ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ47


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಅರಣ್ಯಪರ್ವ - ಹನ್ನೊಂದನೆಯ ಸಂಧಿ


ಸೂ. ಭೀಮ ಕೊಂದನು ಕಲಿ ಜಟಾಸುರ
ನಾ ಮಹಾ ಮಣಿಮಾನನನು ಬಳಿ
ಕೀ ಮಹೀತಳಕಿಳಿದು ಕಂಡನು ಪಾರ್ಥ ನಗ್ರಜನ

ಕೇಳು ಜನಮೇಜಯಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದವತಿ ರ೦ಜಿಸಿದವದುಭುತವ
ಕೇಳಿದನಿದೇನೆಂದು ವರ ವಿ
ಪ್ರಾಳಿಯನು ದೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನ ಸಂಗತಿಗಳ ಫಲೋತ್ತರವ ೧

ಸರಸಸೌಗಂಧಿಕದ ಪುಸ್ಪೋ
ತ್ತರಕೆ ಪವನಜ ಹೋದನೆಂಬುದ
ನರಸಿಯಿಂದರಿದವನಿಪತಿ ಪೂರಾಯ ದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆಂತೆನುತ ಚಿಂತಾ
ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ ೨

ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು
ಆ ಸುಗಂಧಕ ಪದುಮ ಪರಿಮಳ
ಬಾಸಣಿಸಿತೀ ಜನ ಮನೋ ವಿ
ನ್ಯಾಸ ವನುಯಿದೆ ಬಂದ ಪವನಜನೆಂದುದೀ ಕಟಕ ೩

ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ
ಜಿನುಗು ದುಂಬಿಯ ಜಾಳೀಗೆಯ ತನಿ
ಮಿನುಗುಮೋರೆಯ ಕಣ್ಣಂಪಿನ
ಘನ ಭಯಂಕರ ರೂಪ ಭೀಮನ ಕಂಡನವನೀಶ ೪

ಸೆಳೆದು ತಕ್ಕೈಸಿದನು ತಾವರೆ
ಗೋಳದ ತೋಟಿಯ ಹದಕೆ ಕಂಪಿಸಿ
ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ
ನಳಿನಗಂಧದ ಗಾಡತರ ಸುಖ
ದೊಳಗೆ ಹೋಂಪುಳಿವೋಗಿ ಭೂಪತಿ
ತಿಲಕನಿದ್ದನು ಗಂಧ ಮಾದನ ಗಿರಿಯ ತಪ್ಪಲಲಿ ೫

ಗಿರಿಯ ತುದಿಗೇರುವ ಮಹೀಶನ
ಭರವಸವನಶರೀರ ದನಿ ಪರಿ
ಹರಿಸಲಿಳಿದನು ಮರಳಿ ಬಂದನು ಬದರಿಕಾಶ್ರಮಕೆ
ಅರಸ ಕೇಳೈ ಮತ್ತೆ ಮಾರಿಯ
ಪರುಠವವನನಿಲಜನು ಬೇಟೆಗೆ
ಹರಿದನತ್ತಲು ಬಂದು ಮುತ್ತಿತುದಾನವರ ಧಾಳಿ ೬

ಖಳ ಜಟಾಸುರ ನೆಂಬನಾ ದ್ವಿಜ
ಕುಲವನಂಜಿಸಿ ಯಮಳರೊಡ
ನಿಟ್ಟಳಿಸಿ ಕಾದಿ ಕಠೋರದಲಿಪಿಡಿದನು ಮಹಾಸತಿಯ
ಬಲುಗಡಿಯನಿವನೊಡನೆ ಹೋರಿದು
ಬಳಲಿದರು ಬೆಂಬತ್ತಿದರು ಗಾ
ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ ೭

ತಳಿರ ಕೈಗಳ ಮೊರೆಯ ಬಾಯ್ಗಳ
ಜಲದ ಕಂಗಳ ತಾಪದಿಂದೊಳ
ಝಳದಿ ಯುಗಿವಳ್ಳೆಗಳ ಬಲು ಭಯವಾಂತ ಕೊರಳುಗಳ
ಕಳಕಳದ ಕಾಲುವೆಯ ಭಂಗದ
ಹೊಳಹುಗಳ ಹೋಲುವೆಯ ಸವ್ಯಾ
ಕುಲರ ಕಂಡಾನು ಭೀಮನೇನೆಂದು ಬೆಸಗೊಂಡ ೮

ಹಿಡಿದರರಸಿಯನವನಿಪತಿ ಹಿಡಿ
ವಡೆದನನುಜರುಸಹಿತ ಹಾರುವ
ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ
ಕಡುಹು ಘನವಿದೆ ದಾನವರವಂ
ಗಡವೆನಲು ಘನ ಸಿಂಹ ನಾದದ
ಸಿಡಿಲ ಶಿಕ್ಷಾ ಗುರುವೆನಲು ಮೊಳಗಿದನು ಕಲಿಭೀಮ ೯

ಧಾಳಿಯಿಟ್ಟನು ದಾನವರ ದೆ
ಖ್ಖಾಳದಲ್ಲಿಗೆ ಘಲ್ಲಿಸಿದನು
ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ
ಸೀಳಿ ನಾಯ್ಗಳ ನೆತ್ತರಿನ ತನಿ
ಗಾಲುವೆಯಲೇ ಬೆಳಸುವೆನು ದಿವಿ
ಜಾಳಿಗಳ ಸಂತೋಷ ಸಸಿ ಯೆನುತ್ತ ಗರ್ಜಿಸಿದ ೧೦

ಮಸಗಿತಿಬ್ಬರಿಗದುಭುತಾಹವ
ವು ಸುರ ಧಾಳಾ ಧೂಳಿ ಮಿಗೆ ಘ
ಟ್ಟಿಸಿದನವನನು ದ೦ಡೆಯಲಿ ತಡೆಗಾಲಲೊಡೆ ಹೊಯ್ದು
ಬಿಸುಗುದಿಯ ನವರುಧಿರ ಜಲ ಜಾ
ಳಿಸೆ ನವದ್ವಾರದಲಿ ದೈತ್ಯನ
ಕುಸುಕಿರಿದು ತಿವಿತಿವಿದು ಕೊಂದನು ಕಲಿ ಜಟಾಸುರನ ೧೧

ಅರಸ ಕೇಳಾದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿಂದ ತೆಂಕಲು
ತಿರುಗಿ ಬಂದನು ಸಾರಿದನು ವೃಷ ಪರ್ವತಾಶ್ರಮವ ೧೨

ಆ ತಪೋವನವಿವರ ಘಲ್ಲಣೆ
ಗಾತುದಿಲ್ಲ ವಿನೋದದಲಿ ವಿ
ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ
ಈತನನು ಹಳಚಿದನು ದೈತ್ಯನ
ಭೀತ ಮಣಿಮಾನೆಂಬುವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು ೧೩

ಕೊಂದನವನನು ವಿಗತ ಶಾಪನು
ನಿಂದನಿದಿರಲಿ ಯಕ್ಷರೂಪಿನ
ಲಂದಗಸ್ತ್ಯನ ಶಾಪ ವೃತ್ತಾಂತವನು ವಿವರಿಸಿದ
ಬಂದನಲ್ಲಿಗೆಯಕ್ಷಪತಿ ನಲ
ವಿಂದ ಲಿವರನು ವಿವಿಧ ವಸ್ತುಗ
ಳಿಂದ ಸತ್ಕರಿಸಿದನು ಕೊಂಡಾಡಿದನು ಪಾಂಡವರ ೧೪

ಅರಸನತಿ ಸಂತೋಷಮಯ ಸಾ
ಗರದಿ ಮುಳುಗುವನೊಮ್ಮೆ ನಿಮಿಷಕೆ
ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ
ಪರಮ ಋಷಿಗಳಮಧುರ ವಚನೋ
ತ್ತರಕೆ ತಿಳಿವನದೊಮ್ಮೆ ಪುನರಪಿ
ಮರುಳಹನು ಫಲುಗುಣನ ನೆನೆದರಸ ಕೇಳೆಂದ ೧೫

ಅರಸನಲಿ ಬೇರೂರಿ ಮಗುಳಂ
ಕುರಿಸಿದುದು ಭೀಮನಲಿ ನಕುಲನ
ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು
ಅರಸಿಯಲಿ ಸಲೆಹೂತು ಕಾತು
ಬ್ಬರಿಸುತಿದ್ದುದು ಶೋಕಲತೆ ತ
ತ್ಪರಿಕರದಕರಣಾವಳಿಯ ಹಬ್ಬುಗೆಯ ಹರಹಿನಲಿ ೧೬

ಮರೆದನೋ ನಮ್ಮಿನಿಬರನು ದಿಟ
ಮರೆಯಲುಚಿತವಲೇ ಸುರೇಂದ್ರನ
ಸೆರಗು ಸೋ೦ಕುವ ಸಲುಗೆಯುಂಟೇ ಮರ್ತ್ಯಜಾತಿಯಲಿ
ಉರುವ ಸುರಪನ ಸಾರ ಸೌಖ್ಯದೊ
ಳರಿಯನೋ ನಮ್ಮೀ ಪ್ರವಾಸದ
ಸೆರೆಗೆ ನರನ೦ಗೈಸನೆ೦ದವನೀಶ ಚಿಂತಿಸಿದ ೧೭

ವಾಮ ನಯನ ಸ್ಪುರಣ ಪರಿಗತ
ವಾಮಭಾಹು ಸ್ಪ೦ದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾಂಗದಲಿ
ವೈಮನಸ್ಯ ವಸನ ನಿರಸನ
ಕ್ಕೀ ಮಹಾ ಶಕುನ೦ಗಳಿವೆಯೆಂ
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ ೧೮

ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದಲೆಯ ವನದಲಿ ವಸಂತ ಬರವಿನಂದದಲಿ
ಸುರವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ ೧೯

ಏನನೆಂಬೆನಯ ಜೀಯ ಕುಂತೀ
ಸೂನು ಕಂಡನು ದೂರದಲಿ ಸುರ
ಮಾನಿನೀಜನದಂಗವಟ್ಟದ ಪೂರ್ವ ಪರಿಮಳದ
ಆನನೆಂದುಗಳಾಭರಣ ಮು
ಕ್ತಾನುಕೃತ ತಾರಾ ಮಯೂಖ ವಿ
ತಾನದಲಿ ಹೊಳೆ ಹೊಳೆದು ಮೆರೆವ ಮಹೇಂದ್ರ ಮಣಿರಥವಂ ೨೦

ಆರದೀರಥವೆನುತತಿರುಗಿ ಮ
ಹೀರಮಣನಾಲಿಗಳು ಹರಿದವು
ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು
ಭೂರಿ ಮಣಿ ರಶ್ಮಿಗಳ ಚಿಮ್ಮುವ
ಚಾರು ಚಮರಿಯ ತುರಗ ನಿಕರ ಗ
ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ ೨೧

ರಥ ಮಹೇಂದ್ರನ ದೀತನೆಮ್ಮತಿ
ರಥನಲಾ ನೆರೆ ನೋಂತು ಪಡೆದಳೋ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ
ಮಥಿಥ ರಿಪುವವಧಾನ ಲೋಕ
ಪ್ರಥಿಥ ನಿರುಪಮವೆಂಬ ಸುರ ಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ ೨೨

ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ
ಹರಸಿದನು ಹೊರವಂಟ ನಕುಲಾ
ದ್ಯರನು ಮಧುರ ಪ್ರೀತಿ ವಚನ
ಸ್ಪುರದ ಮ೦ದಸ್ನೇಹದಲಿ ನೋಡಿದನು ಪರಿಜನವ ೨೩

ಬಿಗಿದ ಗವಸಣಿಗೆಯಲಿ ಸೂರ್ಯನ
ನುಗಿವವೋಲ್ ಮಾಣೀಕ್ಯ ಮಣಿ ರ
ಶ್ಮಿಗಳ ರಹಿ ರಂಜಿಸೆ ಸುರೇಶ್ವರನಿತ್ತ ಭೂಷಣವ
ತೆಗೆತೆಗೆದು ಯಮನಂದನಂಗೋ
ಲಗಿಸಿ ಭೀಮಂಗಿತ್ತು ನಕುಲಾ
ದಿಗಳ ಮೈಯಲಿ ತೊಡೀಸಿದನು ಕೈಯಾರೆಕಲಿ ಪಾರ್ಥ ೨೪

ಕರಸಿ ಕಾಣಿಸಿದನು ಧನಂಜಯ
ಸುರಪತಿಯ ಸಾರಥಿಯನಮರೇ
ಶ್ವರ ವರೂಥದ ಸನ್ನಿವೇಶದಸಕಲ ಶೋಭೆಗಳ
ಅರಸ ಮೊದಲಾದಖಿಳ ಜನಭೂ
ಸುರರು ಕಂಡರು ಮಾತಲಿಯ ಸ
ತ್ಕರಿಸಿ ಸಂಭಾವಿಸಿದನವನೀಪತಿ ಸರಾಗದಲಿ ೨೫

ಕುಶಲವೇ ದೇವೇಂದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೇ
ದೆಸೆಯವರು ಮೂಲೆಗೆಳೆವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭಂಗಿಸದಲೇ ಹೇಳೆಂದನಾ ಭೂಪ ೨೬

ಭಜಿಸಿದೈ ಭರ್ಗನನು ಶಾಂಭವ
ಯಜನ ಸಾರ ಸಮಾಧಿ ಶಿವಪದ
ರಜವ ಬೆರಸಿತೆ ಬಗೆಯ ಕುಣಿತೆವರಾಯ್ತೆ ತಡಿ ದೆಗೆದು
ವಿಜಯ ಶಬ್ದವು ಪಾರ್ಥ ಕೃತಿಯಲಿ
ಯಜಡವಲ್ಲಲೆ ವೈರಿ ರಾಯರ
ಕುಜನತಾ ವಿಚ್ಛೇದ ಸಾದ್ಯವೆಯೆಂದನಾ ಭೂಪ ೨೭

ಜೀಯ ಚಿತ್ತೈಂದ್ರನಲ್ಲಿ ಸ
ಹಾಯವಾದನು ಶಿವನ ಕಾರು
ಣ್ಯಾಯುಧವೆ ಮಸೆದುದು ಸುರೇಂದ್ರ ಸ್ನೇಹ ಸಾಣೆಯಲಿ
ಆಯಿತೀ ದೂರ್ಜಟಿಯ ಶರ ಲೋ
ಕಾಯಿತರಿಗೆನೆಂಬೆನದು ನಿ
ರ್ದಾಯದಲಿ ವಶವರ್ತಿಯಾಯ್ತೆನಗೆಂದನಾ ಪಾರ್ಥ ೨೮

ಹರನ ಕರುಣಾಲಾಭ ಲೋಕೋ
ತ್ತರದ ಪರಿತೋಷದಲಿ ನಾನಿರೆ
ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ
ಕರಸಿದನು ನಿಜ ನಗರಿಗಾ ನಿ
ರ್ಜರ ನಿಕರವಾ ಸತಿಯರಾ ದಿ
ಕ್ಷರಿವೃಢರು ಕೊಂಡಾಡಿತೆನ್ನಯ ರಾಯ ಕೇಳೆಂದ ೨೯

ಪಾಶುಪತ ಶರ ಭುವನದೂರ್ದ್ವ
ಶ್ವಾಸ ಕೃತಿ ಕೋವಿದನಲೆ ಚಿ
ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಯ ವೀದಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿ೦ದಲ್ಲಿಂದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿಂ ೩೦

ಖ್ಯಾತಿವಡೆದನು ಶಿವನ ಕಾರು
ಣ್ಯಾತಿಶಯಕಿದು ಫಲವೇ ಸಾಕಿ
ನ್ನೇತಕಿದು ರಾಜಸ ವಿಡಂಬ ವಿಕಾರಕುಚಿತವಲೆ
ವೀತಿಹೋತ್ರ ಪರೇತಪತಿ ಪುರು
ಹೂತ ವರುಣಾದಿಗಳು ಕಾಂಡ
ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ ೩೧

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಹರುಷವಾರಿಗ
ಳಾಲಿ ಹೂಳಿದವು ತೂಳಿದವಂತರವ್ಯಥೆಯ
ತೋಳ ಹಿಡಿದೆಳದಪ್ಪಿ ಪಾರ್ಥನ
ಬೋಳವಿಸಿದನು ಪೌರವಾನ್ವಯ
ಪಾಲಕನೆಯೆ೦ದರಸ ಮುಂಡಾಡಿದನು ಫಳುಗುಣನ ೩೨

ಮುರಿದುದೀನ್ನೇನಹಿತ ಬಲ ಹಗೆ
ಹರಿದುದೀ ದ್ರೌಪದಿಯ ಮೌಳಿಗೆ
ಕರುಬಿದವರಿಗೆ ಕಾಣಲಾಯ್ತು ಕೃತಾಂತನೋಲಗವ
ಕರೆದನೇ ಕರುಣವನು ಹರಹರ
ಹೆರೆನೊಸಲ ಬಲುದೈವವಿನಿತರ
ಹೊರಿಗೆ ಗದುಗಿನ ವೀರ ನಾರಾಯಣನ ಕರುಣದಲಿ ೩೩ 

ಸಂಕ್ಷಿಪ್ತ ಭಾವ

ಭೀಮನಿಂದ ಜಟಾಸುರನ ವಧೆ. ಅರ್ಜುನನ ಆಗಮನ.

ಭೀಮನನ್ನು ಕಾಣದೆ ಧರ್ಮಜ ಕಳವಳಿಸುತ್ತಿರಲು ಭೀಮ ಸೌಗಂಧಿಕಾ ಪುಷ್ಪಗಳೊಡನೆ ಬಂದನು. ಅವನನ್ನು ಕಂಡು ಎಲ್ಲರಿಗೂ ಸಂತಸವಾಯಿತು. ಅವನಿಂದ ಹನುಮನ ವೃತ್ತಾಂತ ತಿಳಿದು ಸಂತೋಷಿಸಿದರು. ನಂತರ ಎಲ್ಲರೂ ಬದರಿಕಾಶ್ರಮಕ್ಕೆ ಬಂದರು. ಭೀಮನು ಮತ್ತೆ ಬೇಟೆಗೆ ಹೊರಟನು.

ಇತ್ತ ಜಟಾಸುರನೆಂಬ ರಾಕ್ಷಸನು ಧಾಳಿ ಇಟ್ಟು ಎಲ್ಲರನ್ನೂ ಕಂಗೆಡಿಸಿ ದ್ರೌಪದಿಯನ್ನು ಹೊತ್ತೊಯ್ದನು. ಎಲ್ಲ ಓಡೋಡಿ ಬಂದು ಭೀಮನಿಗೆ ವರದಿ ಹೇಳಿದರು. ಭಾರೀ ಕೋಪದಿಂದ ರಾಕ್ಷಸನನ್ನು ಬೆನ್ನಟ್ಟಿ ಹೋದ ಭೀಮನು ಅವನೊಂದಿಗೆ ಕಾದಾಡಿ ಸಂಹರಿಸಿ ಎಲ್ಲರಿಗೂ ನೆಮ್ಮದಿ ತಂದನು.

ಮತ್ತೆ ಸುತ್ತಾಡುತ್ತಾ ಪಾಂಡವರು ವೃಷ ಪರ್ವತಾಶ್ರಮಕ್ಕೆ ಬಂದರು. ಗಿರಿಯ ಮೇಲೇರಿದನು ಭೀಮ. ಅಲ್ಲೊಬ್ಬ ಮಣಿಮಾನೆಂಬ ದೈತ್ಯ ಎದುರಾದನು. ಅವನೊಡನೆ ಹೋರಾಡಿ ಭೀಮನು ಅವನನ್ನು ಸಂಹರಿಸಿದನು.  ಆಗ ಅವನು ಶಾಪಗ್ರಸ್ತ ಯಕ್ಷನೆಂದು ತಿಳಿಯಿತು. ಯಕ್ಷಪತಿ ಅಲ್ಲಿಗೆ ಬಂದು ಎಲ್ಲರನ್ನೂ ಸತ್ಕರಿಸಿದನು.

ಧರ್ಮಜನಿಗೆ ಅರ್ಜುನನ ಚಿಂತೆ. ವಿರಹದಲ್ಲಿ ನೊಂದನು. ಮುನಿಗಳ ಮಾತುಗಳಿಂದ ಸ್ವಲ್ಪ ಸಮಾಧಾನ ಹೊಂದುವನು. ಮತ್ತೆ ಚಿಂತಿಸುವನು. ತಮ್ಮಂದಿರ ಬಳಿ, ದ್ರೌಪದಿಯ ಬಳಿ ಇದೇ ಮಾತುಗಳು. ಇಷ್ಟು ವರ್ಷಗಳು ಕಳೆದರೂ ಅರ್ಜುನನು ಬರಲಿಲ್ಲ ಎಂದು.

ಆ ಶುಭದಿನ ಬಂದೇಬಿಟ್ಟಿತು. ದೇವೇಂದ್ರನ ರಥ ಬಂದು ಇಳಿಯಿತು. ಅರ್ಜುನನು ಸಕಲ ವೈಭವಗಳೊಂದಿಗೆ ಇಳಿದು ಬಂದು ಎಲ್ಲರಿಗೂ ನಮಿಸಿದನು. ಕಿರಿಯರನ್ನು ಹರಸಿದನು. ಪರಿವಾರದವರನ್ನು ಮಾತನಾಡಿಸಿದನು. ಮಾತಲಿಯನ್ನು ಕರೆದು ಪರಿಚಯಿಸಿ ತಾನು ಹೊರಟಾಗಿನಿಂದ ಬರುವವರೆಗೆ ಅನುಭವಿಸಿದ್ದನ್ನು ವಿವರಿಸಿದನು. ಅವನಿಗೆ ಎಲ್ಲ ರೀತಿಯಲ್ಲಿ ಶಸ್ತ್ರಾಸ್ತ್ರಗಳು ದೊರೆತ ಸುದ್ದಿ ತಿಳಿದು ಎಲ್ಲರೂ ಸಂತೋಷಿಸಿದರು. ಇನ್ನೇನು ಗೆಲುವು ದೂರವಿಲ್ಲವೆಂಬ ಭಾವದಲಿ ನಾರಾಯಣನ ಮತ್ತು ಈಶ್ವರನ ಕರುಣೆಯನ್ನು ನೆನೆದು ನಮಿಸಿದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ