ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಂತ ಕಲ್ಲೋಳ

ಅನಂತ ಕಲ್ಲೋಳ

ಅನಂತ ಕಲ್ಲೋಳ ಹಾಸ್ಯ ಬರಹಗಳಿಗೆ ಹೆಸರಾದ ವಿದ್ವಾಂಸರು.

ಅನಂತಕಲ್ಲೋಳ 1937ರ ಮಾರ್ಚ್ 24ರಂದು ಕೊಲ್ಲಾಫುರದಲ್ಲಿ ಜನಿಸಿದರು. ತಂದೆ ಅಣ್ಣಾಜಿ ಕಲ್ಲೋಳ.  ತಾಯಿ ರಮಾಬಾಯಿ. ಕನ್ನಡ ಗಂಡು ಮಕ್ಕಳ ಶಾಲೆ ಕ್ರಮಾಂಕ-೧ರಲ್ಲಿ ಇವರ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ನಡೆಯಿತು.  ಹೈಸ್ಕೂಲು ವಿದ್ಯಾಭ್ಯಾಸ ಬೆಳಗಾವಿಯಲ್ಲಿ ನಡೆಯಿತು. ನಂತರ ಫಿಲಾಸಫಿ ಮತ್ತು ಸೈಕಾಲಜಿ ವಿಷಯಗಳಲ್ಲಿ ಬಿ.ಎ. ಆನರ್ಸ್ ಪದವಿಗೆ ಬೆಳಗಾವಿಯ ಲಿಂಗರಾಜ ಕಾಲೇಜು ಮತ್ತು ವಿಜಾಪುರದ ವಿಜಯ ಕಾಲೇಜುಗಳಲ್ಲಿ ಓದಿದರು. 

ಅನಂತ ಕಲ್ಲೋಳ ಅವರು ಉದ್ಯೋಗಕ್ಕೆ ಕೇಂದ್ರೀಯ ಅಬಕಾರಿ ಮತ್ತು ಸುಂಕದ ಇಲಾಖೆಗೆ ಸೇರಿದರು. ಅವರಿಗೆ ಸಾಹಿತ್ಯ  ಗೀಳು ಜೊತೆ ಸೇರಿತು. ಇವರ ಹಾಸ್ಯ, ವಿಡಂಬನಾ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಗೊಳ್ಳುತ್ತ ಬಂದಿವೆ.  ಅವರ ನಗೆಬರಹಗಳ ಹತ್ತಾರು ಸಂಕಲನಗಳು  ಹೊರಬಂದಿವೆ. ಹಗರಣ, ಮೂಗಿನ ತುದಿ, ತುಂಡು-ಮುಂಡು, ವೈಭೋಗದ ವೈಖರಿ, ರಾಜಾಪಾಯಿಂಟ್, ಕಂಡಲ್ಲಿ ಗುಂಡು, ತಾಮ್ರದತಗಡು, ಬ್ರಹ್ಮ ಹಾಕಿದ ಗಂಟು, ರೇಡಿಯೋದಿಂದ ವಿಡಿಯೋದವರೆಗೆ ಮುಂತಾದುವು ಇವುಗಳಲ್ಲಿ ಸೇರಿವೆ. ಇವರ ನಾಟಕಗಳ ಸಂಕಲನಗಳಲ್ಲಿ ಅದೇ ದಾರಿ, ಕುಂಟು ಕಾಲಿಗೆ ವೈದ್ಯ, ಕನ್ನಡ ಸಂಚು-೧ ಸೇರಿವೆ. 

ಅನಂತ ಕಲ್ಲೋಳ ಅವರು ಪ್ರಜಾವಾಣಿ ಏರ‍್ಪಡಿಸಿದ್ದ ನಾಟಕ ರಚನಾ ಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ ವಿಜೇತರಾಗಿದ್ದರು. ಪ್ರಜಾಮತ, ಪ್ರಜಾವಾಣಿ, ಉತ್ಥಾನ ಪತ್ರಿಕೆಗಳ ಕಥಾಸ್ಪರ್ಧೆಯಲ್ಲೂ  ಬಹುಮಾನ ವಿಜೇತರಾದರು. ಕನಕದಾಸರು, ರಾಮದಾಸರು, ದೊಂಢೋ ಕೇಶವ ಕರ್ವೆ, ಸಾವರ್ಕರ್ ಜೀವನಚರಿತ್ರೆಯನ್ನು ರಾಷ್ಟ್ರೋತ್ಥಾನದ ಭಾರತ-ಭಾರತಿ ಬರೆದರು. ಇವು ಮರಾಠಿ, ಇಂಗ್ಲಿಷಿಗೂ ತರ್ಜುಮೆಗೊಂಡಿವೆ. ಬೆಳಗಿನ ಬೆಳಗು ಎಂಬ ಬಸವೇಶ್ವರರ ಕುರಿತು ಜೀವನ ಚರಿತ್ರೆ ಪ್ರಕಟಿಸಿದರು. ಚಿನ್ನ ನಿಯಂತ್ರಣ ಅನಿಯಮವನ್ನು ಕುರಿತಾದ ಕಾನೂನಿನ ಪುಸ್ತಕವನ್ನು ಅನುವಾದಿಸಿದ್ದಾರೆ.

ಅನಂತ ಕಲ್ಲೋಳ ಅವರ ‘ಹಗರಣ’ ವಿನೋದ ಸಾಹಿತ್ಯಕ್ಕಾಗಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ತುಂಡು-ಮುಂಡು ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ,  ಚಂದ್ರಮೌಳಿ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಸಮಗ್ರ ಹಾಸ್ಯ ಸೇವೆಗಾಗಿ ಪ್ರಹ್ಲಾದಕುಮಾರ ಭಾಗೋಜಿ ಸಾಹಿತ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

On the birthday of writer Anantha Kallol


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ