ಎ. ಆರ್. ಮಣಿಕಾಂತ್
ಎ. ಆರ್. ಮಣಿಕಾಂತ್
'ಮಣಿಕಾಂತ' - ಎಂಥ ಭವ್ಯ ಹೆಸರು. ಅಷ್ಟೇ ಅಯಸ್ಕಾಂತೀಯ ಶಕ್ತಿ ಇವರ ನಗುವಿನಲ್ಲಿ - ಬರಹದಲ್ಲಿ - ಆತ್ಮೀಯತೆಯಲ್ಲಿ, - ಒಟ್ಟಾರೆ ವ್ಯಕ್ತಿತ್ವದಲ್ಲಿ ತುಂಬಿ ತುಳುಕಿದೆ. ನನಗೆ ಆಪ್ತರಾದ ಗೋಪಾಲ ವಾಜಪೇಯಿ ಆಗಾಗ ಹೇಳ್ತಿದ್ರು, “ನಮ್ಹುಡುಗ ಮಣಿಕಾಂತ ಇದಾನಲ್ಲ, ನೋಡಿ ಹೇಗೆ ಶ್ರದ್ಧೆಯಿಂದ ನಮ್ಮ ಕಣ್ಮುಂದೆ ಕಲಿತು ಬೆಳೆದ" ಅಂತ. ಈ ಮಣಿಕಾಂತರಿಂದ ನಾವೆಷ್ಟು ಕಲಿಯೋದಿದೆ ಅಂತ ಆಗಾಗ ನಮಗೂ ಅನಿಸುತ್ತೆ. ಅದೆಷ್ಟು ಸಾಧಿಸಿದ್ದರೂ ನಮ್ಮಂತಹ ಏನೂ ಅಲ್ಲದಂತಹವರ ಆಳಕ್ಕೂ ಇಳಿದು ಪ್ರೀತಿ ತೋರುವ, ಮುಗ್ದ ಸರಳ ಅಗಾಧತೆ ಎಷ್ಟು ಹದವಾಗಿ ಇವರಲ್ಲಡಗಿ ಕುಳಿತಿದೆ ಅನಿಸುತ್ತದೆ.
ಮಣಿಕಾಂತ್ 1970ರ ಮೇ 19ರಂದು ಹುಟ್ಟಿದರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯತನಹಳ್ಳಿ ಇವರೂರು. ಹಾಯ್ ಬೆಂಗಳೂರ್, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ, ಉದಯವಾಣಿ ಹೀಗೆ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಉಪಸಂಪಾದಕರಾಗಿ ಕೆಲಸ ಮಾಡುತ್ತಾ ಪಯಣಿಸಿದ್ದಾರೆ. ಅವರ ಅಂಕಣ ಬರಹಗಳು ಪತ್ರಿಕಾಲೋಕದಲ್ಲೊಂದು ಸಂಚಲನವನ್ನು ತಂದು ಕನ್ನಡ ಪತ್ರಿಕೆಗಳತ್ತ ಹೊಸ ಓದುಗರನ್ನು ತಂದಂತಹವು. ಈ ನಿಟ್ಟಿನಲ್ಲಿ 'ಈ ಗುಲಾಬಿಯು ನಿನಗಾಗಿ', ‘ಮರೆಯಲಿ ಹ್ಯಾಂಗ', ‘ಉಭಯ ಕುಶಲೋಪರಿ ಸಾಂಪ್ರತ', ‘ಹಾಡು ಹುಟ್ಟಿದ ಸಮಯ' ಮುಂತಾದವು ಅವುಗಳ ಶೀರ್ಷಿಕೆಗಳಷ್ಟೇ ಮಧುರಭಾವ ಕಟ್ಟಿಕೊಟ್ಟಂತಹವು. ಹಾಡು ಹುಟ್ಟಿದ ಸಮಯವಂತೂ ಅದ್ಭುತ. ನಾವು ಸದಾ ಗುನುಗುತ್ತಿದ್ದ ಮಧುರ ಗೀತೆಗಳ ಭಾವಗಳಾಗಿ, ಅದರ ಇನಿತಿನಿತನ ಸ್ವಾದವನ್ನೂ ಹನಿ ಹನಿಯಾಗಿ ಅವರು ನಮಗಾಗಿ ವರ್ಷಿಸಿದ ಪರಿ, ಸದಾ ಕಾಲ ಮನನೀಯ. Successful people don’t do different things. They do things differently ಎಂಬ ಶಿವ ಖೇರ ಅವರ ಮಾತು ಇಂತಹ ಕೆಲಸಗಳ ಕುರಿತಾಗೇ ಇರಬೇಕು.
ಮೇಲ್ಕಂಡ ಶೀರ್ಷಿಕೆಗಳೆಲ್ಲ ಜನಪ್ರಿಯ ಪುಸ್ತಕಗಳಾಗಿವೆ. ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪ ಅಂದ್ರೆ ಆಕಾಶ, ನವಿಲುಗರಿ, ಮನಸು ಮಾತಾಡಿತು, ಭಾವತೀರಯಾನ ಹೀಗೆ ಅವರ ಪುಸ್ತಕಗಳೆಲ್ಲ ಲಕ್ಷಾಂತರ ಪ್ರತಿಗಳಾಗಿ, ಹಲವಾರು ಮರುಮುದ್ರಣಗಳ ದಾಖಲೆ ನಿರ್ಮಿಸಿ, ಓದುಗರ ಮನ ಸೂರೆಗೊಂಡಿವೆ. ಅವರ ನೀಲಿಮಾ ಪ್ರಕಾಶನದಿಂದ ಮುಂದಿನ ಪುಸ್ತಕ ಯಾವಾಗ ಬರುತ್ತೆ ಎಂಬುದು ಅವರ ಅಭಿಮಾನಿಗಳು ಕಾದು - ಕೊಂಡು - ಓದುತ್ತಾ - ಪುನಃ ಪುನಃ ಹೊಸದಕ್ಕಾಗಿ ಕಾಯುತ್ತಿರುತ್ತಾರೆ. ಶಾಲಾ ಪಠ್ಯಗಳಲ್ಲಿಯೂ ಇವರ ಬರಹಗಳು ಚಿಣ್ಣರಿಗೆ ಓದಿನಲ್ಲಿ ಆಸಕ್ತಿ ಮೂಡಿಸಿವೆ.
ಮಣಿಕಾಂತರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಮತ್ತು 'ಗಿಫ್ಟೆಡ್' ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಗಳಿಸಿವೆ. ಅಮ್ಮ ಪ್ರಶಸ್ತಿ, ಅವ್ವ ಪ್ರಶಸ್ತಿಗಳೂ ಸೇರಿ ಇನ್ನಿತರ ಅನೇಕ ಗೌರವಗಳೂ ಸಂದಿವೆ.
ಆತ್ಮೀಯರೂ, ಪ್ರತಿಭಾವಂತರೂ, ಅಪರಿಮಿತ ಸಾಧಕರೂ ಆದ ಎ. ಆರ್. ಮಣಿಕಾಂತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Manikanth Armanikanth Sir 🌷🙏🌷
ಕಾಮೆಂಟ್ಗಳು