ಭಾರತಕಥಾಮಂಜರಿ116
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಆರನೆಯ ಸಂಧಿ
ಸೂ :
ನಗರ ಮೂರರ ದೂರುಕಾರರ
ದುಗುಡವನು ಪರಿಹರಿಸಿ ಕರುಣಾ
ಳುಗಳರಸ ಶಿವ ಸಂತವಿಟ್ಟನು ಸುರಕದಂಬಕವ
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವನೃಪತಿ ಶಲ್ಯಗೆ
ಹೇಳಿದನು ಸಾರಥ್ಯ ಸಂಯೋಜನ ಸಮಾಹಿತವ
ಲೋಲನಾಪರಿಕರ್ಮತರು ನಿ
ರ್ಮೂಲನೈಕಕ್ಷಮ ಸುಧಾಕರ
ಮೌಳಿ ಕೇಳೀಕಲಿತ ವಿಸ್ತರ ವರಕಥಾಂತರವ ೧
ತಾರಕನ ಮಕ್ಕಳುಗಳೆನಿಸುವ
ತಾರಕಾಕ್ಷನು ಕಮಳಲೋಚನ
ವೀರ ವಿದ್ಯುನ್ಮಾಲಿಯೆಂಬೀ ಮೂವರತಿಬಳರು
ಘೋರತರ ಸುತಪಃಪ್ರಭಾವಿ
ಸ್ತಾರಿಗಳಸಂಖ್ಯಾತಯುಗದಲಿ
ವಾರಿಜೋದ್ಭವನನು ವಶೀಕರಿಸಿದರು ಭಕುತಿಯಲಿ ೨
ಬಂದು ಕಮಲಜನಿವದಿರಿದಿರಲಿ
ನಿಂದನೆಲೆ ಋಷಿಗಳಿರ ಸಾಕಿ
ನ್ನೆಂದು ಪರಿಯಂತೀ ತಪೋನುಷ್ಠಾನದಾಯಾಸ
ನಿಂದು ಬೇಡುವುದೊಲಿದುದನು ನಾ
ವಿಂದು ಸಲಿಸುವೆವೆನಲು ನಿಮಿಷಕೆ
ಕಂದೆರೆದು ಕಮಳಾಸನಂಗೆರಗಿದರು ಭಕ್ತಿಯಲಿ ೩
ಎನಿತನೊಲಿದಡೆ ಏನಹುದು ದು
ರ್ಜನರು ಪುರುಷಾರ್ಥಿಗಳೆ ಹಾವಿಂ
ಗನಿಲವೇ ಆಹಾರವಾದಡೆ ಬಿಟ್ಟುದೇ ವಿಷವ
ದನುಜರದ್ಭುತ ತಪವ ಮಾಡಿದ
ರನಿಮಿಷಾವಳಿ ಬೇಂಟೆಯಾಡಲು
ನೆನೆದು ಬಿನ್ನೈಸಿದರು ಕಮಲಭವಂಗೆ ನಿಜಮತವ ೪
ರಚಿಸುವೆವು ಪುರಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವು ಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ ೫
ಹಾ ಮಹಾದೇವೀ ಕುಠಾರರ
ತಾಮಸದ ನೆನಹಿದ್ದ ಪರಿಯಿಂ
ತೀ ಮಹಾನುಷ್ಠಾನವಿದರಲಿ ಶಾಂತಿ ಲವವಿಲ್ಲ
ಕಾಮಿತವನಿವದಿರಿಗೆ ಕೊಟ್ಟರೆ
ಕಾಮಹರ ಕಮಳಾಕ್ಷರಿಗೆ ಸಂ
ಗ್ರಾಮದಲಿ ಜಯವಾಗದೆಂದಡಿಗಡಿಗೆ ಬೆರಗಾದ ೬
ಹುಲಿಗೆ ಧೈರ್ಯವನೆರಕೆಗಳನಹಿ
ಗಳಿಗೆ ಖಳರಿಗೆ ಲಕ್ಷ್ಮಿಯನು ಕ
ತ್ತಲೆಗೆ ಕಾಠಿಣ್ಯವನು ಚೈತನ್ಯವನು ಗಿರಿಗಳಿಗೆ
ಕೊಲೆಗಡಿಕರಿಗೆ ನಿತ್ಯದೇಹವ
ನೊಲಿದು ಕೊಟ್ಟರೆ ಲೇಸು ಬಳಿಕೇ
ನೆಲೆ ಮಹಾದೇವೇನ ನೆನೆದರೊ ಶಿವಶಿವಾ ಎಂದ ೭
ಪುರವ ವಿರಚಿಸಿ ದಿವ್ಯ ಸಾಸಿರ
ವರುಷ ಕೈಗೂಡಿದರೆ ಒಂದೇ
ಸರಳಲಾವವನೆಚ್ಚಡಾಗಳೆ ನಿಮಗೆ ಕಡೆಗಾಲ
ಬರಲಿ ಬಳಿಕಿಂದ್ರಾದಿ ನಿರ್ಜರ
ನೊರಜುಗಳ ನೀವ್ ಸದೆಯಿ ಹೋಗೆಂ
ದರಸ ಕೇಳೈ ಕೊಟ್ಟನವರಿಗೆ ಕಮಲಭವ ವರವ ೮
ಕರುಣವಿನಿತೇ ಸಾಕು ನಮಗೇ
ನುರದಲೊಗೆದವೆ ಮೊಲೆಗಳೆಮ್ಮಯ
ಪುರವನೊಂದಂಬಿನಲಿ ಗೆಲುವನ ತಾಯಿ ಹುಸಿಯೆನುತ
ದುರುಳರೀತನ ಬೀಳುಕೊಂಡು
ಬ್ಬರದ ಹರುಷದಿ ಹೆಚ್ಚಿ ಮಯನನು
ಕರೆಸಿ ಮಾಡಿಸಿದರು ಮಹಾ ವಿಭವದಲಿ ನಗರಗಳ ೯
ಕನಕದಲಿ ರಜತದಲಿ ಬಲುಗ
ಬ್ಬುನದಲೊಂದೊಂದಕ್ಕೆ ಶತ ಯೋ
ಜನದ ತೆರಹುಗಳೆಡೆಗೆ ಹಬ್ಬಿಸುವಮಳ ತೋರಣದ
ವಿನುತ ನಗರಿಗಳಾದುವಲ್ಲಿಯ
ದನುಜರೆರೆಗಳ ಹಾಯ್ಕಿ ಗಾಣದ
ಲನಿಮಿಷರನೀಡಾಡಿಕೊಂಡರು ದುರ್ಗವನು ಸುರರ ೧೦
ಸೂರೆವೋಯಿತು ಸುರಪತಿಯ ಭಂ
ಡಾರ ಹೆಂಡಿರುಸಹಿತ ನಿರ್ಜರ
ನಾರಿಯರು ತೊತ್ತಾದರಮರಾರಿಗಳ ಮನೆಗಳಿಗೆ
ಮೂರು ಭುವನದೊಳಿವದಿರಾಣೆಯ
ಮೀರಿ ಬದುಕುವರಿಲ್ಲ ಕಡೆಯಲಿ
ತಾರಕನ ಮಕ್ಕಳಿಗೆ ಕೈವರ್ತಿಸಿತು ಜಗವೆಂದ ೧೧
ನೆರೆದುದಮರರು ಹಾಳುಹರಿ ಸಾ
ಗರದ ಕಡೆಯಲಿ ರೂಹುಗಳೆದು
ಟ್ಟರುವೆಗಳ ಕಾಳಿಕೆಯ ಮೋರೆಯ ತಾರಿದೊಡಲುಗಳ
ಹುರಿದ ಧೈರ್ಯದ ತಳ್ಳವಾರುವ
ತರಳ ಹೃದಯದ ದೇವರಿಂದ್ರನ
ನರಸಿ ಕಂಡರು ತಮ್ಮೊಳಾಳೋಚನೆಯ ಮಾಡಿದರು ೧೨
ತಾರಕನ ಮಕ್ಕಳುಗಳೇ ಹಿಂ
ದಾರ ಗೆಲಿದರು ತಪವ ಮಾಡಿ ವಿ
ಕಾರಿಗಳು ಬ್ರಹ್ಮಂಗೆ ಬಂದಿಯನಿಕ್ಕಿದರು ಬಳಿಕ
ವಾರಿಜೋದ್ಭವ ಮೇಲನರಿಯ ಕು
ಠಾರನಾಯ್ಗಳ ಹೆಚ್ಚಿಸಿದನಿದ
ನಾರಿಗರುಪುವುವೆವೆಂದು ಸುಯ್ದರು ಬಯ್ದು ಕಮಲಜನ ೧೩
ಆದರೆಯು ನಮಗಾತನೇ ಗತಿ
ಯೀ ದುರಾತ್ಮರಿಗೆಂದು ಹರಿವೆಂ
ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ
ಖೇದವನುಸುರಿದರು ಪಿತಾಮಹ
ನಾ ದಿವಿಜಗಣ ಸಹಿತ ಬಂದನು
ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ ೧೪
ಬಂದು ಕೈಲಾಸಾದ್ರಿಯಲಿ ಗಿರಿ
ನಂದನಾವಕ್ಷೋಜ ಘುಸೃಣ
ಸ್ಕಂಧತನು ಚಿನ್ಮಯನಿರಂಜನ ಭೂರಿಪಂಜರನ
ವಂದ್ಯಮಾನ ಸುರಾಸುರೋರಗ
ವೃಂದ ಮಣಿಮಕುಟ ಪ್ರಭಾ ನಿ
ಷ್ಯಂದ ಭೂಯಸ್ತಿಮಿತಕಾಯನ ಕಂಡನಬುಜಭವ ೧೫
ಕೊರಳ ಕಪ್ಪಿನ ಚಾರುಚಂದ್ರಾ
ಭರಣ ಮೂರ್ಧದ ಭಾಳನಯನದ
ಭರಿತ ಪರಿಮಳದಂಗವಟ್ಟದ ಜಡಿದ ಕೆಂಜೆಡೆಯ
ಕರಗಿ ಕಾಸಿದವಿದ್ಯೆಯನು ಬೇ
ರಿರಿಸಿ ಶುದ್ಧಬ್ರಹ್ಮವನು ಕಂ
ಡರಿಸಿದಂತಿರಲೆಸೆವ ಶಿವನನು ಕಂಡನಬುಜಭವ ೧೬
ವೇದವರಿಯದ ತರ್ಕವಿದ್ಯಾ
ವಾದ ನಿಲುಕದ ಬುಧರ ಮತಿ ಸಂ
ಪಾದನೆಗೆ ಮುಖಗೊಡದ ವಾಚ್ಯಾಯನರ ಚೇತನಕೆ
ಹೋದ ಹೊಲಬಳವಡದ ಬ್ರಹ್ಮೇಂ
ದ್ರಾದಿ ಸುರರುಬ್ಬಟೆಗೆ ಸೋಲದ
ನಾದಿ ದೇವರದೇವ ಶಿವನನು ಕಂಡನಬುಜಭವ ೧೭
ಕಂತುಹರನನು ವಿಮಳನನು ವೇ
ದಾಂತವೇದ್ಯನನದ್ವಿತೀಯನ
ಚಿಂತ್ಯ ಮಹಿಮನ ಸಚ್ಚಿದಾನಂದೈಕರಸಮಯನ
ಅಂತ್ಯರಹಿತನನಪ್ರಮೇಯನ
ನಂತರೂಪನನಂಘ್ರಿಭಜಕ ಭ
ವಾಂತಕನನುದ್ದಂಡ ದೈವವ ಕಂಡನಬುಜಭವ ೧೮
ಇದ್ದುದಗಣಿತ ರುದ್ರ ಕೋಟಿಗ
ಳಿದ್ದುದನುಪಮ ವಿಷ್ಣು ಕೋಟಿಗ
ಳಿದ್ದುದಂಬುಜಭವ ಸುರೇಂದ್ರಾದಿಗಳು ಶತಕೋಟಿ
ಇದ್ದುದಮಳಾಮ್ನಾಯ ಕೋಟಿಗ
ಳಿದ್ದುದಗಣಿತ ಮಂತ್ರಮಧ್ಯದೊ
ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ ೧೯
ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ ೨೦
ಪರಮಕರುಣ ಕಟಾಕ್ಷರಸದಲಿ
ಹೊರೆದು ಕಮಳಾಸನನ ಹತ್ತಿರೆ
ಕರೆದು ಮನ್ನಿಸಿ ನಿಖಿಳ ನಿರ್ಜರ ಜನವ ಸಂತೈಸಿ
ಬರವಿದೇನಿದ್ದಂತೆ ವಿಶ್ವಾ
ಮರ ಕದಂಬಕ ಸಹಿತ ಎಂದಂ
ಬುರುಹಭವನನು ನಸುನಗುತ ನುಡಿಸಿದನು ಶಶಿಮೌಳಿ ೨೧
ತಾರಕನ ಮಕ್ಕಳುಗಳಿಗೆ ನೆರೆ
ಸೂರೆವೋದುದು ಸುರರ ಸಿರಿ ಮು
ಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ
ಚಾರುವೈದಿಕ ಹವ್ಯಕವ್ಯ ವಿ
ಹಾರವೃತ್ತಿಗಳಳಿದವಿದನವ
ಧಾರಿಸೆಂದಬುಜಾಸನನು ಮಾಡಿದನು ಬಿನ್ನಹವ ೨೨
ನಗೆಯ ಮೊಳೆ ನಸುಹೊಳೆಯೆ ಬೊಮ್ಮನ
ಮೊಗವ ನೋಡಿದನಭವನೀಶನ
ಬಗೆಯ ಭಾವವನರಿದು ತಲೆಗುತ್ತಿದನು ಕಮಲಭವ
ದುಗುಡವನು ಬಿಡಿ ನಿಖಿಳ ದಿವಿಜಾ
ಳಿಗಳು ಪಶುಗಳಲಾ ವಿರಿಂಚನ
ವಿಗಡತನದಲಿ ಕೆಟ್ಟಿರಕಟಿನ್ನಂಜಬೇಡೆಂದ ೨೩
ಪಶುಪತಿತ್ವವ ನಮಗೆ ಕೊಡಿ ನೀವ್
ಪಶುಗಳಾಗಿರಿ ಪಾಶುಪತ ವರ
ನಿಶಿತ ಶರದಲಿ ದೈತ್ಯ ದುರ್ಗವನುರುಹಿ ತೋರುವೆವು
ದೆಸೆದೆಸೆಗೆ ಹರೆದಖಿಳದೇವ
ಪ್ರಸರವನು ನೀವ್ ನೆರಹಿ ಮೇಲಿ
ನ್ನಸಮಸೆಗೆ ಹೆದರದಿರಿ ಎಂದನು ನಗುತ ಮದನಾರಿ ೨೪
ಜಾರಿದುಬ್ಬಿನ ಹೊತ್ತ ದುಗುಡದ
ಮೋರೆಗಳ ಮೋನದ ನಿಹಾರದ
ದೂರುಗಂಗಳ ದೇವನಿಕರವ ಕಂಡು ಕರುಣದಲಿ
ಏರುವಡೆದುದು ಮನವವಿದ್ಯೆಗೆ
ಮಾರುವೋದಿರಲಾ ಎನುತ ಶಿವ
ತೋರಿ ನುಡಿದನು ಪಾಶುಪತ್ಯದ ಸಾರ ಸಂಗತಿಯ ೨೫|
ಕರ್ಮಕಿಂಕರರಾಗಿ ಕೃತ ದು
ಷ್ಕರ್ಮವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿ ಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ ೨೬|
ಪಂಚವಿಂಶತಿ ತತ್ವರೂಪದ
ಸಂಚವರಿಯದೆ ನೀತಿಮುಖದಲಿ
ರಂಚೆಗಾಣದೆ ಸಗುಣಮಯ ನೀಹಾರದಲಿ ಮುಳುಗಿ
ಮಿಂಚುವೆಳಗಿನ ಬಳಕೆಯಲಿ ಮನ
ಮುಂಚಿ ಮೈಗೊಂಡಳಲುವಾತುಮ
ವಂಚಕರು ನೀವ್ ಪಶುಗಳೆಂದರೆ ಖೇದವೇಕೆಂದ ೨೭
ತೋರುವೀ ಜಗವೆಲ್ಲ ಬೊಮ್ಮವೆ
ತೋರುತಿದೆಯೆನಿಪರ್ಥದಲಿ ಸಲೆ
ತೋರುವೀ ಜಗಕೆಲ್ಲ ಪರತತ್ವದಲಿ ಪರಿಣಾಮ
ತೋರುವೀ ತೋರಿಕೆಯೊಳಗೆ ಸಲೆ
ಮೀರಿ ತೋರುವ ನಿಜವನರಿಯದ
ಗಾರುಗಳು ನೀವ್ ಪಶುಗಳೆಂದರೆ ಖೇದವೇಕೆಂದ ೨೮
ಆಧಿಭೌತಿಕದಿಂದ ನೊಂದು ವಿ
ರೋಧಿ ಷಡ್ವರ್ಗದ ವಿಕಾರ
ವ್ಯಾಧಿಯಲಿ ಬೆಂಡಾಗಿ ಭವಪಾಶದಲಿ ಬಿಗಿವಡೆದು |
ವಾದ ರಚನೆಯ ಬಲೆಗೆ ಸಿಲುಕಿ ವಿ
ರೋಧಗೊಂಬೀ ಮೋಹವಿದ್ಯಾ
ಸಾಧಕರು ನೀವ್ ಪಶುಗಳೆಂದರೆ ಖೇದವೇಕೆಂದ ೨೯
ಪಶುಪತಿಯೆ ಪರಮಾತ್ಮ ಜೀವರು
ಪಶುಗಳೀಪರಿ ಜೀವಭಾವದೊ
ಳೆಸಗುವರು ನೀವ್ ಪಶುಗಳೀಗಳು ನಿಮ್ಮ ರಕ್ಷಣವ
ಪಸರಿಸುವ ಪರಮಾತ್ಮ ತಾನೀ
ಘಸಣಿ ನಿಮಗೇಕೆಂದು ದೇವ
ಪ್ರಸರವನು ತಿಳುಹಿದನು ಕಾರುಣ್ಯದಲಿ ಕಾಮಾರಿ ೩೦
ತುಬ್ಬಿ ಕೊಟ್ಟುದವಿದ್ಯೆಯನು ಸುಧೆ
ಗೊಬ್ಬುಗಳ ಗಂಡಿಗರ ಗಾಢದ
ಗರ್ಭವನು ಹೊಳ್ಳಿಸಿತು ಗರಳಗ್ರೀವನುಪದೇಶ
ಹುಬ್ಬಿನಲಿ ಮಾತಾಡಿ ತಮ್ಮೊಳ
ಗೊಬ್ಬರೊಬ್ಬರು ತಿಳಿದು ಸಕಳ ಸು
ಪರ್ಬಜನವೆರಗಿದುದು ಜಯಜಯ ಎನುತ ಪಶುಪತಿಗೆ ೩೧
ಜಗವುಘೇ ಎಂದುದು ಜಯಧ್ವನಿ
ಜಗವ ಝೊಂಪಿಸಿತೊಗ್ಗಿನಂಜುಳಿ
ಗಗನದಗಲಕೆ ಕುಣಿವುತಿದ್ದುದು ಸುರರ ಭಾಳದಲಿ
ಬೆಗಡು ಬೀತುದು ಬೇಸರಿನ ಬಲು
ದೆಗಹು ಸೋತುದು ಶಿವಗೆ ದೈತ್ಯಾ
ರಿಗಳು ಮುದದಲಿ ಮಾಡಿದರು ಮೂರ್ಧಾಭಿಷೇಚನವ ೩೨
ಪಾಶುಪತ್ಯದ ಪಟ್ಟವಾಯ್ತು ಮ
ಹೇಶನಲಿ ಬ್ರಹ್ಮಾದಿ ದೇವರು
ವಾಸಿವಟ್ಟವ ಬಿಟ್ಟರೋಲೈಸಿದರು ಪಶುಪತಿಯ
ಪಾಶುಪತ ಸುವ್ರತವ ಧರಿಸಿದು
ದಾ ಸುಪರ್ವಸ್ತೋಮ ವಿಶ್ವಾ
ಧೀಶನೆಸೆದನು ಕೋಟಿ ಶತಸೂರ್ಯಪ್ರಕಾಶದಲಿ ೩೩
ಸಂಕ್ಷಿಪ್ತ ಭಾವ
ದೇವತೆಗಳ ಭಯವನ್ನು ಹೋಗಿಸಲು ಕರುಣಾಳು ಶಿವನ ನಿರ್ಧಾರ.
ದುರ್ಯೋಧನನು ಶಲ್ಯನಿಗೆ ಬ್ರಹ್ಮನು ಸೂತತ್ವವನ್ನು ವಹಿಸಿದ ಕಥೆಯನ್ನು ಹೇಳಲುಆರಂಭಿಸಿದನು.
ತಾರಕನ ಮಕ್ಕಳಾದ ತಾರಕಾಕ್ಷ, ಕಮಳಲೋಚನ ಮತ್ತು ವಿದ್ಯುನ್ಮಾಲಿಯೆಂಬುವರು ಬ್ರಹ್ಮನನ್ನುಕುರಿತು ಬಹಳ ಘೋರವಾದ ತಪಸ್ಸನ್ನು ಕೈಗೊಂಡರು. ಇವರ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷನಾಗಿಏನು ವರ ಬೇಕೋ ಕೇಳಿರಿ ಎಂದನು. ಎಷ್ಟು ತಪಸ್ಸನ್ನು ಮಾಡಿದರೇನು ಜನ್ಮಜಾತ ಗುಣಹೋಗುವುದೆ? ಹಾವಿಗೆ ಅನಿಲನೇ ಆಹಾರವಾದರೂ ವಿಷವ ಬಿಡುವುದೆ? ಹಾಗೆ ಈ ಮೂವರಮನದಲ್ಲಿದ್ದ ರಕ್ಕಸ ಪ್ರವೃತ್ತಿ ಬಿಡಲಿಲ್ಲ.
ಮೂರು ಪುರಗಳನ್ನು ರಚಿಸುವೆವು. ಎಲ್ಲರೂ ನಮ್ಮನ್ನು ಓಲೈಸಲಿ. ನಮಗೆ ಅಮರತ್ವವು ಬರಲಿಎಂದು ಬೇಡಿದರು. ಆಗ ಬ್ರಹ್ಮನಿಗೆ ವಿಷಾದವಾಯಿತು. ಶಿವಶಿವಾ ಎಂತಹವರಿಗೆ ನಾನು ವರವನ್ನುಕೊಡುವೆನೆಂದೆನಲ್ಲಾ ಎಂದು ಚಿಂತಿಸಿದನು. ಕೊನೆಯಲ್ಲಿ ಸಾವಿರ ವರುಷಗಳ ಬಳಿಕ ಯಾರುಒಂದೇ ಸರಳಿನಲ್ಲಿ ಮೂರೂ ನಗರಗಳನ್ನು ಸೀಳುವನೋ ಆಗ ನಿಮಗೆ ಮರಣವೆಂದು ಹೇಳಿಮಾಯವಾದನು.
ಅತ್ಯಂತ ವೈಭವದ ಮೂರು ನಗರಗಳು ಆಕಾಶದ ಎತ್ತರ ತಲೆಯೆತ್ತಿದವು. ಈ ಮೂವರದಬ್ಬಾಳಿಕೆಯಲ್ಲಿ ಸುರರು ನೊಂದರು. ಇಂದ್ರನೊಡನೆ ಇದಕ್ಕೆ ಪರಿಹಾರವನ್ನು ಯೋಚಿಸಿದರು. ಎಲ್ಲರೂ ಬಂದು ಬ್ರಹ್ಮನನ್ನು ಕಂಡರು. ಅವನು ಎಲ್ಲರೊಂದಿಗೆ ಶಿವನ ಬಳಿ ಬಂದನು. ದೇವರದೇವ, ಭಾಳನಯನ, ಚಿನ್ಮಯ ನಿರಂಜನ, ಕಂತುಹರ, ಅಪ್ರಮೇಯನಾದ ಶಿವನನ್ನು ಕಂಡನು. ಭಯಭಕ್ತಿಯಿಂದ ನಮಸ್ಕರಿಸಿದನು.
ದುಗುಡದಿಂದ ಕೂಡಿದ ಬ್ರಹ್ಮನ ಮುಖವನ್ನು ನೋಡಿ ಶಿವನು ಕರುಣೆಯಿಂದ ಅವನನ್ನುಸಂತೈಸಿದನು. ಇನ್ನು ಅಂಜಬೇಡಿರಿ ಎಂದು ಅಭಯವನ್ನು ಕೊಟ್ಟು ತನಗೆ ಪಶುಪತಿತ್ವವನ್ನುಕೊಡಿರೆಂದನು. ಅದರ ಸಾರವನ್ನು ವಿಸ್ತರಿಸಿ ಹೇಳಿದನು. ಕರ್ಮಕಿಂಕರರಾಗಿ ಭೋಗಿಸುತ್ತ ತಾನೇಸುಖಿ, ತಾನೇ ದುಃಖಿಯೆಂಬವರು ಪಶುಗಳಲ್ಲದೆ ಇನ್ನೇನು? ಆತ್ಮವಂಚಕರು, ಭವಪಾಶದಲಿಮುಳುಗಿದವರು, ಪಶುಗಳೆಂದನು. ಪಶುಪತಿಯೆ ಪರಮಾತ್ಮ, ಉಳಿದ ಜೀವಿಗಳು ಪಶುಗಳುಎನ್ನಲು ಎಲ್ಲರೂ ನಮಿಸಿ ಅಭಿಷೇಕ ಮಾಡಿದರು. ಅಂದಿನಿಂದ ಶಿವನು ಪಶುಪತಿಯಾದನು.
ಕಾಮೆಂಟ್ಗಳು