ಡಿ. ಎಸ್. ನಾಗಭೂಷಣ
ಡಿ.ಎಸ್.ನಾಗಭೂಷಣ
ಡಿ. ಎಸ್. ನಾಗಭೂಷಣ ಆಕಾಶವಾಣಿ ಬಲ್ಲ ಕನ್ನಡಿಗರಿಗೆಲ್ಲ ಬಲು ಆಪ್ತ ಹೆಸರು. ಅವರೊಂದು ಸುಸ್ಪಷ್ಟ ಮಧುರ ಕನ್ನಡ ವಾಣಿಯಾಗಿದ್ದರು. ಅವರೊಬ್ಬ ಸಿದ್ಧಾಂತಗಳ ಪರಿಧಿಯ ಮೇರೆ ಮೀರಿದ ಸಹಜ ಸಮಾಜವಾದಿಯಾಗಿದ್ದ ಅದ್ಭುತ ಲೇಖಕರೂ ಆಗಿದ್ದರು. ಇಂದು ಈ ಭವ್ಯ'ವಾಣಿ' ಭೂಲೋಕದಲ್ಲಿ ತನ್ನ ಧ್ವನಿಯನ್ನು ನಿಲ್ಲಿಸಿ ಆಕಾಶದಲ್ಲಿ ಅಸ್ತಂಗತವಾಗಿದೆ.
ಡಿ.ಎಸ್.ನಾಗಭೂಷಣ 1952ರ ಫೆಬ್ರವರಿ 1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ಅವರು ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಗಣಿತದ ತರಗತಿಗಳನ್ನು ತಪ್ಪಿಸಿಕೊಂಡು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸಾಹಿತ್ಯಪ್ರಿಯರಾಗಿದ್ದರು.
ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ 1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ನಾಗಭೂಷಣ ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.
ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ನಾಗಭೂಷಣ ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’, ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’, ‘ಹಣತೆ’(ಜಿಎಸ್ಸೆಸ್ ಅಭಿನಂದನೆ ಗ್ರಂಥ), ‘ಗಾಂಧಿ ಕಥನ’, 'ವಿಧವಿಧ', 'ಸಮಾಜವಾದದ ಸಾಲುದೀಪಗಳು' ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಮೂಡಿಸಿದರು.
ಡಿ. ಎಸ್. ನಾಗಭೂಷಣ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2021ರ ಸಾಲಿನ ವರ್ಷದ ಪುಸ್ತಕ ಪ್ರಶಸ್ತಿ ಸಂದಿತು. ಮಹಾತ್ಮ ಗಾಂಧಿ ಅವರ ಬದುಕಿನ ವಿವರಗಳನ್ನು ನಿರುದ್ವಿಗ್ನವಾಗಿ ಕಟ್ಟಿಕೊಡುವ ಈ ಕೃತಿಯು ಈವರೆಗೆ ಹಲವು ಬಾರಿ ಪುನರ್ ಮುದ್ರಣಗೊಂಡಿದೆ.
ಡಿ. ಎಸ್. ನಾಗಭೂಷಣರ ಒಡನಾಡಿಯಾಗಿದ್ದ ಡಾ. ರಾಜೇಂದ್ರ ಚೆನ್ನಿ ಅವರ ಮಾತುಗಳು ಇಲ್ಲಿ ಅತ್ಯಂತ ಸ್ಮರಣೀಯ: "ಡಿ. ಎಸ್. ನಾಗಭೂಷಣ ಕನ್ನಡದ ಶ್ರೇಷ್ಠ ವಿಮರ್ಶಕ. ಅವರ ಸಮಾಜ, ಸಾಹಿತ್ಯ, ರಾಜಕೀಯ ದೃಷ್ಟಿಕೋನ ಅತ್ಯಂತ ಪ್ರಖರ. ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದ ವೈಚಾರಿಕ ಬದ್ಧತೆಯುಳ್ಳ ವ್ಯಕ್ತಿ. ಒಂದು ವಿರೋಧಪಕ್ಷ ಮಾಡಬೇಕಾದ ಕೆಲಸವನ್ನು ಇಡೀ ಬದುಕಿನುದ್ದಕ್ಕೂ ಮಾಡುತ್ತ ಬಂದರು. ಮಹಾನ್ ಜಗಳಗಂಟ, ನಿಷ್ಠುರಿ. ಜಗಳಗಳ ಮೂಲಕ ನೈತಿಕತೆಯನ್ನು ಹೇಗೆ ಕಾಪಾಡಿಕೊಂಡು ಬರಬೇಕು ಎನ್ನುವುದು ಅವರಿಗೆ ಗೊತ್ತಿತ್ತು. ಯಾವುದೇ ಪ್ರಶಸ್ತಿ, ಸನ್ಮಾನಗಳನ್ನು ಸುಲಭವಾಗಿ ಸ್ವೀಕರಿಸುತ್ತಿರಲಿಲ್ಲ. ಕನ್ನಡಕ್ಕೆ ಸರಿಯಾದ ಸ್ಥಾನಮಾನ ಕೊಟ್ಟಿಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿಯನ್ನೇ ನಿರಾಕರಿಸಿದರು. ಲೋಹಿಯಾವಾದ, ಗಾಂಧೀವಾದವನ್ನು ಬಹುವಾಗಿ ಪ್ರೀತಿಸಿದವರು ಹಾಗೆಯೇ ಪ್ರಶ್ನಿಸುತ್ತಲೂ ಬಂದವರು. ಕನ್ನಡದ ಕ್ಲಾಸಿಕ್ ‘ಗಾಂಧಿ ಕಥನ’. ಸಹಸ್ರ ಸಂಖ್ಯೆಯಲ್ಲಿ ಪುಸ್ತಕಗಳನ್ನು ಓದಿ ಈ ಕೃತಿಯನ್ನು ಬರೆದಿರುವುದು ಅವರ ಮಹಾನ್ ಪ್ರತಿಭೆಗೆ ಸಾಕ್ಷಿ. ಗಾಂಧಿಯನ್ನು ಒಪ್ಪಿಕೊಂಡು ಮತ್ತು ವಿಮರ್ಶಾತ್ಮಕವಾಗಿ ನೋಡುವುದಿದೆಯಲ್ಲ ಅದು ಸುಲಭದ್ದಲ್ಲ."
ಡಿ.ಎಸ್.ನಾಗಭೂಷಣ ಅಂತಹ ಮಹತ್ವದ ವ್ಯಕ್ತಿ 2022ರ ಮೇ 19ರ ದಿನ ಆರಂಭದ ನಸುಕಿನ ಕ್ಷಣಗಳಲ್ಲಿ ನಮ್ಮನ್ನಗಲಿರುವುದು ದುಃಖ ತಂದಿದೆ.
ಮೊದಲ ಚಿತ್ರಕೃಪೆ: Mukunda AN ಅವರದ್ದು
Respects to departed soul D. S. Nagabhushan
ಕಾಮೆಂಟ್ಗಳು