ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಾಣೇಶ ವಿಠಲದಾಸರು


ಪ್ರಾಣೇಶ ವಿಠಲದಾಸರು

ಪ್ರಾಣೇಶ ವಿಠಲದಾಸರ ಕಾಲ ಸುಮಾರು ಕ್ರಿ. ಶ. 1822. 15ನೆಯ ಶತಮಾನದಲ್ಲಿ ಶ್ರೀಪಾದರಾಜರಿಂದ ಪ್ರಾರಂಭವಾದ ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ನಾನೂರು ವರ್ಷಗಳ ತರುವಾಯ ಇದ್ದವರು. 

ಪ್ರಾಣೇಶ ವಿಠಲದಾಸರ ಪೂರ್ವಶ್ರಮದ ಹೆಸರು ಯೋಗೀಂದ್ರ. ಲಿಂಗಸೂಗೂರಿನ ಕುಲಕರ್ಣಿಗಳಾಗಿದ್ದು ಜಗನ್ನಾಥದಾಸರ ಶಿಷ್ಯತ್ವ ಸ್ವೀಕರಿಸಿ ಸುಮಾರು 60 ವರ್ಷಗಳ ಕಾಲ ಅವರ ಸೇವೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾದರು. ಜಗನ್ನಾಥದಾಸರಿಂದ ಪ್ರಾಣೇಶವಿಠಲ ಎಂಬ ಅಂಕಿತವನ್ನೂ ಹದಿನಾಲ್ಕು ದೇವತಾ ಪ್ರತಿಮೆಗಳನ್ನೂ ಪಡೆದರೆಂಬ ಮಾತಿದೆ. ಅಂಕಿತ ದೊರೆತ ಬಳಿಕ ಅನೇಕ ಪದ ಸುಳಾದಿ ಉಗಾಭೋಗಗಳನ್ನೂ ರಚಿಸಿದ್ದಲ್ಲದೇ ಗಾಲವಚರಿತ್ರೆ, ಕಾಲಿಯಾಮರ್ದನಕತೆ, ಬುಡ್ಡಿಬ್ರಹ್ಮನಕತೆ, ಗೋಪಿಕಾವಿಲಾಸ, ಭ್ರಮರಗೀತಾ, ಮುಯ್ಯದಪದ, ಶ್ರೀಹರಿವಾಯುಸ್ತುತಿ, ಸೀತಾ ಸ್ವಯಂವರ, ಕಾಳೀಸ್ವಯಂವರ, ಹನುಮದ್ವಿಲಾಸ (ಗರುಡಗರ್ವಭಂಗ), ಭೀಮಸೇನವಿಲಾಸ, ವೀರಭದ್ರವಿಲಾಸ, ಪಾರ್ಥ ವಿಲಾಸ, ಅನಿರುದ್ಧವಿಲಾಸ, ವಸಿಷ್ಠ ವಿಶ್ವಾಮಿತ್ರಾಖ್ಯಾನ, ಊಧ್ರ್ವಪುಂಡ್ರ್ಯ ಮಹಾತ್ಮೆ, ಶಿಥಿತ್ರಯ ನಿರ್ಣಯ ಮುಂತಾದ ಪ್ರಕರಣಗಳನ್ನು ಬಹುರಸಭರಿತವಾಗಿಯೂ ಭಕ್ತ್ಯುದ್ರೇಕವಾಗುವಂತೆಯೂ ಬರೆದಿದ್ದಾರೆಂದು ತಿಳಿದುಬರುತ್ತದೆ.

ಪ್ರಾಣೇಶ ವಿಠಲದಾಸರ ಕೀರ್ತನೆಗಳನ್ನು ಅರ್ಥ ಟಿಪ್ಪಣಿಗಳ ಸಹಿತವಾಗಿ ಶ್ರೀವರದೇಂದ್ರ ಸಾಹಿತ್ಯಮಂಡಲ ಲಿಂಗಸೂಗೂರು -ಇವರು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಿ, ಬೋಧಾಮೃತ, ಗುರುನಮನ, ದೇವತಾಮನನ, ಮತ್ತು ಸಾತ್ವಿಕ ಸ್ತವನ ಎಂಬ ನಾಲ್ಕು ಹೊತ್ತಗೆಗಳಾಗಿ ಹೊರತಂದಿದ್ದಾರೆ. ಬೋಧಾಮೃತದಲ್ಲಿ ಜನಸಾಮಾನ್ಯರಿಗೆ ಬೋಧಿಸಿದ ಭಕ್ತಿ ಜ್ಞಾನ ನೀತಿ ವಿವೇಕ ಸದಾಚಾರ ವ್ಯವಹಾರಾದಿಗಳನ್ನು ಕುರಿತ 38 ಕೀರ್ತನೆಗಳೂ ಒಂದು ಸುಳಾದಿಯೂ 3 ಉಗಾಭೋಗಗಳೂ ಇವೆ. 

ವಿಷಯ ತೃಷ್ಣೆಯಬಿಡು ವಿಶ್ವದಲ್ಲಿ ಬಾಳು ಕುಶಲವಪ್ಪದು ನಿನಗೆ ಎಂದೆಂದಿಗೂ

ಇದೇ ಈ ದಾಸನ ಬೋಧನೆಯ ತಿರುಳು. ಗುರುನಮನದಲ್ಲಿ ಮಧ್ವಯತಿ ಪರಂಪರೆಯ ಹಾಗೂ ಮಧ್ವಾಚಾರ್ಯರಿಂದ ಜಗನ್ನಾಥದಾಸರವರೆಗಿನ ಗುರು ಪರಂಪರೆಯ ಮೂವತ್ತು ಸ್ತೋತ್ರ ಪದಗಳಿವೆ. 

ಗುರುಗಳಾದ ಜಗನ್ನಾಥದಾಸರನ್ನು ರಂಗನೊಲಿದ ದಾಸರು ಎಂದು ಸ್ತುತಿಸಿದ್ದಾರೆ. ಮಧ್ವಮತಪರವಾದ ಹಾಗೂ ದೇವತಾ ತಾರತಮ್ಯ ಸಾರವಾದ ಸ್ತುತಿಪದ್ಯಗಳನ್ನು ದೇವತಾಮನನದಲ್ಲಿ ನೋಡಬಹುದು. ಕಕ್ಷದೇವತೆಗಳ ಸ್ತೋತ್ರ, ಸಮಸ್ತನದಿಗಳ ಸ್ತೋತ್ರ, ಗಣಪತಿದೇವರ ಸ್ತೋತ್ರದಿಂದ ಗರುಡ ದೇವರ ಸ್ತೋತ್ರದವರೆಗೆ ಒಟ್ಟು 23 ಬಿಡಿ ಸ್ತೋತ್ರಪದ್ಯಗಳಿವೆ. ನಾಲ್ಕನೆಯ ಸಾತ್ವಿಕ ಸ್ತವನ ಅಥವಾ ಋಜುನಮನದಲ್ಲಿ ಭಾರತೀದೇವಿಸ್ತುತಿ, ವಾಯುದೇವರಸ್ತುತಿ, ಭೀಮನಸ್ತುತಿ, ಬ್ರಹ್ಮದೇವರಸ್ತುತಿಯೇ ಮೊದಲಾದ 37 ಕೀರ್ತನೆಗಳಿವೆ.

ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ಬಂದ ಕೊನೆಯ ಅಪರೋಕ್ಷಜ್ಞಾನಿಯೆಂದು ಇವರನ್ನು ಗುರುತಿಸುವುದು ವಾಡಿಕೆ. ಇವರು ಪಾಂಡುರಾಜನ ಅಂಶವೆಂದು ಪ್ರತೀತಿ. ಗುರುಗಳೊಂದಿಗೆ ಪ್ರವಾಸ ಮಾಡಿ ಕೀರ್ತನೆ, ಶಾಸ್ತ್ರಾರ್ಥ ಮಾಡುವುದರಲ್ಲಿ ಪಾಲ್ಗೊಳ್ಳುತ್ತಿದ್ದುದಾಗಿ ತಿಳಿದು ಬರುತ್ತದೆ. ವರದಾನದಿ ತೀರದ ಕರ್ಜಗಿ ಎಂಬಲ್ಲಿಗೆ ಬಂದಾಗ ಅಲ್ಲಿಯ ದಾಸಪ್ಪ ಎಂಬ ವೇಶ್ಯಾಲೋಲನನ್ನು ಆದದ್ದಾಯ್ತಿನ್ನಾದರು ಒಳ್ಳೇಹಾದಿ ಹಿಡಿಯೊ ಪ್ರಾಣಿ ಎಂದು ಹಾಡಿ, ಸನ್ಮಾರ್ಗಕ್ಕೆ ಹಚ್ಚಿದರಂತೆ. ಆ ದಾಸಪ್ಪನೆ ಮುಂದೆ ಕರ್ಜಗೀ ದಾಸರೆಂದು ಖ್ಯಾತರಾಗಿ ಜಗನ್ನಾಥದಾಸರಿಂದ ಶ್ರೀದವಿಠಲ ಎಂಬ ಅಂಕಿತವನ್ನು ಪಡೆದು ಅವರ ಹರಿಕಥಾಮೃತಸಾರಕ್ಕೆ ಫಲಸ್ತುತಿಯನ್ನು ಬರೆದರಂತೆ. 

ಪ್ರಾಣೇಶರ ಶಿಷ್ಯರಲ್ಲಿ ಒಬ್ಬರಾದ ವೆಂಕಟವಿಠಲ ತನ್ನ ಗುರುವನ್ನು ಸ್ತುತಿಸಿದ್ದಾರೆ ಎಂದು ಮೆಚ್ಚಿಕೊಂಡಿದ್ದಾರೆ.
ಪ್ರಾಣೇಶದಾಸರಯ ತಮ್ಮ ಊರಾದ ಲಿಂಗಸೂಗೂರಿನಲ್ಲಿ ಗುರು ವರದೇಂದ್ರರ ವೃಂದಾವನವನ್ನು ಪ್ರತಿಷ್ಠಾಪಿಸಿದ್ದಾರೆ. ದಾಸರು `ಮಾರನಯ್ಯನೇ ಕೇಳಾ ಕಲಿವ್ಯಾಪ್ತಿ ಆದದ್ದು ಎಂಬ ಕೀರ್ತನೆಯಲ್ಲಿ ಲಿಂಗಸೂಗೂರಿನ ಸುತ್ತಮುತ್ತಲಿನ ಗುಡಿ ಹಾಳು, ಈಚಲ ಹಾಳು, ಹೆಸರೂರು, ಹಾಳ್ಕೇರಿ, ಕುಪ್ಪಿ, ಛತ್ರ ಚನ್ನಪಟ್ಟಣ, ಹುಲಿ ಗುಡ್ಡವೇ ಮೊದಲಾಗಿ ಸು. 30 ಊರುಗಳ ಹೆಸರುಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಗೂಡಾರ್ಥವೂ ಇದೆಯೆಂಬುದು ಬಲ್ಲವರ ಮತ.

ಮುಂದೆ ಪ್ರಾಣೇಶದಾಸರ ಶಿಷ್ಯಪರಂಪರೆ ಬೆಳೆದು ಗುರುಪ್ರಾಣೇಶವಿಠಲದಾಸ, ಸುಂದರವಿಠಲದಾಸ, ಸುಖಸುಂದರವಿಠಲದಾಸ, ರಾಮದಾಸ ಪ್ರಾಣೇಶವಿಠಲದಾಸ,  ಸಿರಿವಿಠಲದಾಸರೇ ಮೊದಲಾದವರಿಂದ ಸಮೃದ್ಧವಾಯಿತು.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ'  ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ