ಅವರು ಚಿಕ್ಕವರಿದ್ದಾಗ ಓದಿದ್ದ, ಗುಜರಾತೀ ಕವಿ ಶಾಮಲಾಲ್ ಭಟ್ಟನ, ಒಂದು ಸೀಸಪದ್ಯದ ಉದಾತ್ತ ಭಾವಗಳನ್ನು ಅದು ಸಮರ್ಥಿಸಿತು.
ಗಾಂಧಿಯವರು ಇಂಗ್ಲೆಂಡಿನಲ್ಲಿ ವ್ಯಾಸಂಗ ಮುಗಿಸಿ ಬ್ಯಾರಿಸ್ಟರ್ ಪದವಿ ಪಡೆದು 1891ರ ಜೂನ್ 12ರಂದು ಭಾರತಕ್ಕೆ ಹಿಂದಿರುಗಿ ಎರಡು ವರ್ಷಕಾಲ ಮುಂಬಯಿ ರಾಜಕೋಟೆಗಳಲ್ಲಿ ವಕೀಲ ವೃತ್ತಿ ಮಾಡಿದರು. ಆದರೆ ಅವರಿಗೆ ಯಶಸ್ಸು ದೊರಕಲಿಲ್ಲ. ಅವರಲ್ಲಿ ಆತ್ಮವಿಶ್ವಾಸ, ವಾದಚಾತುರ್ಯ ಇರಲಿಲ್ಲ.
ದಕ್ಷಿಣ ಆಫ್ರಿಕದಲ್ಲಿದ್ದ ಮುಸ್ಲಿಂ ವರ್ತಕರೊಬ್ಬರಿಂದ ಅವರಿಗೆ ಅನಿರೀಕ್ಷಿತವಾಗಿ ಬೇಡಿಕೆಯೊಂದು ಬಂತು. ತಮ್ಮ ಐರೋಪ್ಯ ವಕೀಲರಿಗೆ ಸಹಾಯಕರಾಗಬೇಕೆಂದು ಆ ವರ್ತಕರು ಬಯಸಿದರು. ಇದು ಗಾಂಧಿಯವರ ಬಾಳಿನ ಒಂದು ಮುಖ್ಯ ತಿರುವಾಗಿ ಪರಿಣಮಿಸಿತು. 1893ರ ಮೇ ತಿಂಗಳಿನಲ್ಲಿ ಡರ್ಬನಿನಲ್ಲಿ ಬಂದು ಇಳಿದ ಒಂದು ವಾರದ ಮೇಲೆ ಗಾಂಧಿಯವರು ಅಲ್ಲಿಯ ನ್ಯಾಯಾಲಯಕ್ಕೆ ಹೋದಾಗ ಅವರು ತಲೆಗೆ ಸುತ್ತಿದ್ದ ಪೇಟವನ್ನು ತೆಗೆಯಬೇಕೆಂದು ನ್ಯಾಯಾಧೀಶ ಆಜ್ಞೆ ಮಾಡಿದ. ಅಲ್ಲಿಯ ಬಿಳಿಯರು ಭಾರತೀಯರನ್ನು ಕಾಣುತ್ತಿದ್ದ ರೀತಿ ಎಂಥದೆಂಬುದು ಗಾಂಧಿಯವರಿಗೆ ಪ್ರಥಮವಾಗಿ ಅರಿವಿಗೆ ಬಂತು. ಇದಕ್ಕಿಂತ ಅತ್ಯಂತ ತೀವ್ರತರವಾದ ಆಘಾತವೊಂದು ಅವರಿಗೆ ಕಾದಿತ್ತು. ಅವರು ಡರ್ಬನಿನಿಂದ ಪ್ರಿಟೋರಿಯಕ್ಕೆ ರೈಲ್ವೆಯ ಮೂಲಕ ಒಂದನೆಯ ತರಗತಿಯ ಡಬ್ಬಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿತು. ಮಾರಿಟ್ಸ್ ಬರ್ಗ್ನಲ್ಲಿ ಬಿಳಿಯನೊಬ್ಬ ಆ ಡಬ್ಬಿಯನ್ನು ಹೊಕ್ಕ. ಗಾಂಧಿಯವರ ಬಳಿ ಒಂದನೆಯ ತರಗತಿಯ ಟಿಕೆಟ್ ಇದ್ದರೂ ಆತ ಗಾಂಧಿಯವರನ್ನು ಹೊರತಳ್ಳಿಸಿದ. ವರ್ಣೀಯರು ಒಂದನೆಯ ತರಗತಿಯಲ್ಲಿ ಬಿಳಿಯರೊಂದಿಗೆ ಪ್ರಯಾಣಮಾಡುವುದಕ್ಕೆ ನಿಷೇಧವಿತ್ತು. ಕತ್ತಲು ತುಂಬಿದ ವಿಶ್ರಾಂತಿಮಂದಿರದಲ್ಲಿ ಗಾಂಧಿಯವರು ಚಳಿಯಿಂದ ನಡುಗುತ್ತ ರಾತ್ರಿ ಕಳೆಯಬೇಕಾಯಿತು. "ನನ್ನ ಗಂಟುಮೂಟೆ ಎಲ್ಲಿತ್ತೆಂಬುದು ನನಗೆ ಗೊತ್ತಿರಲಿಲ್ಲ. ಅದು ಎಲ್ಲಿದೆಯೆಂದು ಯಾರನ್ನಾದರೂ ಕೇಳುವ ಧೈರ್ಯವೂ ನನಗಿರಲಿಲ್ಲ. ಹಾಗೆ ಮಾಡಿದರೆ ಮತ್ತೆ ಅವಮಾನ ಹಲ್ಲೆಗಳಿಗೆ ಗುರಿಯಾಗಬೇಕಾಗುತ್ತಿತ್ತು. ನಿದ್ದೆ ಮಾಡುವ ಪ್ರಶ್ನೆಯೇ ಇರಲಿಲ್ಲ. ನನ್ನ ಮನಸ್ಸು ಸಂಶಯದ ಪ್ರಭುತ್ವಕ್ಕೆ ಒಳಗಾಯಿತು. ಭಾರತಕ್ಕೆ ಓಡಿಹೋಗುವುದು ಹೇಡಿತನವೆಂದು ಸರಿರಾತ್ರಿಯಲ್ಲಿ ತೀರ್ಮಾನಕ್ಕೆ ಬಂದೆ" ಎಂದು ಅವರು ಬರೆದುಕೊಂಡಿದ್ದಾರೆ. ನನ್ನ ಕರ್ತವ್ಯವೇನೆಂದು ನನ್ನನ್ನು ನಾನೇ ಕೇಳಿಕೊಂಡೆ. ನಾನು ಭಾರತಕ್ಕೆ ಮರಳಬೇಕೆ? ಅಥವಾ, ದೇವರ ನೆರವಿಗಿರುವನೆಂದು ನಂಬಿ, ಮುಂದುವರಿದು, ಅನುಭವಿಸಬೇಕಾದ್ದನ್ನೆಲ್ಲ ಅನುಭವಿಸಲೆ? ಎಂದು ಅವರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು. "ಅಲ್ಲೇ ಉಳಿದು ಕಷ್ಟ ಅನುಭವಿಸಬೇಕೆಂದು ತೀರ್ಮಾನಿಸಿದೆ, ನನ್ನ ಕ್ರಿಯಾತ್ಮಕ ಅಹಿಂಸೆ ಆರಂಭವಾದ್ದು ಅಂದಿನಿಂದ.”
ಸ್ವಾತಂತ್ರ್ಯ ನೋಟ ನಾಳೆ ಮುಂದುವರೆಸೋಣ.....
ಕಾಮೆಂಟ್ಗಳು