ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಡಿನಾಡ ಗಾಂಧಿ

ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್
-ಪ್ರಶಾಂತೋ ಬ್ಯಾನರ್ಜಿ

ಗಡಿನಾಡಗಾಂಧಿ ಎಂದೇ ಹೆಸರಾದ ಖಾನ್  ಅಬ್ದುಲ್  ಗಫಾರ್  ಖಾನ್ ಹುಟ್ಟಿದ್ದು ಜೂನ್ 3, 1890ರಲ್ಲಿ; ಅಂದು ನಾರ್ತ್‌ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್ (ಎನ್‌ಡಬ್ಲುಇಪಿ) ಎಂದು ಕರೆಯಲಾಗುತ್ತಿದ್ದ ಹಾಗೂ ಇಂದು ಪಾಕಿಸ್ತಾನವಾಗಿರುವ ಪ್ರಾಂತ್ಯದ ಹಸ್ಟ್‌ನಗರ್ ಎಂಬಲ್ಲಿ. ಬ್ರಿಟಿಷ್ ಸೈನ್ಯದ ಜಾರ್ಜ್ ಮೊಲೆಸ್ ವರ್ತ್ ಈ ಪ್ರಾಂತ್ಯದ ಪ್ರತಿ ಕಲ್ಲುಗಳು ರಕ್ತದಲ್ಲಿ ಮಿಂದೆದ್ದಿವೆ ಎಂದು ವರ್ಣಿಸಿದ್ದ. ಆತನ ನಿಧನದ ದಿನ ಟಿವಿ ಪರದೆಯಲ್ಲಿ ಕಾಣಿಸಿಕೊಂಡ ಕಪ್ಪು ಬಿಳುಪು ಛಾಯೆಯ ಎತ್ತರದ, ನೀಳಕಾಯದ ಹೊಳೆಯುವ ಕಣ್ಣುಗಳ ಆ ಮಹಾನುಭಾವನ ಚಿತ್ರ ಇನ್ನೂ ನನ್ನ ಸ್ಮೃತಿಪಟಲದಲ್ಲಿದೆ. ಆತನೊಬ್ಬ ಅನಂತ ಶಾಂತಿಪ್ರಿಯ ಎಂದು ಆ ಸಂದರ್ಭದಲ್ಲಿ ಯಾರೋ ಹೇಳಿದ್ದರು. ಆದರೆ ಆತನೊಬ್ಬ ಅನಂತ ಧೈರ್ಯಶಾಲಿ ಕೂಡ ಎಂಬುದು ಈಗ ನನಗೆ ಮನವರಿಕೆಯಾಗುತ್ತಿದೆ.

ಈ ವಾಯುವ್ಯ ಗಡಿ ಪ್ರಾಂತ್ಯವನ್ನು ಅಫ್ಘಾನಿಸ್ತಾನದೊಂದಿಗೆ ಜೋಡಿಸುವ ಬೆಟ್ಟಗುಡ್ಡಗಳ ಕಡಿದಾದ ಖೈಬರ್ ಪ್ರದೇಶ ಕೆಚ್ಚಿನ ಪಠಾಣರ ತವರು. ಈ ಕೆಚ್ಚೆದೆಯ ಸೈನಿಕರು ಯಾವಾಗಲೂ ಬ್ರಿಟಿಷರ ವಿರುದ್ಧವೋ, ರಶಿಯನ್ನರ ವಿರುದ್ಧವೋ ಅಥವಾ ಅಮೆರಿಕನ್ನರ ವಿರುದ್ಧವೋ ಹೋರಾಡುತ್ತಲೇ ಇರುತ್ತಾರೆ. ಅದರಿಂದ ಬಿಡುವು ಸಿಕ್ಕಿತೆಂದರೆ ತಮ್ಮೊಳಗೇ ಬುಡಕಟ್ಟು ಸಂಘರ್ಷದಲ್ಲಿ ಮುಳುಗಿರುತ್ತಾರೆ. ಇಲ್ಲಿ ರಕ್ತವೇ ದುಡ್ಡು, ಗೌರವ, ಪ್ರಶಸ್ತಿ. ಆದರೆ ಖಾನ್ ಅಬ್ದುಲ್ ಗಫಾರ್ ಖಾನ್ ಅಥವಾ ಬಾದಶಹ ಖಾನ್ (ನಂತರದಲ್ಲಿ ಅವರನ್ನು ಹಾಗೆ ಕರೆಯಲಾರಂಭಿಸಿದರು) ತನ್ನ ಸುತ್ತಮುತ್ತಲ ಜನರಿಗಿಂತ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದ ವ್ಯಕ್ತಿ.

ಬಾದಶಹ ಖಾನರು ಪಠಾಣರ ಕಡು ದಾರ್ಷ್ಟ್ಯದ ಕೆಳಗೆ, ಅವರ ಆಕ್ರಮಣಕಾರಿ ರಕ್ತದಾಹಿತನದ ಒಳಗೆ ಮೌಢ್ಯದಿಂದ ಕುರುಡರಾಗಿರುವ ಹಾಗೂ ಹಿಂಸೆಯಿಂದ ಜರ್ಝರಿತವಾಗಿರುವ ಮಾನವೀಯ ಹಾಗೂ ಧೈರ್ಯಶಾಲಿ ಜೀವಗಳನ್ನು ಕಂಡರು. 20ರ ಹರೆಯದಲ್ಲೇ ತನ್ನ ಸಮುದಾಯದ ಸ್ತ್ರೀ-ಪುರುಷರಿಗಾಗಿ ಶಾಲೆಗಳನ್ನು ಕಟ್ಟುವ ಮೂಲಕ ಸಮಾಜದ ಉನ್ನತಿಗಾಗಿನ ಅವರ ಪರಿಶ್ರಮ ಪ್ರಾರಂಭವಾಗಿತ್ತು. ಅಲ್ಲಿಂದ ಪ್ರಾರಂಭವಾದ ಅವರ ಸಮಾಜ ಸೇವಾ ಧೋರಣೆ ಮುಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಭಾರತವನ್ನು ಮುಕ್ತಗೊಳಸಬೇಕೆಂಬ ಅದಮ್ಯ ಆಕಾಂಕ್ಷೆಯಾಗಿ ಬೆಳೆಯಿತು. ಖಾನ್ ಒಬ್ಬ ಧರ್ಮಬೀರು. ತಮ್ಮದೇ ಆದ ಧಾರ್ಮಿಕ ನೆಲೆಯಲ್ಲಿ ಅವರು ಅಹಿಂಸೆಯೆನ್ನುವುದು ಪ್ರವಾದಿಯ ಆಯುಧ ಎಂಬುದನ್ನು ಮನಗಂಡರು. ತನ್ನ 1,00,000 ಖುದಾಯಿ ಕಿದ್ಮತ್ಗಾರ್‌ಗಳನ್ನು (ದೇವರ ಸೇವಕರು) ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಶಾಂತಿಯುತ ಚಳುವಳಿಗೆ ಧುಮುಕುವುದರೊಂದಿಗೆ ಅವರ ಆಂದೋಲನ ಪ್ರಾರಂಭವಾಗಿಯಿತು. ಅವರ ಜೊತೆಗಿದ್ದವರೆಲ್ಲಾ ದೇಶಕ್ಕೆ ನಿಷ್ಟರಾಗಿದ್ದರು; ಅಹಿಂಸೆಯ ಆದರ್ಶಕ್ಕೆ ಕಟಿಬದ್ಧರಾಗಿದ್ದರು. ಈ ಅಹಿಂಸಾ ಹೋರಾಟಗಾರ ಬ್ರಿಟಿಷರಿಗೆ ವಿಧ್ವಂಸಕನಾಗಿ ಕಂಡುಬಂದಿದ್ದರಿಂದ ಆತನ ಮೇಲೆ ಪೈಶಾಚಿಕ ದಾಳಿ ಮಾಡಲಾರಂಭಿಸಿದರು. ಉದಾಹರಣೆಗೆ, 1930ರಲ್ಲಿ ಪೇಶಾವರದಲ್ಲಿ ಅಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡವರ ಮೇಲೆ ಬ್ರಿಟಿಷ್ ಸೈನಿಕರು ಹಾರಿಸಿದ ಗುಂಡಿಗೆ 300ಕ್ಕಿಂತಲೂ ಹೆಚ್ಚು ದೇವರ ಸೇವಕರು ಬಲಿಯಾದರು.

ಇವತ್ತು ಯಾರನ್ನು ವಿಧ್ವಂಸಕರು ಹಾಗೂ ಭಯೋತ್ಪಾದಕರು ಎಂದು ದೂಷಿಸಲಾಗುತ್ತದೆಯೋ ಅದೇ ಪಠಾಣರು ಅಂದು ಯಾವುದೇ ಪ್ರತಿರೋಧವೊಡ್ಡದೆ ಸುರಿಯುತ್ತಿದ್ದ ಗುಂಡುಗಳಿಗೆ ಎದೆಯೊಡ್ಡಿ ಸಾಲು ಸಾಲಾಗಿ ನೆಲಕ್ಕುರುಳಿದ್ದರು. (ಅವರ ಮೇಲೆ ಗುಂಡಿನ ಮಳೆಗರೆಯುವಂತೆ ಬ್ರಿಟಿಷ್ ಸೇನಾಧಿಕಾರಿಗಳು ಆದೇಶ ಕೊಟ್ಟರೂ ಘಡ್‌ವಾಲಿ ರೆಜಿಮೆಂಟ್‌ನ ಸೈನಿಕರು ಈ ನಿಶ್ಯಸ್ತ್ರಧಾರಿ ದೇವರ ಸೇವಕರ ಮೇಲೆ ಗುಂಡುಹಾರಿಸುವುದಿಲ್ಲ ಎಂದು ಬಂದೂಕು ಕೆಳಗಿಟ್ಟಿದ್ದರು. ಇಲ್ಲದಿದ್ದಲ್ಲಿ ಇನ್ನಷ್ಟು ನಿಶ್ಯಸ್ತ್ರಧಾರಿ ಪಠಾಣರ ಹೆಣಗಳು ನೆಲಕ್ಕುರುಳುತ್ತಿದ್ದವು) ಆ ಗಡಿನಾಡಲ್ಲಿ ಚಿತ್ರಹಿಂಸೆ, ಹೊಡೆತ, ವೇದನೆಗಳ ಮೂಲಕವೇ ಈ ಮಹಾನುಭಾವ, ಅವನ ಸಿದ್ಧಾಂತ, ಅವನ ಬೆನ್ನಿಗಿದ್ದ ಲಕ್ಷಾಂತರ ಬೆಂಬಲಿಗರು ಸೇರಿ ಕಟ್ಟಿದ್ದ ಅಹಿಸ್ಮಾತ್ಮಕ ಆಂದೋಲನವು ಇತ್ತ ಭರತಖಂಡದ ಇನ್ನೊಂದು ಮೂಲೆಯಲ್ಲಿ ಮೋಹನದಾಸ ಕರಮಚಂದ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ಅಂತಹುದೇ ಚಳವಳಿಯೊಂದರ ಪ್ರತಿಬಂಬವಾಗಿತ್ತು. ಅಹಿಂಸಾ ಪಥವು ಬಾದ್‌ಶಹ ಖಾನ್‌ಗೆ ಸಹಜ ಆಯ್ಕೆಯಾಗಿತ್ತು. ನನ್ನಂತಹ ಒಬ್ಬ ಮುಸ್ಲಿಂ ಅಹಿಂಸೆಯ ತತ್ವವನ್ನು ಅಪ್ಪಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ ಎಂದಿದ್ದರು ಖಾನ್; ಏಕೆಂದರೆ ಇದು ೧೩೦೦ ವರ್ಷಗಳಷ್ಟು ಹಿಂದೆಯೇ ಪ್ರವಾದಿಗಳೇ ಹಾಕಿಕೊಟ್ಟ ಪಥ ಎಂದವರು ನಂಬಿದ್ದರು.

ಖಾನ್ ಅವರು ಅಖಂಡ, ಜಾತ್ಯಾತೀತ ಭಾರತದ ಕನಸು ಕಂಡಿದ್ದರು; ದೇಶ ವಿಭಜನೆಯ ವಿರುದ್ಧ ವ್ಯಾಪಕವಾಗಿ ಧ್ವನಿಯೆತ್ತಿದ್ದರು. ತನ್ನದೇ ಕಾಂಗ್ರೆಸ್ ಪಕ್ಷ ದೇಶ ವಿಭಜನೆಯ ಪ್ರಸ್ತಾವವನ್ನು ಅಂಗೀಕರಿಸಿದಾಗ ಅವರಿಗೆ ದ್ರೋಹಕ್ಕೊಳಗಾದ ಭಾವವುಂಟಾಗಿತ್ತು. ಆದರೂ ಗಾಂಧಿಯವರೊಂದಿಗೆ ಅವರ ಸಖ್ಯ ಮುಂದುವರಿದಿತ್ತು. ಪಾಕಿಸ್ತಾನದ ಹೊಸ ಆಡಳಿತಾಂಗವು ಇವರ ಆಲೋಚನಾ ದೃಷ್ಟಿಯಿಂದ ಭೀತಗೊಂಡು ಇವರ ಚಳವಳಿಯನ್ನು ನಿರ್ದಯವಾಗಿ ದಮನಿಸಿತು. ರಾಷ್ಟ್ರೀಯ ನಾಯಕನೆನಿಸಿಕೊಳ್ಳಬೇಕಿದ್ದ ಖಾನರು ತಮ್ಮ ಬದುಕಿನ ಉಳಿದ ಬಹುತೇಕ ವರ್ಷಗಳನ್ನು ಗೃಹಬಂಧನದಲ್ಲೇ ಕಳೆಯಬೇಕಾಯಿತು. ಯಾರನ್ನು ನಂಬಿದರೋ ಅವರಿಂದಲೇ ತ್ಯಜಿಸಲ್ಪಟ್ಟು, ಯಾರಿಗೆ ದುಃಸ್ವಪ್ನವಾಗಿ ಕಾಡಿದರೋ ಅವರಿಂದ ಚಿತ್ರಹಿಂಸೆಗೊಳಪಟ್ಟು ಕೊನೆಗೆ ಜಲಾಲಬಾದ್‌ನ ಸಮಾಧಿಯಲ್ಲಿ ಚಿರನಿದ್ರೆಗೆ ಜಾರಿದರು. ಅವರನ್ನೀಗ ಮರೆತುಬಿಡಲಾಗಿದೆ; ಅವರ ಆದರ್ಶಗಳನ್ನೀಗ ಗಾಳಿಗೆ ತೂರಲಾಗಿದೆ. ನೊಬೆಲ್ ಸಮಿತಿಯು ಇಸ್ಲಾಂನ ಈ ಶಾಂತಿಪ್ರಿಯ ಸೈನಿಕನ ಕೊಡುಗೆಯನ್ನು ಸ್ಮರಿಸುವ ಮನಸ್ಸು ಮಾಡಿದ್ದಿದ್ದಲ್ಲಿ, ಈ ಅಂತರರಾಷ್ಟ್ರೀಯ ಗೌರವದಿಂದಲಾದರೂ ಆತನ ಆದರ್ಶಗಳು ಅಜರಾಮರಗೊಳ್ಳುತ್ತಿದ್ದವು. ಅದು ದಕ್ಷಿಣ ಏಷಿಯಾದ ಅತ್ಯಂತ ಪ್ರಕ್ಷುಬ್ಧ ಪ್ರದೇಶವೊಂದರ ಚಹರೆಯನ್ನೇ ಬದಲಿಸುತ್ತಿತ್ತೋ ಏನೋ? ಆದರೆ ಯುದ್ಧಪಿಪಾಸು ಅಮೆರಿಕದ ಹೆನ್ರಿ ಕಿಸ್ಸಿಂಜರ್‌ರಂತವರಿಗೆ ನೊಬೆಲ್ ಶಾಂತಿ ಪಾರಿತೋಷಕವನ್ನು ನೀಡಿ ಮಹಾತ್ಮಾ ಗಾಂಧಿಯನ್ನು ಮರೆತು ಘನ ಕಾರ್ಯ ಮೆರೆದ ನೊಬೆಲ್ ಸಮಿತಿಯಿಂದ ಇದನ್ನೆಲ್ಲ ಹೇಗೆ ನಿರೀಕ್ಷಿಸುವುದು?

ಕೃಪೆ: http://www.thesundayindian.com

Tag: Frontier Gandhi, Gadinada Gandhi, Khan Abdul Ghaffar Khan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ