ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಳಾಸಾಹೇಬ ಲೋಕಾಪುರ


 ಬಾಳಾಸಾಹೇಬ ಲೋಕಾಪುರ 


ಡಾ. ಬಾಳಾಸಾಹೇಬ ಲೋಕಾಪುರ ಅವರು ಸಾಹಿತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. 


ಬಾಳಾಸಾಹೇಬ ಲೋಕಾಪುರ ಅವರು 1955ರ ಆಗಸ್ಟ್ 1ರಂದು ಜನಿಸಿದರು.ಇವರು ಮೂಲತಃ 

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಹಟ್ಟಿಯವರು.  ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಎಚ್.ಡಿ ಪಡೆದರು. 


ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಾಳಾಸಾಹೇಬ ಲೋಕಾಪುರ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕಥಾ ಸಂಕಲನಗಳು; ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು; ಭ್ರಮರಂಗೆ ಎಂಬ ಕವನ ಸಂಕಲನ  ಮುಂತಾದವು ಇವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.


ಬಾಳಾಸಾಹೇಬ ಲೋಕಾಪುರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚದುರಂಗ ಪ್ರಶಸ್ತಿ, 2019ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ (ಬಿಸಿಲುಪುರ ಮತ್ತು ಹುತ್ತ ಕಾದಂಬರಿ), ಹಾವನೂರ ಪ್ರತಿಷ್ಠಾನ ಹಾವೇರಿ(ಹುತ್ತ ಕಾದಂಬರಿಗೆ), ಸಿಂಗಾರಿಗೌಡ ಸಾಹಿತ್ಯ ಪ್ರಶಸ್ತಿ, ಮಂಡ್ಯ(ನೀಲಗಂಗಾ ಕಾದಂಬರಿಗೆ), ಚದುರಂಗ ಕಾದಂಬರಿ ಪ್ರಶಸ್ತಿ ಮೈಸುರು(ಹುತ್ತ ಕಾದಂಬರಿ), ಮಾಸ್ತಿ ಕಾದಂಬರಿ ಪುರಸ್ಕಾರ ಕೋಲಾರ( ಕೃಷ್ಣೆ ಹರಿದಳು ಕಾದಂಬರಿ), ಗಳಗನಾಥ ಕಾದಂಬರಿ ಪ್ರಸಸ್ತಿ ಹಾವೇರಿ(ಕೃಷ್ಣೆ ಹರಿದಳು ಕಾದಂಬರಿ), ವರ್ಧಮಾನ ಪ್ರಶಸ್ತಿ, ಮೂಡಬಿದಿರೆ(ಸಮಗ್ರ ಸಾಹಿತ್ಯಕ್ಕೆ), ಚಾವುಮಡರಾಯ ಪ್ರಶಸ್ತಿ ಕಸಾಪ ಬೆಂಗಳೂರು(ಜೈನ ಸಾಹಿತ್ಯಕ್ಕೆ), ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಮುಂತಾದವು ಇವರಿಗೆ ಸಂದ ಗೌರವಗಳಲ್ಲಿ ಸೇರಿವೆ.


ಹಿರಿಯರಾದ ಬಾಳಾಸಾಹೇಬ ಲೋಕಾಪುರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ