ಮುಪ್ಪಿನ ಷಡಕ್ಷರಿ
ಮುಪ್ಪಿನ ಷಡಕ್ಷರಿ
ಮುಪ್ಪಿನ ಷಡಕ್ಷರಿಯ ಕಾಲ ಸುಮಾರು 1500. ಈತ ಕನ್ನಡದಲ್ಲಿ ಹಾಡುಗಬ್ಬಗಳನ್ನು ರಚಿಸಿದ ಶರಣಕವಿ. ನಿಜಗುಣ ಶಿವಯೋಗಿಯ ಅನಂತರ ಕೈವಲ್ಯ ಪದ್ಧತಿಯ ಹಾಡುಗಳನ್ನು ರಚಿಸಿದ ಪರಂಪರೆಯಲ್ಲಿ ಈತ ಎರಡನೆಯವ.
ಧರೆಯ ಭೋಗಭಾಗ್ಯವನ್ನೆಲ್ಲ ತೊರೆದು, ಹಲವು ಭವಭೀತಿಯ ಚಿಂತೆಯಿಲ್ಲದೆ, ಕಂತುಹರ ಶಿವಷಡಕ್ಷರಿಯ ಶಿವಲಿಂಗವನ್ನು ತನ್ನೊಳಗೆ ನಿಶ್ಚಿತವಾಗಿಟ್ಟುಕೊಂಡು ಸಹಜಾನಂದದಲ್ಲಿ ಮಿಡಿಯುತ್ತಿರುವ ಈ ಋಷಿಕವಿ ಭಕ್ತಿಯಿಂದ ಉಕ್ಕೇರುವ ಅನೇಕ ಹಾಡುಗಳನ್ನು ವಿವಿಧ ತಾನಗಳಲ್ಲಿ ರಚಿಸಿದ್ದಾನೆ.
ಮುಪ್ಪಿನ ಷಡಕ್ಷರಿಯ ಸಮಗ್ರ ಜೀವನಚರಿತ್ರೆ ಲಭ್ಯವಿಲ್ಲ. ಆದರೆ ಈತನ ಹಾಡುಗಳಲ್ಲಿ ಈತನ ವ್ಯಕ್ತಿತ್ವದ ಉನ್ನತ ಸ್ವರೂಪ ಪ್ರಕಟವಾಗುತ್ತದೆ. ಈತನ ಊರು ಉಪ್ಪಿನಹಳ್ಳಿ ಇಲ್ಲವೆ ಉಕ್ಷಪುರ (ನಂದಿಪುರ) ಆಗಿರಬಹುದು. ನಿಜಗುಣಶಿವಯೋಗಿಯ ಶಂಭುಲಿಂಗನಬೆಟ್ಟದಲ್ಲಿ ತಪಸ್ಸು ಮಾಡಿದ ಈತನ ಗವಿಯನ್ನು ಇಂದಿಗೂ ತೋರಿಸುತ್ತಾರೆ. ಕೊಳ್ಳೇಗಾಲ ತಾಲ್ಲೂಕಿನ ಎರೆಗಂಬಳಿಮಠದ ಸಿದ್ಧಲಿಂಗಸ್ವಾಮಿಗಳು ಈತನಿಗೆ ಶಿವಶಾಸ್ತ್ರದ ಅನುಭವವನ್ನು ಅರುಹಿದ ದೀಕ್ಷಾ ಗುರುಗಳೆಂದು ಈತನ ಒಂದು ಹಾಡಿನಿಂದ ತಿಳಿದುಬರುತ್ತದೆ. ಸುಬೋಧಸಾರ ಎಂಬ ಹೆಸರಿನಲ್ಲಿ ಈತನ ಹಾಡುಗಳು ಸಂಗ್ರಹಗೊಂಡಿವೆ. ಈ ಕವಿ 74 ಕೈವಲ್ಯ ಪದ್ಯಗಳನ್ನೂ, ಶಿವಪೂಜಾಷ್ಟಕ ಮತ್ತು ಶಿವಯೋಗಾಷ್ಟಕ ಎಂಬ ಕೃತಿಗಳನ್ನೂ ಬರೆದಿದ್ದಾನೆ.
ಧರೆಯ ಸುಖದ ಭೋಗವೆನಗೆ ಹರಿದುಹೋಗಲಿ; ಕಾಡಲೇಕೆ ನರರುಗಳನು, ಬೇಡಿ ಬಳಲಲೇಕೆ ಮನವೆ - ಇವೇ ಮುಂತಾದ ಹಾಡುಗಳಲ್ಲಿ ಈತನ ಆಳ ಚಿಂತನೆ ವ್ಯಕ್ತಗೊಂಡಿದೆ.
"ಎನ್ನಕರದೊಳಗಿರ್ದು ಎನ್ನೊಳೇತಕೆ ನುಡಿಯೆ ಇನ್ನೆನಗೆ ಭಯವುಂಟೆ; ಎನ್ನಸರ್ವಾಂಗಮನು ನಿನ್ನ ಪರಿಣಾಮಕ್ಕೆ ಚೆನ್ನಾಗಿ ಸಲಿಸುವೆನು ಎಲೆ ಲಿಂಗವೆ - ಈ ಮುಂತಾದ ಹಾಡುಗಳು ಕವಿಯ ಪರಿಶುದ್ಧ ಹೃದಯದ ಆಕಾಂಕ್ಷೆಯನ್ನು ಹೊರಹೊಮ್ಮಿಸಿವೆ.
"ಅವರವರ ದರುಶನಕೆ, ಅವರವರ ವೇಷದಲಿ, ಅವರವರಿಗೆಲ್ಲ ಗುರು ನೀನೊಬ್ಬನೆ, ಅವರವರ ಭಾವಕ್ಕೆ
ಅವರವರ ಪೂಜೆಗಂ,
ಅವರವರಿಗೆಲ್ಲ ದೇವ ನೀನೊಬ್ಬನೆ"
ಎಂಬ ಹಾಡಿನಲ್ಲಿ ಉದಾತ್ತಭಾವದ, ವಿಶಾಲಹೃದಯದ ದರ್ಶನ ವಿಶುದ್ಧಿಯಿದೆ.
ಈತನ ಹಾಡುಗಳ ಭಾಷೆ ಅತ್ಯಂತ ಸರಳ; ಅವುಗಳಲ್ಲಿ ಮೂಡಿರುವ ಭಾವ ಅತ್ಯಂತ ಆತ್ಮೀಯ; ಭಾವರೂಪಕಗಳ ಸೊಗಸು ಅವರ್ಣನೀಯ. ಅನುಭಾವದ ತನಿವೆಳಗು ಹದಗೊಂಡ ಶೈಲಿಯಲ್ಲಿ ಹೃದಯಂಗಮವಾದ ಧಾಟಿಯಲ್ಲಿ ಹೊರಹೊಮ್ಮಿದೆ.
ಸಿರಿಯು ಕನಸಿನಂತೆ ಎಂದು ಸೂಚಿಸುವ ತಿರುಕನ ಕನಸು ಎಂಬ ಈತನ ಪ್ರಸಿದ್ಧ ಹಾಡು ಭೋಗಷಟ್ಪದಿಯಲ್ಲಿದೆ. ಕುಸುಮ ಮತ್ತು ಭೋಗ ಷಟ್ಪದಿಗಳನ್ನೇ ಈತ ಹೆಚ್ಚಾಗಿ ಹಾಡುಗಳಿಗೆ ಬಳಸಿಕೊಂಡಿದ್ದರೂ ಭಾಮಿನಿ, ವಾರ್ಧಕ ಷಟ್ಪದಿಗಳಲ್ಲೂ ಹಾಡುಗಳನ್ನು ರಚಿಸಿದ್ದಾನೆ. ಶಿವಯೋಗಾಷ್ಟಕ ಹಾಗೂ ಶಿವಪೂಜಾಷ್ಟಕ ಕಂದ ಪದ್ಯಗಳಲ್ಲಿವೆ.
ಕಾಮೆಂಟ್ಗಳು