ಸಿ.ವಿ. ವಿಶ್ವೇಶ್ವರ
ಸಿ. ವಿ. ವಿಶ್ವೇಶ್ವರ
ಪ್ರೊ. ಸಿ. ವಿ. ವಿಶ್ವೇಶ್ವರ ಅವರು ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನಿ. ಇವರು ಭಾರತೀಯ ವಿಜ್ಞಾನ ಬಳಗದಲ್ಲಿ ವಿಶು ಎಂದೇ ಪ್ರಸಿದ್ಧರು.
ವಿಶ್ವೇಶ್ವರರವರು ಮಾರ್ಚ್ 6, 1938 ರಲ್ಲಿ ಬೆಂಗಳೂರಿನಲ್ಲಿ ಸಿ.ಕೆ.ವೆಂಕಟರಾಮಯ್ಯ ಮತ್ತು ಕೆ. ವೆಂಕಟಸುಬ್ಬಮ್ಮ ದಂಪತಿಗಳಿಗೆ ಜನಿಸಿದರು. ವಿಶ್ವೇಶ್ವರ ಅವರ ತಂದೆ ಸಿ.ಕೆ. ವೆಂಕಟರಾಮಯ್ಯನವರು ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾಷಣವನ್ನು ಅನುವಾದಿಸಿ ಓದುತ್ತಿದ್ದರಿಂದ ಜನ ಅವರನ್ನು ಪ್ರೀತಿಯಿಂದ ‘ಕನ್ನಡದ ದಿವಾನ’ರು ಎಂದು ಕರೆಯುತ್ತಿದ್ದರು.
ವಿಶ್ವೇಶ್ವರ ಅವರ ಪತ್ನಿ ಪ್ರೊ. ಸರಸ್ವತಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರೆ, ಅವರ ಪುತ್ರಿಯರಾದ ಸ್ಮಿತಾ ಮತ್ತು ನಮಿತಾ ಸಹ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಗುರುತ್ವಾಕರ್ಷಣ ಅಲೆಗಳ ಅನ್ವೇಷಣೆಯಲ್ಲಿ ಪ್ರೊ.ಸಿ.ವಿ. ವಿಶ್ವೇಶ್ವರ ಅವರ ಕೊಡುಗೆ ಮಹತ್ವದ್ದು. ಕಪ್ಪುರಂಧ್ರದ ರಚನೆಯ ಬಗ್ಗೆ ಮೊದಲ ಬಾರಿ ಸಂಶೋಧನೆ ಕೈಗೊಂಡ ವಿಜ್ಞಾನಿಗಳಲ್ಲಿ ವಿಶ್ವೇಶ್ವರ ಅವರು ಪ್ರಮುಖರು. ಕಪ್ಪು ರಂಧ್ರಗಳ ಬಗ್ಗೆ ಅವರು 1968ರಲ್ಲಿ ಮೊದಲ ಸಂಶೋಧನೆ ಮಾಡಿದ್ದರು. ಕಪ್ಪು ರಂಧ್ರಗಳ ರಚನೆ, ವಿನ್ಯಾಸದ ಮೇಲೆ ಅವರು ಪ್ರಬಂಧ ಬರೆದಿದ್ದರು. ಕಪ್ಪು ರಂಧ್ರಗಳ ಒಳಗೆ ಬೆಳಕು ಸೇರಿ ಎಲ್ಲ ಪದಾರ್ಥಗಳು ಹೋಗಬಹುದು. ಆದರೆ, ಹಿಂದಕ್ಕೆ ಬರಲು ಸಾಧ್ಯವಿಲ್ಲ ಎಂದು ಬೆಳಕು ಚೆಲ್ಲಿದ್ದರು. ಕಪ್ಪು ರಂಧ್ರದ ಸ್ಥಿರತೆ ಬಗ್ಗೆ ಅವರು 1970ರಲ್ಲಿ ಅವರು ಎರಡನೇ ಪ್ರಬಂಧ ಬರೆದಿದ್ದರು.
ಕಪ್ಪು ರಂಧ್ರಗಳನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ಮೂರನೇ ಪ್ರಬಂಧವನ್ನು ಬರೆದಿದ್ದರು.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ ವಿಶ್ವೇಶ್ವರ ಅವರು, ತಮ್ಮ ಮೇಷ್ಟ್ರು ಎಚ್.ನರಸಿಂಹಯ್ಯ ಅವರೊಂದಿಗೆ ಕೆಲಕಾಲ ಸಹೋದ್ಯೋಗಿಯೂ ಆಗಿದ್ದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅವರು, ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪೂರೈಸಿದ್ದರು.
ಪಿಎಚ್.ಡಿ ಸಂಶೋಧನೆ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ಚಾರ್ಲ್ಸ್ ಮಿಸ್ನರ್ ಅವರ ಸೂಚನೆಯಂತೆ ಕಪ್ಪು ರಂಧ್ರಗಳ ಕುರಿತು ಸಂಶೋಧನೆ ನಡೆಸಿದ್ದರು. ನಮಗೆ ದೊರಕುವ, ಕಪ್ಪು ರಂಧ್ರದ ಕಡೆಯಿಂದ ಬರುತ್ತಿರುವ ಅಲೆಗಳು ಸ್ಥಿರ ಕಂಪನಾಂಕವನ್ನು ಹೊಂದಿದ್ದು, ಅವುಗಳ ಪಾರ (ಆ್ಯಂಪ್ಲಿಟ್ಯೂಡ್) ಮಾತ್ರ ಕಡಿಮೆ ಆಗುತ್ತಾ ಹೋಗುತ್ತದೆ (ಕ್ವಾಸಿ ನಾರ್ಮಲ್ ಮೋಡ್ಸ್) ಎಂಬುದನ್ನು ನಿರೂಪಿಸಿದ್ದರು.
ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಹಲವು ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಅನುಭವವನ್ನು ಧಾರೆ ಎರೆದಿದ್ದರು. ಜವಾಹರಲಾಲ್ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 1989ರಲ್ಲಿ ತಾರಾಲಯ ಸ್ಥಾಪನೆಯಾಯಿತು. ಆಗ ದೇಶದ ನಾನಾ ಭಾಗಗಳಲ್ಲಿ ಸಾಕಷ್ಟು ತಾರಾಲಯಗಳಿದ್ದವು. ಅವುಗಳಿಗಿಂತ ವಿಭಿನ್ನವೂ, ವಿಶಿಷ್ಟವೂ ಆದ ತಾರಾಲಯವನ್ನು ರೂಪಿಸುವ ಹೊಣೆ ವಿಶ್ವೇಶ್ವರ ಅವರ ಹೆಗಲೇರಿತ್ತು. ಅದನ್ನು ಸುಸಜ್ಜಿತ ವಿಜ್ಞಾನ ಕೇಂದ್ರವಾಗಿ ಮಾರ್ಪಡಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಶಾಸ್ತ್ರೀಯ ಸಂಗೀತದ ಬಗೆಗೂ ಅವರಿಗೆ ಆಳವಾದ ಜ್ಞಾನವಿತ್ತು.
‘ಐನ್ಸ್ಟೈನ್ಸ್ ಎನಿಗ್ಮಾ’ (ಬ್ಲ್ಯಾಕ್ ಹೋಲ್ಸ್ ಇನ್ ಮೈ ಬಬಲ್ ಬಾತ್) ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದರು. ಕನ್ನಡದಲ್ಲೂ ಅವರು ವಿಜ್ಞಾನ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದರು.
ಸಿ. ವಿ. ವಿಶ್ವೇಶ್ವರ ಅವರು 2017ರ ಜನವರಿ 16ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.
Great Scientist and Blackhole Physicist 🌷🙏🌷
ಕಾಮೆಂಟ್ಗಳು