ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ಎಸ್. ಮುರಳಿ


ಡಿ. ಎಸ್.  ಮುರಳಿ

ಕನ್ನಡದವರಾದ ನಟ ಮುರಳಿ ಚಿತ್ರರಂಗದಲ್ಲಿ, ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಹೆಸರಾಗಿದ್ದು, ಸಣ್ಣ ವಯಸ್ಸಿನಲ್ಲೇ ನಿಧನರಾದರು. 

ಮುರಳಿ ಅವರು 1964ರ ಮೇ 19ರಂದು ಚೆನ್ನೈನಲ್ಲಿ ಜನಿಸಿದರು.  ತಂದೆ ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕರಾದ ಸಿದ್ಧಲಿಂಗಯ್ಯನವರು.  5ನೇ ತರಗತಿಯವರೆಗೆ ಚೆನ್ನೈನಲ್ಲಿ ಓದಿದ ಮುರಳಿ ಮಂದೆ 10ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದಿದರು.

ಮುರಳಿ ತಮ್ಮ 14ನೇ ವಯಸ್ಸಿನಲ್ಲಿ ತಂದೆಯವರಿಗೆ ಸಹಾಯಕರಾಗಿ ಸಹ ನಿರ್ದೇಶನ, ಎಡಿಟಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿದರು. 

ಮುರಳಿ ತಮ್ಮ ತಂದೆ ಸಿದ್ಧಲಿಂಗಯ್ಯ ಅವರು ನಿರ್ದೇಶಿಸಿದ 'ಪ್ರೇಮ ಪರ್ವ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಬಂದರು. ಆ ಚಿತ್ರ ಬಿಡುಗಡೆ ಆದದ್ದು 1983ರಲ್ಲಿ.  ಆದರೆ ಮೊದಲು ಬಿಡುಗಡೆ ಆದ ಚಿತ್ರ ಯರಂಕಿ ಶರ್ಮಾ ಅವರು ನಿರ್ದೇಶಿಸಿದ 'ಗೆಲುವಿನ ಹೆಜ್ಜೆ' (1982).  ಬಿಳಿ ಗುಲಾಬಿ, ಅಜೇಯ, ಪ್ರೇಮ ಗಂಗೆ, ತಾಯಿ ಕೊಟ್ಟ ತಾಳಿ, ಸಂಭವಾಮಿ ಯುಗೇ ಯುಗೇ, ಅಜಯ್ ವಿಜಯ್ ಅವರು ನಟಿಸಿದ ಇತರ ಕನ್ನಡ ಚಿತ್ರಗಳು.

ಮುರಳಿ ಅವರು ಹೆಚ್ಚು ಜನಪ್ರಿಯರಾಗಿದ್ದು ತಮಿಳು ಚಿತ್ರರಂಗದಲ್ಲಿ. ಅವರ ಚರ್ಯೆ ಮತ್ತು ಅಭಿನಯ ಪ್ರತಿಭೆಗಳನ್ನು ತಮಿಳು ಚಿತ್ರರಂಗದ ತನ್ನದಾಗಿ ಕಂಡು ಅವರನ್ನು ಎತ್ತರಕ್ಕೆ ಬೆಳೆಸಿತು. ಮುರಳಿ ತಮಿಳಿನಲ್ಲಿ 'ಪೂವಿಳಂಗು' ಚಿತ್ರದಲ್ಲಿ ಮೊದಲು ನಟಿಸಿದರು. ಈ ಚಿತ್ರದಲ್ಲಿ ರಜನಿಕಾಂತ್, ಕಮಲ ಹಾಸನ್, ವಿಜಯಕಾಂತ್ ನಟಿಸಿದ್ದರು. ನಂತರ ಮಣಿರತ್ನಂ ನಿರ್ದೇಶನದ 'ಪಗಲ್ ನಿಲವು' ಚಿತ್ರದಲ್ಲಿ ರೇವತಿ ಅವರೊಂದಿಗೆ ನಟಿಸಿದ್ದರು. ಮುಂದೆ ಸರಿಸುಮಾರು 26 ವರ್ಷಗಳ ಕಾಲ ಅವರು ತಮಿಳು ಚಿತ್ರರಂಗದ ಕಣ್ಮಣಿಯಾಗಿದ್ದರು. ವಣ್ಣ ಕನವುಗಳ್, ನಿನೈವು ಚಿನ್ನಮ್, ಪುದು ವಸಂತಮ್, ಇದಯಮ್, ಚಿನ್ನ ಪಸಂಗ ನಾಂಗ, ಮಣಿಕುಯಿಲ್, ಮಂಜು ವಿರಟ್ಟು, ಅಧರ್ಮಮ್, ಎನ್ ಆಸೈ ಮಚ್ಚಾನ್, ಪೂಮಣಿ,  ಕಾಲಮೆಲ್ಲಾಮ್ ಕಾದಲ್ ವಾಯ್ಗ, ಪೋರ್‍ಕಾಲಮ್, ವೀರ ತಾಲಾಟ್ಟು, ಕಾದಲೆ ನೆಮ್ಮದಿ, ಪೂಂದೋಟ್ಟಂ,, ರತ್ನ, ಎನ್ ಆಸೈ ರಾಸಾವೇ, ದೇಸೀಯ ಗೀತಮ್, ಊಟಿ, ಇರಣಿಯನ್, ಕನವೇ ಕಲೈಯಾದೆ. ಮನು ನೀದಿ, ಸೊನ್ನಾಲ್ ದಾನ್ ಕಾದಲಾ, ಆನಂದಮ್, ಸಮುದಿರಮ್, ಕಾದಲ್ ಪೂಕ್ಕಳ್, ಕಾಮರಸು, ನಮ್ಮ ವೀಟ್ಟು ಕಲ್ಯಾಣಮ್, ಪಾಸ ಕಿಳಿಗಳ್  ಮುಂತಾದ 99 ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಅವರಿಗೆ ತಮಿಳು ನಾಡು ರಾಜ್ಯ ಸರ್ಕಾರದ ಶ್ರೇಷ್ಠ ನಟ ಪ್ರಶಸ್ತಿ ಸಂದಿತ್ತು.  2010ರಲ್ಲಿ ಅವರು ತಮ್ಮಪುತ್ರ. ಅಥರ್ವ ಅವರನ್ನು ಪರಿಚಯಿಸಿದ 'ಬನ ಕಾತ್ತಾಡಿ' ಚಿತ್ರದ ಪುಟ್ಟ ಪಾತ್ರದಲ್ಲಿ ನಟಿದಿದ್ದರು.  ಅವರ ಜೀವಿತ ಕಾಲದಲ್ಲಿ ಅವರ  ನೂರನೆ ಚಿತ್ರ 'ಕವಸಮ್’ ಬಿಡುಗಡೆ ಕಾಣಲಿಲ್ಲ. 

ಮುರಳಿ 2010ರ  ಸೆಪ್ಟೆಂಬರ್ 8ರಂದು ಇನ್ನೂ 46ರ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. 

On the birth anniversary of actor Murali 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ