ಶಂಕರನಾಗ್
ಶಂಕರನಾಗ್
ಶಂಕರ್ ನಾಗ್ ಅವರ ಬಗ್ಗೆ ಎಷ್ಟು ಬಾರಿ ನೆನಪು ಮಾಡಿಕೊಂಡರೂ ಅವರು ನಮ್ಮೊಡನೆ ಇಲ್ಲ ಎಂಬ ನೋವಿನ ಹೊರತಾಗಿ ಅದು ಹುರುಪಿನ ಸಂಗತಿಯೇ. ಅವರ ನೆನಪು ನಮ್ಮಲ್ಲಿ ಎಂದೂ ಹಸಿರು. ಆದರೆ ಅವರ ಕುರಿತ ನಮ್ಮ ನೆನಪುಗಳೆಲ್ಲಾ ಅವರ ಮೊದಲ ಚಿತ್ರದ ಶೀರ್ಷಿಕೆಯಂತೆ ‘ಒಂದಾನೊಂದು ಕಾಲದಲ್ಲಿ’. ಹಾಗಾಗಿ ನನ್ನ ಆಂತರ್ಯದಲ್ಲಿ ಅಂದು ಮೂಡಿದ ಈ ಸಾಲುಗಳನ್ನು ಮತ್ತೊಮ್ಮೆ ಇಲ್ಲಿ ಉಸುರುತ್ತಿದ್ದೇನೆ.
ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ, ಏಸೊಂದು ಸೊಗಸಿತ್ತ.
ನಮ್ಮ ಶಂಕರನಿದ್ದಾಗ ಎಷ್ಟೊಂದು ಸೃಜನೆಯಿತ್ತ, ನೆಚ್ಚಿನ ಸಂಕೇತವಿತ್ತ
ಮನೆ ಬೆಳಗೊ ಮಾಲ್ಗುಡಿ ದಿನಗಳಿತ್ತ, ಒಳ್ಳೊಳ್ಳೆಯ ಸಿನಿಮಾಗಳಿತ್ತ,
ಇಂದು ಬರಿ ನೆನಪೂ ಅಣ್ಣ, ಉಳಿದಿಹ ಈ ನಾಗ ನಮ್ಮೆದೆಯರಂಗ ಶಂಕರದೊಳಗ
ನಾನು 1980ರ ದಶಕದಲ್ಲಿ ಕಸ್ತೂರಿಬಾ ರಸ್ತೆಯಲ್ಲಿದ ನಮ್ಮ ಕಚೇರಿಯ ಮುಂದೆ ನನ್ನ ಗೆಳೆಯರೊಡನೆ ಮಾತನಾಡುತ್ತ ನಿಂತಿದ್ದೆ. ಯಾವುದೋ ಕಾಂತಿಯುತ ಕಂಗಳು ನನ್ನನ್ನು ಸೆಳೆದಂತಾಯ್ತು. ನಮ್ಮಿಬ್ಬರ ನೋಟಗಳೂ ಒಂದೇ ಸಮಯಕ್ಕೆ ಸ್ಪಂದಿಸಿದ ಆ ವೇಳೆಯಲ್ಲಿ ನನಗೆ ಅವರನ್ನು ಕಂಡ ದಿಗ್ಭ್ರಮೆಯಲ್ಲಿರುವಾಗಲೇ ನಗುಮುಖದಿಂದ "ಹಲ್ಲೋ ಚೆನ್ನಾಗಿದ್ದೀರ" ಎಂದು ಎಷ್ಟೋ ವರ್ಷದ ಸ್ನೇಹಿತನಂತೆ ನಗೆ ಬೀರಿದವರು ಮತ್ತ್ಯಾರೂ ಇಲ್ಲ ಶಂಕರನಾಗ್. ಶಂಕರನಾಗ್ ಅವರ ವ್ಯಕ್ತಿತ್ವಕ್ಕೆ ತಮ್ಮ ಇಡೀ ಸುತ್ತಲಿನ ಪ್ರಪಂಚವನ್ನೇ ತಮ್ಮದಾಗಿಸಿಕೊಳ್ಳುವ ಆಯಾಸ್ಕಾಂತಿಕ ಶಕ್ತಿ ಸಾಮರ್ಥ್ಯಗಳು ಸ್ವಾಭಾವಿಕವಾಗಿದ್ದವು ಎಂದು ನನಗೆ ಈ ರೀತಿಯಲ್ಲಿ ಮೂಡಿ ಬಂದ ಸ್ವಯಂ ಅನುಭವವಾಗಿದೆ.
ಗಿರೀಶ್ ಕಾರ್ನಾಡ್ ಅವರ “ಒಂದಾನೊಂದು ಕಾಲದಲ್ಲಿ” ಸಿನಿಮಾ ನೋಡಿದಾಗ ಶಂಕರನಾಗ್ ಮತ್ತು ಸುಂದರಕೃಷ್ಣ ಅರಸ್ ಅಚ್ಚಳಿಯದ ಮೋಡಿ ಮಾಡಿಬಿಟ್ಟಿದ್ದರು. ಆ ಚಿತ್ರದ ಅಭಿನಯ ಶಂಕರನಾಗ್ ಅವರಿಗೆ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದ ಶ್ರೇಷ್ಟನಟ ಪಟ್ಟ ತಂದುಕೊಟ್ಟಿತು. ನಂತರದಲ್ಲಿ ಅವರ ಹಲವು ಚಿತ್ರಗಳು ಬಂದರೂ ವಿಶೇಷ ಎನಿಸಿದ್ದು ಅವರೇ ನಿರ್ದೇಶಿಸಿದ ‘ಮಿಂಚಿನ ಓಟ’ ಮತ್ತು ‘ಆಕ್ಸಿಡೆಂಟ್’. ಈ ಎರಡೂ ಚಿತ್ರಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳ ಸುರಿಮಳೆಯನ್ನು ಗಳಿಸಿದವು. ಗಿರೀಶ್ ಕಾರ್ನಾಡ್ ಅವರು ನಿರ್ದೇಶಿಸಿದ ಹಿಂದಿ ಚಿತ್ರ ‘ಉತ್ಸವ್’ ದಲ್ಲಿ ಅವರು ಕಾಣಿಸುವ ಕಳ್ಳನ ಪಾತ್ರ ಮನೋಹರವಾಗಿತ್ತು. ಜನಸಾಮಾನ್ಯರಿಗೆ ಹತ್ತಿರವಾದ ಅವರ ಪಾತ್ರಗಳು ‘ಅಟೋ ರಾಜ’, ‘ಸೀತಾರಾಮು’ ಮತ್ತು ‘ಸಾಂಗ್ಲಿಯಾನ’ ಮುಂತಾದ ಚಿತ್ರಗಳು. ಆ ಪಾತ್ರಗಳು ಎಷ್ಟು ಪರಿಣಾಮ ಬೀರಿದವೆಂದರೆ ಇಂದೂ ಆಟೋಗಳಲ್ಲಿ ಮೂಡುವ ನಾಯಕರಲ್ಲಿ ಅತೀ ಹೆಚ್ಚಿನ ಸ್ಥಾನ ಶಂಕರನಾಗ್ ಅವರಿಗೇ ಸೇರುತ್ತದೆ. ಇಂದು ಕೂಡಾ ಹಲವಾರು ನಟರು ಈ ‘ಆಟೋರಾಜ’ ಪಟ್ಟವನ್ನು ಗಳಿಸಲು ಹೆಣಗುವುದಿದೆ. ಆದರೆ ಶಂಕರನಾಗರ ‘ಆಟೋರಾಜ’ನೇ ಇಂದೂ ಅತ್ಯಂತ ಜನಪ್ರಿಯ. ಶಂಕರನಾಗ್ ತಮ್ಮ ‘ಗೀತಾ’ ಮತ್ತು ‘ಜನ್ಮ ಜನ್ಮದ ಅನುಬಂಧ’ ಚಿತ್ರಗಳ ಮೂಲಕ ಇಳೆಯರಾಜ ಅವರನ್ನು ಕನ್ನಡ ಸಿನಿಮಾಗಳಿಗೆ ಕರೆತಂದರು. ಈ ಹಾಡುಗಳು ಜನಮನದಲ್ಲಿ ಚಿರಸ್ಥಾಯಿಯಾಗಿವೆ. ಅಷ್ಟೇ ಅಲ್ಲ, ಕೆಲವು ವರ್ಷಗಳ ಹಿಂದೆ ಅಮಿತಾಬ್ ಬಚ್ಚನ್ ನಟಿಸಿದ ಹಿಂದಿ ಚಿತ್ರ ‘ಚೀನಿ ಕಮ್’ನಲ್ಲಿ ಇಳೆಯರಾಜ ಅವರೇ, ಗೀತಾ ಚಿತ್ರದ ‘ಜೊತೆಯಲಿ, ಜೊತೆ ಜೊತೆಯಲಿ’ ಹಾಡಿನ ರಾಗಸಂಯೋಜನೆಯನ್ನು ಮತ್ತೊಮ್ಮೆ ಬಳಸುವಷ್ಟು ಮೋಡಿ ಮಾಡಿದ ಸೃಷ್ಟಿಗಳವು. ಶಂಕರನಾಗ್ ಅವರು ‘ಒಂದು ಮುತ್ತಿನ ಕಥೆ’ ಚಿತ್ರದ ಮೂಲಕ ರಾಜಕುಮಾರ್ ಅವರಿಗೆ ವಿಶೇಷ ಪಾತ್ರ ನೀಡಿ ಚಿತ್ರ ನಿರ್ದೇಶನ ಮಾಡಿದರು.
ಶಂಕರನಾಗ್ ಅವರಿಗೆ ಅವರ ಹೀರೋಪಟ್ಟದ ಬಗ್ಗೆ ಯಾವುದೇ ವ್ಯಾಮೋಹ ಇರಲಿಲ್ಲ. ಜನಸಾಮಾನ್ಯರ ಮಧ್ಯದಲ್ಲಿ ತಾನೇ ತಾನಾಗಿ ಓಡಿಯಾಡುತ್ತಿದ್ದರು. ಅಂದರೆ ಕಾಲ ಹರಣ ಮಾಡುತ್ತಿದ್ದರು ಅಂತ ಅರ್ಥವಲ್ಲ. ಅವರಷ್ಟು ಜೀವನದಲ್ಲಿ ಸಾಧಿಸಿದವರು ತುಂಬಾ ತುಂಬಾ ಕಡಿಮೆ. ಅವರಿಗೆ ಜೀವನವೆಂಬ ಕ್ಯಾನವಾಸ್ ಎಲ್ಲದಕ್ಕಿಂತ ದೊಡ್ಡದು ಎಂಬ ಜಾಗೃತಿ ಇತ್ತು.
ಶಂಕರನಾಗ್ ಜನ್ಮದಿನ ನವಂಬರ್ 9. 1954ರಲ್ಲಿ ಹೊನ್ನಾವಾರದ ಬಳಿಯ ಮಲ್ಲಾಪುರದಲ್ಲಿ ಜನಿಸಿದರು. ಅವರು ಚಿತ್ರರಂಗಕ್ಕೆ ಬರುವ ಮುಂಚೆ ಮುಂಬೈನ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’22 ಜೂನ್ 1897’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು. ಅಂದಿನ ದಿನಗಳಲ್ಲಿ ಪರಿಚಯರಾದ ಅರುಂಧತಿ ಅವರು ಅವರ ಜೀವನ ಜೊತೆಗಾತಿಯಾದರು. ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು.
ಮುಂದೆ ಶಂಕರ್ ತಮ್ಮ ಅಣ್ಣ ಅನಂತ್ ಅವರೊಡಗೂಡಿ ‘ಸಂಕೇತ್’ ರೆಕಾರ್ಡಿಂಗ್ ಸ್ಟುಡಿಯೋ ನಿರ್ವಹಣೆಯ ಜವಾಬ್ಧಾರಿ ಹೊತ್ತು ಕನ್ನಡ ಚಲನಚಿತ್ರಗಳ ಧ್ವನಿಮುದ್ರಣ ಕರ್ನಾಟಕದಲ್ಲೇ ಆಗುವತ್ತ ಪ್ರಮುಖ ಕೆಲಸ ಮಾಡಿದರು. ಹಲವು ಗೆಳೆಯರು, ಮಹನೀಯರನ್ನು ಪ್ರೆರೇಪಿಸಿ ‘ಕಂಟ್ರಿ ಕ್ಲಬ್’ ಅನ್ನು ವಿನೂತನ ಮಾದರಿಯಲ್ಲಿ ರೂಪಿಸಿದರು. ಈ ಮಧ್ಯೆ ಅಂದಿನ ದಿನದಲ್ಲಿ ಸರ್ಕಾರದ ಏಕಸ್ವಾಮ್ಯದಲ್ಲಿದ್ದ ದೂರದರ್ಶನವು ಖಾಸಗಿ ಸಂಸ್ಥೆಗಳಿಗೂ ಕಾರ್ಯಕ್ರಮ ನಿರ್ಮಾಣ ಮಾಡುವ ಆಹ್ವಾನ ನೀಡಿದಾಗ ಇಡೀ ವಿಶ್ವವೇ ಮೆಚ್ಚುವ ಹಾಗೆ ಆರ್.ಕೆ. ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ನಿರ್ಮಿಸಿ ನಿರ್ದೇಶಿಸಿ ಎಲ್ಲರ ಮನೆ ಮಾತಾದರು. ಮುಂದೆ ಅದೇ ಸರಣಿಯಲ್ಲಿ ‘ಸ್ವಾಮಿ’ ಕೂಡ ಬಂತು. ಇಂದೂ ಸಹ ಇದುವರೆಗೆ ಎಲ್ಲ ತರಹದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿ ಪಂಡಿತರು, ಬುದ್ಧಿವಂತ ಮತ್ತು ಸಾಮಾನ್ಯವರ್ಗ ಹೀಗೆ ಎಲ್ಲ ಜನಾಂಗದಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಕೃತಿ ‘ಮಾಲ್ಗುಡಿ ಡೇಸ್’ ಎಂಬುದು ನಿರ್ವಿವಾದವಾದ ಸಂಗತಿ. ಆರ್ ಕೆ ನಾರಾಯಣ್ ಅವರು ತಮ್ಮ ಕಥೆ ‘ಗೈಡ್’ ಚಲನಚಿತ್ರವಾದಾಗ ದೇವಾನಂದ್ ಅವರು ಕಥೆಯನ್ನು ತೆಗೆದುಕೊಂಡ ಬಗೆಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದರೆ, ಶಂಕರನಾಗರು ‘ಮಾಲ್ಗುಡಿ ಡೇಸ್’ ನಿರ್ವಹಿಸಿದ ಬಗ್ಗೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದರು ಎಂಬುದು ಕೂಡಾ ಇಲ್ಲಿ ಗಮನಾರ್ಹ.
ಶಂಕರನಾಗ್ ಆಟೋ ಚಾಲಕ, ಎಳನೀರು ಮಾರುವವ ಹೀಗೆ ವಿವಿಧ ಸ್ಥರದ ಜನರ ‘ಪರಿಚಯ’ ಕಾರ್ಯಕ್ರಮವನ್ನು ಕನ್ನಡದ ದೂರದರ್ಶನಕ್ಕೆ ಮನಸೆಳೆಯುವಂತೆ ನಿರ್ವಹಿಸಿಕೊಟ್ಟರು. ಹೀಗೆ ತಮ್ಮ ಜನಪ್ರಿಯತೆ, ಕ್ರಿಯಾಶೀಲ ಚಿಂತನೆ, ನಿರ್ದೇಶನ, ಸಾಮಾನ್ಯರೊಂದಿಗೆ ಸಾಮಾನ್ಯಜೀವನ ಇವೆಲ್ಲವನ್ನೂ ಸುಲಲಿತವಾದ ಸಮಪ್ರಜ್ಞೆಯಲ್ಲಿ ಅವರು ಕೊಂಡೊಯ್ದರು.
ಶಂಕರನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಸರ್ಕಾರದ ಮುಂದೆ ಇಟ್ಟಿದ್ದು ಇಡೀ ಕನ್ನಡ ನಾಡೇ ಬಲ್ಲ ಸಂಗತಿ. ಅಂದಿನ ಜನಪ್ರಿಯ ಮತ್ತು ಅಷ್ಟೇ ಕ್ರಿಯಾಶೀಲ ವ್ಯಕ್ತಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಗೆ ಶಂಕರ್ ಆತ್ಮೀಯ ಗೆಳೆಯ, ಜೊತೆಗೆ ಅಚ್ಚುಮೆಚ್ಚಿನ ವ್ಯಕ್ತಿ.
ಅವರು ‘ಜೋಕುಮಾರ ಸ್ವಾಮಿ’ಯನ್ನು ತೆರೆಗೆ ಅಳವಡಿಸುವ ಕೆಲಸ ಪ್ರಾರಂಭಿಸಿ ಅದರ ಚಿತ್ರಣದ ಸಂಬಂದಿತವಾಗಿ ಪಯಣದಲ್ಲಿದ್ದಾಗ ಅಪಘಾತವನ್ನೊಂದು ನೆಪಮಾಡಿ, ದೇವರು ಇಂತಹ ಸೃಷ್ಟಿಕರ್ತ ಸ್ವರ್ಗಕ್ಕೆ ಬೇಕು ಎಂದು ಭೂಲೋಕದ ಮೇಲಿನ ಹೊಟ್ಟೆಕಿಚ್ಚಿನಿಂದ ಕರೆದೊಯ್ದು ಬಿಟ್ಟ. ನಮ್ಮ ಕನ್ನಡ ಚಿತ್ರರಂಗ, ದೂರದರ್ಶನ ಇವುಗಳೆಲ್ಲ ಶಂಕರನಂತವರಿಲ್ಲದ ಕ್ರಿಯಾಶೂನ್ಯ ಬದುಕನ್ನು ದಿನ ನಿತ್ಯ ಪ್ರತಿಫಲಿಸುತ್ತಿವೆ. ಕನ್ನಡ ನಾಡು ಶಂಕರನಂತಹ ಸುಂದರ ಕನಸಿಗರಿಲ್ಲದೆ ಸೊರಗುತ್ತಿರಬಹುದೆಂಬ ಅನಿಸಿಕೆಯನ್ನು ನಿರಂತರವಾಗಿರಿಸಿದೆ. ಶಂಕರನಂತವರು ಹೆಚ್ಚು ಹೆಚ್ಚಾಗಿ ಈ ನಾಡಿನಲ್ಲುದಯಿಸಲಿ.
ಶಂಕರ್ ನಾಗ್ ಅವರು ಎಲ್ಲಿದ್ದರೂ ನಳನಳಿಸುವ ಸಂತೋಷ ಹರಡುತ್ತಿರುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳದು. ಆ ನಳನಳಿಸುವ ಸಂತಸ ಅವರ ಅಭಿಮಾನಿಗಳ ಬಾಳಲ್ಲೂ ತುಂಬಿರಲಿ ಎಂಬುದು ಈ ಮಹಾನ್ ವ್ಯಕ್ತಿಯ ಜನ್ಮದಿನದಂದು ನಮ್ಮ ಆಶಯ.
On the birth anniversary of Shankar Nag, a name synonym for art and creativity for us
ಕಾಮೆಂಟ್ಗಳು