ಅನಂತರಾಮ್ ಜೆರ್ರಿ
ಅನಂತರಾಮ್ ಜೆರ್ರಿ
ಕನ್ನಡ ರಂಗಭೂಮಿಯೊಳಗೆ ಹರಿಯುತ್ತಿರುವ ಸಂಗೀತ ಪ್ರವಹಿನಿಯ ಪ್ರಮುಖ ಇಂಪಿನ ಝರಿ ಅನಂತರಾಮ್ ಜೆರ್ರಿ.
ಅನಂತರಾಮ್ ಜೆರ್ರಿ ಅವರು 1950ರ ಫೆಬ್ರವರಿ 5ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಆರ್.ಜಿ. ಕೃಷ್ಣನ್. ತಾಯಿ ಸೀತಾಲಕ್ಷ್ಮಮ್ಮನವರು. ಅನಂತರಾಮ್ ಜೆರ್ರಿ ಅವರ ಓದು ಸಾಗಿದ್ದು ಮರಿಮಲ್ಲಪ್ಪ ಶಾಲೆಯಲ್ಲಿ. ಪದವಿ ಪಡೆದ ನಂತರ ಬೆಂಗಳೂರಿನ ಕಂಪ್ಯೂಟರ್ ಸೆಂಟರ್ನಲ್ಲಿ ಮೂವತ್ತು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.
ಸಂಗೀತ ಮತ್ತ ರಂಗ ಚಟುವಟಿಕೆಗಳಲ್ಲಿ ಆಸಕ್ತಯಿಂದ ತೊಡಗಿಕೊಂಡ ಅನಂತರಾಮ್, ಶೇಷಾದ್ರಿ ಗವಾಯಿಗಳಲ್ಲಿ ತಬಲ ಕಲಿತರಲ್ಲದೆ ಹಲವಾರು ವಾದ್ಯಗಳನ್ನು ನುಡಿಸುವುದರಲ್ಲಿ ನೈಪುಣ್ಯತೆ ಸಾಧಿಸಿದರು. ಸ್ನೇಹಪರರಾದ ಅವರಿಗೆ ಬೆಂಗಳೂರಿನ ಎಲ್ಲ ಪ್ರಮುಖ ರಂಗ ಸಂಸ್ಥೆಗಳೊಡನೆಯೂ ನಂಟಿತ್ತು.
1971ರಲ್ಲಿ ಬಾಲಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ನಾಟಕೋತ್ಸವದಲ್ಲಿ ಬಿ.ವಿ. ಕಾರಂತರು ನಿರ್ದೇಶಿಸಿದ ಅಪಾಯಕಾರಿ ಕಥೆ ನಾಟಕದಲ್ಲಿ ಅವಕಾಶ ಪಡೆದ ಅನಂತರಾಮ್ ಜೆರ್ರಿ ಅವರು ಕಾರಂತರೊಡನೆ ಮುಂದೆ ನಿರಂತರ ಒಡನಾಟ ಹೊಂದಿದ್ದರು. 1972 ವರ್ಷ ರಂಗ ಚಳವಳಿಯ ಸುಗ್ಗಿಯ ಕಾಲ. ಜಸ್ಮಾ ಓಡನ್, ಹಯವದನ, ಋಷ್ಯಶೃಂಗ ಮುಂತಾದ ಬಿ.ವಿ. ಕಾರಂತರ ನಾಟಕಗಳಿಗೆ ಅನಂತರಾಮ್ ಸಂಗೀತ ಸಂಯೋಜನೆಗೆ ಜೊತೆಯಾದರು. ನಂತರ ಟಿ.ಎಸ್. ನಾಗಾಭರಣರ ಬಿಲ್ಲಿಕ್ಲಬ್ ಕಸೆಟ್ಸ್ ನಾಟಕಕ್ಕೆ ಸ್ವತಂತ್ರ ಸಂಗೀತ ನಿರ್ದೇಶನ ಮಾಡಿದರು. 1976-1992 ಅವಧಿಯಲ್ಲಿ ಬಿ.ವಿ. ಕಾರಂತರು ನಿರ್ದೇಶಿಸಿದ ಸತ್ತವರ ನೆರಳು, ಕಾಗೆಕುಣಿತ, ಕಾಡು ಮುಂತಾದ ನಾಟಕಗಳಲ್ಲಿ ಅಭಿನಯದ ಜೊತೆಗೆ ಸಂಗೀತದ ಸಹಾಯ ಮಾಡಿದರಲ್ಲದೆ ಮುಂದೆ ಹಯವದನ, ಅವಸ್ಥೆ, ಕತ್ತಲೆ ಬೆಳಕು, ಚೋರ ಚರಣದಾಸ, ಹೆಡ್ಡಾಯಣ, ಅಪರಾಧಿ ಕತೆ ಮುಂತಾದ ನಾಟಕಗಳಿಗೆ; ಪ್ರಸನ್ನರವರ ಹುತ್ತವ ಬಡಿದರೆ, ತದ್ರೂಪಿ; ಸುರೇಶ್ ಅನಗಳ್ಳಿಯವರ ಮಂಟೇಸ್ವಾಮಿ ಕಥಾ ಪ್ರಸಂಗ, ಮಧುರೈ ಕಾಂಡ; ಬಸವಲಿಂಗಯ್ಯನವರ ಮಾದಾರಿ ಮಾದಯ್ಯ; ಬಿ. ಜಯಶ್ರೀಯವರ ಕರಿಮಾಯಿ, ಲಕ್ಷಾಪತಿ ರಾಜನ ಕಥೆ, ಘಾಸಿರಾಮ ಕೊತ್ವಾಲ ಮುಂತಾದ ಬಹು ಪ್ರಸಿದ್ಧ ನಾಟಕಗಳಿಗೆ ಅನಂತರಾಮ್ ಜೆರ್ರಿ ಸಂಗೀತ ಸಹಕಾರ ನೀಡಿದರು. ಹೀಗೆ ಅವರು ಎಲ್ಲಾ ರಂಗಸಂಸ್ಥೆಗಳಿಗೂ ಆಪ್ತ ಅನಿವಾರ್ಯವೆನಿಸಿದ ಅಪರೂಪದ ಸಂಗೀತ ಸಂಗಾತಿ.
ಜೆರ್ರಿ ಅವರಲ್ಲಿ ಯಾವುದೇ ನಾಟಕಗಳಿಗೂ ಬಿರುಗಾಳಿ, ಮಳೆ, ಹರಿವ ನದಿ ನೀರಿನ ಜುಳುಜುಳು, ಕುದುರೆಯ ಖರಪುಟ ಮುಂತಾದ ಹಿನ್ನೆಲೆ ಸಂಗೀತದ ಶಬ್ದಗಳನ್ನು ಕರಟ, ಕಲ್ಲು, ಗೋಲಿ, ಬೊಂಬು, ಪರಂಗಿ ಕೊಂಬು, ನೀರಿನ ಡಬರಿ, ಪ್ಲಾಸ್ಟಿಕ್ ಬಕೆಟ್ ಮುಂತಾದುವುಗಳಿಂದ ಹೊಮ್ಮಿಸುವ ವಿಶೇಷ ಜಾಣ್ಮೆ ಕರಗತವಾಗಿತ್ತು. ತಮಟೆ, ಹೂಡಿಕೆ, ಕಂಜಿರ, ಚಂಡೆ, ಬ್ಯಾಂಡ್, ಕರಡಿವಾದ್ಯ ಮುಂತಾದುವುಗಳನ್ನು ನುಡಿಸುವ ಪ್ರಾವೀಣ್ಯತೆ ಅವರಲ್ಲಿದೆ.
ಅನಂತರಾಮ್ ಜೆರ್ರಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಸಂದಿವೆ.
ಅನಂತರಾಮ್ ಜೆರ್ರಿ ಅವರು ಮಗ ಶಶಾಂಕ, ನೃತ್ಯಗಾರ್ತಿ ಮಗಳು ಅಚಲ ಭಾರ್ಗವಿ, ಪತ್ನಿ ಶ್ಯಾಮಲರೊಡನೆ 'ರಂಗಸ್ವರ’ ಸಂಸ್ಥೆಯ ಮೂಲಕ ರಂಗ ಗೀತೆಗಳ ಪ್ರಚಾರ ನಡೆಸಿ ಕನ್ನಡ ನೆಲವಷ್ಟೇ ಅಲ್ಲದೆ ಭೂಪಾಲ್, ದೆಹಲಿ, ಮುಂಬೈ ಮುಂತಾದೆಡೆ ರಂಗಗೀತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ಹಲವಾರು ಧ್ವನಿಸುರುಳಿಗಳೂ ಜನಪ್ರಿಯವಾಗಿವೆ.
ಚಿತ್ರಕೃಪೆ:Achala Bhargavi 🌷🙏🌷
Anantharam Jerry
ಕಾಮೆಂಟ್ಗಳು