ಭಾರತಕಥಾಮಂಜರಿ38
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ - ಎರಡನೆಯ ಸಂಧಿ
ಸೂ. ಸಕಲ ಯದುಬಲ ಸಹಿತ ಭಕ್ತ
ಪ್ರಕರ ಪಾಲಕನೊಲವಿನಲಿಕಾ
ಮ್ಯಕ ಮಹಾಕಾನನಕೆ ಬಿಜಯಂಗೈದನಸುರಾರಿ
-----
ಅರಸ ಕೇಳೈ ದ್ವಾರಕಾಪುರ
ವರಕೆ ಬಂದುದು ವಾರ್ತೆ ಪೀತಾಂ
ಬರನ ಬಹಳಾಸ್ಥಾನದಲಿ ವರ್ತಿಸಿದುದಡಿಗಡಿಗೆ
ಧರೆಸಹಿತ ನಿಜವಸ್ತು ವಾಹನ
ಪರಮ ವಿಭವವ ಬಿಸುಟು ಭಾರಿಯ
ಪರಿಭವದಿ ನಟ್ಟಡವಿಯೊಕ್ಕರು ಪಾಂಡುಸುತರೆಂದು ೧
ಕೇಳಿ ತಲೆದೂಗಿದನು ಮೂಗಿನ
ಮೇಲುವೆರಳಿನ ಹೊತ್ತ ದುಗುಡದ
ತೂಳಿದುಬ್ಬೆಯ ನಟ್ಟನೋಟದ ನೆಗ್ಗಿದುತ್ಸವದ
ಹೂಳಿದೂಹೆಯ ಹಿಳಿದ ನೆಗಹಿನ
ಹೇಳಲರಿದೆನೆ ಹುದಿದ ಭಾವದ
ಲಾಲಿಸಿದನಸುರಾರಿ ದೂತವ್ರಜದ ಬಿನ್ನಪವ ೨
ಅಕಟ ಕಪಟದ್ಯೂತದಲಿ ನೃಪ
ಮುಕುರನುನ್ನತಿ ಮುರಿದುದೇ ಕೌ
ಳಿಕದಲೀ ಕೌರವರು ಕೊಂಡರೆ ಧರ್ಮಜನ ನೆಲನ
ಅಕುಟಿಲರಿಗೇಕಿದು ನಿರಾಬಾ
ಧಕರಿಗೇಕಿದು ಸಕಲ ಸುಜನ
ಪ್ರಕರವಂದ್ಯರಿಗೇಕೆನುತ್ತಸುರಾರಿ ಚಿಂತಿಸಿದ ೩
ಹಿರಿದು ಹರಿ ಚಿಂತಿಸಿದನೀ ವ್ಯಧಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪರೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ ೪
ಏನನೆಂಬೆನು ಜೀಯ ಕಡು ದು
ಮ್ಮಾನದಲಿ ಹೊರವಂಟು ಬಂದನು
ದಾನವಾಂತಕನೈದಿದವು ದಂಡಿಗೆಗಳರಸಿಯರ
ಆ ನಿಖಿಳ ನೃಪವರ್ಗ ಯಾದವ
ಸೇನೆ ಕವಿದುದು ಪಾಂಡುಪುತ್ರರ
ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ ೫
ಕೇಳಿದಾಗಳೆ ಬಂದರಾ ಪಾಂ
ಚಾಲ ಕೇಕಯ ದೃಷ್ಟಕೇತು ನೃ
ಪಾಲ ಕುಂತೀಭೋಜ ಸೃಂಜಯ ಸೋಮಕಾದಿಗಳು
ಮೇಲೆ ಮೇಲೀ ನಾಲ್ಕು ದಿನದಲಿ
ಮೂಲೆಯರಸುಗಳಿವರ ಕಂಡುಪ
ಲಾಲಿಸಲು ಬರುತಿರ್ದರಾ ಕಾಮ್ಯಕ ವನಾಂತರಕೆ ೬
ಇವರು ಬಂದರು ನಿಖಿಳ ಭೂಸುರ
ನಿವಹ ಸಹಿತಿದಿರಾಗಿ ವರ ಬಾಂ
ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಠರಿಗೆ
ಅವರಿಗವರವರುಚಿತ ಸತ್ಕಾ
ರವನು ಮಾಡಿ ಮುರಾರಿಯಂಘ್ರಿಯ
ನವಿರಳಾಶ್ರುಗಳಿಂದ ನಾದಿದರರಸ ಕೇಳೆಂದ ೭
ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊರಸಿದನು ಪೀತಾಂಬರದ ಸೆರಗಿನಲಿ
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ ೮
ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ದೇಶಪಾಶದಲಿ
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ ೯
ಹಿಂದೆ ಸೆಳೆಸೀರೆಯಲಕಟ ಗೋ
ವಿಂದ ರಕ್ಷಿಸನಾಥನಾಥ ಮು
ಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸಸುರಾರಿ
ಇಂದಿರಾಪತಿಯೇ ಯಶೋಧಾ
ನಂದನನೆ ಕಾರುಣ್ಯನಿಧಿ ಸಲ
ಹೆಂದರುಳುಹಿದ ದೈವ ನೀ ಮೈದೋರಿದೈ ತನಗೆ ೧೦
ಶ್ರುತಿಗಳಿಗೆ ಮೈದೋರೆ ಸುಪತಿ
ವ್ರತೆಯರಿಗೆ ಗೋಚರಿಸೆಯತಿ ಸಂ
ತತಿಯ ನಿರ್ಮಳಸಾರ ಸಮ್ಯಜ್ಞಾನ ದೀಧಿತಿಗೆ
ಮತಿಗೊಡದ ಮಹಿಮಾಂಬುನಿಧಿಯೆನ
ಗತಿಶಯವನೇ ಮಾಡಿ ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ೧೧
ಪೆಸರುಗೊಂಡರೆ ಹಿಂದೆ ಬಂದು
ಬ್ಬಸದ ಭಾರ ವ್ಯಸನವನು ಹಿಂ
ಗಿಸಿದೆ ಸಾಕ್ಷಾದ್ದೃಷ್ಟ ದರುಶನವೇನನಿತ್ತಪುದೊ
ಹೆಸರುಗೊಳಲರಿಯದೆ ಮನೋವಾ
ಗ್ವಿಸರ ಮರಳಿದ ತರ್ಕ ನಿಗಮ
ಪ್ರಸರಣದ ಪರದೈವ ನೀ ಮೈದೋರಿದೈ ತನಗೆ ೧೨
ಪತಿಗಳಿವರಂಜಿದರು ಧರ್ಮ
ಸ್ಥಿತಿಯನರಿದವರಳುಕಿದರು ತ
ತ್ಪಿತೃ ಪಿತಾಮಹ ಗುರುಗಳಡಗಿದರವನಿಯಲಿ ಬಗಿದು
ಗತಿವಿಹೀನೆಗೆ ಕೃಷ್ಣ ನೀನೇ
ಗತಿಯೆನುತ ಬಾಯ್ವಿಡಲು ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ೧೩
ದಾನ ಯಜ್ಞ ತಪೋ ವ್ರತಾನು
ಷ್ಠಾನ ನಿಷ್ಠರು ಕಾಣರಷ್ಟ ವಿ
ಧಾನ ಯೋಗದ ಸಿದ್ಧರರಿಯರು ನಿನ್ನ ಸುಳಿವುಗಳ
ಜ್ಞಾನ ಮಧ್ಯತ್ರಿಪುಟಿಯನುಸಂ
ಧಾನ ರಹಿತಜ್ಞಪ್ತಿರೂಪನು
ತಾನೆನಿಪ ಪರಬೊಮ್ಮ ನೀ ಮೈದೋರಿದೈ ತನಗೆ ೧೪
ಕಾಯಿದೈ ಪ್ರಹ್ಲಾದ ಮಾರ್ಕಂ
ಡೇಯ ವನಗಜವಂಬರೀಷನ
ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ
ಕಾಯಿದೈ ಗೋವಿಂದಯೆನೆ ತ
ನ್ನಾಯತಿಕೆಯಭಿಮಾನವನು ನೀ
ಕಾಯಿದೈ ಹರಿಯೆನುತ ಪದದಲಿ ಹೊರಳಿದಳು ತರಳೆ ೧೫
ಏಳು ತಾಯೆ ಸರೋಜಮುಖಿ ಪಾಂ
ಚಾಲೆ ನೊಂದೌ ತಂಗಿಯೆನುತ ಕೃ
ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ
ಮೇಲು ಮುಚ್ಚಳ ತೆರೆದ ತನುವಿನ
ಹೇಳಿಗೆಯ ಶೋಕಾಹಿಯಂತಿರೆ
ಲೋಲಲೋಚನೆಯಳಲು ಮಿಗೆ ಹೆಕ್ಕಳಿಸಿತಡಿಗಡಿಗೆ ೧೬
ಆ ಸಕಲ ಪರಿವಾರವಾ ಧರ
ಣೀಶರಾ ಮುನಿ ನಿಕರವಾ ಜನ
ವಾ ಸತೀ ನಿಕುರುಂಬವಾ ಗಜ ಘೋಟಕ ವ್ರಾತ
ಆ ಸರೋಜಾನನೆಯ ಬಹಳ
ಕ್ಲೇಶಗಳ ಕಂಡಕ್ಷಿಜಲವಾ
ರಾಸಿಯಲಿ ತೇಕಾಡುತಿರ್ದುದು ರಾಯ ಕೇಳೆಂದ ೧೭
ಮುಡಿಯ ಸಂವರಿಸಬಲೆ ಸೀರೆಯ
ನುಡು ನವಾಂಬರವಿದೆ ವಿರೋಧವ
ಬಿಡು ಸುಯೋಧನ ರಾಜಸಂತತಿಯುರಿದುದಿನ್ನೇನು
ಕೆಡಿಸಿಕೊಂಡರು ನಾಯ್ಗಳಿನ್ನದ
ನುಡಿದು ಫಲವೇನಕಟ ಕೈಕೊಂ
ಡಡವಿಯನುಭವ ಸವೆಯೆ ಸೈರಿಪುದೆಂದನಸುರಾರಿ ೧೮
ತುರುಬ ಕಟ್ಟುವ ಹದನ ನಿಮ್ಮಡಿ
ಯರಿಯದೆಂಬೆನೆ ಸಕಲ ಸಚರಾ
ಚರದ ಚೇತನರೂಪ ದೇಹಿ ನಿಕಾಯ ಕೃತಸಾಕ್ಷಿ
ತರಿದು ದುಶ್ಶಾಸನನ ವಕ್ಷದೊ
ಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ ೧೯
ಐಸಲೇ ದುರ್ಯೋಧನಾದಿಗ
ಳೇಸರವದಿರು ಭೀಮ ಪಾರ್ಥರ
ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ
ದೂಸಕನ ರಕ್ತದಲಿ ನಿನ್ನಯ
ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ ೨೦
ವರ ತಪಸ್ವಿನಿ ನೀನು ನಿನ್ನಯ
ಕೆರಳಿಚಿದರೇ ಕುನ್ನಿಗಳು ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ
ಕುರುಡನರಿಯದೆ ಹೋದರೆಯು ಕಂ
ಗುರುಡರಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ ೨೧
ಶಕುನಿ ಕಲಿಸಿದ ಕಪಟವೇ ಕೌ
ಳಿಕದ ಜೂಜಿದು ನಿಮ್ಮ ನೀ ಕಾ
ಮ್ಯಕಕೆ ತಂದುದು ಜೂಜಿನಲಿ ತಾನಿಲ್ಲಲೇಯೆನಲು
ಸಕಲಜೀವರ ಕರ್ಣ ಸಾಕ್ಷಿ
ಪ್ರಕರ ಚೈತನ್ಯ ಸ್ವರೂಪಾ
ತ್ಮಕನು ನೀನಲ್ಲಿಲ್ಲ ಹುಸಿಯಲ್ಲೆಂದಳಿಂದುಮುಖಿ ೨೨
ದೇವಿ ತಾನಿದನರಿದೊಡಾ ವಸು
ದೇವನಾಣೆ ಮಹಾದ್ಭುತವನದ
ನೇವೊಗಳ್ವೆನು ಯದುನೃಪಾಲ ವಿಪತ್ಪರಂಪರೆಯ
ನೀವು ಮಾಡಿದ ಯಜ್ಞ ಮುಖದ ವ
ಳಾವಳಿಯೊಳಾವಿರಲು ಮುತ್ತಿತು
ದೇವರಿಪುಬಲ ನಿಕರವಸ್ಮದ್ದ್ವಾರಕಾಪುರಿಯ ೨೩
ಲಗ್ಗೆಗಳುಕುವುದಲ್ಲಲೇ ಬಲು
ದುರ್ಗವದು ದುರ್ಭೇದವವರೊಳ
ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು
ಬಗ್ಗಿ ಕವಿವ ಕಠೋರ ದೈತ್ಯರ
ನುಗ್ಗುನುರಿ ಮಾಡಿದರು ಹರಣದ
ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳೆಂದ ೨೪
ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ದುದು
ಗೆಲವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವನ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ ೨೫
ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನವರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ ೨೬
ಅತ್ತಲಾ ಕೋಳಾಹಳದಲಿರ
ಲಿತ್ತಲಾದುದು ಜೂಜು ನಿಮ್ಮ ವಿ
ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ
ಇತ್ತಲಾವಿರೆ ಮೇಣು ದೋರಕಿ
ಯತ್ತಲಿರೆ ನೀವಡವಿವೊಕ್ಕರೆ
ಹೆತ್ತಳೋ ದೇವಕಿ ಮಗನನೆಂದನು ಮುರಧ್ವಂಸಿ ೨೭
ದ್ವಾರಕಾ ತತ್ಪುರದಲಿರುವತಿ
ದೂರದಲ್ಲಿರು ಮೇಣು ನಮ್ಮಯ
ಸಾರೆ ನಿಮ್ಮಡಿಯಿರಲಿ ನಿಮ್ಮೀ ಪಾಂಡುನಂದನರ
ಭಾರ ನಿಮ್ಮದು ಭಕ್ತ ಜನದಾ
ಧಾರ ನೆಮ್ಮಿದನಾಥರಾವತಿ
ಕಾರಣಿಕ ನೀನೆಂದು ಬಿದ್ದಳು ಮತ್ತೆ ಚರಣದಲಿ ೨೮
ಮಗನ ಕರೆದರೆ ಯಮನ ದೂತರ
ತಗುಳುವಂದು ಸಮೀಪವರ್ತಿಯೆ
ನಗಧರ ಶ್ರೀಕಾಂತ ಸಲಹೆನೆ ಮುನಿಕುಮಾರಕನ
ಉಗುಳಿಚಿದೆಲಾ ಮೃತ್ಯುವಿನ ತಾ
ಳಿಗೆಯೊಳಂದು ಸಮೀಪವರ್ತಿಯೆ
ಜಗದುದರ ನೀ ಜಾಣನಹೆಯೆಂದಳು ಸರೋಜಮುಖಿ ೨೯
ಆಯಿತೇಳೌ ತಂಗಿ ನೀ ಪಿರಿ
ದಾಯಸವನನುಭವಿಸಲುದಿಸಿದೆ
ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ
ವಾಯುತನುಜನ ಕೈಯಲೇ ನೀ
ನ್ನಾಯತಿಕೆಯಹುದಾ ಪ್ರತಿಜ್ಞೆಗೆ
ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ ೩೦
ಸಂತವಿಟ್ಟನು ಬೇರೆ ಬೇರೆ ಕೃ
ತಾಂತಸುತ ಭೀಮಾದಿಗಳ ಮುನಿ
ಸಂತತಿಯ ಮನ್ನಿಸಿದನವರವರುಚಿತ ವೃತ್ತಿಯಲಿ
ಎಂತು ಹದಿಮೂರಬುದವೀ ನೃಪ
ಸಂತತಿಗೆ ಸೌಹಾರ್ದವಕಟ ವ
ನಾಂತರದೊಳೆಂದಸುರರಿಪು ನುಡಿದನು ಯುಧಿಷ್ಠಿರಗೆ ೩೧
ಕಳುಹುವುದು ಸೌಭದ್ರೆಯನು ನಿಜ
ಲಲನೆಯರನವರವರ ತಾಯ್ವನೆ
ಗಳಿಗೆ ಬೀಳ್ಕೊಡು ನಿಮ್ಮ ಪಂಚದ್ರೌಪದೀಸುತರ
ಹಳುವ ದಾಟಲಿ ದ್ರುಪದ ನಂದನೆ
ಯಳಲ ಶಿಖಿಗಿಂಧನವಲೇ ಕುರು
ಕುಲದ ಕರಡದ ಬಣಬೆ ಕಾದುರುಹುವುದು ಕೇಳೆಂದ ೩೨
ಎಂದು ಕಳುಹಿ ಸುಭದ್ರೆಯನು ನರ
ನಂದನನ ಬೀಳ್ಕೊಡಿಸಿದನು ನೃಪ
ನಂದನರ ಕಳುಹಿಸಿದನಾ ಪಾಂಚಾಲ ನೃಪನೊಡನೆ
ಇಂದುವದನೆಯ ಸಂತವಿಟ್ಟು ಮು
ಕುಂದ ರಥವೇರಿದನು ಕುಂತೀ
ನಂದನರು ಕಳುಹುತ್ತ ಬಂದರು ಕಮಲಲೋಚನನ ೩೩
ಬೀಳುಗೊಂಡರು ಕೃಷ್ಣನನು ಪಾಂ
ಚಾಲಪತಿಯನು ಪಂಚ ಕೇಕಯ
ಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ
ಬೀಳುಕೊಟ್ಟರು ಧೃಷ್ಟಕೇತು ನೃ
ಪಾಲ ಮೊದಲಾದಖಿಳ ಧರಣೀ
ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ ೩೪
ಸಂತವಿಸಿ ಪಾಂಡವರನಾ ಮುನಿ
ಸಂತತಿಯ ಮನ್ನಿಸಿ ಮಹೀಭಾ
ರಾಂತರವ ನಿಶ್ಚಯಿಸಿ ಭಾರತ ಪಾರಿಶೇಷಕವ
ಅಂತಕಾಂತಕ ನಲವು ಮಿಗೆ ಜಗ
ದಂತರಂಗಸ್ಥಾಯಿ ಲಕ್ಷ್ಮೀ
ಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ ೩೫
ಸಂಕ್ಷಿಪ್ತ ಭಾವ
Lrphks Kolar
ಕಾಮ್ಯಕವನಕ್ಕೆ ಕೃಷ್ಣನಾಗಮನ. ಸಾಂತ್ವನ.
ಇತ್ತ ದ್ವಾರಕಾಪುರಕ್ಕೆ ಪಾಂಡವರು ವನವಾಸ ಕೈಗೊಂಡ ಸುದ್ದಿ ಮುಟ್ಟಿತು. ಭೂಭಾರವನಿಳುಹಲೆಂದೇ ಅವತರಿಸಿದ ಶ್ರೀಹರಿ ಏನೂ ತಿಳಿಯದವನಂತೆ ವ್ಯಥೆಪಟ್ಟನು. ಪಾಂಡವರನ್ನು ಕಾಣಲು ಕೂಡಲೇ ಹೊರಟನು. ಬೇರೆ ಬೇರೆ ರಾಜರುಗಳೂ ಹೊರಟರು.
ಶ್ರೀಕೃಷ್ಣನನ್ನು ಎದುರುಗೊಂಡ ಪಾಂಡವರು ತಮ್ಮ ದುಃಖವನ್ನು ತಾಳದಾದರು. ಅವರನ್ನು ಸಂತೈಸುತ್ತಿರುವಷ್ಟರಲ್ಲಿ ಪಾಂಚಾಲಿಯು ಬಂದು ಕೃಷ್ಣನ ಚರಣಗಳಲ್ಲಿ ಬಿದ್ದು ಉಮ್ಮಳಿಸಿ ಬಂದ ದುಃಖದಿಂದ ರೋಧಿಸಿದಳು.
ಎಂತೆಂತಹ ತಪಸ್ವಿಗಳಿಗೂ, ಮುನಿಗಳಿಗೂ, ದೇವತೆಗಳಿಗೂ ಸುಲಭವಾಗಿ ಸಿಗದ ನೀನು ಭಕ್ತರಿಗೆ ಒಲಿಯುವೆ. ನನ್ನ ಲಜ್ಜಾಸ್ಥಿತಿಯನ್ನು ಕಾಪಾಡಿದೆ, ನೀನೇ ಕರುಣಾಳು, ದಯಾಸಿಂಧು,ಪರದೈವ ನೀನು ನನಗೆ ಮೈದೋರಿ ರಕ್ಷಿಸಿದೆ. ಪತಿಗಳೈವರು ಹಿಂಜರಿದರು. ಗುರುಹಿರಿಯರು ಮೌನ ತಾಳಿದರು. ಆದರೆ ನೀನು ನನ್ನ ಮಾನ ಕಾಪಾಡಿದೆ. ದಾನ, ಜಪ, ಯಜ್ಞಗಳನ್ನು ಮಾಡುವ ನಿಗಮಗಳಿಗೂ ಸಿಗದ ನೀನು ನನ್ನ ಮೊರೆಯನ್ನು ಕೇಳಿ ಕರುಣೆ ತೋರಿಸಿದೆ ಕೃಷ್ಣಾ ಎಂದು ಅಡಿಗಡಿಗೆ ಅವನ ಚರಣಗಳಲ್ಲಿ ಹೊರಳಿ ಅತ್ತಳು.
ಅವಳನ್ನು ಸಮಾಧಾನಿಸಿದ ಕೃಷ್ಣ ಮುಡಿಯನ್ನು ಕಟ್ಟಲು ಹೇಳಿದಾಗ ದುಶ್ಶಾಸನನ ರಕ್ತದಲ್ಲಿ ತೋಯಿಸುವವರೆಗೂ ಕಟ್ಟುವುದಿಲ್ಲ ಎಂದಾಗ ನಿನ್ನ ಪ್ರತಿಜ್ಞೆಯ ಹೊಣೆ ತನ್ನದೆಂದು ಹೇಳಿ ಸಂತೈಸಿದನು.
ಕೃಷ್ಣನು ತನ್ನ ಪಟ್ಟಣದ ಮೇಲೆ ಶತ್ರುಗಳು ಧಾಳಿ ಮಾಡಿದುದನ್ನೂ, ಅದರಲ್ಲಿ ತಾನು ಮಗ್ನನಾಗಿದ್ದನ್ನೂ, ಸಾಲ್ವಪುರದರಸನನ್ನು ಸಂಹರಿಸಿದ್ದನ್ನೂ ವಿವರಿಸಿದನು. ಅದಕ್ಕೆ ದ್ರೌಪದಿಯು ನೀನು ಎಲ್ಲಿಯೇ ಇರು, ಏನನ್ನೇ ಮಾಡುತ್ತಿರು, ಈ ಐವರ ಭಾರ ನಿನ್ನದು ಎಂದಳು. ಹಿಂದೆ ಭಕ್ತರ ಸಮಯಕ್ಕೆ ಬಂದು ಒದಗಿದವ ನೀನು ಜಾಣನಲ್ಲವೇ ಎಂದು ಅವನನ್ನು ಕೊಂಡಾಡಿದಳು.
ಸೌಭದ್ರೆ ಮತ್ತು ಇತರ ಸ್ತ್ರೀಯರನ್ನೂ, ಮಕ್ಕಳನ್ನೂ ಅವರವರ ತವರುಗಳಿಗೆ ಕಳಿಸಿಕೊಟ್ಟು, ಪಾಂಡವರಿಗೆ ಮತ್ತು ಮುನಿಗಳಿಗೆ ಸಂತೈಸಿ ಮನದಲ್ಲಿ ಭೂಭಾರವನ್ನು ಇಳಿಸುವ ಸಂಕಲ್ಪ ಹೊಂದಿ ಶ್ರೀ ಕೃಷ್ಣನು ಮರಳಿದನು.
ಕಾಮೆಂಟ್ಗಳು