ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ130


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಕರ್ಣ ಪರ್ವ - ಇಪ್ಪತ್ತನೆಯ ಸಂಧಿ

ಸೂ.   
ಚಂಡಬಲ ಪವಮಾನಜನ ಮುಂ
ಕೊಂಡು ವಿರಥನಮಾಡಿ ಕದನೋ
ದ್ದಂಡ ನರನೊಳು ಕಾದಿ ಮಡಿದನು ವೀರವೃಷಸೇನ   
      
 
ಅವಧರಿಸು ಧೃತರಾಷ್ಟ್ರನೃಪ ನಿ
ನ್ನವಗೆ ತಿಳಿದುದು ಸೊಕ್ಕು ಚಿತ್ತದ
ಬವಣಿ ಬೀತುದು ಮನದ ಜೊಂಪಿಳಿದುದು ಛಡಾಳಿಸಿದ
ಡವರಿಸಿದ ಡೊಳ್ಳಾಸ ರಣಬೇ
ಳುವೆಯ ಬಿಗುಹಡಗಿದವೊಲನಿಬರು
ತವತವಗೆ ನಾಚಿದರು ಕೋಳಾಹಳಕೆ ಪವನಜನ         ೧  
 
ಮುಟ್ಟಿ ಬಂದುದು ಕೇಡು ನೃಪನೊಡ
ಹುಟ್ಟಿದನ ಹೊಯ್ದರುಣಜಲದಲಿ
ಚಟ್ಟಿರಿದು ರಿಪು ಚಾರಿವರಿದನು ಕಳನ ಚೌಕದಲಿ
ಇಟ್ಟಣಿಸುವೀ ರಣಮದಾಂಧನ
ತೊಟ್ಟುಳಿಕೆಯನು ಕೀಳ್ವ ರಾಯಘ
ರಟ್ಟನಿಲ್ಲಾ ಎನುತ ತನಿಮಸಗಿತು ಭಟಸ್ತೋಮ         ೨  
 
ದೊರೆಯೊಡನೆ ತಲೆಯೊತ್ತಿ ಮುರಿದ
ಬ್ಬರಿಗನುಬ್ಬಿದ ಸಮರದಲಿ ನಿ
ಬ್ಬರದ ಬೆರಗಿನೊಳಿದ್ದರೈ ಬಳಿಕೀಗಲರಿತಿರಲಾ
ಅರಸನನುಜನ ಕುಡಿದ ನೆತ್ತರ
ಬರಿಸುವೆನು ಮೂಗಿನಲಿ ಮಾಣೆನು
ತರಿಯ ರಥದುರವಣೆಗೆ ಕರ್ಣನಸೂನುವಿದಿರಾದ         ೩  
 
ಫಡ ವಿಕಾರವೆ ನೋಡು ನೆತ್ತರು
ಗುಡುಹಿತನವೇ ನಮ್ಮೊಡನೆ ಮೊಲೆ
ಮುಡಿಯ ಮೂದಲೆಗರುಹರೇ ಕರ್ಣಾದಿ ನಾಯಕರು
ಕುಡಿದ ರಕುತದ ಜಿಗುಳೆ ನೀ ನಿ
ನ್ನೊಡಲ ನಿಗುಚುವೆ ನಿಲ್ಲೆನುತ ಬಲ
ನೆಡನ ಬಿರುದರ ಮೇಳದಲಿ ತೂಗಿದನು ವೃಷಸೇನ         ೪  
 
ವೀರ ಮಝ ಸೇನಾಧಿಪತಿಯ ಕು
ಮಾರ ನೂಕಿದನೆನುತಖಿಳಪರಿ
ವಾರ ಕವಿದುದು ಕರಿ ರಥಾಶ್ವ ಪದಾತಿಯೊಡ್ಡಿನಲಿ
ಆರು ಪೊಗಳುವರನಿಲಸುತನ ಸ
ಧಾರತನವನು ಮೇಲೆ ಬೀಳ್ವ ಕ
ಠೋರ ಶಸ್ತ್ರವ್ರಜವ ನೂಕಿದನಡ್ಡವರಿಗೆಯಲಿ         ೫  
 
ಅಕಟ ಮಗುವಿನ ಕೂಡೆ ಬಲುನಾ
ಯಕರು ಬಯಸಿದರಳಿವನಿದು ಸೇ
ವಕರ ಪಂಥವಲಾ ವಿರೋಧವೆ ಎನುತ ಮುರಿದೆದ್ದು
ಲಕುಟಹತನಿರ್ಭಿನ್ನಭಾಂಡ
ಪ್ರಕರವೋ ನಿನ್ನಾಳುಕುದುರೆಯೊ
ಸಕಲ ಸುಭಟರನೊಕ್ಕಲಿಕ್ಕಿದನೊಂದುನಿಮಿಷದಲಿ         ೬  
 
ನುಗ್ಗ ಬಡಿದಂಜಿಸಿದ ಗೆಲವಿನ
ಸುಗ್ಗಿಗಿದೆ ಮಳೆಗಾಲವೆನುತ ನಿ
ರರ್ಗ್ಗಳಿತ ಭುಜಶೌರ‍್ಯ ಸುರಿದನು ಸರಳ ಸರಿವಳೆಯ
ಬಗ್ಗಿ ಕವಿವಂಬುಗಳ ಗರಿಗಳ
ಲಗ್ಗೆಗರಿನಾಯಕರ ಕಿವಿಗಳು
ನೆಗ್ಗಿದವು ಮುಗ್ಗಿದವು ಮನ ಮಾರಂಕದತಿರಥರ          ೭  
 
ಬಲುಹು ಮಗುವಿನ ಶೌರ‍್ಯವೀಸ
ಗ್ಗಳೆಯನೈ ಶಿವಯೆನುತ ಚಿತ್ತದೊ
ಳಳುಕಿ ಹೂಡಿದನಂಬನವಧಾನದಲಿ ಬಿಡೆಯರಿದು
ಹಿಳುಕುಹಿಳುಕುಗಳೊರಸೊರಸು ಮುಂ
ಕೊಳಿಸೆ ಹಿಂದಣಿನಂಬನಂಬು
ಚ್ಚಳಿಸಲೆಚ್ಚನು ಭೀಮ ರವಿನಂದನನ ನಂದನನ           ೮  
 
ಕೆಣಕಿದುರಿಯಂದದಲಿ ದಂಡೆಯೊ
ಳಣೆದ ಕಾಳೋರಗನವೊಲು ಚ
ಡ್ಡಣೆಯ ಚಪಳಕ್ರೋಧಶಿಖಿ ಮೋಹಿದುದು ಮೋರೆಯಲಿ
ಕಣೆಗಳೋ ಕಲ್ಪಾಂತವಹ್ನಿಯ
ಡೊಣೆಗಳೋ ಹಾಳಾಹಳದ ಡಾ
ವಣಿಗಳೋ ನಾವರಿಯೆವೆಚ್ಚನು ವೀರ ವೃಷಸೇನ         ೯  
 
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ
ಹಿಳುಕು ಹೇರಿದವಾತನಶ್ವಾ
ವಳಿಯಲಾತನ ಸೂತನೊಡಲಲಿ
ಹಲವು ಮಾತೇನಾತನಂಗೋಪಾಂಗ ನಿಕರದಲಿ          ೧೦  
 
ಕೂಡೆ ಹಾಹಾಧ್ವನಿಯ ರವವ
ಲ್ಲಾಡಿಸಿತು ಪರಬಲವನೀತನ
ತೋಡು ಬೀಡಿನ ಸಂಚ ಸೆಳೆದುದು ಹಗೆಯ ಸಾಹಸವ
ಓಡಲರಿಯದೆ ಭೀಮನಂಬಿನ
ರೂಢಿ ನಿಗುಚದೆ ಕಾದುವರೆ ಜಯ
ಜೋಡಿಸದೆ ಜೋವಳಿಸಿ ಜವಗುಂದಿದನು ಕಲಿಭೀಮ     ೧೧  
 
ಅರಸ ಕೇಳೈ ಬಳಿಕ ಭೀಮನ
ತರಹರವನರಿದಾಚೆಯಲಿ ಸಂ
ವರಿಸಿಕೊಂಡನು ನಕುಳ ಬಿಟ್ಟನು ಸೂಠಿಯಲಿ ರಥವ
ತರುವಲಿಯೆ ನೀನಿದಿರಹುದೆ ಫಡ
ಸರಿಸವೇ ಭೀಮಂಗೆ ನೀನೆನು
ತರಿಭಟನ ಕೆಣಕಿದನು ಕೆದರಿದನಸ್ತ್ರಸಂತತಿಯ             ೧೨  
 
ಆರಿವರು ನಕುಲಾಂಕರೇ ಜು
ಜ್ಝಾರರೇ ನಿಮ್ಮಣ್ಣನಾಡಿ ದು
ಹಾರದಲಿ ಸೆರೆಯೋದನಾತನ ಹರಿಬವೇ ನಿಮಗೆ
ತೀರದೇ ನಿಮ್ಮಲಿ ವೃಥಾಹಂ
ಕಾರವೇಕಿದು ಪಾರ್ಥನೆಂಬನ
ತೋರಿರೇ ನೀ ಸಾರೆನುತ ತೆಗೆದೆಚ್ಚು ಬೊಬ್ಬಿರಿದ         ೧೩  
 
ಮಗುವು ನಿನ್ನೊಡನೇನು ಸರಿಯೋ
ಮಿಗಿಲೊ ಶರವಿವ ಹೇಳೆನುತ ಕೈ
ಮಗುಚಿದನು ಹೊದೆಯಂಬನೀತನಮೇಲೆ ನಿಮಿಷದಲಿ
ಮುಗಿಲ ಹರಿಗೆಗೆ ಮಾರುತನ ಬಂ
ದಿಗೆಯ ಹೊಯ್ಲೆನೆ ನಕುಳನೆಚ್ಚಂ
ಬುಗಳು ಕಿಡಿಸೂಸಿದವು ಕಂಡನು ರಥದ ಬಳಸಿನಲಿ       ೧೪  
 
ಮರಳಿ ನಕುಲನನೆಚ್ಚನಾತನ
ತುರಗವನು ಮುರಿಯೆಚ್ಚನಾತನ
ವರರಥವ ಸಾರಥಿಯನಾತನ ಟೆಕ್ಕೆಯವ ಧನುವ
ಉರುಳೆಗಡಿದನು ಮತ್ತೆ ಜೋಡಿಸಿ
ಪರಿತರಲು ಮುರಿಯೆಚ್ಚು ಪುನರಪಿ
ಹುರುಳುಗೆಡಿಸಿದನರಸಿ ಹರಿದನು ಮತ್ತೆ ಪವನಜನ       ೧೫  
 
ನಕುಲ ಮುದನು ಭೀಮ ನಿಲು ಕಾ
ರ್ಮುಕವ ಹಿಡಿ ಬಿಡು ಸರಳನರಿಳುಕುವ
ಡಕಟ ಕೊಲ್ಲೆನು ನಿನ್ನ ತಮ್ಮನ ಕರೆಸು ಫಲುಗುಣನ
ವಿಕಳರುಳಿದಿರಲಾಗದೀ ಸಾ
ಯಕದ ಸೃಷ್ಟಿವಿರಿಂಚ ಸುಭಟ
ಪ್ರಕರದೊಳು ತಾನೆನುತ ತೆಗೆದೆಚ್ಚನು ವೃಕೋದರನ       ೧೬  
 
ಮುರಿದು ನಕುಲನ ಭೀಮಸೇನನ
ನರಸಿ ಹಿಡಿದನು ಬವರವನು ಭಟ
ನುರುಬೆ ಬಲುಹೋ ದಿಟ್ಟನಿವ ಕೌರವರ ಥಟ್ಟಿನಲಿ
ತೆರಹುಗೊಡದಿರಿ ನೂಕುನೂಕೆನು
ತುರುಬಿದನು ಸಹದೇವನೀತನ
ತರುಬಿ ಮೂದಲಿಸಿದನು ಮುಸುಕಿದನಂಬಿನಲಿ ರಥವ     ೧೭  
 
ಮೊದಲ ಬಲುಹನು ಕಂಡೆನಿನ್ನೀ
ತುದಿವರನ ತನಿಗೆಚ್ಚು ನಮ್ಮನು
ಬೆದರಿಸುವುದೋ ಶಿವಶಿವಾ ತಪ್ಪೇನು ತಪ್ಪೇನು
ಸದೆಗರಿವದಿರ ಗೆಲುವುದಾವಂ
ಗದಲಿ ಬಹುದೋ ಎನುತ ಪರಿಹಾ
ಸದಲಿ ರಿಪುಭಟನಂಬುಗಳ ಕೆದರಿದನು ಕಣೆಗಳಲಿ      ೧೮  
      
ಆತನೊಡನೆಯೆ ತೇರುತುರಗ
ವ್ರಾತವನು ಹುಡಿಮಾಡಿ ರಥಹಯ
ಸೂತ ಧನು ಶಸ್ತ್ರೌಘ ಕವಚ ಧ್ವಜ ಪತಾಕೆಗಳ
ಘಾತಿಸಿದನೈದಂಬಿನಲಿ ಮಗು
ಳಾತನುರವನು ತೋಡಿ ತೊಲಗಿಸಿ
ವಾತಜನನರಸಿದನು ಮೂದಲಿಸಿದನು ಸರಳಿನಲಿ    ೧೯  
 
ಶಿವಶಿವಾ ಸಹದೇವ ನಕುಲರ
ಬವರ ಮುರಿದುದು ಬಿಡದೆ ಬಳಿಯಲಿ
ಪವನಜನ ತುಡುಕಿದನು ನೂಕಲಿ ಸರ್ವದಳವೆನುತ
ತವತವಗೆ ಸುತಸೋಮಕಾದಿಗ
ಳವಗಡಿಸಿದರು ಮತ್ಸ್ಯ ಕೈಕೆಯ
ನಿವಹ ಸಾತ್ಯಕಿ ಚೇಕಿತಾನರು ಕವಿದರುರವಣಿಸಿ       ೨೦  
 
ಎಲೆಲೆ ಪಾಂಡವ ಸರ್ವದಳವಿ
ಟ್ಟಳಿಸಿತೋ ಸುಕುಮಾರನೊಬ್ಬನೆ
ನಿಲುವುದರಿದೋ ನೂಕೆನುತ ಕುರುಸೇನೆ ಸಂವರಿಸೆ
ಉಲುಕದಿರಿ ಭಾರಣೆಯ ಭಟರ
ಗ್ಗಳೆಯರೆನ್ನೀ ಮಕ್ಕಳಾಟಿಕೆ
ಯಳವನೀಕ್ಷಿಸಿ ಸಾಕೆನುತ ತರುಬಿದನು ಪರಬಲವ       ೨೧  
 
ತೇರನೆಚ್ಚನು ಕುದುರೆಕಾರರ
ದೂರದಲಿ ಖಂಡಿಸಿದನೊಗ್ಗಿನ
ವಾರಣೌಘವ ಸೀಳಿದನು ಹೂಳಿದನು ರಕುತದಲಿ
ಆರು ಬಲ್ಲರು ಪಯದಳವನಾ
ವೀರ ಸುತಸೋಮಾದಿ ನಿಖಿಳಕು
ಮಾರರಂಘವಣೆಗಳ ಸೆಳೆದುದು ಭೀತಿರಸಜಲಧಿ       ೨೨  
 
ಉಗುಳುಗುಳು ದುಶ್ಶಾಸನನ ನೀ
ನುಗುಳು ಮಗುಳಿನ್ನಾರ ಬಸುರನು
ಹೊಗುವೆ ಮೊಲೆಮುಡಿಯಾರಿಗಿವು ಫಡ ನಿಲ್ಲು ನಿಲ್ಲೆನುತ
ಹೊಗರೊಗುವ ಹೊಸಮಸೆಯ ಬಾಯ್ಧಾ
ರೆಗಳ ಬಂಬಲುಗಿಡಿಯ ಬಾಣಾ
ಳಿಗಳಲೀತನ ಹೂಳಿದನು ಕಾಣೆನು ವೃಕೋದರನ       ೨೩  
 
ಕಳವಳಿಸಿತರಿಸೇನೆ ಬೊಬ್ಬೆಯೊ
ಳುಲಿದುದೀ ನಮ್ಮವರು ಕಂಡನು
ಬಳಿಕ ಮುರರಿಪು ತೋರಿದನು ಪಾರ್ಥಂಗೆ ಪವನಜನ
ಎಲೆ ಧನಂಜಯ ಭೀಮಲಯ ನಿ
ಮ್ಮಳಿವು ನಿಮ್ಮ ಪರೋಕ್ಷದಲಿ ನಾ
ವುಳಿವರಲ್ಲೀ ಹವಣ ಕಂಡೆವು ಕರ್ಣತನಯನಲಿ          ೨೪  
      
ಈಸು ಘನವೇ ಕೃಷ್ಣ ಮಗುವಿವ
ನೈಸಱವನೆಂದಿದ್ದೆನಾದರೆ
ಹಾಯ್ಸು ರಥವನು ಭೀಮಸೇನನ ರಥದ ಮುಂಗುಡಿಗೆ
ವಾಸಿಯೇಕಿವನಲಿ ವಚೋವಿ
ನ್ಯಾಸದಿಂ ರಥ ಮುಂಚಿತಹಿತನ
ಘಾಸಿಯಿಂದನಿಲಜನನುಗಿದನು ಬಗಿದು ರಿಪುಶರವ       ೨೫  
      
ಎಸುಗೆ ಚೆಲುವನು ಹಾಲುಗಲ್ಲದ
ಹಸುಳೆಯಂಗವಿದಲ್ಲ ತುಂಬಿಯ
ದೆಸೆಗೆ ಕೆಂದಾವರೆಯ ಬನವೇ ವನದವಾನಳನು
ಉಸುರದೀ ಜಯದೊಪ್ಪದಲಿ ಜಾ
ಳಿಸುವರೊಳ್ಳಿತು ತೊಲಗೆನುತ ನಿ
ಪ್ಪಸರದಲಿ ತೆಗೆದೆಚ್ಚನರ್ಜುನನಿನಸುತನಸುತನ          ೨೬  
      
ಚಾರುಪೌರುಷ ಸಮರವಿಹ್ವಳ
ತಾರಕರು ನೀವ್ ನಮ್ಮದಿದು ಕೌ
ಮಾರದೆಸೆ ತಾಮಸವಲೇ ನಿಮಗಾನು ಸಮಬಳನೆ
ಕೂರಲಗು ತೊಲೆಗೋಲಿನಲಿ ನಿ
ಮ್ಮಾರುಭಟೆಯನು ನಮ್ಮ ಬಾಹುವಿ
ಕಾರಬಲವನು ತೂಗಿಯೆನುತೆಚ್ಚನು ಧನಂಜಯನ       ೨೭  
 
ಮುರಮಥನ ಚಿತ್ತೈಸಿದೈ ತರು
ವರಿಯ ಸಾಭಿಪ್ರಾಯವಾಕ್ಯ
ಸ್ಫುರಣವನು ಸಭ್ಯಾಂಗ ಭಾಷಿತ ಭಾವನಿಷ್ಠುರವ
ಪರಿಹೃತಿಯೆ ಕರ್ತವ್ಯವೆನುತು
ಚ್ಚರಿಸಿದನು ಮೌರ್ವೀನಿನಾದ
ಸ್ಫುರಿತ ವಿಮಳಪ್ರಣವಮುಖಶರಸೂಕ್ತಸಂತತಿಯ       ೨೮  
 
ಅದು ಬಳಿಕ ಲೋಹಾಯತಾಂಗ
ಚ್ಛದನ ಪರನಾರಾಚ ನಿರ್ಮೂ
ಲದಲಿ ಭಂಗಿತವಾಯ್ತು ಪಾರ್ಥನ ಬಾಣದೊಡ್ಡವಣೆ
ಬಿದಿರ ಮೊಳೆಯಲಿ ಹರಿವುದೇ ಬೆ
ಟ್ಟದಲಿ ಹರಿಯದ ವಸ್ತು ಹರನಿಂ
ದೊದಗಿದಂಬಿನ ಹವಣ ತೋರೆಂದೆಚ್ಚನರ್ಜುನನ       ೨೯  
 
ದನುಜರಿಪು ಹುಸಿಯಲ್ಲ ನಮ್ಮೊ
ಡ್ಡಿನಲಿ ಭಟನಭಿಮನ್ಯು ಪರರೊ
ಡ್ಡಿನಲಿ ಭಟನಿವನಲ್ಲದಿಲ್ಲ ಕುಮಾರವರ್ಗದಲಿ
ತನಗೆ ದೇವತ್ರಿತಯವಲ್ಲದೆ
ದನುಜ ದಿವಿಜಾದಿ ತ್ರಿಲೋಕದ
ಜನವಿದಿರೆ ಮೆಚ್ಚಿಸಿತು ಮಗುವಿನ ದಿಟ್ಟತನವೆಂದ         ೩೦  
 
ಪೂತುರೇ ವೃಷಸೇನ ಶರಸಂ
ಘಾತವಿದೆಕೋ ಸೈರಿಸಾದಡೆ
ಪಾತಕಕ್ಕೋಸರಿಸಿದೆವಲೇ ಭ್ರೂಣಹತಿಯೆಂಬ
ಮಾತು ಹಲವರಲೇನು ಪಾರ್ಥಿವ
ಜಾತಿಗೆನುತ ಮಹಾಸ್ತ್ರನಿಕರದೊ               
ಳೀತನನು ಮುಸುಕಿದನು ಶರಮಯವಾಯ್ತು ರಣಭೂಮಿ    |೩೧  
                                      
ಆವ ವಹಿಲದೊಳರ್ಜುನನ ಬಾ
ಣಾವಳಿಯ ತರಿದೊಟ್ಟಿ ಮಗುಳೆ ಶ
ರಾವಳಿಯ ಕೊನೆಗಳಲಿ ಮುದ್ರಿಸಿದನು ಧನಂಜಯನ
ನಾವರಿಯೆವೀಸದುಭುತವನಿವ
ಕಾವನೇ ಮಿಕ್ಕವರನರ್ಜುನ
ದೇವನಲಿ ಸರಿಮಿಗಿಲ ಕಾದಿದನರಸ ಕೇಳೆಂದ         ೩೨  
 
ನರನ ಮಾರಂಕದ ಮಹೇಂದ್ರಗೆ
ಚರಣಯುಗ ಬೆನ್ನಿನಲಿ ಬವರದೊ
ಳರಿದಲೈ ಭೀಷ್ಮಾದಿಗಳಿಗೀ ರಣದ ಮೇಳಾಪ
ಜರಡನೇ ಭಾರಂಕದಾಳಿವ
ತರಳನೇ ಸುರಗಿರಿಯನಾನುವ
ಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ         ೩೩  
 
ಎಸಲು ಕಡಿದನು ಝೂಡಿಯಲಿ ಝೊಂ
ಪಿಸಲು ಜಡಿದನು ಚಳಕದಲಿ ಜಾ
ಳಿಸಿದರೊಂದಕ್ಕೆರಡು ನಾಲ್ಕಕ್ಕೆಂಟು ತೋರಿಸಿದ
ಮುಸುಕಿದರೆ ಮಂತ್ರಾಸ್ತ್ರದಲಿ ಮೋ
ಹಿಸಿದ ಸರಿಸಕೆ ಸರಿಸ ವಿಷಮಕೆ
ವಿಷಮಗತಿ ಶರಸಾರ ಸಾಳಂಗದಲಿ ರಂಜಿಸಿದ         ೩೪  
 
ಆಯಿತಿದು ಸಮರದಲಿ ಗುರು ಗಾಂ
ಗೇಯ ಕರ್ಣದ್ರೌಣಿಗಳ ತರು
ವಾಯ ಲೆಕ್ಕಕೆ ಸಂದನೈ ಮಝ ಪೂತು ಪಾಯ್ಕೆನುತ
ಸಾಯಕವನಭಿಮಂತ್ರಿಸುತ ವೈ
ನಾಯಕಾಸ್ತ್ರವ ಹೂಡಿದನು ಬಲ
ಬಾಯಬಿಡೆ ಚಿಗಿದಂಬು ಕಡಿದುದು ಕರ್ಣನಂದನನ     ೩೫  
 
ಚಿಗಿದ ತಲೆ ಬೊಬ್ಬಿರಿಯೆ ಬಳಿಕಾ
ಳುಗಳ ದೇವನು ಮುಷ್ಟಿಬಳಿಗೋ
ಲುಗಳನೈದಾರೇಳ ಹಳುಹಳುವಾಯಿಯೆಸುಗೆಯಲಿ
ತೆಗೆದು ನಿಂದುದು ಭಯರಸದ ಹ
ಬ್ಬುಗೆಯಲುಬ್ಬಿದ ಶೋಕದೊಡ್ಡಿನ
ಮುಗಿಲು ಕರೆದುದು ಕುರುಬಲದ ಕಂಬನಿಯ ಬಿರುವಳೆಯ    ೩೬                                           
 
ಕದಡಿತೀ ಬಲಜಲಧಿ ಕಲ್ಪಾಂ
ತದ ಸಮುದ್ರದವೊಲು ಮಹಾಧ್ವನಿ
ಗದಗದಿಸೆ ಹಾ ಕರ್ಣಸುತ ಹಾ ಕರ್ಣಸುತ ಎನುತ
ಕೆದರಿದೀಶನ ಭಾಳದುರಿನೇ
ತ್ರದವೊಲುರಿದುದು ಸೂತಸುತ ಸಾ
ಕಿದ ಕುಮಾರನ ಮೇಳವದ ಮನ್ನಣೆಯ ಪರಿವಾರ        ೩೭  
 
ನೂಕಿತೀ ಬಲದಳದ ಪದಹತಿ
ಗೇಕೆ ಬಿರಿಯದು ಧರಣಿ ದಿಕ್ಕರಿ
ಯೋಕರಿಸದೇ ಮದವನಾದರೆ ಪುಣ್ಯನಬುಜಭವ
ಈ ಕಡುಹಿನಾತಗಳನಾನುವ
ಡೀ ಕಪರ್ದಿಯೆ ಸಾಕು ಕೆಲನವ
ರಾಕೆವಾಳರೆ ಎನುತಲಿರ್ದುದು ಮೇಲೆ ಸುರಕಟಕ       ೩೮  
 
ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪಗೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ        ೩೯  
 
ಕೇಣವಿಲ್ಲದೆ ಹೊಕ್ಕ ಕುದುರೆಗ
ಳಾಣತಿಯ ತುಂಬಿಯ ಕಪೋಲ
ದ್ರೋಣಿಯೊರತೆಯ ಮದದ ಕರಿಗಳ ಕಡುಹಿಕೆಯ ರಥದ
ಸಾಣೆಯಲಗಿನ ಸರಿಯ ಸೋನೆಯ
ಜಾಣತನವೋ ಜಯದ ಸುಭಟರ
ಕಾಣೆನೈ ಕಣೆಯೆರಡರಲಿ ಸಂವರಿಸಿದನು ಪಾರ್ಥ         ೪೦  
      
ವೀರದುಶ್ಶಾಸನನು ಕರ್ಣಕು
ಮಾರಕರು ನೀ ಸಾಕಿದಗ್ಗಳ
ವೀರದಳ ಕೌರವ ಸಹೋದರಸೇನೆ ಮೊದಲಾಗಿ
ತೀರಿತಾಹವದಲಿ ಕುರುವ್ರಜ
ವಾರುಧಿಗೆ ಸರಿಯಾಯ್ತು ನಿನ್ನ ಕು
ಮಾರನಿಂಗಿತವರಿದು ಸಮರಕೆ ಕರ್ಣನನುವಾದ       ೪೧

ಸಂಕ್ಷಿಪ್ತ ಭಾವ
Lrphks Kolar

ಕರ್ಣನ ಮಗ ವೃಷಸೇನ ಭೀಮಾರ್ಜುನರೊಡನೆ ಪರಾಕ್ರಮವನ್ನು ತೋರಿ ಮರಣ ಹೊಂದಿದ ಪ್ರಸಂಗ.

ದುರ್ಯೋಧನ ತನ್ನ ತಮ್ಮನ ಸಾವಿನ ಘೋರ ದೃಶ್ಯ ಕಂಡು ಮಂಕು ಬಡಿದಂತಾದ. ಅವನೊಂದಿಗೆ ಭಟಸ್ತೋಮವೂ ಕಂಗೆಟ್ಟಿತು. ಆಗ ಕರ್ಣನ ಮಗ ವೃಷಸೇನ ಮುಂದೆ ಬಂದ. ಭೀಮನ ಕೃತ್ಯಕ್ಕೆ ಪ್ರತೀಕಾರ ಕೈಗೊಳ್ಳುವೆನೆಂದು ಆರ್ಭಟಿಸಿದ. ಆಗ ಇತರರಿಗೂ ಧೈರ್ಯ ಬಂದಿತು. ಎಲ್ಲ ಸೈನ್ಯ ಒಟ್ಟುಗೂಡಿ ಹೊರಟಿತು.

ವೃಷಸೇನ ಇನ್ನೂ ಚಿಕ್ಕವನೆಂಬ ಭಾವ ಭೀಮನಿಗಿತ್ತು. ಆದರೆ ಅವನ ಶೌರ್ಯ ಕಂಡು ಶಿವಶಿವಾ ಎನ್ನುತ್ತ ಅವನನ್ನು ಸರಳುಗಳಿಂದ ಹೊಡೆಯಲಾರಂಭಿಸಿದನು. ಕೆಣಕಿದ ಉರಿಯಂತೆ, ಕಾಳೋರಗದಂತೆ ವೃಷಸೇನ ಮೆರೆದನು. ಮೊದಲೇ ಸಾಕಷ್ಟು ಹೋರಾಡಿದ್ದ ಭೀಮನು ಕಳೆಗುಂದತೊಡಗಿದನು. ಅವನ ನೆರವಿಗೆ ನಕುಲ ಬಂದನು.  ಕ್ಷಣಮಾತ್ರದಲ್ಲಿ ನಕುಲನನ್ನು ಹಿಂದೆ ಸರಿಸಿದನು ಕರ್ಣನಂದನ. ಇದನ್ನು ಕಂಡ ಸಹದೇವ ಬಹಳ ಕೋಪದಿಂದ ಮುನ್ನುಗ್ಗಿದನು. ಅವನೊಂದಿಗೂ ಪರಾಕ್ರಮದಿಂದ ಕಾದಿ ಅವನನ್ನು ಹಿಮ್ಮೆಟ್ಟಿಸಿದನು. ಇತರ ಭಟರೂ ಸಹ ವೃಷಸೇನನ  ಮುಂದೆ ನಿಲ್ಲಲಾಗಲಿಲ್ಲ. ತನ್ನ ನೆರವಿಗೆ ಬಂದ ಕುರುಸೇನೆಯ ಪ್ರಮುಖರನ್ನು ದೂರವೇ ಇರಲು ಹೇಳಿ ಮಕ್ಕಳಾಟಿಕೆಯಂತೆ ಚಕಚಕನೆ ರಿಪು ಸೈನ್ಯವನ್ನು ಬಡಿಯುತ್ತ ಭೀತಿರಸದಲ್ಲಿ ಮುಳುಗಿಸಿದನು. ಮತ್ತೆ ಭೀಮನ ಮೇಲೆ ಹರಿಹಾಯ್ದನು. ಇದನ್ನು ಕೃಷ್ಣ ಕಂಡು ಅರ್ಜುನನಿಗೆ ತೋರಿಸಿದನು. ಈಗ ಭೀಮನ ಉಳಿವು ಅಳಿವು ಕರ್ಣನ ಮಗನಲ್ಲಿದೆಯೆನ್ನಲು ತಕ್ಷಣ ರಥವನ್ನು ಅತ್ತ ತಿರುಗಿಸಲು ಹೇಳಿದ ಅರ್ಜುನ ವೃಷಸೇನನನ್ನು ಎದುರಿಸಿದನು.

ಕರ್ಣನ ಮಗನ ಪರಾಕ್ರಮ ಕಂಡು ನಮ್ಮಲ್ಲಿ ಅಭಿಮನ್ಯು ಹೇಗೋ ಕೌರವರಲ್ಲಿ ಇವನು ಎಂದು ಮೆಚ್ಚಿದನು. ರಣಭೂಮಿ ಶರಮಯವಾಯಿತು. ದೇವತೆಗಳೂ ನಿಂತು ನೋಡಿದರು. ಕೊನೆಯಲ್ಲಿ ಅರ್ಜುನನು ವೈನಾಯಕಾಸ್ತ್ರವನ್ನು ಅಭಿಮಂತ್ರಿಸಿ ಪ್ರಯೋಗಿಸಲು ವೃಷಸೇನನ ತಲೆ ಸಿಗಿದು ಬಿದ್ದಿತು. ಕುರುಸೇನೆಯ ಅಳಲ ಮಳೆ ಬಿರುಮಳೆಯಂತಾಯಿತು. ರಣದಲ್ಲಿ ಅರ್ಜುನನ ಜೊತೆಗೆ ಕಾದುವವರ ಸತಿ ಸುವಾಸಿನಿಯಾಗಿರಲು ಸಾಧ್ಯವೆ?  ಎಂದು ಸುರಗಣ ನುಡಿಯಿತು. ಉಳಿದ ಸೇನೆಯನ್ನು ತರಿದುಹಾಕಿದ ಅರ್ಜುನನನ್ನು ಎದುರಿಸಲು ಕರ್ಣ ಸಿದ್ಧನಾದನು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ