ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೊಸಕೋಟೆ ಕೃಷ್ಣಶಾಸ್ತ್ರಿ



 ಹೊಸಕೋಟೆ ಕೃಷ್ಣಶಾಸ್ತ್ರಿ


ಹೊಸಕೋಟೆ ಕೃಷ್ಣಶಾಸ್ತ್ರಿಗಳು ಇತಿಹಾಸ ತಜ್ಞರಾಗಿ, ಭಾರತೀಯ ಶಾಸನ ಇಲಾಖೆಯ ಮುಖ್ಯಸ್ಥರಾಗಿ ಮತ್ತು  ಸಂಶೋಧಕರಾಗಿ ಮಹತ್ವದ ವ್ಯಕ್ತಿಗಳಲ್ಲೊಬ್ಬರೆನಿಸಿದ್ದಾರೆ.

ಹೊಸಕೋಟೆ ಕೃಷ್ಣಶಾಸ್ತ್ರಿಗಳು 1870 ವರ್ಷದಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು.  ಅವರ ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು.  ಬಿ. ಎ. ಪದವಿ ಗಳಿಸಿದ ಶಾಸ್ತ್ರಿಗಳು  ಭಾರತ ಸರ್ಕಾರದ ಶಾಸನ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು.  

1908ರಲ್ಲಿ ಕೃಷ್ಣಶಾಸ್ತ್ರಿಗಳು ಶಾಸನ ಇಲಾಖೆಯ ಸಹಾಯಕ ಅಧೀಕ್ಷಕರಾದರು.  1920ರ ವರ್ಷದಲ್ಲಿ ಕೃಷ್ಣಶಾಸ್ತ್ರಿಗಳು ಭಾರತ ಸರ್ಕಾರದ ಮುಖ್ಯ ಶಾಸನತಜ್ಞರಾಗಿ ನೇಮಕಗೊಂಡರು.  ತಮ್ಮ ಸೇವಾ ಕಾಲದಲ್ಲಿ 35 ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿಮಿತ್ತ ದೇಶ ವಿದೇಶಗಳಲ್ಲಿ ಸಂಚರಿಸಿದ ಕೃಷ್ಣಶಾಸ್ತ್ರಿಗಳು ಅಪಾರ ಅನುಭವಗಳಿಸಿಕೊಂಡಿದ್ದರು.  

ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಶಾಸನಗಳನ್ನು ಕೂಲಂಕಷವಾಗಿ ಸಂಶೋಧಿಸಿದ್ದ ಶಾಸ್ತ್ರಿಗಳು ಹಲವಾರು ನಿಟ್ಟಿನಲ್ಲಿ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದರು.  ಮಹಾರಾಷ್ಟ್ರದಲ್ಲಿನ ಚಾಲುಕ್ಯ, ರಾಷ್ಟ್ರಕೂಟರ ಶಾಸನಗಳು ಮರಾಠಿಯಲ್ಲಿಲ್ಲದೆ, ಕನ್ನಡದಲ್ಲಿವೆ ಎಂಬುದನ್ನು ಅವರು ತೋರಿಸಿಕೊಟ್ಟರು.  ದಕ್ಷಿಣಭಾರತದ ಶಾಸನಗಳಿಗೆ ಸಂಬಂಧಿಸಿದಂತೆ ಶಾಸ್ತ್ರಿಗಳು ಸಂಪಾದಿಸಿ, ಶಾಸನ ಇಲಾಖೆಯ ಮೂಲಕ ಪ್ರಕಟಿಸಿರುವ ವಾರ್ಷಿಕ ವರದಿಗಳು ಇತಿಹಾಸಕಾರರಿಗೆ ಉತ್ತಮ ಆಕರಗಳಾಗಿವೆ.

ಹೊಸಕೋಟೆ ಕೃಷ್ಣಶಾಸ್ತ್ರಿಗಳು ರಚಿಸಿರುವ ಪ್ರಮುಖ ಕೃತಿಗಳೆಂದರೆ: ದಕ್ಷಿಣ ಭಾರತದ ಪ್ರತಿಮೆಗಳು (1916), ದಕ್ಷಿಣ ಭಾರತದ ಶಾಸನ (ಸಂಪುಟ ೪, ೫),  ಎಪಿಗ್ರಾಫಿಯಾ ಇಂಡಿಯಾದ ಹಲವಾರು ಸಂಚಿಕೆಗಳು.

ಕರ್ನಾಟಕ ಏಕೀಕರಣದ ವಿಚಾರದಲ್ಲಿ ಅವರು ತಮ್ಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಚೆಲ್ಲಿದ ಬೆಳಕು ಮಹತ್ವಪೂರ್ಣದ್ದಾಗಿವೆ.  “ಮೈಸೂರು ದೇಶವಂತೂ ಈ ಕರ್ನಾಟಕಕ್ಕೆ ಮಧ್ಯ ರಾಷ್ಟ್ರವಾಗಿರುವುದು ಸರಿಯಷ್ಟೇ.  ಮದರಾಸು ಅಧಿಪತ್ಯದಲ್ಲಿ ದಕ್ಷಿಣ ಕನ್ನಡ, ಸೇಲಂ, ಕೊಯಮತ್ತೂರು, ಚಿತ್ತೂರು, ಅನಂತಪುರ ಜಿಲ್ಲೆಗಳ ಕೆಲವು ಭಾಗಗಳು, ಬಳ್ಳಾರಿ ಇವೆಲ್ಲ ಪೂರ್ವದಲ್ಲಿ ಕನ್ನಡ ದೇಶವೇ ಎನ್ನಬಹುದು.  ಹಾಗೆಯೇ ಬೊಂಬಾಯಿ ಅಧಿಪತ್ಯದಲ್ಲಿ ಧಾರವಾಡ, ಬೆಳಗಾಂ, ಕಾರವಾರ, ವಿಜಾಪುರ, ರತ್ನಗಿರಿ ಜಿಲ್ಲೆಗಳೂ, ಹೈದರಾಬಾದಿನಲ್ಲಿ ರಾಯಚೂರು, ಸೋಲಾಪುರ, ಉಸ್ಮನಾಬಾದ್ ಜಿಲ್ಲೆಗಳೂ, ಕೊಡಗು ಇವನ್ನೆಲ್ಲಾ ಭಾಷಾವ್ಯಾಪ್ತಿಯಿಂದ ಕರ್ನಾಟಕ ರಾಜ್ಯದಲ್ಲಿಯೇ ಸೇರಿಸಬೇಕು.”  ಎಂದು 1924ರ ವರ್ಷದಲ್ಲಿಯೇ ಅವರು ಸ್ಪಷ್ಟವಾಗಿ ನುಡಿದದ್ದು ಮುಂದೆ ರೂಪುಗೊಂಡ ಕರ್ನಾಟಕ ರಾಜ್ಯದ ಬಹುತೇಕ  ಸ್ವರೂಪವನ್ನೇ ನೀಡಿದಂತಿದೆ.  

ಕೃಷ್ಣಶಾಸ್ತ್ರಿಗಳ ಅಪಾರ ಹಾಗೂ ಅಮೂಲ್ಯ ಸೇವೆಯನ್ನು ಪರಿಗಣಿಸಿದ ಅಂದಿನ ಬ್ರಿಟಿಷ್ ಸರ್ಕಾರವು ಅವರಿಗೆ ‘ರಾವ್ ಸಾಹೇಬ್’ ಮತ್ತು ‘ರಾವ್ ಬಹದ್ದೂರ್’ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿತ್ತು.  ಹೊಸಕೋಟೆ ಕೃಷ್ಣಶಾಸ್ತ್ರಿಗಳನ್ನು ಕನ್ನಡ ನಾಡು 1924ರ ವರ್ಷದ ಮೇ 16, 17 ಮತ್ತು 18ರಂದು ನಡೆದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಗೌರವಿಸಿತು.  

ಹೊಸಕೋಟೆ ಕೃಷ್ಣಶಾಸ್ತ್ರಿಗಳು 1928ರ ವರ್ಷದ ಫೆಬ್ರವರಿ 8ರಂದು ಈ ಲೋಕವನ್ನಗಲಿದರು. 

Great Scholar H. Krishnashastry 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ