ಭಾರತಕಥಾಮಂಜರಿ133
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಇಪ್ಪತ್ತಮೂರನೆಯ ಸಂಧಿ
ಸೂ.
ಶಿವಶಿವಿದು ತಾರಕನ ಗುಹನಾ
ಹವವೊ ಮೇಣ್ ರಾವಣನ ರಾಮನ
ಬವರವೋ ಹೊಸತಾಯ್ತು ಕರ್ಣಾರ್ಜುನರ ಸಂಗ್ರಾಮ
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಮೊಗದಿರುಹಿದೊಡೆ ಬಳಿಕೀ
ಕೋಲಗುರುವಿನಸೂನು ಮುರಿದನು ಬಿಗಿದ ದುಗುಡದಲಿ
ಕೋಲ ಹೊದೆಯೆಂಬತ್ತು ಬಂಡಿಯ
ಹೇಳಿದನು ಕರ್ಣಂಗೆ ಕುರುಭೂ
ಪಾಲ ತಾನೊತ್ತಾಗಿ ನಿಂದನು ಸಕಲದಳಸಹಿತ ೧
ಅರಸ ಹೇಳುವುದೇನು ಬಳಿಕಿ
ಬ್ಬರ ಮಹಾಕೋದಂಡಚಂಡ
ಸ್ಫುರಿತಮೌರ್ವೀನಾದ ಮುಸುಕಿತು ಸಕಲ ದಿಗುತಟವ
ಸ್ಫುರದಮಂದೋದ್ಭಿನ್ನ ಭಾಸ್ವ
ತ್ಕಿರಣಗರ್ಭಕಳಾಪಭದ್ರಾ
ಕರಣಕಳಿತಧ್ವಾಂತಬಿಂಬಕಳಂಬಸಂತತಿಯ ೨
ಗಬ್ಬರಿಸಿದುದು ಗಗನವನು ಬಲು
ಬೊಬ್ಬೆ ಬಹುವಿಧವಾದ್ಯರಭಸದ
ನಿಬ್ಬರದ ನಿಡುಸೂಳು ಸೂಳೈಸಿದುದು ದಿಗುತಟವ
ಉಬ್ಬುಗೆಡದಿರಿ ಕರ್ಣಪಾರ್ಥ ಸ
ಗಬ್ಬರಹಿರೋ ಪೂತು ಮಝ ಎಂ
ಬಬ್ಬರಣೆ ಸುರರೂಢಿಯಲಿ ಝೊಂಪಿಸಿತು ಮೂಜಗವ ೩
ಅಡಿಗಡಿಗೆ ಹೊರೆ ಹೆಚ್ಚಿತಿಬ್ಬರು
ಹಿಡಿದ ಖಾತಿ ದಿಗಂತಕೋಶದ
ತಡಿಯ ಬಿಲುಟಂಕಾರ ಮುಸುಕಿತು ಲೋಕ ಪದಿನಾಲ್ಕ
ಜಡಿದ ಶೌರ್ಯದ ಮೈಗಳುಬ್ಬಿನ
ಗುಡಿಯಿಡಿದ ರೋಮಾಳಿ ರಿಪುಗಳ
ಕುಡಿದ ಕಂಗಳ ಸುಭಟರೆಚ್ಚಾಡಿದರು ಚಳಕದಲಿ ೪
ಬಿರಿದುವಿಬ್ಬರ ಜೋಡು ಮೈಯು
ಬ್ಬರಿಸೆ ಹಳಹಳಿಕೆಯ ಸುತೇಜವ
ಸುರಿದುವಿಬ್ಬರ ಮೋರೆ ಗಂಟಿಕ್ಕಿದುವು ಹುಬ್ಬುಗಳು
ಅರಳ್ವ ನಿಡುಗಂಗಳ ನಿಹಾರದ
ಕರದ ಚಳಕದ ಕಾದ ನಾಸಿಕ
ದೆರಲ ಕೆತ್ತುವ ಮೀಸೆಗಳ ಭಟರೆಚ್ಚರುರವಣಿಸಿ ೫
ವಹಿಲವನು ವೇಢೈಸುವಡೆ ನರ
ರಹಿಪತಿಗಳೇ ಭಟರ ಪಡಿಯಿಡ
ಬಹುದೆ ಪಲ್ಲವ ಪಂಡಿತರ ಸತೃಣಾಸಿಗಳ ಗತಿಯ
ಅಹಿಯ ಶರಮಾನದ ಸುತಾಳ
ಗ್ರಹಮುಖದ ಸರವಾದಿಗಳು ಸರ
ವಹಿಯ ನಾಯಕವಾಡಿಗಳೆ ನರನಾಥ ಕೇಳೆಂದ ೬
ಕಣೆ ಕಣೆಯನಿಟ್ಟೊರಸಿದುವು ಕೂ
ರ್ಗಣೆಗೆ ಮಾರ್ಗಣೆ ಚಾಚಿದುವು ಕಣೆ
ಕಣೆಗೆ ಮಲೆತುವು ತರುಬಿದವು ಕಣೆ ಕಣೆಯ ಪಡಿಮುಖವ
ಕಣೆ ಕಣೆಗೆ ತೆರಳಿದವು ಕಣೆ ಮಾ
ರ್ಗಣೆಯನಣೆದವು ಹಿಂಡುಗಣೆ ಸಂ
ದಣಿಗಣೆಯಲಕ್ಕಾಡಿದವು ರಣಧೀರರೆಸುಗೆಗಳು ೭
ಎಸುವ ಗತಿಗೊಮ್ಮೊಮ್ಮೆ ಜಗ ಗ
ರ್ಜಿಸಿದುದಾಯೆಂದೆರಡು ಥಟ್ಟಿನೊ
ಳೊಸಗೆಯಲಿ ಮೊಳಗಿದವು ಕೋಹಿನ ಕೋಟಿನಿಸ್ಸಾಳ
ನಿಶಿತಶರವೋ ಪ್ರಳಯಸೂರ್ಯರ
ಮಸಕವೋ ಹರನೇತ್ರವಹ್ನಿಯ
ಹಸರವೋ ಹೆಸರಿಡುವನಾವನು ಭೂಪ ಕೇಳೆಂದ ೮
ಇವರ ಬಿಲುದನಿ ತುರಗ ಹೇಷಾ
ರವದ ಘಲ್ಲಣಿ ಸೂತರಬ್ಬರ
ವಿವಿಧವಾದ್ಯನಿನಾದ ದಳವೆರಡರ ಮಹಾರಭಸ
ಅವಿರಳಾಸ್ತ್ರಧ್ವಾನವಭ್ರದ
ದಿವಿಜನಿಕರದ ಸಾಧುವಾದದಿ
ಭುವನ ಶಬ್ದಬ್ರಹ್ಮಮಯವಾಯ್ತೊಂದು ನಿಮಿಷದಲಿ ೯
ಮುಂಚುವುದು ಕೈಮನವ ಕೈಮೆಯ
ಸಂಚವನು ಮನ ಮುಂಚುವುದು ಮಿಗೆ
ವಂಚಿಸುವುದಂಬುಗಳ ಗತಿ ಕೈಮನದ ಕಲುಹೆಗಳ
ಮುಂಚಿದಂಬುಗಳಾರನೇಳನು
ಹಿಂಚಿದವು ಹೊಂಬರಹದಂಬಿನ
ಮಿಂಚುಗಳಲೆವೆ ಹಳಚಿದವು ಹರಿಹರ ಪುರಂದರರ ೧೦
ಮನದೊಳಗೆ ಮೊಗೆದೀಂಟಿದರು ಕ
ಣ್ಣಿನಲಿ ಕಾರಿದರಡಿಗಡಿಗೆ ಕಿವಿ
ಗೊನೆಗಳಲಿ ಕುಡಿಕುಡಿದುಗುಳಿದರು ಮೂದಲೆಯ ಮಾತುಗಳ
ಮನದಲಂಕುರವಾಗಿ ಕಡೆಗ
ಣ್ಣಿನಲಿ ಪಲ್ಲವವಾಗಿ ರಣವಾ
ತಿನಲಿ ಹೂತುದು ಕರ್ಣಪಾರ್ಥರ ರೋಷಮಯಚೂತ ೧೧
ಅರಸ ಕೇಳೈ ಬೊಬ್ಬಿರಿದು ಚ
ಪ್ಪರಿಸಿ ತೇಜಿಯ ನೂಕಿದನು ಮುರ
ಹರನು ಸೂಠಾಸೂಠಿಯಲಿ ಕೈದೋರಿದನು ಪಾರ್ಥ
ಖುರಪುಟದಲಾಕಾಶವನು ಕ
ತ್ತರಿಸುವವೊಲುಬ್ಬರದಲತಿನಿ
ಬ್ಬರದ ಗತಿಯಲಿ ನಿಗುರಿದವು ರಥವಾಜಿಗಳು ನರನ ೧೨
ಕುಬುಬೆನುತ ಬೊಬ್ಬಿರಿದನುಗ್ರ
ಪ್ರಬಲ ವಾನರರಾಜನಿದಿರಲಿ
ಕಬಳಿಸಿದವರ್ಜುನನ ಶರ ಕರ್ಣನ ಪತಾಕಿನಿಯ
ಶಬರರೂಪ ವರಾಹದೈತ್ಯನ
ನಿಬಿಡದರ್ಪವ ಮುರಿವವೊಲು ವರ
ವಿಬುಧ ತತಿ ಕೊಂಡಾಡೆ ಕಳೆಯೇರಿದನು ಕಲಿಪಾರ್ಥ ೧೩
ಏನ ಹೇಳುವೆನರಸ ಕೇಳ್ ನಿ
ನ್ನಾನೆಯಗ್ಗಳಿಕೆಯನು ಮುಂದಣ
ದಾನವಾಂತಕನುರವನೆಚ್ಚನು ಜೋಡನೊಡೆಬಗಿದು
ಆ ನಿರೂಢಿಯ ಹಯದ ಘಾಯವ
ನೇನನೆಂಬೆನು ಜೀಯ ಸಿಂಧದ
ವಾನರನ ವೇದನೆಯ ಗಣನೆಯನರಿಯೆ ನಾನೆಂದ ೧೪
ಬರಸೆಳೆದ ಬಿಲುಗೋಲಿನಲಿ ನಿ
ಷ್ಠುರದ ಶರಸಂಧಾನದಲಿ ರಥ
ತುರಗವನು ಕೆಡೆಯೆಚ್ಚನರ್ಜುನನಸಮಬಾಣದಲಿ
ಸುರಪನಾಯುಧಹತಿಗೆ ಕುಲಗಿರಿ
ತೆರಳುವಂತಿರಲೊಂದು ಯೋಜನ
ವರೆಗೆ ತಿರ್ರನೆ ತಿರುಗಿ ತೊಲಗಿತು ಕರ್ಣರಥವಂದು ೧೫
ಔಕಿ ವಾಘೆಯ ಕೊಂಡು ಶಲ್ಯನು
ನೂಕಿದನು ತೇಜಿಯನು ಸಮರ
ವ್ಯಾಕುಳದಿನಾ ಕರ್ಣ ಸೆಳೆದನು ದಿವ್ಯಮಾರ್ಗಣವ
ನಾಕನಿಳಯರು ನಡುಗೆ ಶರ ಕ
ರ್ಣಾಕರುಷಣಪ್ರೌಢಿಯಲಿ ನಿಂ
ದಾ ಕಿರೀಟಿಯ ರಥವನೆಚ್ಚನು ಭಾನುಸುತ ಮುಳಿದು ೧೬
ಅರಿಯ ಶರಹತಿಗಳುಕಿ ತಿರ್ರನೆ
ತಿರುಗಿ ಪಾರ್ಥನ ತೇರು ಬಿಲ್ಲಂ
ತರಕೆ ಹಿಂದಕೆ ತೊಲಗೆ ಕಂಡು ಮುರಾರಿ ಬೆರಗಾದ
ಅರರೆ ಧಣುಧಣು ಪೂತು ಪಾಯಿಕು
ಸರಿಯ ಕಾಣೆನು ಭಾಪೆನುತ ವಿ
ಸ್ತರಿಸಿ ದಾನವವೈರಿ ಕರ್ಣನ ಹಿರಿದು ಹೊಗಳಿದನು ೧೭
ನಲವು ನಿಲೆ ಫಲುಗುಣನು ಹೂಡಿದ
ಹಿಳುಕನೀಡಾಡಿದನು ಲೋಕದ
ಬಳಕೆ ಕೌತುಕವೆನುತ ತೂಗಿದನಮಳ ಮಕುಟವನು
ಒಲವರವಲಾ ಮುರಹರಂಗೀ
ಬಲದೊಳಗೆ ಸಾಹಸವ ಸುಡಸು
ಡಲೆನುತ ದುಗುಡವ ಪಿಡಿದು ಫಲುಗುಣನಿಳುಹಿದನು ಧನುವ ೧೮
ಏನು ಫಲುಗುಣ ಧರ್ಮಜನ ಮದ
ದಾನೆ ದುಗುಡವಿದೇನು ಪೇಳೈ
ನೀನು ಧನುವನು ತೊರೆದ ಕಾರಣವೇನು ಪೊಸತೀಗ
ಏನು ಹದ ಹೇಳೆನಲು ಕೇಳೆಲೆ
ದಾನವಾಂತಕ ನುಡಿಯಲಾವುದು
ಹಾನಿಯೆಮಗಿಲ್ಲೆನುತ ಮೇಗರೆ ನುಡಿದನಾ ಪಾರ್ಥ ೧೯
ಹೇಳು ಹೇಳೆನ್ನಾಣೆ ಚಿತ್ತದೊ
ಳಾಳುವುದ ಮರೆಮಾಡದಿರು ನಿಜ
ಲೋಲ ಧರ್ಮಜನಾಣೆ ನಿನಗೆನೆ ಪಾರ್ಥ ನಸುನಗುತ
ಕಾಲಗುಣವೆಂದರಿಯೆ ಮೇಣ್ ತ
ನ್ನಾಳುತನ ಪುಸಿಯಾಯ್ತು ರಿಪುಭಟ
ನಾಳುತನ ದಿಟವಾಯ್ತು ಕೌತುಕವೆಂದನಾ ಪಾರ್ಥ ೨೦
ಒಂದು ಯೋಜನವರೆಗೆ ತಿರುಗಿತು
ಹಿಂದಕಹಿತನ ತೇರು ತಾನೆಸ
ಲೊಂದು ಬಿಲ್ಲಂತರಕೆ ತೊಲಗಿತು ನಮ್ಮ ರಥವಿಂದು
ಇಂದು ಕರ್ಣನ ಸಾಹಸಕೆ ಮನ
ಸಂದು ಪತಿಕರಿಸಿದಿರಿ ಕೌತುಕ
ವೆಂದು ಕಾಲವ ಬೈದೆನೆಂದನು ಪಾರ್ಥನಾ ಹರಿಗೆ ೨೧
ಆಳುತನದಲಿ ವೀರಕರ್ಣನ
ಹೋಲುವರ ನಾ ಕಾಣೆನೈ ಸುರ
ಪಾಲಕರು ತಾವಾನಬಹುದೇ ಕರ್ಣನುರವಣೆಯ
ಕೋಲು ಯೋಜನವರೆಗೆ ತೊಲಗಿಸಿ
ಜಾಳಿಸಿತ ನೀ ನುಡಿವೆ ನಿಜ ಬಿ
ಲ್ಲಾಳತನವನು ನಿನ್ನ ಮನದಲಿ ತಿಳಿದು ನೋಡೆಂದ ೨೨
ಬಸುರೊಳಗೆ ಬ್ರಹ್ಮಾಂಡಕೋಟಿಯ
ಮುಸುಕಿಕೊಂಡಿಹ ನಾ ಸಹಿತ ಮೇ
ಲೆಸೆವ ಸಿಂಧದ ಹನುಮಸಹಿತೀ ದಿವ್ಯಹಯಸಹಿತ
ಎಸುಗೆಯಲಿ ತೊಲಗಿಸುವ ಕರ್ಣನ
ಅಸಮಸಾಹಸ ಪಿರಿದೊ ಹುಲುರಥ
ದೆಸುಗೆ ನಿನ್ನಗ್ಗಳಿಕೆ ಪಿರಿದೋ ಪಾರ್ಥ ಹೇಳೆಂದ ೨೩
ಎನಲು ತಳವೆಳಗಾಗಿ ಫಲುಗುಣ
ಧನುವ ಕೊಂಡನು ದನುಜವೈರಿಗೆ
ಮನದ ಗರ್ವವನುಸುರಲರಿಯದೆ ಬಾಗಿದನು ಶಿರವ
ಮೊನೆಯಲಗಿನಂಬಿನಲಿ ಕರ್ಣನ
ಧನುವನಿಕ್ಕಡಿಗಳೆದು ಫಲುಗುಣ
ನನವರತ ಬಹುಸತ್ವದಲಿ ಮತ್ಸರಿಸಿ ಕಾದಿದನು ೨೪
ಎಚ್ಚನೀತನ ಸಾರಥಿಯ ಮಗು
ಳೆಚ್ಚನೀತನ ರಥವ ವಾಜಿಯ
ನೆಚ್ಚನೀತನ ಧನುವನೀತನ ಸಿಂಧ ಸೀಗುರಿಯ
ಎಚ್ಚನೀತನ ನಿಶಿತಶಸ್ತ್ರವ
ಕೊಚ್ಚಿದನು ಮಗುಳೆಚ್ಚು ಪುನರಪಿ
ಯೆಚ್ಚು ಕರ್ಣನ ಹೊಳ್ಳುಗಳೆದನು ಪಾರ್ಥ ನಿಮಿಷದಲಿ
ಬೊಬ್ಬಿರಿದುದಾ ಸೇನೆ ಸೋಲದ
ಮಬ್ಬು ಮುಸುಕಿದುದೀ ಬಲವನೀ
ಯುಬ್ಬೆಯನು ಸೈರಿಸುತ ಸಾಹಸಮಲ್ಲ ತನಿಗೆದರಿ
ಇಬ್ಬರಿಗೆ ಫಡ ಹುಬ್ಬನಿಕ್ಕುವ
ಳೊಬ್ಬಳೇ ಜಯಲಕ್ಷ್ಮಿ ಬೊಡ್ಡಿಯ
ಕೊಬ್ಬ ನಿಲಿಸುವೆನೆನುತ ಖತಿಯಲಿ ಮಸಗಿದನು ಕರ್ಣ ೨೬
ಹನುಮನನು ಮತ್ತೊಮ್ಮೆ ಪುನರಪಿ
ದನುಜರಿಪುವನು ಮತ್ತೆ ಹಯವನು
ಧನುವನರ್ಜುನನಂಬುಗಳನಾ ಛತ್ರ ಚಾಮರವ
ಮೊನೆಗಣೆಯಲೇ ಮುಸುಕಿದನು ಮು
ಮ್ಮೊನೆಯ ಬೋಳೆಯ ತೊಡಚಿ ಕೌರವ
ಜನಪನಾವೆಡೆ ನೋಡಹೇಳೆನುತುಬ್ಬಿದನು ಕರ್ಣ ೨೭
ಮೊದಲಲಾ ಭೀಷ್ಮನ ಶರಾಘಾ
ತದಲಿ ನೊಂದೆನು ಬಳಿಕ ಕರ್ಣನ
ಕದನದಲಿ ತಪ್ಪಲ್ಲ ತಪ್ಪಲ್ಲೆನುತ ಮುರವೈರಿ
ಗದಗದಿಸುತಶ್ವವನು ಬೋಳೈ
ಸಿದನು ಹನುಮನ ನೋಡಿ ತಲೆದೂ
ಗಿದನು ಮಂದಸ್ಮಿತಮಧುರಮುಖಕಮಳನೊಲವಿನಲಿ ೨೮
ಶರಹತಿಯಲುರೆ ನೊಂದು ಧೂಪಿಸಿ
ತರಹರಿಸುವಶ್ವಾಳಿ ಕೃಷ್ಣನ
ಕರುಣವಚನಾಮೃತರಸದಿನಾಪ್ಯಾಯನಂಬಡೆದು
ಖುರದಲವನಿಯ ಪೊಯ್ದು ಲಳಿ ಮಿಗ
ಲುರವಣಿಸಿದವು ಹನುಮನಂತಃ
ಕರಣ ಹದುಳಿಸಿ ಹಿಗ್ಗಿದನು ನರನಾಥ ಕೇಳೆಂದ ೨೯
ಬಳಿಕ ಹೇಳುವುದೇನು ಪಾರ್ಥನ
ಮುಳಿಸಿನಲಿ ಕಾಲಾಗ್ನಿ ಜಿಹ್ವಾ
ವಳಿಯ ಲಳಿಯಲಿ ಕುಪಿತಕಾಳೋರಗನ ವದನದಲಿ
ಸುಳಿವವನ ಸಾಹಸವನಾತನ
ಬಲುಹನಾತನ ಜಯವನಾತನ
ನಿಲವ ಕಂಡವರಾರು ಸುರ ನರ ನಾಗಲೋಕದಲಿ ೩೦
ರಾಯ ಕೇಳಭಿಮಂತ್ರಿಸಿದನಾ
ಗ್ನೇಯವನು ಹೂಡಿದನು ಸುರಕುಲ
ಬಾಯಬಿಡಲಂಬುಗಿದು ಹಾಯ್ದುದು ಬಿಲುದಿರುವನೊದೆದು
ವಾಯು ಪಡಿಬಲವಾಗೆ ಕಿಡಿಗಳ
ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ ೩೧
ಅಹಹ ಬೆಂದುದು ಲೋಕವಿನ್ನಾ
ರಹಿಮುಖವ ಚುಂಬಿಸುವರೋ ವಿ
ಗ್ರಹದ ಫಲನಿಗ್ರಹವಲಾ ಶಿವ ಎನುತ ಸುರರುಲಿಯೆ
ವಹಿಲ ಮಿಗೆ ವರುಣಾಸ್ತ್ರದಲಿ ಹುತ
ವಹನ ಬಿಂಕವ ಬಿಡಿಸಿದನು ಜಯ
ವಹುದೆ ಪರರಿಗೆ ಪಾರ್ಥನಿರೆ ಜನನಾಥ ಕೇಳೆಂದ ೩೨
ಸರಳ ಝಳ ಝಾಡಿಸಿತು ಕಬ್ಬೊಗೆ
ಪರೆದುದಲ್ಲಿಯದಲ್ಲಿ ತಂಪಿನ
ಸರಳಮೊನೆಯಲಿ ಸಿಂಪಿಸುವ ತುಂತುರ ತುಷಾರದಲಿ
ಅರಿಬಲದ ಬೊಬ್ಬಾಟದಲಿ ಧರೆ
ಬಿರಿಯಲರ್ಜುನ ಹೂಡಿದನು ಹೂಂ
ಕರಣ ಮಾನಿತ ಮಂತ್ರಮಂಡಿತ ಮೇಘಮಾರ್ಗಣವ ೩೩
ಹೊಗೆಯ ಹೊರಳಿಯ ವಿವಿಧವರ್ಣದ
ಮುಗಿಲ ಪಾಳೆಯವೆತ್ತಿ ಬಿಟ್ಟುದು
ಗಗನದಗಲದಲೌಕಿದವು ದೆಸೆದೆಸೆಯ ಮೂಲೆಗಳ
ಹಗಲುಗತ್ತಲೆಕಟ್ಟಿತೇನಿದು
ಯುಗದ ಕಡೆಯೋ ಶಿವಶಿವಾ ಎನೆ
ಜಗ ಜಗತ್ಪ್ರಾಣಾಸ್ತ್ರವನು ಹೂಡಿದನು ಕಲಿಕರ್ಣ ೩೪
ಅಟ್ಟಿ ಹೊಯ್ದುದು ನಿರಿಮುಗಿಲನರಿ
ಯಟ್ಟಿ ಕೊಡಹಿತು ತಳಿತಮೇಘದ
ಥಟ್ಟು ಮುರಿದುದು ಬೀಸಿದವು ಬಿರುಗಾಳಿ ಬಲ ಬೆದರೆ
ಇಟ್ಟಣಿಸಿ ಕೈಯೊಡನೆ ಕೊಂಡನು
ಬೆಟ್ಟವುರುಳುವ ಬಾಣವನು ಜಗ
ಜಟ್ಟಿ ಕೌರವರಾಯ ಬಾಳೆನುತೆಚ್ಚನಾ ಕರ್ಣ ೩೫
ಗಿರಿಯ ಡೆಂಕಣಿಜಂತ್ರವನು ತರ
ಹರಿಸುವವರಾರರಸ ಢಾವಣಿ
ಗಿರಿಯ ಧಾಳಿಗೆ ಧಾತುಗೆಟ್ಟುದು ಪಾಂಡುಸುತಸೇನೆ
ಅರರೆ ಕೆಡೆಕೆಡೆಯೆನುತ ವಜ್ರದ
ಸರಳನುಗಿದನದಾವ ವಹಿಲದೊ
ಳುರುಳೆಗಡಿದನು ಪರ್ವತಾಸ್ತ್ರವನಿಂದ್ರಸುತ ನಗುತ ೩೬
ಆವ ಚಳಕದೊಳರ್ಜುನನು ತಿಮಿ
ರಾವಲಂಬದ ಸರಳಲೆಚ್ಚನು
ನಾವರಿಯೆವಿರುಳಂಧತಮ ಮುದ್ರಿಸಿತು ದೃಷ್ಟಿಗಳ
ಆವನಾವನನರಿವನೋ ತಾ
ನಾವನಿದಿರಾರೆಂಬ ಭೇದವ
ಠಾವು ತೋರದು ತಮದೊಳದ್ದುದು ಕೂಡೆ ಕುರುಸೇನೆ ೩೭
ವೈರಿಶರಕೇನರಿಯನೇ ಪ್ರತಿ
ಕಾರವನು ನಿನ್ನಾತನಗ್ಗದ
ಸೌರಮಯಮಂತ್ರಾಭಿಮಂತ್ರಿತ ಭಾನುಮಾರ್ಗಣವ
ಆರು ಕಂಡರು ತಿಮಿರಜನಿತವಿ
ಕಾರವನು ಹೇಳಿಗೆಯ ಮುಚ್ಚುಳ
ಜಾರಿಸಿದ ಫಣಿಯಂತೆ ಭುಲ್ಲವಿಸಿತ್ತು ಕುರುಸೇನೆ ೩೮
ಆಗಳೇ ತೆಗೆದುರಗಬಾಣವ
ತೂಗಿ ಬಿಟ್ಟನು ನಿನ್ನ ಕರ್ಣನ
ಲಾಗುವೇಗವನೇನನೆಂಬೆನು ಚಾಪತಂತ್ರದಲಿ
ಸೀಗುರಿಸುವುರಿವಿಷದ ಲೋಳೆಯ
ಲಾಗಿಸುವ ನಾಲಗೆಯ ಸುಯ್ಲಿನ
ಬೇಗುದಿಯ ತೊಡಬೆಗಳ ಹಾವ್ ತುಡುಕಿದವು ಥಟ್ಟಿನಲಿ ೩೯
ಎಲೆಲೆ ಹಾವೋ ಹಾವು ಕೆಂಡದ
ಮಳೆಯ ತಡೆವವೆ ಕೊಡೆಯೆನುತ ಕಳ
ವಳಿಸಿತಲ್ಲಿಯದಲ್ಲಿ ಹರೆದುದು ಹುದುಗಿ ಹೊದರೊಡೆದು
ಬಲುವಿಷದ ಕಿರುವನಿಯ ಹಾವಿನ
ಮಳೆಗೆ ಗರುಡಾಸ್ತ್ರದಲಿ ತನ್ನಯ
ದಳಕೆ ಹಿಡಿದನು ಕೊಡೆಯನರೆಘಳಿಗೆಯಲಿ ಕಲಿಪಾರ್ಥ ೪೦
ಏಸು ಹಾವುದುರಿದವು ರಣದೊಳ
ಗೈಸು ಹದ್ದೆರಗಿದವು ತುಂಡಿಸಿ
ಬೀಸಿ ಬಿಸುಟವು ಕಡಿಗಳನು ಕೌರವನ ಥಟ್ಟಿನಲಿ
ಏಸು ಪರಿಯಲಿ ನರನ ಬಿನ್ನಣ
ವೈಸುಪರಿ ಕರ್ಣನಲಿ ಕರ್ಣನ
ಕೌಶಲವದೆನಿತನಿತು ಪರಿಯನು ಕಂಡೆನಾತನಲಿ ೪೧
ಬಲುಹು ಭೀಷ್ಮದ್ರೋಣರಿಂದ
ಗ್ಗಳವಲಾ ಕರ್ಣಂಗೆನುತ ಪಡಿ
ಬಲಕೆ ಬಂದರು ಭೀಮ ಸಾತ್ಯಕಿ ನಕುಲ ಸಹದೇವ
ದಳದೊಳದಟುಳ್ಳವರು ಪಾರ್ಥನ
ಕೆಲಬಲದಲುರವಣಿಸಿದರು ವೆ
ಗ್ಗಳೆಯನೈ ನಿನ್ನಾತನಿಂದಿನಲೆರಡುಥಟ್ಟಿನಲಿ ೪೨
ಎಲೆ ಧನಂಜಯ ಸಾಲದೇ ಹೆ
ಬ್ಬುಲಿಯ ಕಾಲಾಟದಲಿ ಮೃಗಶಿಶು
ಮಲೆತಡೇನಗ್ಗಳೆಯನೇ ಮೂಲೋಕವರಿವುದಲೇ
ಅಳವಿಗೊಡದಿರು ಸೂತತನಯನ
ತಲೆಯ ಬೆಸುಗೆಯ ಬಿಡಿಸುವಂಬಿನ
ಹಿಳುಕನುಗಿಯಾ ಹೊಳ್ಳುಗಣೆಯೇಕೆಂದನಾ ಭೀಮ ೪೩
ಪುಸಿಯೆ ಭೀಮನ ಮಾತು ಹೂಸುಕ
ದೆಸುಗೆ ತಾನೇಕಿನ್ನು ರಿಪು ನಿ
ಪ್ಪಸರದಲಿ ಕಲಿಯೇರಿದರೆ ಕೈಕೊಳ್ಳನೀಶ್ವರನ
ಹುಸಿಕಣೆಯಲೇನಹುದು ತೆಗೆ ಹರ
ವಿಶಿಖವನು ತೊಡು ಬೇಗಮಾಡೆಂ
ದಸುರರಿಪುವರ್ಜುನನ ಜರೆದನು ಭೂಪ ಕೇಳೆಂದ ೪೪
ಕ್ರೋಧಶಿಖಿ ಭುಲ್ಲವಿಸೆ ಮುಳಿದು ವಿ
ರೋಧಿಯನು ನೋಡಿದನು ಮುಳುಗಲಿ
ರಾಧೆ ಕಂಬನಿಗಳಲಿ ಕುದಿಯಲಿ ಪುತ್ರಶೋಕದಲಿ
ಆಧಿ ತೀರಲಿ ನಮ್ಮ ಸೇನಾ
ವ್ಯಾಧಿಗಿದೆ ಮದ್ದೆನುತ ಪರಬಲ
ಸಾಧಕನು ಬ್ರಹ್ಮಾಸ್ತ್ರವನು ತೊಟ್ಟೆಚ್ಚನಾ ಪಾರ್ಥ ೪೫
ಶಿವಶಿವಾ ಬ್ರಹ್ಮಾಸ್ತ್ರವಿದಲಾ
ಭುವನಜನ ಸಂಹಾರಶರ ಸಂ
ಭವಿಸಿತೋ ಹಾ ಎನುತ ಹರೆದುದು ಮೇಲೆ ದಿವಿಜಗಣ
ತವಕದಲಿ ತತ್ಪ್ರತಿಮಹಾಸ್ತ್ರವ
ಜವಳಿವೆರಳಿಂದುಗಿದು ಬಿಡೆ ತಿವಿ
ತಿವಿದು ತಮ್ಮೊಳಗಡಗಿದವು ದಿವ್ಯಾಸ್ತ್ರವಭ್ರದಲಿ ೪೬
ಆ ಮಹಾಸ್ತ್ರದ ಹಾನಿ ರೋಷದ
ತಾಮಸಾಗ್ನಿಯನೂದಿ ಬಿಡಲು
ದ್ದಾಮನರ್ಜುನ ಕೊಂಡನಗ್ಗದ ಜಾತಮನ್ಯುವನು
ಆ ಮಹಾಬಾಣಾಭಿಮುಖದಲಿ
ಸೋಮಧರ ಮಾರ್ಗಣವನಿಂತೀ
ಭೀಮವಿಕ್ರಮ ಕರ್ಣನೆಚ್ಚನು ರಾಯ ಕೇಳೆಂದ ೪೭
ಆತನಲಿ ಕೌಬೇರ ಮಾರ್ಗಣ
ವೀತನಲಿ ವಾಯವ್ಯಶರ ಬಳಿ
ಕಾತನಲಿ ನೈರುತ್ಯವಿತ್ತಲು ಸೋಮವರ್ತಿಶರ
ಆತನಲಿ ಸಾಮುದ್ರ ರೋಷಣ
ವೀತನಲಿ ವಡಬಾಸ್ತ್ರವಿಂತಿರ
ಲಾತನೀತನ ಸಮರ ಸರಿ ನರನಾಥ ಕೇಳೆಂದ ೪೮
ಸಂಕ್ಷಿಪ್ತ ಭಾವ
Lrphks Kolar
ರಾಮ ರಾವಣರ ಯುದ್ಧದಂತೆ ಕರ್ಣಾರ್ಜುನರ ಯುದ್ಧ ಜೋರಾಯಿತು.
ಗುರುನಂದನನು ಕರ್ಣನಿಗೆ ಇನ್ನಷ್ಟು ಸರಳ ಬಂಡಿಗಳನ್ನು ಒದಗಿಸಿದನು. ಕ್ಷಣಕ್ಷಣಕ್ಕೂ ಇಬ್ಬರ ಬಲ ಹೆಚ್ಚಿತು. ಮೂದಲಿಕೆಗಳೂ ಹೆಚ್ಚಿದವು. ಬಾಣಗಳು ಹೊರಟು ಬರುವುದೇ ಕಾಣದಷ್ಟು ವೇಗದಲ್ಲಿ ಹೋರಾಡಿದರು. ಇವರ ಅಬ್ಬರಕ್ಕೆ ಗಗನ ಭೂಮಿಗಳು ನಡುಗಿದವು. ಪಾರ್ಥನ ರಥದ ಕುದುರೆಗಳನ್ನು ಗಾಯಗೊಳಿಸಿದ ಕರ್ಣ. ಅರ್ಜುನ ಬಿಟ್ಟ ಬಾಣಕ್ಕೆ ಕರ್ಣನ ರಥ ಒಂದು ಯೋಜನ ಹಿಂದಕ್ಕೆ ತಿರ್ರನೆ ತಿರುಗಿತು. ಶಲ್ಯ ಮತ್ತೆ ಸಂಭಾಳಿಸಿ ತಂದನು. ಕರ್ಣನ ಸರಳಿಗೆ ಅರ್ಜುನನ ರಥ ಒಂದು ಬಿಲ್ಲಂತರಕೆ ತಿರುಗಲು ಕೃಷ್ಣ ಕರ್ಣನನ್ನು ಹೊಗಳಿದನು. ಪಾರ್ಥನಿಗೆ ಮುನಿಸು. ಬಿಲ್ಲನ್ನು ಕೆಳಗಿಟ್ಟನು. ಕೃಷ್ಣ ಕಾರಣವನ್ನು ಕೇಳಲು ಯೋಜನ ಹಿಂದಕ್ಕೆ ತಾನು ತಿರುಗಿಸಿದರೆ ಸುಮ್ಮನಿದ್ದವ ಬಿಲ್ಲಳತೆಯಷ್ಟು ತಿರುಗಿದ್ದಕ್ಕೆ ಹೊಗಳಿದೆಯಲ್ಲ...ಎನ್ನಲು ಕೃಷ್ಣ ನಕ್ಕನು. ಎಲೆ ಮರುಳೆ, ನನ್ನಲ್ಲಿ ಇರುವ ಈ ಬ್ರಹ್ಮಾಂಡದ ಭಾರ, ಧ್ವಜದ ಹನುಮನ ಭಾರವನ್ನು ಅವನು ಇಷ್ಟು ಸಹಿಸಿದನೆಂದರೆ ಯಾರು ಹಿರಿದು ಹೇಳು ಎಂದನು. ನಾಚಿಕೆಯಿಂದ ತಲೆಬಾಗಿ ಮತ್ತೆ ಯುದ್ಧಕ್ಕೆ ನಿಂತನು ಅರ್ಜುನ.
ಅವನು ಇವನನ್ನು, ಇವನು ಅವನನ್ನು ಬಹಳ ಬಲವಾಗಿ ಸರಳುಗಳಿಂದ ಜಡಿದರು. ಸೇನೆ ಬೊಬ್ಬಿರಿಯಿತು. ನೋಡುತ್ತಿದ್ದವರು ಬೆದರಿದರು. ಒಂದು ಹಂತದಲ್ಲಿ ಕೃಷ್ಣನಿಗೆ ಗಾಯವಾಯಿತು. ರಥದ ಕುದುರೆಗಳು ನೊಂದವು. ಹನುಮನಿಗೆ ಘಾಸಿಯಾಯಿತು. ಆಗ ಕೃಷ್ಣನು ಸಂತೈಸಿದನು.
ಕರ್ಣನು ಆಗ್ನೇಯಾಸ್ತ್ರವನ್ನು ಹೂಡಿದರೆ ಅರ್ಜುನನು ವರುಣಾಸ್ತ್ರದಿಂದ ಉಪಸಂಹರಿಸಿದನು. ನಂತರ ವಾಯುವ್ಯಾಸ್ತ್ರ ಹೊರಟಿತು ಕರ್ಣನಿಂದ. ಪರ್ವತಾಸ್ತ್ರವು ಅದನ್ನು ತಡೆಯಿತು. ಅರ್ಜುನ ಹೂಡಿದ ತಿಮಿರಾಸ್ತ್ರವನ್ನು ಕರ್ಣನ ಸೂರ್ಯಾಸ್ತ್ರ ನಿವಾರಿಸಿತು. ಸರ್ಪಾಸ್ತ್ರದ ರಭಸಕ್ಕೆ ತಲ್ಲಣಿಸಿದ ತನ್ನ ಸೇನೆಯನ್ನು ಗರುಡಾಸ್ತ್ರದಿಂದ ರಕ್ಷಿಸಿದನು ಪಾರ್ಥ. ಭೀಮಾದಿಗಳೂ ಬಂದು ಸೇರಿದರು. ಬ್ರಹ್ಮಾಸ್ತ್ರವನ್ನು ಬಿಡು ಎಂದು ಭೀಮನು ಹೇಳಲು ಪ್ರತಿ ಮಂತ್ರಾಸ್ತ್ರದಿಂದ ಅದನ್ನೂ ನಿವಾರಿಸಿದನು ರವಿಸುತ. ಕುಬೇರ, ವಾಯುವ್ಯ, ನಿರುತಿ, ಸಾಮ ಮುಂತಾದ ಶರಗಳನ್ನು ಇಬ್ಬರೂ ಒಂದಕ್ಕೆ ಪ್ರತಿಯಾಗಿ ಮತ್ತೊಂದರಂತೆ ಉಪಯೋಗಿಸುತ್ತ ಬಂದರು. ರಣಭೂಮಿ ನಡುಗಿತು.
ಕಾಮೆಂಟ್ಗಳು