ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವ್ಯಾಸ ಜಯಂತಿ

ವ್ಯಾಸ ಜಯಂತಿ



ಇಂದು ವ್ಯಾಸ ಜಯಂತಿ.  (ಸಾಮಾನ್ಯವಾಗಿ ಗುರುಪೂರ್ಣಿಮೆಯ ಸಂದರ್ಭದಲ್ಲಿ ವ್ಯಾಸರನ್ನು ನೆನೆಯುವುದು ಹೆಚ್ಚು ವಾಡಿಕೆಯಲ್ಲಿದೆ).  ಕೃಷ್ಣದ್ವೈಪಾಯನ ವ್ಯಾಸರು ನಮಗೆ ಸದಾ ಸ್ಮರಣೀಯರು.  


ಗುರುಶ್ರೇಷ್ಠ ವೇದವ್ಯಾಸರಿಗೆ ಈ ವಿಶ್ವ ಚಿರಋಣಿಯಾಗಿದೆ.  ಅವರು ವೇದಗಳನ್ನು ಸುಲಭವಾಗಿ ಅರ್ಥವಾಗುವಂತೆ ವಿಂಗಡಿಸಿ, ಉಪನಿಷತ್ತುಗಳನ್ನು ವ್ಯಾಖ್ಯಾನರೂಪದಲ್ಲಿರಿಸಿ, ಪುರಾಣಗಳನ್ನು ಸೃಜಿಸಿ, ಮಹಾಭಾರತ, ಭಾಗವತದಂತಹ ಸುಲಭವಾಗಿ ಜನಪದದಲ್ಲಿ ಜನಮಾನಸದಲ್ಲಿ  ಬೆರೆಯುವಂತಹ ಶ್ರೇಷ್ಠತೆಗಳನ್ನು ಮೂಡಿಸಿದವರು.  ‘ಬ್ರಹ್ಮ ಸೂತ್ರಗಳನ್ನು’ ಬರೆದವರು. 


ಕೃಷ್ಣವರ್ಣದ ಯಮುನಾ ನದಿಯ ದ್ವೀಪವೊಂದರಲ್ಲಿ ಜನ್ಮ ತಾಳಿದ್ದರಿಂದ ಇವರಿಗೆ ಕೃಷ್ಣದ್ವೈಪಾಯನ ಎಂಬ  ಹೆಸರು ಬಂತು.  ಕಪ್ಪುಬಣ್ಣದ ಮೈಯುಳ್ಳವರಾಗಿ  ಕೃಷ್ಣ ಎನಿಸಿಕೊಂಡರೆಂದು ಪ್ರತೀತಿ. ಇವರೂ 

ಕೃಷ್ಣನಾಗಿ,  ಶ್ರೀಕೃಷ್ಣನಷ್ಟೇ ಗೌರವಿಸಲ್ಪಟ್ಟವರು. ಭಗವದ್ಗೀತೆಯಲ್ಲಿ "ಮುನೀನಾಮಪ್ಯಹಂ ವ್ಯಾಸಃ" (ಮುನಿಗಳಲ್ಲಿ ನಾನು ವ್ಯಾಸ) ಎಂದು ಪರಮಾತ್ಮ ಹೇಳುತ್ತಾನೆ. 

ಬಾದರಾಯಣ, ವೇದವ್ಯಾಸ, ಪಾರಾಶರ್ಯ-ಇವು ಈ ಮುನಿಯ ಇನ್ನೂ ಕೆಲವು ಮುಖ್ಯ ಹೆಸರುಗಳು.

ಬದರೀವನದಲ್ಲಿ ಆಶ್ರಮವನ್ನು ಮಾಡಿಕೊಂಡು ತಪಸ್ಸು ಮಾಡುತ್ತಿದ್ದುದರಿಂದ ಇವರು  ಬಾದರಾಯಣನಾದರು. ಈ ಹೆಸರಿನಿಂದ ವೇದಾಂತದರ್ಶನದ ಅದರಲ್ಲೂ ವಿಶೇಷವಾಗಿ ಬ್ರಹ್ಮಸೂತ್ರದ, ಕರ್ತೃವೆಂದು ಪ್ರಸಿದ್ಧ ಪಡೆದಿದ್ದಾರೆ. 


ಪುರಾಣಗಳಲ್ಲಿ ಪ್ರತಿಪಾದಿತವಾಗಿರುವಂತೆ ಕಲ್ಪವೊಂದರ (ಒಂದು ಸಾವಿರ ಮಹಾಯುಗಗಳು) ಒಂದೊಂದು ಮಹಾಯುಗದಲ್ಲೂ ವೇದರಾಶಿಯನ್ನು ವಿಭಾಗ ಮಾಡುವುದಕ್ಕೋಸ್ಕರ ವಿಷ್ಣುವೇ ವ್ಯಾಸರೂಪಿಯಾಗಿ ಉದಯಿಸುತ್ತಾನೆ. ವೇದ ವಿಭಾಗ ಮಾಡಿದ ಕಾರಣದಿಂದ ಅಂಥ ಒಬ್ಬೊಬ್ಬ ಮುನಿಗೂ ವ್ಯಾಸ ಅಥವಾ ವೇದವ್ಯಾಸ ಎಂಬ ಹೆಸರು ಬಂದಿದೆ.  ಈ ಕುರಿತು ಮಹಾಭಾರತದ ಆದಿಪರ್ವ ಮತ್ತು 

ವಿಷ್ಣುಪುರಾಣಗಳಲ್ಲಿ ವಿವರಗಳಿವೆ.  

ಅಲ್ಲದೆ ಒಂದೊಂದು ಮಹಾಯುಗದ ಒಂದೊಂದು ದ್ವಾಪರದಲ್ಲೂ ಒಬ್ಬೊಬ್ಬ ವೇದವ್ಯಾಸ ಮುನಿಯ ಸಂಭವವಾಗುತ್ತದೆ. ಇಲ್ಲಿಯವರೆಗೆ ಇಪ್ಪತ್ತೇಳು ಮಹಾಯುಗಗಳು ಕಳೆದಿವೆ ; ಪ್ರಚಲಿತ ಮಹಾಯುಗ ಇಪ್ಪತ್ತಂಟನೆಯದು; ಇದರ ದ್ವಾಪರಕ್ಕೆ ಸಂಬಂಧಪಟ್ಟಂತೆ ಕೃಷ್ಣದ್ವೈಪಾಯನ ಮುನಿ ವೇದವ್ಯಾಸರಾಗಿದ್ದಾರೆ.


ಉಪರಿಚರವಸುವೆಂಬ ರಾಜನಿಗೆ ಮತ್ಸ್ಯಜಾತಳಾಗಿ ಮತ್ಸ್ಯಗಂಧಿಯೆನಿಸಿಕೊಂಡ ಸತ್ಯವತಿಯಲ್ಲಿ,  ವಸಿಷ್ಠನ ಮೊಮ್ಮಗ ಶಕ್ತಿಮಹರ್ಷಿಯ ಪುತ್ರನಾದ ಪರಾಶರ ಮುನಿಗೆ ಮಗನಾಗಿ ಜನಿಸಿದನಾದ್ದರಿಂದ ಕೃಷ್ಣದ್ವೈಪಾಯನರಿಗೆ ಪರಾಶರ್ಯನೆಂಬ ಹೆಸರು ಬಂತು.


ಕೌರವರ ಪಿತೃವಾದ ಧೃತರಾಷ್ಟ್ರನ ಮತ್ತು ಪಾಂಡವರ ಜನಕನಾದ ಪಾಂಡುವಿನ ಜೀವನದಲ್ಲಿ ಕೃಷ್ಣದ್ವೈಪಾಯನನ ಪಾತ್ರ ಗಮನಾರ್ಹವಾಗಿದೆ.  ಬ್ರಹ್ಮಲೋಕವನ್ನು ಪಡೆದಿದ್ದ ಮಹಾಭಿಷನೆಂಬ ಇಕ್ಷ್ವಾಕುರಾಜ ಗಂಗೆಯಲ್ಲಿ ಅನುರಾಗ ತೋರಿಸಿದ್ದರಿಂದ ಬ್ರಹ್ಮನ ಶಾಪಕ್ಕೆ ಸಿಕ್ಕಿ ತತ್ಪರಿಣಾಮವಾಗಿ ಚಂದ್ರವಂಶದ ಪ್ರತೀಪರಾಜನಿಗೆ ಶಂತನುವೆಂಬ (ಶಾಂತನು) ಹೆಸರುಳ್ಳ ಪುತ್ರನಾಗಿ ಭೂಲೋಕದಲ್ಲಿ ಜನಿಸುತ್ತಾನೆ; ಇವನಿಗೆ ಗಂಗೆಯಲ್ಲಿ ಜನಿಸಿದವನೇ ಭೀಷ್ಮ. ಪರಾಶರನೊಡನೆ ಸಂಯುಕ್ತಳಾಗಿದ್ದರೂ ಮತ್ಸ್ಯಕನ್ಯೆ ಸತ್ಯವತಿಯ ಕನ್ಯತ್ವ ಆ ಮುನಿಯ ವರಪ್ರಸಾದದಿಂದ ರಕ್ಷಿತವಾಗಿದ್ದು ಅವಳನ್ನು ಗಂಗೆಯಿಂದ ತ್ಯಕ್ತನಾಗಿದ್ದ ಶಂತನು ವರಿಸುತ್ತಾನೆ. ಶಂತನು ಸತ್ಯವತಿಯರ ಇಬ್ಬರು ಪುತ್ರರಲ್ಲಿ ಮೊದಲನೆಯವನಾದ ಚಿತ್ರಾಂಗದ ಯುದ್ಧದಲ್ಲಿ ಮಡಿದುದಲ್ಲದೆ, ದ್ವಿತೀಯ ಪುತ್ರನಾಗಿದ್ದ ವಿಚಿತ್ರವೀರ್ಯ ಅಂಬಿಕೆ, ಅಂಬಾಲಿಕೆ ಎಂಬ ತನ್ನ ಇಬ್ಬರು ಪತ್ನಿಯರನ್ನು ಬಿಟ್ಟು ಸಂತಾನವಿಲ್ಲದೆ ಸಾಯುತ್ತಾನೆ. ಹೀಗೆ ರಾಜ್ಯಕ್ಕೆ ಉತ್ತರಾಧಿಕಾರಿಗಳಿಲ್ಲದಂತಾಗಲು ಬ್ರಹ್ಮಚಾರಿಯಾಗಿದ್ದು ರಾಜ್ಯದ ಹಕ್ಕನ್ನು ತ್ಯಜಿಸಿದ್ದ ಬಲಮಗ ಭೀಷ್ಮನ ಸಲಹೆಯಂತೆ ಸತ್ಯವತಿ ಕೃಷ್ಣದ್ವೈಪಾಯನನನ್ನು ಬರಮಾಡಿಕೊಳ್ಳುತ್ತಾಳೆ. ತನ್ನ ಪೂರ್ವಸ್ಥಿತಿಯಲ್ಲಿ ಪರಾಶರನಿಂದ ತನ್ನಲ್ಲಿ ಜನಿಸಿದ ಆ ಮುನಿಯನ್ನು ಕುರಿತು ಸತ್ಯವತಿ ಬಲತಮ್ಮನ ಪತ್ನಿಯರಲ್ಲಿ ಧರ್ಮಾನುಸಾರವಾಗಿ ಸಂತಾನೋತ್ಪತ್ತಿ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ತಾಯಿಯ ಕೋರಿಕೆಯನ್ನಂಗೀಕರಿಸಿದ ಕೃಷ್ಣದ್ವೈಪಾಯನನಿಂದ ಅಂಬಿಕೆಯಲ್ಲಿ ಧೃತರಾಷ್ಟ್ರನೂ ಅಂಬಾಲಿಕೆಯಲ್ಲಿ ಪಾಂಡುವೂ ಜನಿಸುತ್ತಾರೆ. ಹೀಗೆ ಕೃಷ್ಣದ್ವೈಪಾಯನ ಕೌರವ ಪಾಂಡವರಿಗೆ ಪರಮಪೂಜ್ಯ ತಾತನೂ ಮಹಾಭಾರತದ ಕರ್ತೃವೂ ಆಗಿದ್ದಾನೆ.


ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳಬೇಕೆಂದು ಧೃತರಾಷ್ಟ್ರನಿಗೆ ಉಪದೇಶ, ಆಗಾಗ್ಗೆ ಯುಧಿಷ್ಠಿರಾದಿಗಳಿಗೆ ಸಹನೆ ಮುಂತಾದ ಗುಣಗಳನ್ನು ಕುರಿತು ಬುದ್ಧಿವಾದ, ಧರ್ಮಬೋಧ ಮುಂತಾದವು ಮಹಾಭಾರತದಲ್ಲಿ ಕೃಷ್ಣದ್ವೈಪಾಯನ ನಿರ್ವಹಿಸುವ ಗುರುಕಾರ್ಯಗಳು. ಶಾಂತಿ ಪರ್ವದ ಪ್ರಕಾರ ಇವರು ಪುತ್ರಪಾಪ್ತಿಗಾಗಿ ತಪಸ್ಸು ಮಾಡಿ ಘೃತಾಚಿಯೆಂಬ ಅಪ್ಸರೆಯಲ್ಲಿ ಶುಕನೆಂಬ ಸುಪುತ್ರನನ್ನು ಪಡಯುತ್ತಾರೆ. ಅವರು ಶುಕಮಹರ್ಷಿಗಳಾಗಿ ಪ್ರಸಿದ್ಧರು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ