ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಸಿರುಕಾನನ ಉಳಿಸಿದ ಮಹಾನ್ ತಾಯಿ ‘ಗೌರಾದೇವಿ’

ಹಸಿರುಕಾನನ ಉಳಿಸಿದ ಮಹಾನ್ ತಾಯಿ  ‘ಗೌರಾದೇವಿ’

ಉತ್ತರ ಖಾಂಡದ ರೇನಿ ಗ್ರಾಮದಲ್ಲಿ  ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ವಿರುದ್ಧ ಬಂಡೆದ್ದವಳು ಗೌರಾದೇವಿ. ಬುಡಕಟ್ಟು ಜನರಿಗೆ ದಟ್ಟಾರಣ್ಯಗಳೇ ತವರು. ಕಾಡಿಗೂ-ನಮಗೂ ಇರುವುದು ಅಮ್ಮ-ಮಕ್ಕಳ ಸಂಬಂಧ. ಬದುಕಿದರೆ ನಮಗೆ ಆಸರೆ ನೀಡಿದ ಈ ಹಸಿರು ಕಾಡುಗಳಿಗಾಗಿ ಬದುಕಿ ಎಂದು ಹಳ್ಳಿ ಮನೆಗಳ ಜಗುಲಿಯಲ್ಲಿ ಕುಳಿತು ಜಾಗೃತಿಯ ಕಹಳೆ ಮೊಳಗಿಸಿದವಳು ಇವಳೇ ಗೌರಾದೇವಿ. ದೇಶದ್ಯಾಂತ ಪರಿಸರ ಕ್ರಾಂತಿ ಮಾಡಿದ ಚಿಪ್ಕೋ ಚಳವಳಿನ್ನು ಹುಟ್ಟು ಹಾಕಿದ್ದೇ ಇವಳು. ಇಂಥ ಗೌರಾದೇವಿಯನ್ನು ಗೌರವದಿಂದ ನೆನೆಯುವ ಕೆಲಸವನ್ನು ನಾವು ಮಾಡಬೇಕಿದೆ.

ಸಹೋದರರೇ  ಈ ಅರಣ್ಯ ಪ್ರದೇಶ ನಮ್ಮ ಜೀವಮೂಲ. ನಮ್ಮ ಹುಟ್ಟಿನಿಂದ ಸಾವಿನ ತನಕದ ಜೀವನ ಬಂಡಿಗೆ ಸಾಥ್ ನೀಡುವುದು ಇದೇ ಹಸಿರು ಕಾನನ. ಈ ರಮೆಯೇ ನಮ್ಮಮ್ಮ. ನೀವು ನಿಮ್ಮ ಹರಿತವಾದ ಗರಗಸವನ್ನು ನಮ್ಮಮ್ಮನ ಕರುಳಿಗೆ ಇಡುವ ವೊದಲು ನನ್ನ ಎದೆಗೆ ಹಿಡಿ

ಬಹುಶಃ ಚಿಪ್ಕೋ ಚಳವಳಿ ಹುಟ್ಟುವ ಮೊದಲು ಓರ್ವ ಬುಡಕಟ್ಟು ಮಹಿಳೆ ಉತ್ತರ ಖಾಂಡದ ಆ ಬೃಹತ್ ಅರಣ್ಯದಲ್ಲಿ ಈ ರೀತಿ ಮರಗಳನ್ನು ತಬ್ಬಿಕೊಂಡು ಸರ್ಕಾರದ ಅಕಾರಿಗಳ ಎದುರು ಈ ರೀತಿ ಅಳಲು ತೋಡಿಕೊಂಡಿದ್ದು ಬಹಳಷ್ಟು ಜನರಿಗೆ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಚಳವಳಿ ಕುರಿತು ಮಾತೆತ್ತಿದ್ದರೆ ತಕ್ಷಣಕ್ಕೆ ನೆನಪಿಗೆ ಬರುವುದು ಸುಂದರ್ ಲಾಲ್ ಬಹುಗುಣ ಎಂಬ ಮಹಾನ್ ವ್ಯಕ್ತಿ. ಆದರೆ, ಇವರಿಗಿಂತಲೂ ಮೊದಲು ಅಲ್ಲಿ ಮಹಿಳೆಯೊಬ್ಬಳ ದನಿಯಿತ್ತುದೇಶದಾದ್ಯಂತ ಬೃಹತ್ ಪರಿಸರ ಕ್ರಾಂತಿಗೆ ಮುನ್ನುಡಿಯಾದ ಆ ಚಳವಳಿಯ ಹಿಂದೆ ಅನಕ್ಷರಸ್ಥೆ ಮಹಿಳೆಯ ಶ್ರಮ ಇತ್ತು, ಕಣ್ಣೀರಿತ್ತು, ಜಾಗೃತಿಯ ಕಹಳೆಯಿತ್ತು. ಅವಳ ಹೆಸರು ಗೌರಾದೇವಿ.

ಗೌರಾದೇವಿ ಹುಟ್ಟಿದ್ದು 1925ರಲ್ಲಿ ಉತ್ತರ ಖಾಂಡದ ಚಮೇಲಿ ಜಿಲ್ಲೆಯ ಲಾಟಾ ಗ್ರಾಮದ ಮರ್ಚಾ ಎಂಬ ಬುಡಕಟ್ಟು ಸಮುದಾಯದಲ್ಲಿ. ಲಾಟಾ ಗ್ರಾಮ ಇರುವುದು ಅಲಕಾನಂದ ನದಿ ತೀರದಲ್ಲಿ. ನೆರೆಯಿಂದ ಅಲ್ಲಿನ  ಜನರ ಬದುಕೇ ಬರಡಾಗಿತ್ತು. ಹುಟ್ಟುವಾಗಲೇ ಕಡುಬಡತನ. ಅಕ್ಷರಗಳ ಅರಿವಿಲ್ಲ. ಆದರೆ, ಜೀವನದಾರಿ ಹೇಳಿಕೊಟ್ಟ ಅರಣ್ಯಗಳು ಕಲಿಸಿದ ಜ್ಞಾನದ ಮಹಾಪೂರ ಅವಳಲ್ಲಿತ್ತು. ಉಣ್ಣೆ  ವ್ಯಾಪಾರ ಅವರ ಕುಲವೃತ್ತಿ. ಅದು ಬಿಟ್ಟರೆ ಬದುಕಿನ ಹೆಜ್ಜೆಗೆ ಬೇರೆ ದಾರಿಯಿಲ್ಲ. ಹಸಿರು ಕಾನನದ ನಡುವೆ ಬೆಳೆದ ಗೌರಾದೇವಿಗೆ ಕಾಡು ಎಂದರೆ ಎರಡನೇ ತಾಯಿ!  ಸಣ್ಣ ವಯಸ್ಸಿನಲ್ಲೇ ಮದುವೆ. ಗಂಡನ ಮನೆಯಲ್ಲೂ ಅದೇ ಉಣ್ಣೆ ವ್ಯಾಪಾರ.  ಆದರೆ, 22 ವರ್ಷಕ್ಕೇ ವಿಧವೆ. ಗಂಡನ ಕಳೆದುಕೊಂಡಾಗ ಎರಡೂವರೆ ವರ್ಷದ ಮಗ ಚಂದ್ರಾ ಸಿಂಗ್ ಅಷ್ಟೇ ಮಡಿಲಲ್ಲಿದ್ದ. ಮಗ ಬೆಳೆಯುತ್ತಿದ್ದಂತೆ ಸಂಸಾರದ ಜವಾಬ್ದಾರಿಯನ್ನು ಆತನ ಮೇಲೆ ಹೊರಿಸಿದ ಗೌರಾದೇವಿ, ನಂತರ ನಡೆದ ದಾರಿ ಇಂದಿಗೂ ಚರಿತ್ರೆಯ ಮೈಲಿಗಲ್ಲು!

ಅದು 1974, ಮಾರ್ಚ್ 26!

ಉತ್ತರ ಖಾಂಡದ ಚಮೇಲಿ ಜಿಲ್ಲೆಯ ರೆನಿ ಗ್ರಾಮದಲ್ಲಿ ಸರ್ಕಾರ ಸುಮಾರು 2500 ಮರಗಳನ್ನು ಕಡಿಯಲು ಕಾಂಟ್ರಾಕ್ಟ್ ನೀಡಿತ್ತು. ಆದರೆ, ಇದ್ಯಾವುದೂ ಆ ಹಳ್ಳಿಯ ಜನರಿಗೆ ಗೊತ್ತಿರಲಿಲ್ಲ. ಏಕಾಏಕಿ ಗರಗಸ ಹಿಡಿದು ಅಕಾರಿಗಳು ಹಳ್ಳಿಗೆ ನುಗ್ಗಿದಾಗ ಇದನ್ನು ನೋಡಿದ ಪುಟ್ಟ ಹುಡುಗಿಯೊಬ್ಬಳು, ಗೌರಾದೇವಿ ಬಳಿ ಬಂದು, “ಯಾರೋ ಗರಗಸ ಹಿಡಿದು ಬರುತ್ತಿದ್ದಾರೆಎಂದು ಹೇಳುತ್ತಾಳೆ. ನೋಡಿದಾಗ ಗೌರಾದೇವಿ ಎದೆ ನುಚ್ಚುನೂರಾದ ಅನುಭವ. ಓದು ಬರಹ ಕಲಿಯದ ಈ ಮಹಿಳೆ ಏನು ಮಾಡಿಯಾಳು ಎಂದು ಅಕಾರಿಗಳು ತವ್ಮೊಳಗೆ ಗುಸುಗುಸು ಶುರುಮಾಡುತ್ತಿದ್ದಂತೆ, 27 ಮಂದಿ ಮಹಿಳೆಯರೊಂದಿಗೆ ಗೌರಾದೇವಿ ಬಂದೇಬಿಟ್ಟಳು. ಎಳ್ಳಷ್ಟು ಆಕ್ರೋಶ ವ್ಯಕ್ತಪಡಿಸದ ಆಕೆ, ಅವರನ್ನು ಎದುರಿಸಿದ್ದು ಪ್ರಶಾಂತ ಮಾತುಗಳಿಂದಲೇ! ಸಹೋದರರೇ ನನ್ನೆದೆಗೆ ಗರಗಸ ಇಡಿ, ನನ್ನಮ್ಮನ ಕರುಳನ್ನು ಕೀಳಬೇಡಿ ಎಂದು  ಮರಗಳನ್ನು ಅಪ್ಪಿಕೊಂಡು ಗೌರಾದೇವಿ ನಿಂತಾಗ ಅಕಾರಿಗಳ ಹೃದಯವೂ ಕರಗಿ ಕಣ್ಣೀರಾಗಿತ್ತು. ಮರಗಳನ್ನು ಕತ್ತರಿಸಲು ತಂದ ಆ ಹರಿತವಾದ ಗರಗಸವನ್ನು ಮತ್ತೆ ಹೆಗಲ ಮೇಲೆ ಹೊತ್ತು ವಾಪಸು ತೆರಳಿದರು. ಬಳಿಕ 10 ವರ್ಷಗಳ ಕಾಲ ಅಲ್ಲಿ ಮರ ಕಡಿಯಬಾರದೆಂದು ಸರ್ಕಾರ ನಿಷೇದ ಹೇರಿದ್ದು ಚಪ್ಕೋ ಇತಿಹಾಸದಲ್ಲಿ ನಾವು ತಿಳಿದಿದ್ದೇವೆ.

ಚಿಪ್ಕೋ ಚಳವಳಿ ಹುಟ್ಟಿಕೊಂಡಿದ್ದೇ ಜ್ಞಾನವಂತಬುಡಕಟ್ಟು ಮಹಿಳೆಯರಿಂದಲೇ. ಅದರ ಮೂಲ ಗೌರಾದೇವಿ ಎಂಬ ಮಹಾಜ್ಞಾನಿ. ಉತ್ತರ ಖಾಂಡದ ಮಹಿಳೆಯರಲ್ಲಿ ಭೂರಮೆಯನ್ನು ಪ್ರೀತಿಸುವುದನ್ನು ಹೇಳಿಕೊಟ್ಟ ಮಹಾತಾಯಿ ಗೌರಾದೇವಿ. ಮನೆ-ಮನೆಗೆ ಹೋಗಿ ಮಹಿಳೆಯರಲ್ಲಿ ಕಾಡಿನ ರಕ್ಷಣೆಯ ಕುರಿತು ಪಾಠ ಹೇಳಿಕೊಡುತ್ತಿದ್ದ ಗುರುವೂ ಅವಳೇ. ಒಂದಕ್ಷರ ಕಲಿಯದಿದ್ದರೂ ಸರ್ಕಾರ, ಕಾನೂನು-ಕಟ್ಟಳೆಗಳ ಅರಿವು ಆಕೆಗಿತ್ತು. ಜೀವಮಾನದ ಕೊನೆಗಾಲದಲ್ಲಿ ಮರಗಳನ್ನು ನೆಟ್ಟರೆ, ಅದು ನಮ್ಮ ಮುಂದಿನ ತಲೆಮಾರನ್ನು ಸಾಕುತ್ತದೆ! ಎನ್ನುವುದು ಅವಳು ಪ್ರತಿಯೊಬ್ಬರಿಗೂ ಹೇಳಿಕೊಟ್ಟ ಬದುಕಿನ ಪಾಠ. ನಾವು ಬುಡಕಟ್ಟು ಜನಾಂಗದವರು. ದಟ್ಟಾರಣ್ಯಗಳೇ ನಮ್ಮ ತವರು. ಅದೇ ಬದುಕಿನ ಜೀವ ಸೆಲೆ. ಇದನ್ನು ಉಳಿಸಿಕೊಳ್ಳಬೇಕು. ಕಾಡಿಗೂ-ನಮಗೂ ಇರುವುದು ಅಮ್ಮ-ಮಕ್ಕಳ ಸಂಬಂಧ. ಅಮ್ಮನ ಎದೆಗೆ ಗರಗಸ ಇಡಲು ಬಿಡುವುದೇ? ಬದುಕಿದರೆ ನಮಗೆ ಆಸರೆ ನೀಡಿದ ಈ ಹಸಿರು ಕಾಡುಗಳಿಗಾಗಿ ಬದುಕಿ ಎಂದು ಹಳ್ಳಿ ಮನೆಗಳ ಜಗುಲಿಯಲ್ಲಿ ಕುಳಿತು ಜಾಗೃತಿಯ ಕಹಳೆ ಮೊಳಗಿಸಿದವಳು ಇದೇ ಗೌರಾದೇವಿ.

ಕೇವಲ ಇಷ್ಟಕ್ಕೇ ಮುಗಿಯಲಿಲ್ಲ, ಅವಳ ಪಯಣ. ಪಂಚಾಯತ್‌ಗಳಿಗೆ ಹೋಗಿ ಅಲ್ಲಿಯೂ ಮಹಿಳೆಯರಿಗೆ ಪ್ರಕೃತಿ ಕುರಿತಾದ ಕಾಳಜಿಯ ಬಗ್ಗೆ ಹೇಳುವಳು. ಮಹಿಳಾ ಮಂಗಲ್‌ದಳ್ ಎಂಬ ಸಂಘಟನೆಯ ಅಧ್ಯಕ್ಷ ಗಾದಿಯನ್ನು ಅಲಂಕರಿಸುವವರೆಗೂ ಗೌರಾದೇವಿ ಬೆಳೆದಳು. ನೈಸರ್ಗಿಕ ಪರಂಪರೆಯನ್ನು ಬೆಳೆಸುವ ಕಾರ್ಯದತ್ತ ಇಡೀ ಸಂಘಟನೆಯನ್ನು ಒಗ್ಗೂಡಿಸಿದಳು. ಗೌರಾದೇವಿ ಗ್ರಾಮದ ಮಹಿಳೆಯರಲ್ಲಿ ಹಚ್ಚಿದ ಕ್ರಾಂತಿಯ ದೀವಿಗೆ ಹಿಮಾಚಲ ಪ್ರದೇಶದ ಇಂಚಿಂಚಿಗೂ ಹರಡಿತು. ಅಲ್ಲೆಲ್ಲಾ ಮರಗಳ ರಕ್ಷಣೆಗೆ ಮುಂದಾಗಿದ್ದು ಮಹಿಳೆಯರೇ. ಬಳಿಕ ಅದಕ್ಕೆ ಸಾಥ್ ನೀಡಿದ್ದು ಸುಂದರ್ ಲಾಲ್ ಬಹುಗುಣ ಅವರು. ದೇಶದಾದ್ಯಂತ ಹರಡಿದ ಈ ಚಿಪ್ಕೋ ಚಳವಳಿ ಕರ್ನಾಟಕದ ಉತ್ತರ ಕನ್ನಡದಲ್ಲಿ ಅಪ್ಪಿಕೋ ಚಳವಳಿಗೂ ಮುನ್ನುಡಿಯಾಯಿತು.

ಇಂದಿಗೂ ನಮಗೆ ಚಿಪ್ಕೋ ಚಳವಳಿ ಗೊತ್ತು, ಅಪ್ಪಿಕೋ ಚಳವಳಿಯ ಇತಿಹಾಸ ಗೊತ್ತು. ಸುಂದರಲಾಲ್ ಬಹುಗುಣ ಅವರ ಬದುಕೇ ಪರಿಸರದ ಇತಿಹಾಸಆಗಿದ್ದು ಎಲ್ಲವೂ ಗೊತ್ತು. ಆದರೆ, ಗೌರಾದೇವಿ ಗೊತ್ತಾ? ಅಂಥ ಕೇಳಿದ್ರೆ ಬಹಳಷ್ಟು ಮಂದಿಗೆ  ಈ ಮಹಾತಾಯಿಯ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಬಗ್ಗೆ ಇತಿಹಾಸ ಓದುವ ವೊದಲು ಗೌರಾದೇವಿಯನ್ನು  ನೆನೆಯುವ ಕೆಲಸ ಮಾಡಿದರೆ ಸಾಕು, ಅದೇ ಆ ಮಹಾನ್ ತಾಯಿಗೆ ನಾವು ಸಲ್ಲಿಸುವ ಮಹಾ ಗೌರವ.  ನಾಳೆ ಮಾರ್ಚ್ 26.  ಆ ಭೂರಮೆಯ ಮಗಳ ಹೋರಾಟಕ್ಕೆ ನಾಳೆಗೆ ಪಕ್ಕಾ 40 ವರ್ಷ!

ಈ ಮಹಾತಾಯಿ ಗೌರಾದೇವಿ 1991ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಕಾಡು ಉಳಿಸಿದ ಈ ಮಹಾಮಾತೆಗೆ ನಮೋನ್ನಮಃ

ಲೇಖನ ಕೃಪೆ: ‘ನಿಲುಮೆ.ನೆಟ್’ ತಾಣದಲ್ಲಿ 2011ರ ವರ್ಷದಲ್ಲಿ ಪ್ರಕಟಗೊಂಡ ಲೇಖನವನ್ನು ಕಿರುಬದಲಾವಣೆ/ತಿದ್ದುಪಡಿಗಳೊಂದಿಗೆ ಇಲ್ಲಿ ಬಿಂಬಿಸಿದ್ದೇನೆ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ