ಕಂತಿ
ಕನ್ನಡದ ಪ್ರಥಮ ಕವಯಿತ್ರಿ. ನಾಗಚಂದ್ರನ ಸಮಕಾಲೀನಳೆಂದೂ (1140) ದ್ವಾರಸಮುದ್ರದ ಹೊಯ್ಸಳ (1104-1140) ಬಲ್ಲಾಳರಾಯನ ಆಸ್ಥಾನದಲ್ಲಿದ್ದಳೆಂದೂ ಹೇಳಲಾಗಿದೆ. ಈಕೆಯ ಹೆಸರಿನಲ್ಲಿ ಕಂತಿ-ಹಂಪನ ಸಮಸ್ಯೆಗಳು ಎಂಬ ಪುಟ್ಟ ಕೃತಿಯೊಂದು ಸಿಕ್ಕಿದೆ. 16ನೆಯ ಶತಮಾನದ ಬಾಹುಬಲಿ ಎಂಬ ಕವಿ ಅಭಿನವವಾಗ್ದೇವಿಯಾದ ಕಂತಿಕೆಯನ್ನು ಹೊಗಳಿದ್ದಾನೆ, 19ನೆಯ ಶತಮಾನದ ದೇವಚಂದ್ರ ತನ್ನ ರಾಜಾವಳಿ ಕಥೆಯಲ್ಲಿ ಇವಳ ಬಗ್ಗೆ ಹೀಗೆ ಕಥೆ ಹೇಳಿದ್ದಾನೆ;
"ಮಂತ್ರಿಯಾದ ಧರ್ಮಚಂದ್ರನ ಮಗ ಉಪಾಧ್ಯಾಯನಾಗಿ ಪಾಠ ಹೇಳುತ್ತಿದ್ದು, ಮಕ್ಕಳ ಮತಿಪ್ರಕಾಶಕ್ಕಾಗಿ ಜ್ಯೋತಿಷ್ಮತೀತೈಲವನ್ನು ಮಾಡಿ ಕುಡಿಕೆಯಲ್ಲಿಟ್ಟುಕೊಂಡು ಮಂದಮತಿಗಳಿಗೆ ಅರೆಬಿಂದುವನ್ನು ಮಾತ್ರ ಸೇವಿಸಲು ಕೊಡುತ್ತಿದ್ದ ಕಂತಿ ಎಂಬ ಮನೆಗೆಲಸದವಳು ಅರಿಯದೆ ಆ ತೈಲವೆಲ್ಲವನ್ನೂ ಸೇವಿಸಲಾಗಿ ಉರಿ ಹತ್ತಿ ಬಾವಿಯಲ್ಲಿ ಬಿದ್ದಳು. ಅಲ್ಲಿ ಕಂಠಪ್ರಮಾಣದ ನೀರಿದ್ದುದರಿಂದ ಆಕೆ ಸಾಯದೆ ಉಳಿದಳಲ್ಲದೆ ವಿದ್ಯಾವಿಶಾರದೆಯಾಗಿ ಕಾವ್ಯಕಟ್ಟಿ ಹೇಳುತ್ತಿರಲಾಗಿ ರಾಜನ ಆಸ್ಥಾನದ ಅಭಿನವಪಂಪಕವಿ ಒಂದು ಸಾವಿರ ಪ್ರಶ್ನೆಗಳನ್ನು ಕೇಳಿದ. ಅವಕ್ಕೆಲ್ಲ ಅವಳು ಸಮಂಜಸವಾಗಿ ಉತ್ತರ ಕೊಡಲಾಗಿ, ಅವಳನ್ನು ರಾಜಸಭೆಗೆ ಕರೆಸಲಾಯಿತು. ಅಲ್ಲಿ ಅವಳು ವಿದ್ವತ್ಸಮೂಹದಲ್ಲಿ ಅಧಿಕ ಕವೀಶ್ವರಿಯಾದಳು."
ರಾಜಾಸ್ಥಾನದಲ್ಲಿ ಅಭಿನವಪಂಪನಿಗೂ ಕಂತಿಗೂ ಬಹಳ ಸಂವಾದಗಳೂ ಕವಿತ್ವ ಸ್ಪರ್ಧೆಗಳೂ ನಡೆಯುತ್ತಿದ್ದಂತೆ ತೋರುತ್ತದೆ. ಕಂತಿಯ ಬಾಯಲ್ಲಿ ಹೊಗಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ನಾಗಚಂದ್ರ ಒಮ್ಮೆ ಸತ್ತಂತೆ ನಟಿಸಿದನೆಂದೂ ಆಗ ಕಂತಿ ಬಂದು ಅವನನ್ನು ಕೊಂಡಾಡುತ್ತ ಪ್ರಲಾಪಿಸಿದಳೆಂದೂ ಅವನು ತನ್ನ ಪಂಥ ಗೆದ್ದಿತು ಎಂದು ಎದ್ದು ಕುಳಿತನೆಂದೂ ಕಥೆಯಿದೆ.
ಅಭಿನವಪಂಪ ನಾಗಚಂದ್ರನಿಗೂ ಕಂತಿಗೂ ನಡೆದ ಚರ್ಚೆಗಳು ಕಂತಿಹಂಪನ ಸಮಸ್ಯೆಗಳು ಎಂಬ ಹೆಸರಿನಿಂದ ಪ್ರಚಾರಗೊಂಡಿವೆ. ಉದಾಹರಣೆಗೆ "ದನಮಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್" ಎಂಬ ಒಗಟಿನಂತೆ ಹೇಳಿದ ವಾಕ್ಯವನ್ನು ಪದ್ಯದ ಸಾಲಿನಂತೆ ಪರಿವರ್ತಿಸಿ "ವನದೊಳಗೆ ಪುಟ್ಟಿ ಬೆಳೆಯುತೆ ತನಿಗಂಪಂ ಪತ್ತುದೆಸೆಗೆ ಬೀತ್ತಿರ್ಪಾ ಘನತರ ಸುರುಚಿರ ಸಚ್ಚಂದನಮಂ ಕಡಿ ಕಡಿದು ಬಸದಿಗೆೆಳೆಯುತ್ತಿರ್ದರ್" ಎಂಬ ಅರ್ಥ ಬರುವಂತೆ ಕಂತಿಯು ಪದ್ಯಕಟ್ಟಿ ಹೇಳಿದಳಂತೆ.
ಕಾಮೆಂಟ್ಗಳು