ಗೋಕುಲ ನಿರ್ಗಮನ 25
ಗೋಕುಲ ನಿರ್ಗಮನ 25
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಗೋಪಿಯರು
ಹಾಡು: ರಾಗ ಆಭೇರಿ
ಪೋಗದಿರೈ ಪೋಗದಿರೈ ಪೋಗದಿರಯ್ಯಾ ||ಪ||
ಮಾರಸುಂದರ ಗಿರಿಧರ ನೀ ಪೋಗದಿರಯ್ಯಾ
||ಅ.ಪ||
ನಮ್ಮೊಲವಿನ ಪ್ರಾಣ ನೀ ನಮ್ಮನುಳಿವೆಯಾ
ನಮ್ಮ ಭವದ ತ್ರಾಣ ನೀ ನಮ್ಮ ತೊರೆವೆಯಾ ಮೀನನುಳಿವ ನೀರಿನಂತೆ
ತಿರೆಯ ತೊರೆವ ಗಾಳಿಯಂತೆ ಪೋಗದಿರಯ್ಯಾ... ಪೋಗದಿರೈ
ಮನವೆ ಇಲ್ಲದೊಲವಿನಂತೆ ಹರಿದು ಪೋಪೆಯಾ
ನೇಹವಿರದ ಮೋಹದಂತೆ ಮರೆದು ಪೋಪೆಯಾ
ಬಾಳ ಗುಡಿಯ ಪಾಳುಗೆಡವಿ
ಬೆಳೆಯ ಬಿಡುತ ಮುಳ್ಳಿನಡವಿ ಹೋಗದಿರಯ್ಯಾ
ಮನಮೋಹನ ಗೋಪಾಲ ಹೋಗದಿರಯ್ಯಾ.... ಪೋಗದಿರೈ
ಹೊಳೆ ಬನ ಹೂ ಹಕ್ಕಿ ಸೊಬಗ ಟೊಳ್ಳುಗೈವೆಯಾ
ಬೆಳುದಿಂಗಳ ಸೊಗವ ನೀನು ಸೊನ್ನೆಗೈವೆಯಾ
ನಮಗೆ ನಾವೆ ಸೇರದಂತೆ
ಬೇಸರ ನಮ್ಮಾಳುವಂತೆ ಪೋಗದಿರಯ್ಯಾ - ಪೋಗದಿರೈ
ಮಧುರೆ ಹೆಣ್ಣ ಬೇಟವುಳಿದು ಮರಳಿಬರುವೆಯಾ
ನಲುಮೆಕೂಟ ಕುಣಿತಗಳಲ್ಲಿ ನಮ್ಮನರಿವೆಯಾ
ಸೊಗದ ಬಾಯ ತೆರೆದು ಹೊಳಲು ನುಂಗಿಕೊಳುವುದಜಗರದೊಲು ಪೋಗದಿರಯ್ಯಾ - ಪೋಗದಿರೈ
ಮುರಳಿಯೆಸೆದು ಪೋಪ ನೀನು ಮರಳಿ ಬರುವೆಯಾ
ಸರವ ನುಡಿಸಿ ನಮ್ಮಾಸೆಯ ತೊಳೆಯ ಬರುವೆಯಾ
ಅಡವನಿಟ್ಟ ಹಳೆಯೊಡವೆಯ
ಮರೆಯುವುದೇ ಸಾಜವಯ್ಯ ಪೋಗದಿರಯ್ಯಾ - ಪೋಗದಿರೈ
ನಮ್ಮನುಳಿದು ಪೋಗೆ ನೀನು ಆರು ಕಾವರು
ಧನ್ಯರೆನ್ನೆ ನಿನ್ನ ತೆರೆದೊಳಾರು ಓವರು
ಗೋಪ ಕೃಷ್ಣ ಓಪ ಕೃಷ್ಣ
ಅಣ್ಣ ಕೃಷ್ಣ ತಂದೆ ಕೃಷ್ಣ.... ಪೋಗದಿರಯ್ಯಾ ಪೋಗದಿರೈ ಪೋಗದಿರೈ ಪೋಗದಿರಯ್ಯಾ ಮನಮೋಹನ ಮಾರಸುಂದರ ಪೋಗದಿರಯ್ಯಾ
ಬಲರಾಮ
ಏತಕಿಂಡು ಹಲುಬುತಿಹಿರಿ ಮರಳಿ ಬಾರೆವೆ ಎರಡೆ ದಿನಕೆ ಮಧುರೆ ಬಿಟ್ಟು ಬನದಿ ಸೇರೆವೆ
ಇನ್ನು ಬಯಲು ಭಯವ ಬಿಡಿರಿ
ಹರಕೆಯಿಂದ ಬೀಳುಕೊಡಿರಿ ಹೊಳಲ ಪಯಣಕೆ
ಬನ್ನಿ ಬನ್ನಿ ಸಡಗರಗೊಳಿ ಹೊಳಲ ಪಯಣಕೆ
ಕೃಷ್ಣ
ನಂಬುಗೆಯಿಂ ಬೀಳುಕೊಡಿರಿ ಮರಳಿ ಬರುವೆನು
ನ್ಯಾಸವಿಟ್ಟ ಮುರಳಿಯಾಣೆ ಮರಳಿ ಬರುವೆನು
ಗೋಕುಲವನು ತೊರೆವೆನೇ
ನಿಮ್ಮೊಲವನು ಮರೆವೆನೇ
ಮರಳಿ ಬರುವೆ ಮರಳಿ ಬರುವೆ ಮರಳಿ ಬರುವೆನು
ಮುರಳಿಯ ಕೈಕೊಳ್ಳುವಂದು ಮರಳಿ ಬರುವೆನು.
ಗೋಪಿಯರು
ಕೊಳಲ ತೊರೆದು ಪೋಪ ನೀನು ಮತ್ತೆ ಬರುವೆಯಾ
ಮುಟ್ಟೆನೆಂದು ಆಣೆಯಿಟ್ಟು ಮತ್ತೆ ಬರುವೆಯಾ
ನುಡಿಯೊ ಆಣೆ ಬಿಟ್ಟಿತೆಂದು_
ಕೊಳಲ ಕೋ ನುಡಿಸು ಇಂದು
ಒಂದೆ ಬಾರಿ ನುಡಿಸು ಕೃಷ್ಣ ಅಭಯಗೀತವ
ಎಲ್ಲರೂ
ಒಂದೆ ಬಾರಿ ನುಡಿಸು ಕೃಷ್ಣ ಅಭಯಗೀತವ
ಬಲರಾಮ
ಅದರ ದನಿಯ ಕೇಳಲೆನಗು ಆಸೆಯಾಯಿತೊ ಬರಿದೆ ಜರೆದು ದುಡುಕಿದೆನೈ ಸರವ ಬಾರಿಸೊ
ಅಕ್ರೂರ
ಕೊಳ್ಳು ಕೃಷ್ಣ ಕೊಳ್ಳು ಕೃಷ್ಣ ಮತ್ತೆ ಮುರಳಿಯ ಕೊಂಡು ನೀನು ನುಡಿಸು ಕೃಷ್ಣ ಅಭಯಗೀತವ
(ಗೋಪಿಯರು ಕೊಳಲನ್ನು ಕೃಷ್ಣನ ಕೈಗೆ ಕೊಡುತ್ತಾರೆ.)
**********
ಗೋಪಿಯರು ಅತ್ಯಂತ ಶೋಕದಿಂದ ಹಾಡುವರು. ಹೋಗದಿರು ಮಾಧವಾ, ಹೋಗದಿರು. ನಮ್ಮ ಒಲವಿನ ಪ್ರಾಣ ನೀನಾಗಿರುವೆ. ಮೀನನ್ನು ತೊರೆವ ನೀರಿನಂತೆ, ಭೂಮಿಯನ್ನು ತೊರೆದ ಗಾಳಿಯಂತೆ ಹೋಗದಿರು.
ಮನವಿಲ್ಲದ ಒಲವಿನಂತೆ, ಸ್ನೇಹವಿರದ ಮೋಹದಂತೆ ನಮ್ಮನ್ನು ಮರೆತು ಹೋಗುವೆಯಾ? ನಮ್ಮ ಬಾಳಿನ ಗುಡಿಯನ್ನು ಹಾಳುಗೆಡವಿ ಹೋಗದಿರು.
ಈ ಹೊಳೆ, ಬನ, ಹೂವು, ಹಕ್ಕಿ ಎಲ್ಲವನ್ನೂ ಬರಿದು ಮಾಡುವೆಯಾ? ಬೆಳದಿಂಗಳ ಸೊಬಗನ್ನು ಸೊನ್ನೆಯಾಗಿಸುವೆಯಾ?ಬೇಸರವೇ ನಮ್ಮನ್ನು ಆಳುವಂತೆ ಮಾಡಿ ಹೋಗದಿರು.
ಮಧುರೆಯ ಹೆಣ್ಣುಗಳನ್ನು ಬಿಟ್ಟು ಮತಗತೆ ಬರುವೆಯಾ? ಆ ಪಟ್ಟಣದ ಸೊಬಗು ನಿನ್ನನ್ನು ಅಜಗರದಂತೆ ನುಂಗುವುದು. ಹೋಗದಿರು.
ಮುರಳಿಯನ್ನು ಬಿಟ್ಟ ನೀನು ಮರಳಿ ಬರುವೆಯಾ? ಅಡವಿಟ್ಟ ಒಡವೆಗಳನ್ನು ಮರೆಯುವುದು ಸಹಜ. ಹೋಗದಿರು.
ನೀನು ನಮ್ಮನ್ನು ಬಿಟ್ಟು ಹೋದರೆ ನಮ್ಮನ್ನು ಕಾಯುವವರಾರು? ಪ್ರೀತಿಸುವವರಾರು? ಕೃಷ್ಣ, ಅಣ್ಣ, ತಂದೆ, ಓ ಕೃಷ್ಣ..ಹೋಗದಿರು.
ಬಲರಾಮನು ಸಮಾಧಾನ ಹೇಳುವನು. ನಾವು ಬೇಗ ಮರಳಿ ಬರುವೆವು. ಭಯ ಬಿಟ್ಟು ಹರಕೆಯಿಂದ ಕಳಿಸಿರೆನ್ನುವನು. ಕೃಷ್ಣನೂ ಮರಳಿ ಬರುವೆನೆಂದು ಹೇಳುವನು. ಗೋಕುಲವನ್ನು, ನಿಮ್ಮನ್ನು, ಮುರಳಿಯನ್ನು ಮರೆಯುವೆನೆ ಎನ್ನುವನು.
ಆದರೆ ಅವನು ಮುರಳಿಯನ್ನು ಮುಟ್ಟುವುದಿಲ್ಲವೆಂದು ಆಣೆ ಮಾಡಿದ್ದು ಗೋಪಿಯರಿಗೆ ಕಳವಳ ತಂದಿದೆ. ಹೋಗುವ ಮುನ್ನ ಒಮ್ಮೆ ಕೊಳಲನ್ನು ನುಡಿಸೆಂದು ಕೇಳುವರು. ಬಲರಾಮ ತನಗೂ ಆಸೆಯಾಗಿದೆ. ತಾನು ಕೊಳಲನ್ನು ಹಾಗೆ ಕಿತ್ತೆಸೆದದ್ದು ತಪ್ಪು ಎನ್ನುವನು. ಅಕ್ರೂರನೂ ಕೊಳಲ ನುಡಿಸುವಂತೆ ಕೃಷ್ಣನನ್ನು ಕೇಳುವನು.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್ಗಳು