ಭಾರತೀತೀರ್ಥರು
ಶ್ರೀ ಭಾರತೀ ತೀರ್ಥ ಸ್ವಾಮೀಜಿ
ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರುಸುಮಾರು 1200 ವರ್ಷದ ಇತಿಹಾಸ ಹೊಂದಿರುವ ಶ್ರೀ ಶಾರದಾ ಪೀಠದ ಅವಿಚ್ಚಿನ್ನ ಗುರುಪರಂಪರೆಯ 36 ನೇ ಜಗದ್ಗುರುಗಳು.
ಶ್ರೀ ಶಂಕರಾಚಾರ್ಯರು ಧರ್ಮ ರಕ್ಷಣೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಅದರ ಮೂಲಕ ಧರ್ಮ ಪ್ರಚಾರ ಕೈಗೊಳ್ಳಲು ಯತಿಗಳನ್ನು ನೇಮಕ ಮಾಡುತ್ತಾರೆ. ದಕ್ಷಿಣ ಭಾಗದಲ್ಲಿ ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠವೇ ಶ್ರೀ ಶಾರದಾ ಪೀಠ. ಇದರ 36ನೇ ಜಗದ್ಗುರುಗಳಾಗಿ ನಿಯುಕ್ತರಾದವರು ಶ್ರೀ ಭಾರತಿ ತೀರ್ಥ ಸ್ವಾಮೀಜಿ. ಇವರು ಬ್ರಹ್ಮೈಕ್ಯ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳ ಶಿಷ್ಯರು.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ನಾಡು ತಾಲ್ಲೂಕಿನ ಅಲಗು ಮಲ್ಲೆಪಾಡು ಗ್ರಾಮದ ವೆಂಕಟೇಶ್ವರ ಅವಧಾನಿ ಹಾಗೂ ಅನಂತ ಲಕ್ಷ್ಮೀ ಅವಧಾನಿಯವರು ಶ್ರೀ ಭವಾನಿಶಂಕರ ಸ್ವಾಮೀಜಿಯನ್ನು ಬೇಡಿಕೊಂಡಂತೆ ಖರ ನಾಮ ಸಂವತ್ಸರದ ಚೈತ್ರಶುದ್ಧ ಷಷ್ಠೀ ಬುಧವಾರ ದಿನಾಂಕ 1951ರ ಏಪ್ರಿಲ್ 11ರ ಶುಭದಿನದಂದು ಜನಿಸಿದ ಪುತ್ರನಿಗೆ ಸೀತಾರಾಮ ಆಂಜನೇಯಲು ಎಂದು ನಾಮಕರಣ ಮಾಡಿದ್ದರು.
ಸೀತಾರಾಮನಿಗೆ ಮನೆಯ ಧಾರ್ಮಿಕ ವಾತಾವರಣವು ವ್ಯಕ್ತಿತ್ವ ನಿರೂಪಣೆಗೆ ಪ್ರೇರಕವಾಗಿತ್ತು. ಬಾಲ್ಯದಲ್ಲಿಯೇ ಸ್ಫುಟವಾದ ವಾಣಿ, ತನ್ಮಯತೆ, ಪ್ರೌಡಿಮೆ, ಅತ್ಯಂತ ತೀಕ್ಷ್ಣ ಮತ್ತು ಸೂಕ್ಷ್ಮತೆ ಮತ್ತು ಪೋಷಕರು ಅಚ್ಚರಿ ಪಡುವಷ್ಟು ದೈವಭಕ್ತಿ ಮೈಗೂಡಿಸಿಕೊಂಡಿದ್ದರು. ತಂದೆ ತಾಯಿಯವರ ವ್ರತ ಪೂಜಾದಿಗಳು, ಸ್ತೋತ್ರ ಪಾಠಗಳು, ಪುರಾಣಗಳ ಕಥೆಗಳು ಆತನ ಮನಸ್ಸನ್ನು ಸೆಳೆಯುತ್ತಿದ್ದವು. ಶೈಶವದಲ್ಲಿನ ಸೀತಾ ರಾಮರಿಗೆ ಭಗವನ್ನಾಮ ಜಪ ಅದರಲ್ಲಿಯೂ ಶಿವನಾಮ ಜಪವು ಅತ್ಯಂತ ಪ್ರಿಯವಾಗಿರುತ್ತಿತ್ತು. ಸೀತಾರಾಮರು ತಮ್ಮ ವೇದ ವಿದ್ಯಾಭ್ಯಾಸದ ಜತೆಗೆ ಲೌಕಿಕ ವಿದ್ಯಾಭ್ಯಾಸದಲ್ಲಿಯೂ ಪ್ರಥಮರಾಗಿದ್ದರು. ಎಳೆ ವಯಸ್ಸಿನಲ್ಲಿಯೇ ಸಂಸ್ಕೃತ ಭಾಷೆ ಅರಗಿಸಿಕೊಂಡಿದ್ದು ಏಳನೇ ವಯಸ್ಸಿನಲ್ಲಿ ಬ್ರಹ್ಮೋಪದೇಶ ಪಡೆದರು.
35ನೇ ಜಗದ್ಗುರು ಶ್ರೀಅಭಿನವ ವಿದ್ಯಾತೀರ್ಥರು ತಮ್ಮ ಯಾತ್ರಾ ಕಾಲದಲ್ಲಿ ನರಸರಾವ್ ಪೇಟೆಯಲ್ಲಿ ವಾಸ್ತವ್ಯ ಹೂಡಿದ್ದಾಗ ಅಚಾನಕ್ಕಾಗಿ ಸೀತಾರಾಮರಿಗೆ ಮಹಾಸನ್ನಿದಾನದ ದರ್ಶನವಾಗಿತ್ತು. ಪ್ರಥಮ ಭೇಟಿಯಲ್ಲಿಯೇ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ ಇವರು ಜಗದ್ಗುರುಗಳ ಮನ ಸೆಳೆದಿದ್ದರು. ಮತ್ತೊಮ್ಮೆ ಶ್ರೀಗಳು ಉಜ್ಜಯಿನಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದಾಗ ಸೀತಾರಾಮಂಜನೇಯರು ಜಗದ್ಗುರುಗಳ ದರ್ಶನ ಪಡೆದು ತಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸುವಂತೆ ಕೋರಿಕೊಂಡರು.
1974ರ ನವರಾತ್ರಿ ಉತ್ಸವದ ರಥೋತ್ಸವದ ನಂತರ ಶ್ರೀಅಭಿನವ ವಿದ್ಯಾತೀರ್ಥ ಮಹಾ ಸ್ವಾಮೀಜಿ ಅವರು ಅಂತರಂಗದಲ್ಲಿ ಶಿಷ್ಯ ಸ್ವೀಕಾರದ ಬಗ್ಗೆ ಒಲವು ತೋರಿದರು. ಶ್ರೀಗಳು ಅಮ್ಮನವರ ಗರ್ಭಗೃಹ ಪ್ರವೇಶಿಸಿ ಧ್ಯಾನಮಗ್ನರಾದಾಗ ಶಾರದಾಂಬೆಯ ಅನುಗ್ರಹ ಪ್ರೇರಣೆಯಿಂದ ಶ್ರೀ ಸೀತಾರಾಮ ಆಂಜನೇಯ ಶರ್ಮರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಸನ್ಯಾಸ ನೀಡಿ, ಉತ್ತರಾಧಿಕಾರಿಯನ್ನಾಗಿ ನೇಮಿಸುವ ಸ್ಪಷ್ಟತೆ ಮೂಡಿತ್ತು. ಶ್ರೀಗಳ ಅಂಗೀಕಾರದಿಂದ ಸೀತಾರಾಮಂಜನೇಯರು ಶ್ರೀಗಳ ಶಿಷ್ಯರಾದರು.
ಶ್ರೀ ಪೀಠದ ಉತ್ತರಧಿಕಾರಿಯಾಗಿ, ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ಆಶೀರ್ವಾದದಿಂದ ಇವರು ನ್ಯಾಯ ಶಾಸ್ತ್ರ, ವ್ಯಾಕರಣ, ಮೀಮಾಂಸ ಶಾಸ್ತ್ರ, ತರ್ಕಶಾಸ್ತ್ರ, ವಿದ್ವತ್ ಸಾಧನೆಯಲ್ಲಿಯೂ ಪ್ರಗತಿ ಸಾಧಿಸಿದರು.
ಸೀತಾರಾಮರು ಪೀಠದ ಉತ್ತರಾಧಿಕಾರಿಯಾಗಲು ತನ್ನಲ್ಲಿ ಅರ್ಹತೆ ಇದೆಯೇ ಎಂದು ಚಿಂತಿಸಿದರು. ಆದರೆ, ಈ ಮಹತ್ತಾದ ಸ್ಥಾನಕ್ಕೆ ಅಗತ್ಯವಾದ ಅರ್ಹತೆ, ಯೋಗ್ಯತೆಗಳನ್ನು ತನಗೆ ಅನುಗ್ರಹಿಸಿ, ತನ್ನನ್ನು ಪೂರ್ಣವಾಗಿ ರೂಪಿಸುವವರು ಜಗದ್ಗುರುಗಳೇ ಆಗಿರುವುದರಿಂದ ಗುರು ಆಜ್ಞೆ ಪಾಲನೆ ತನ್ನ ಕರ್ತವ್ಯ ಎಂದು ನಿರ್ಧರಿಸಿದ್ದರು.
ಅದರಂತೆಯೇ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿ ತಮ್ಮ ಶಿಷ್ಯರಿಗೆ ಶ್ರೀ ಭಾರತೀತೀರ್ಥ ಎಂಬ ಯೋಗ ಪಟ್ಟವನ್ನು ಅನುಗ್ರಹಿಸಿ, ಪ್ರಣವ ಮಂತ್ರ, ಚತುರ್ವೇದ ಮಹಾ ವಾಕ್ಯಗಳನ್ನು ಉಪದೇಶಿಸಿದರು. ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿ 1989ರ ಸೆಪ್ಟೆಂಬರ್ 21ರಲ್ಲಿ ನರಸಿಂಹವನದಲ್ಲಿ ತಮ್ಮ ಭೌತಿಕ ದೇಹ ತ್ಯಜಿಸಿದರು. ಆ ಸಂದರ್ಭದಲ್ಲಿ ಪುಣೆಯಲ್ಲಿದ್ದ ಶ್ರೀ ಭಾರತೀತೀರ್ಥ ಸ್ವಾಮೀಜಿ ಶ್ರೀ ಶಾರದಾ ಪೀಠಕ್ಕೆ ಧಾವಿಸಿದರು.1989ರ ಅಕ್ಟೋಬರವ 19ರಂದು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಪಟ್ಟಾಭಿಷೇಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಕಳೆದ 72 ವರ್ಷಗಳಿಂದ ಧರ್ಮ ಪ್ರಚಾರವನ್ನು ನಿರಂತರ ವಾಗಿ ನಡೆಸುತ್ತಿರುವ ಶ್ರಿಭಾರತೀತೀರ್ಥ ಸ್ವಾಮೀಜಿಗಳ ವರ್ಧಂತಿ ಮಹೋತ್ಸವವನ್ನು ದೇಶದ ನಾನಾ ಭಾಗಗಳಿಂದ ಬಂದಿರುವ ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಿದ್ದಾರೆ.
ಲೇಖನ ಕೃಪೆ: 'ಪ್ರಜಾವಾಣಿ'ಯಲ್ಲಿ ಕೆ.ಎಲ್.ಗೋಪಾಲಕೃಷ್ಣ, ಶೃಂಗೇರಿ ಅವರ 2016 ವರ್ಷದಲ್ಲಿ ಮೂಡಿಬಂದ ಲೇಖನ
Sri Bharathi Thirtha Swamiji, Sringeri
ಕಾಮೆಂಟ್ಗಳು