ಭಾರತಕಥಾಮಂಜರಿ39
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ - ಮೂರನೆಯ ಸಂಧಿ
ಸೂ. ಬರುತ ಕಂಡನು ಕಣ್ವನಾಶ್ರಮ
ವರದ ಜಂಭೂಫಲವ ಮಾರುತಿ
ತರಲು ಯಮಸುತ ಹಲುಬೆ ಮುರರಿಪು ಶಾಖೆಗಡರಿಸಿದ
ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳ ಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ ೧
ಬರಬರಲು ಮುಂದೊಂದು ವನದೊಳು
ಚರಿಪ ಪಕ್ಷಿ ಮೃಗಾಳಿ ತಳಿತಿಹ
ಬಿರಿಮುಗುಳನೀಕ್ಷಿಸುವ ಮರಿದುಂಬಿಗಳ ಮೇಳವದ
ಪರಿಪರಿಯ ಮರ ಪೂಫಲಂಗಳ
ನಿರದೆ ಕೊಡುತಿರೆ ಪಕ್ಷಿಮೃಗಕುಲ
ವೆರಸಿ ಮೆರೆದವು ಬನದ ಸುತ್ತಲು ರಾಯ ಕೇಳೆಂದ ೨
ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸಸು
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ
ಕುಂಭಿನಿಯೊಳುಳ್ಳಖಿಲ ವೃಕ್ಷಕ
ದಂಬದಲಿ ವನ ಮೆರೆದುದದನೇ
ನೆಂಬೆನೀ ಪರಿವಾರ ತುಂಬಿತು ಲಲಿತ ನಂದನದ ೩
ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನ ನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪ ಕೇಳೆಂದ ೪
ಬಂದು ಭೂಪತಿ ಕೊಳನ ತೀರದೆ
ನಿಂದು ತಮಗಾಶ್ರಮದ ಠಾವಹು
ದೆಂದು ಭೀಮಂಗರುಹಲಾ ಕ್ಷಣವಾತನೈತಂದು
ತಂದು ತಳಿರನು ಪರ್ಣಶಾಲೆಗ
ಳಂದದಲಿ ರಚಿಸಿದನು ಭೂಸುರ
ವೃಂದ ಬಿಟ್ಟುದು ಧರ್ಮಪುತ್ರನ ಸುತ್ತುವಳಯದಲಿ ೫
ದಿನಪನಪರಾಂಬುಧಿಯನೈದಲು
ವನಜ ಮುಗಿದವು ಚಕ್ರವಾಕದ
ಮನಕೆ ಖತಿ ಕುಮುದಿನಿಗೆ ಮುದ ಯಾಮಿನಿಗೆ ಸುಮ್ಮಾನ
ಕನಕಮಯವರರಥವನಡರಿದು
ದನುಜರನು ಸಂಹರಿಸೆ ಕಮಲಿನಿ
ಮನದೊಳುತ್ಸಾಹಿಸಲು ರವಿಯುದಯಾಚಲಕೆ ಬಂದ ೬
ಋಷಿಗಳೊಳು ಮೇಳವು ವರಾಸನ
ಮೆಸೆವ ಬನದೊಳು ಬಳಿಕ ಗಂಗಾ
ಪ್ರಸರದಲಿ ಸ್ನಾನ ಭೋಜನ ಕಾಲದಲಿ ಪಾನ
ಮಿಸುಪ ಸುತಿಯ ವಿಲಾಸಗಳ ಸಂ
ತಸದಿ ಕೇಳ್ವ ಸಮಾಸಪೂರಿತ
ವಸುಮತೀಧರ ಯಮಜನೆಸೆದನು ಭೂಪ ಕೇಳೆಂದ ೭
ಇರುತಿರಲು ಕಲಿಭೀಮ ಮೃಗಯಾ
ತುರದಲಖಿಳ ಕಿರಾತರುಗಳೊಡ
ವೆರಸಿ ಹೊಕ್ಕನು ಗಿರಿತರುವ್ರಜ ಬಹಳ ಕಾನನವ
ವರಹ ಮರೆ ಸಾರಂಗ ಪೆರ್ಬುಲಿ
ಕರಡಿ ವೃಕ ಶಾರ್ದೂಲ ಕೇಸರಿ
ಕರಿ ಕಳಭವೋಡಿದವು ದೆಸೆದೆಸೆಗೈದಿ ತಲ್ಲಣಿಸಿ ೮
ಹಾಸಗಳವಿಡಿದೆಳೆವ ನಾಯ್ಗಳ
ಬೀಸುವಲೆಗಳ ಕಾಲಗಣ್ಣಿಯ
ಸೂಸುವಲೆಗಳ ಧನು ಸರಳ ಭಾಸುರದ ಕುಪ್ಪಸದ
ಕೇಶದಲಿ ತಳಿರುಗಳ ಬಿಗಿದು ವಿ
ಳಾಸದಲಿ ಹೊರವಂಟು ಹೆಬ್ಬಲೆ
ಬೀಸಿದರು ಬೇಂಟೆಗರು ಬಹಳ ಮೃಗಂಗಳನು ಕೆಡಹಿ ೯
ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ
ಅಡಗೆಡಹಿ ಪೇರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ ೧೦
ಬಂದನತಿ ಬೇಂಟೆಯಲೆ ಚರಿಸುತ
ನಿಂದು ಹತವಾದಖಿಳ ಮೃಗಗಳ
ನಂದು ವ್ಯಾಧರನಿಕರಕಿತ್ತನು ಪವನಜಾತ್ಮಜನು
ತಂದರವದಿರು ತವತವಗೆ ಪರಿ
ತಂದು ತರು ಶಿಖಯಿಂದ ದಹಿಸಿದ
ರಂದು ಮಾಂಸವನೊಲಿದು ಭಕ್ಷಿಸಿದರು ವಿನೋದದಲಿ ೧೧
ಮುಂದೆ ಕಂಡನು ದೂರದಲ್ಲಿಹ
ನಂದನದ ಮೆಳೆ ತರು ನಿಕಾಯದ
ಸಂದಣಿಯ ಪೂಗೊಂಚಲಿನ ಪಲ್ಲವ ನಿಕಾಯದಲಿ
ಗೊಂದಣದ ತರು ಮಧ್ಯದಲ್ಲಿಹು
ದೊಂದು ಜಂಬೂವೃಕ್ಷ ಮೆರೆದಿರೆ
ನಿಂದು ನೋಡಿದು ಭೀಮ ವಿಸ್ಮಯಗೊಂಡನಾ ಕ್ಷಣಕೆ ೧೨
ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ತಾ
ನಿದನು ಕೊಂಡೊಯ್ವೆನು ಮಹೀಪಾಲಕನ ದರುಶನಕೆ
ಗದೆಯ ಕಕ್ಷದಲೌಕಿ ಮಾರುತಿ
ಮಧುರಿಪುವ ನೆನೆವುತ್ತಲಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ನಿಮಿಷದಲಿ ೧೩
ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು ೧೪
ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲಜ್ಞಾನಿ ಮಾದ್ರೀಸುತನು ಭೂಪತಿಗೆ ೧೫
ವರುಷಕೊಂದೇ ಫಲವಹುದು ಅದ
ನರಿತು ಯೋಗಧ್ಯಾನದಲಿ ಕಂ
ದೆರೆದು ಕರ ಸಂಪುಟವನರಳಿಚಲಾಗಲಾ ಫಲವು
ಇರದೆ ಹಸ್ತದೊಳಿಳಿಯಲಾ ಮುನಿ
ಹರುಷದಿಂದದ ತಳೆದು ಕೊಂಬನು
ಪರಶಿವಧ್ಯಾನೈಕದೃಷ್ಟಿಯೊಳಿಪ್ಪನಾ ಮುನಿಪ ೧೬
ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹದೆನುತ ಧರ್ಮಜ
ನೊಂದು ಫಲಗುಣ ಭೀಮ ಸಹದೇವಾದಿಗಳು ಸಹಿತ
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಪಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ ೧೭
ಕಂಡು ಯಮಸುತನತಿ ಭಯದಿನಿದ
ಖಂಡಪರಶುವೆ ಬಲ್ಲ ನಾವ್ ಮುಂ
ಕೊಂಡು ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ
ಚಂಡ ವಿಕ್ರಮ ಭೀಮನದ ಕೈ
ಕೊಂಡು ತಾನವಿವೇಕದಲಿಯು
ದ್ದಂಡತನದಿಂ ತಂದ ಹತ್ತಿಸಲರಿದು ನಮಗೆಂದ ೧೮
ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ
ಹೇಳಲರಿದಿದ ನಿಮ್ಮ ಸಲುಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ ೧೯
ಎನಲು ಭೂಪತಿ ಕೃಷ್ಣ ರಕ್ಷಿಸು
ದನುಜರಿಪು ಗೋವಿಂದ ರಕ್ಷಿಸು
ವನಜನಾಭ ಮುಕುಂದ ರಕ್ಷಿಸು ರಾವಣಾಂತಕನೆ
ಮನಸಿಜನ ಪಿತ ರಾಮ ರಕ್ಷಿಸು
ಘನಮಹಿಮ ಕೇಶವನೆ ರಕ್ಷಿಸು
ನೆನೆವ ಭಕ್ತಳ ಭಾಗ್ಯನಿಧಿ ಮಾಧವನೆ ರಕ್ಷಿಪುದು ೨೦
ಎಂದು ಭಜಿಸುತ್ತಿರಲು ನೃಪ ಗೋ
ವಿಂದನಮಳಜ್ಞಾನದಲಿ ಸಾ
ನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ
ಮಂದಮತಿ ಪವಮಾನಜನ ಕತ
ದಿಂದ ಪಾಂಡುಕುಮಾರರಿಗೆ ಕೇ
ಡಿಂದು ಬಹುದಾ ಋಷಿಯ ಶಾಪದಿ ಶಿವಶಿವಾಯೆಂದ ೨೧
ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನ ದುರಿತದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು ೨೨
ತೆಗೆದು ತಕ್ಕೈಸಿದನು ಭೂಪನ
ಮಿಗೆ ಹರುಷದಲಿ ಭೀಮ ಪಾರ್ಥರ
ನೆಗಹಿ ಮೈದಡವಿದನು ಮಾದ್ರೀಸುತರ ದ್ರೌಪದಿಯ
ನಗುತ ಋಷಿಜನ ವಿಪ್ರ ಧೌಮ್ಯಾ
ದಿಗಳನುಚಿತೋಕ್ತಿಯಲಿ ಮನ್ನಿಸು
ತಗಧರನು ನೋಡಿದನು ಜಂಬೂಫಲದ ಘನರತವ ೨೩
ಕಾಳು ಮಾಡಿದಿರಕಟಕಟಾ ನೀವ್
ಮೇಲನರಿಯದೆ ಋಷಿಯ ಶಾಪವ
ನಾಲಿಸಿದೆ ವರ ಮೂರ್ಖತನದಲೆ ನೆನೆದಿರನುಚಿತವ
ಏಳಿ ಫಲವನು ತೊಟ್ಟ ಸರಿಸಕೆ
ಕಾಲದಲಿ ತಂದಿರಿಸಿ ನಿಮ್ಮನು
ಕೂಲ ಧರ್ಮಂಗಳನು ಬೇಗದಿ ಹೇಳಿ ನೀವೆಂದ ೨೪
ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳೆನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ ೨೫
ಶ್ಲೋಕ–
ಮಾತೃವತ್ ಪರದಾರಾಣಿ
ಪರದ್ರವ್ಯಾಣಿ ಲೋಷ್ಠವತ್
ಆತ್ಮವತ್ ಸರ್ವಭೂತಾನಿ
ಯಃಪಶ್ಯತಿ ಸ ಪಶ್ಯತಿ ೧
ಪರಸತಿಯೆ ನಿಜಜನನಿ ಪರಧನ
ವಿರದೆ ಲೋಷ್ಠವು ಜೀವರಾಶಿಯ
ಪರರ ನೋವನು ತನ್ನ ನೋವೆಂದೆನುತ ಭಾವಿಸುವೆ
ನಿರುತವೆನೆ ಫಲ ಧರೆಯ ಬಿಟ್ಟಂ
ತರದೊಳೊಮ್ಮೊಳ ನೆಗೆಯೆ ಮುರಹರ ೨೬
ಮರುತಸುತ ಬಾರೆನಲು ನುಡಿದನು ಮುಗಿದು ಕರಯುಗವ
ಶ್ಲೋಕ –
ಪ್ರಾಣಮೇವ ಪರಿತ್ಯಜ್ಯ
ಮಾನಮೇವಾಭಿರಕ್ಷತು
ಅನಿತ್ಯಮಧೃವಂ ಪ್ರಾಣಂ
ಮಾನಮಾಚಂದ್ರತಾರಕಂ ೨
ಜೀವವೀ ಕ್ಷಣವಳಿದು ಹೋಗಲಿ
ಕಾವುದಭಿಮಾನವನು ನಿತ್ಯದ
ಭಾವವಾಗಿಹುದಾತ್ಮವಾಚಂದ್ರಾರ್ಕವಭಿಮಾನ
ನಾವು ಬೇರೊಂದರಿಯೆವಿದ್ದುದ
ದೇವರಿಗೆ ಬಿನ್ನವಿಸಿದೆವುಯೆನ
ಲಾವ ಬೇಗದಲಡರಿದುದೊ ಫಲವರಸ ಕೇಳೆಂದ ೨೭
ಏನು ನಿನ್ನಭಿಮತವು ಪಾರ್ಥ ನಿ
ಧಾನವನು ನುಡಿಯೆನಲು ಹೇಳುವೆ
ಮಾನನಿಧಿ ನಿಮಗರುಹುವೆನು ಚಿತ್ತವಿಸಿ ನೀವೆನುತ
ಧ್ಯಾನದಲಿ ಕೈಮುಗಿದು ಶಂಕರ
ನೀನೆ ಗತಿಯೆಂದನುತಲಾ ಶಶಿ
ಭಾನು ದಿಗುಪಾಲರಿಗೆ ನಮಿಸುತ ಕೇಳಿ ನೀವೆಂದ ೨೮
ಶ್ಲೋಕ –
ನಿಮಂತ್ರಣೋತ್ಸವೋ ವಿಪ್ರಾಃ
ಗಾವೋ ನವತೃಣೋತ್ಸವಾಃ
ಸುಭರ್ತಾರೋತ್ಸವಾ ನಾರ್ಯಃ
ಅಹಂ ಕೃಷ್ಣ ರಣೋತ್ಸವಃ ೩
ಪರಗೃಹದ ಭೋಜನಕೆ ವಿಪ್ರರು
ಪರಿಣಮಿಸುವೋಲ್ ಪಶು ಸಮೂಹವು
ಇರದೆ ನವತೃಣದಿಂದ ತುಷ್ಟಿಯನೈದುವಂದದಲಿ
ವರಸತಿಯು ನಿಜಪತಿಯ ಕಂಡಾ
ಹರುಷವಹುದೆನಗಾಹವದಲೆಲೆ
ಹರಿಯೆಯೆನೆ ಬೇಗದಲಿ ಫಲವಡರಿತ್ತು ನಿಮಿಷದಲಿ ೨೯
ಶ್ಲೋಕ –
ಧರ್ಮೋಜಯತು ನಾಧರ್ಮಃ
ಸತ್ಯಂಜಯತು ನಾನೃತಂ
ಕ್ಷಮಾ ಜಯತು ನಕ್ರೋಧೋ
ವಿಷ್ಣುರ್ಜಯತು ನಾಸುರಃ ೪
ಧರ್ಮವನು ನೆರೆಜಯಿಲಸಲರಿಯದ
ಧರ್ಮ ಸತ್ಯವ ಮೀರಲರಿವುದೆ
ನಿರ್ಮಳದ ಸೈರಣೆಯ ಗೆಲುವುದೆ ಕ್ರೋಧ ಭಾವಿಸಲು
ಕರ್ಮಹರ ಕೃಷ್ಣನನು ಗೆಲುವರೆ
ದುರ್ಮತಿಗಳಹ ಅಸುರರೆನಲಾ
ಧರ್ಮತತ್ವವ ನಕುಲ ವಿರಚಿಸಲೈದಿತಾ ಫಲವು ೩೦
ಶ್ಲೋಕ –
ಸತ್ಯಂ ಮಾತಾ ಪಿತಾಜ್ಞಾನಂ
ಧರ್ಮೋಭ್ರಾತಾ ದಯಾಸಖಾ
ಶಾಂತಿಃಪತ್ನೀ ಕ್ಷಮಾಸೂನು
ಷ್ಷಡೈತೇ ಮಮ ಬಾಂಧವಾಃ ೫
ಸತ್ಯವೇ ನಿಜಮಾತೆ ಜ್ಞಾನವೆ
ನಿತ್ಯವಹ ಪಿತ ಧರ್ಮವನುಜನು
ಮತ್ತೆ ದಯವೇ ಮಿತ್ರ ಶಾಂತಿಯೆ ಪತ್ನಿ ಕ್ಷಮೆ ಸೂನು
ಸತ್ಯವನು ಸಹದೇವ ನುಡಿಯಲಿ
ಕತ್ಯಧಿಕಫಲ ಮೇಲೆ ಚಿಗಿಯಲು
ಮತ್ತೆ ಮುರರಿಪು ದ್ರುಪದಸುತೆ ಬಾಯೆಂದನುಚಿತದಲಿ ೩೧
ಶ್ಲೋಕ –
ಸುಂದರಂ ಪುರುಷಂ ದೃಷ್ಟ್ವಾ
ಪಿತರಂ ಭ್ರಾತರಂ ಸುತಂ
ಯೋನಿರ್ದ್ರವತಿ ನಾರೀಣಾಂ
ಸತ್ಯಂ ಬ್ರೂಮೀಹ ಕೇಶವ ೬
ಭಾವವಹ ಪುರುಷರನು ಕಾಣುತ
ಭಾವಿಸಲು ಪಿತ ಸುತರ ಅನುಜರ
ಠಾವಿನಲಿಯಾದರೆಯು ಯೋನಿರ್ದ್ರವಣ ಸತಿಯರಿಗೆ
ಭಾವದಲಿ ಮರೆವಿಡಿದು ನುಡಿಯಲಿ
ಕಾವಿಗಡ ಫಲವಡರದಿರುತಿರೆ
ದೇವ ನುಡಿದನು ವಂಚಿಸದೆ ನಿಶ್ಚಯವ ಹೇಳೆಂದ ೩೨
ಶ್ಲೋಕ–
ಪಂಚ ಮೇ ಪತಯಸ್ಸಂತಿ
ಷಷ್ಠಸ್ತು ಮಮ ರೋಚತೆ
ಪುರುಷಾಣಾಮಭಾವೇನ
ಸರ್ವಾ ನಾರ್ಯಾಃ ಪತಿವ್ರತಾಃ ೭
ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ
ಪೃಥಿವಿಯಲಿ ಪರಪುರುಷರನು ದು
ರ್ಮತಿಯೊಳಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು ೩೩
ಹರುಷ ಮಿಗೆ ಋಷಿಜನಕೆ ಧೌಮ್ಯನು
ಕರಗಳನು ನೆಗಹುತ ಯುಧಿಷ್ಠಿರ
ಧರಣಿಸತಿ ಕೇಳ್ ಕೃಷ್ಣನಿರೆ ನಿನಗಾವುದರಿದೆಂದು
ಇರದೆ ದೇವನ ಪಾದ ಪಂಕಜ
ಕೆರಗಿದುದು ಮುನಿ ನಿಕರ ಬುಧಜನ
ನಿರತ ಪರಮಾನಂದದಿಂದೈದಿದರು ತದ್ವನವ ೩೪
ಮುನಿಪ ಕಣ್ವನು ಕಣ್ದೆರೆದು ಪರ
ಮನನು ಜಾನಿಸಿ ಕರವನರಳಿಚ
ಲೊನದು ಬಿದ್ದುದು ಪಣ್ಣು ಕಂಡನು ನಗುತ ಮನದೊಳಗೆ
ವನಜನಾಭನ ತಂತ್ರವಿದು ಪಾ
ವನ ಸುರೂಪನ ನೋಳ್ಪೆನೆಂದಾ
ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ ೩೫
ಇದಿರೊಳಿರಿಸಿದನಾ ಫಲವ ಸಂ
ಮುದದಿ ಹೊಂಪುಳಿಯೋಗಿ ಮುನಿಯಾ
ಪದುಮನಾಭಂಗೆರಗಿ ತೆಗಿ ನೀ ಫಲವನೆಂದೆನಲು
ಮದನಪಿತ ನಸುನಗುತ ಮುನಿಪನ
ಹದುಳ ಮಿಗೆ ಸೈಪಿಟ್ಟು ನೆಗಹಿದ
ನುದಿತ ಫಲವನು ಹಂಚ ಹೇಳಿದನಾ ನೃಪಾಲಂಗೆ ೩೬
ಬರಿಸಿ ಋಷಿಗಳನವರವರ ತರ
ವರಿದು ಕೊಡಿಸಿದನುಳಿದುದನು ಭೂ
ಸುರ ಸಹೋದರರಿಂಗೆ ಮುನಿಸತಿಯರಿಗೆ ದ್ರೌಪದಿಗೆ
ಮುರಹರಗೆ ತನುನಿಪ ಕಣ್ವಂ
ಗಿರಿಸಿ ಕೈವೀಸಿದೊಡೆ ಫಲವನು
ಹರುಷ ಮಿಗೆ ಭುಂಜಿಸಿತು ಭೂಪತಿ ಕೇಳು ಕೌತುಕವ ೩೭
ಪಾರಣೆಯನುರೆ ಮಾಡಿ ಮುನಿಪ ಮ
ಹೀರಮಣನನು ಬೀಳುಕೊಟ್ಟನು
ದಾರ ಲಕ್ಷ್ಮೀಕಾಂತನನು ಬೀಳ್ಕೊಂಡು ಮತ್ತೊಂದು
ಸಾರವಹ ಸುಸ್ಥಾನಕೈದಿದ
ನಾರು ಭಾವಿಸಬಲ್ಲರಾ ಮುರ
ವೈರಿಯನುಪಮ ಮಹಿಮೆಗಳ ಭೂಪಾಲ ಕೇಳೆಂದ ೩೮
ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರವೇದ ಶಾಸ್ತ್ರಗಳು
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ ೩೯
ಹರಿಯೊಲಿದು ಮೈದಡವಿಯೈವರ
ತರುಣಿಯನು ಸಂತೈಸಿಯಾ ಮುನಿ
ವರರನುಪಚರಿಸಿದನು ಬುದ್ಧಿಯನೊರೆದು ಧರ್ಮಜಗೆ
ಉರುತರೋತ್ತರ ಸಿದ್ಧಿ ನಿಮಗಿ
ನ್ನಿರದೆ ಫಲಿಸುವದೆಂದು ಸೂಚಿಸಿ
ಮರಳಿ ತನ್ನಯ ಪುರಿಗೆ ಗಮನೋದ್ಯೋಗ ಮನನಾದ ೪೦
ಬಂದನಾ ಭೂಪತಿ ಮುರಾಂತಕ
ನಂದಣದ ಬಲ ದೆಸೆಯಲನಿಲಜ
ಮುಂದೆ ವಾಮದಿ ಪಾರ್ಥ ಯಮಳ ದ್ರೌಪದಾದೇವಿ
ಹಿಂದೆ ಬರೆ ಕಿರಿದೆಡೆಯಲಲ್ಲಿಯೆ
ನಿಂದು ಕಳುಹಿದನೆಲ್ಲರನು ಗೋ
ವಿಂದನೇರಿದ ರಥವ ಗದುಗಿನ ವೀರನಾರಯಣ ೪೧
ಸಂಕ್ಷಿಪ್ತ ಭಾವ
ಜಂಭೂಫಲದ ಪ್ರಸಂಗ.
ಧರ್ಮಜನು ತನ್ನ ಪರಿವಾರದೊಂದಿಗೆ ಅಲ್ಲಲ್ಲಿ ಸುತ್ತುತ್ತಾ ಒಂದು ವನಕ್ಕೆ ಬಂದನು. ಅಲ್ಲಿಯ ವಾತಾವರಣ ಅತ್ಯಂತ ಸುಂದರವಾಗಿತ್ತು. ತಿಳಿಯಾದ ನೀರಿನ ಕೊಳ, ಪಕ್ಷಿಗಳು, ವಿವಿಧ ಬಗೆಯ ವೃಕ್ಷಗಳಿಂದ ಕೂಡಿದ ಆ ಸ್ಥಳ ಎಲ್ಲರಿಗೂ ಸಂತಸ ತಂದಿತು. ಅಲ್ಲಿ ಕೆಲಕಾಲ ತಂಗಿದರು.
ಈ ಮಧ್ಯೆ ಭೀಮನು ಮೃಗಯಾವಿಹಾರಕ್ಕೆಂದು ಹೊರಟು ಬಗೆಬಗೆಯ ಪ್ರಾಣಿಗಳನ್ನು ಬೇಟೆಯಾಡಿ ಆನಂದಿಸಿದನು. ಅಲ್ಲಿ ಒಂದು ಜಂಭೂವೃಕ್ಷವಿತ್ತು. ಬಹು ದೊಡ್ಡ ಗಾತ್ರದ ಫಲವನ್ನು ಕಂಡು ಅಣ್ಣನಿಗೆ ಕೊಡಲು ಬಯಸಿ ಭೀಮ ಅದನ್ನು ಕಿತ್ತು ತಂದನು.
ಅದನ್ನು ಕಂಡ ಜ್ಞಾನಿ ಸಹದೇವನು ಇದು ಕಣ್ವಮಹರ್ಷಿಗಳಿಗೆ ಸಲ್ಲತಕ್ಕದ್ದು. ವರ್ಷಕ್ಕೊಂದೇ ಫಲವಿದು. ತಪಸ್ಸಿನಲ್ಲಿರುವ ಮುನಿಯ ಕೈಯೊಳಗೆ ಬೀಳುವುದು. ಇದು ತಪ್ಪಿದರೆ ಅವನು ಶಾಪ ಕೊಡುವನೆಂದಾಗ ಎಲ್ಲರಿಗೂ ಭಯವಾಯಿತು. ಆಗ ಧೌಮ್ಯರು ಶ್ರೀ ಕೃಷ್ಣನನ್ನು ಮೊರೆಹೋಗಲು ಹೇಳಿದರು. ಧರ್ಮಜನ ಮೊರೆಯನ್ನು ಆಲಿಸಿದ ಕೃಷ್ಣ ಅಲ್ಲಿಗೆ ಬಂದನು. ಅವನನ್ನು ಕಂಡು ಎಲ್ಲರಿಗೂ ಸಂತಸವಾಯಿತು.
ಆ ಫಲವನ್ನು ಮತ್ತೆ ಆ ವೃಕ್ಷದ ಬಳಿಗೆ ತಂದರು. ಧರ್ಮಜ ಹೇಳತೊಡಗಿದನು. ಪರಸತಿಯನ್ನು ತಾಯಿಯೆಂದೂ, ಪರಧನವು ಕಲ್ಲಿಗೆ ಸಮಾನವೆಂದೂ ಪರರ ನೋವು ತನ್ನನೋವೆಂದೂ ಭಾವಿಸುವೆನೆಂದು ಪ್ರಾರ್ಥಿಸಿದಾಗ ಆ ಫಲವು ಸ್ವಲ್ಪ ಮೇಲಕ್ಕೆ ಏರಿತು.
ನಂತರ ಭೀಮ ಬಂದು ಅಭಿಮಾನಕ್ಕಾಗಿ ಪ್ರಾಣ ಹೋದರೂ ಸರಿಯೆನ್ನಲು ಇನ್ನು ಸ್ವಲ್ಪ ಮೇಲೇರಿತು. ಅರ್ಜುನನು ಬಂದು ವಿಪ್ರರು ಭೋಜನದಿಂದ, ಹಸುಗಳು ಹೊಸ ಹುಲ್ಲಿನಿಂದ ತೃಪ್ತಿಯನ್ನು ಹೊಂದುವ ಬಗ್ಗೆ ಹೇಳಿದನು. ಹೀಗೆ ಸತ್ಯವೇ ತಾಯಿ, ಜ್ಞಾನವೇ ತಂದೆ ಮುಂತಾದ ನೀತಿವಚನಗಳು ಬಂದವು. ದ್ರೌಪದಿಯು ಸಹಾ ಬಂದು ಈ ಐದು ಜನ ಪತಿಯರೇ ಎನ್ನ ಸೌಭಾಗ್ಯ. ಇತರರನ್ನು ಕನಸು ಮನಸಿನಲ್ಲೂ ನೆನೆಯಲಾರೆನೆಂದಾಗ ಫಲವು ಪೂರ್ತಿ ಮೇಲಕ್ಕೇರಿತು. ಈ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ.
ಎಲ್ಲರೂ ವಾಪಸಾದ ಬಳಿಕ ಕಣ್ವರು ಕಣ್ದೆರೆಯಲು ಫಲವು ಅವರ ಬೊಗಸೆಗೆ ಬಿದ್ದಿತು. ಎಲ್ಲವನ್ನೂ ಬಲ್ಲ ಅವರು ನಕ್ಕು ಕೃಷ್ಣನ ಬಳಿಗೆ ಬಂದು ಎಲ್ಲರಿಗೂ ಆ ಫಲವನ್ನು ಹಂಚಿದರು.
ಕೃಷ್ಣನು ಎಲ್ಲರನ್ನೂ ಹರಸಿ ಮುಂದೆ ಉನ್ನತೋನ್ನತ ಅಭಿವೃದ್ಧಿ ಆಗಲೆಂದು ಹಾರೈಸಿ ತನ್ನ ನಗರಕ್ಕೆ ಮರಳಿದನು.
ಕಾಮೆಂಟ್ಗಳು