ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ವಿ. ಮಂಜುನಾಥ್


 ಎಚ್. ವಿ.  ಮಂಜುನಾಥ್


ವೃತ್ತಿಯಲ್ಲಿ ನುರಿತ ತಂತ್ರಜ್ಞರೂ ಅಧಿಕಾರಿಗಳೂ ಆಗಿ ಹೆಸರಾದ  ಎಚ್. ವಿ. ಮಂಜುನಾಥ್ ಅಪಾರ ಸಾಮಾಜಿಕ ಕಳಕಳಿಯ ಸಮಾಜ ಸೇವಕರಾಗಿದ್ದಾರೆ. 

ಜುಲೈ 9,  ಮಂಜುನಾಥ್ ಅವರ ಜನ್ಮದಿನ. ವಕೀಲರಾಗಿದ್ದ ಇವರ ತಂದೆ ಎಚ್. ಎಸ್. ವೆಂಕಟರಾಮಯ್ಯನವರು ಸ್ವಾತಂತ್ರ್ಯಹೋರಾಟದ ಕಾಲದ ಕಾಂಗ್ರೆಸಿಗರಾಗಿ ಅನೇಕ ಬಾರಿ  ಜೈಲುವಾಸ ಅನುಭವಿಸಿದವರು. ಮುಂದೆ ಕಾಂಗ್ರೆಸ್ ಇಂದ ಹೊರಬಂದು, ಸ್ವತಂತ್ರಪಕ್ಷ, ಭಾರತೀಯ ಜನಸಂಘಗಳಲ್ಲಿದ್ದು ತುರ್ತುಪರಿಸ್ಥಿತಿಯ ಕಾಲದಲ್ಲೂ ತುರಂಗವಾಸಕ್ಕೀಡಾದವರು.  ತುಮಕೂರು ಜಿಲ್ಲೆಯ ಆರ್ಎಸ್‍ಎಸ್ ಸಂಘ ಚಾಲಕರಾಗಿದ್ದ   ಎಚ್. ಎಸ್. ವೆಂಕಟರಾಮಯ್ಯನವರ ಅಪರಮಿತ ಸೇವೆಯನ್ನು  ಸಂಘದ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ನ್ಯಾಯ ನಿಷ್ಠೆ ಮತ್ತು ಸಾಮಾಜಿಕ ಕಾಳಜಿಗಳಿಗೆ ಬದ್ಧರಾದ ಇವರ ಕುರಿತು ಎಲ್. ಕೆ. ಅಧ್ವಾನಿ, ನಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು, ನ್ಯಾಯಮೂರ್ತಿ ಇ. ಎಸ್. ವೆಂಕರಾಮಯ್ಯ, ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ, ನ್ಯಾಯಮೂರ್ತಿ ರಾಮಾ ಜೋಯಿಸ್, ಪೇಜಾವರ ವಿಶ್ವೇಶತೀರ್ಥರು, ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು, ಮಲ್ಲಾಡಿ ಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು, ತ. ಸು. ಶಾಮರಾಯರು ಮುಂತಾದ ಅನೇಕ ಗಣ್ಯರು ಹಾಗೂ ಎಲ್ಲ ಪ್ರಸಿದ್ಧ ಆರ್ ಎಸ್ ಎಸ್ ಧುರೀಣರಿಗೆ ಅಪಾರ ಗೌರವವಿತ್ತು.  ತಂದೆಯವರ ಪ್ರೇರಣೆ ಮಂಜುನಾಥ್ ಅವರ ಬದುಕಿನಲ್ಲೂ ದೊಡ್ಡ ಪಾತ್ರವಹಿಸಿತು.
ರಾಷ್ಟ್ರೀಯ ಸ್ವಯಂ ಸಂಘದ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸಿದರು.

ಮಂಜುನಾಥ್ ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿ ಸಿದ್ಧಗಂಗಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ, ಐಐಎಮ್‍ನಲ್ಲೂ ಹೆಚ್ಚಿನ ವ್ಯಾಸಂಗ ಕೈಗೊಂಡರು.  ಎಚ್‍ಎಮ್‍ಟಿಯಲ್ಲಿ ಯಂತ್ರ ತಂತ್ರಜ್ಞ ಅಧಿಕಾರಿಗಳಾಗಿ ದೇಶದಾದ್ಯಂತ ಪ್ರಖ್ಯಾತ ಸಂಸ್ಥೆಗಳಲ್ಲಿ ಎಚ್ಎಮ್‍ಟಿ ಯಂತ್ರಗಳ ಕಾರ್ಯಚಾಲನಾ ಯೋಜನೆಗಳನ್ನು ನಿರ್ವಹಿಸಿದರು. ಎಚ್ಎಮ್‍ಟಿ ಅಂತರರಾಷ್ಟ್ರೀಯ, ಬಿಎಇಎಚ್ಎಎಲ್, ಐಎಫ್‍ಎಸ್  ಸಂಸ್ಥೆಗಳಲ್ಲಿನ ಅಧಿಕಾರಿಯಾಗಿ ದೇಶವಿದೇಶಗಳ ಹಲವು ಯೋಜನೆಗಳ ನಿರ್ವಹಣೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನಾ ಪ್ರಶಸ್ತಿಗಳನ್ನು ಗಳಿಸಿದ ಇವರು ಈಗ ನಿವೃತ್ತರಾಗಿದ್ದಾರೆ. 

ಮಂಜುನಾಥ್, ತಮ್ಮ ತಂದೆಯವರ ಸಾಮಾಜಿಕ ಕಾಳಜಿಗಳನ್ನು ಮೈಗೂಡಿಸಿಕೊಂಡು ದೇಶ ಮತ್ತು ಸಮಾಜಮುಖಿ ಚಿಂತನೆಗಳತ್ತ ಹರಿಸಿದರು.  ಇನ್ನೂ ಬಾಲ್ಯದಲ್ಲಿರುವಾಗಲೇ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಆರ್ಎಸ್ಎಸ್ ಚಟುವಟಿಕೆಗಳ ಜೊತೆ ಬೆಳೆದು ಬಂದ ಮಂಜುನಾಥ್ ಸಂಘದ ಸಾಂಸ್ಕೃತಿಕ ಮತ್ತು ಸಮಾಜಸೇವಾ ಚಟುವಟಿಕೆಗಳಲ್ಲಿ ಸದಾ ಮುಂದು. ತಾವು ಎಲ್ಲೇ ಕಾನೂನು ಉಲ್ಲಂಘನೆ, ಕಸ ಎಸೆಯುವುದು, ಸಾಮಾಜಿಕ
ಸ್ಥಳಗಳಲ್ಲಿ ಮೂತ್ರವಿಸರ್ಜನೆಗಳಲ್ಲಿ ತೊಡಗಿರುವವರನ್ನು ತಪ್ಪದೆ ಪ್ರಶ್ನಿಸುತ್ತಾರೆ.  ಅಂತೆಯೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಮುಂದಾಗುತ್ತಾರೆ. ಆಂಬ್ಯುಲೆನ್ಸ್ ವಾಹನಗಳು ದಾರಿ ಪಡೆಯಲು ತಡಕಾಡಿದ‍ ಸಂದರ್ಭಗಳಲ್ಲಿ ತಾವು ತಮ್ಮ ವಾಹನವನ್ನು ಒಂದೆಡೆ ನಿಲ್ಲಿಸಿ, ತಾವೇ ಸಂಚಾರಿ ವಾಹನಗಳನ್ನು ನಿಯಂತ್ರಿಸಿ ಆಂಬ್ಯುಲೆನ್ಸ್ ವಾಹನಗಳಿಗೆ ಇವರು ದಾರಿ ಮಾಡಿಕೊಟ್ಟಿರುವುದನ್ನು ನಾನೇ ಕಂಡಿದ್ದೇನೆ.

ಮಂಜುನಾಥ್ ಅವರು ಕರೋನಾ ಸಮಯದಲ್ಲಿ ಎಲ್ಲಡೆ ಸಂಚರಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ಹಗಲು ರಾತ್ರಿ ಶ್ರಮಿಸಿದರು.  ಇಲ್ಲಿನ ಫೋಟೊ ಕೊಲಾಜ್ನಲ್ಲಿರುವ ಕೆಲವು ಚಿತ್ರಗಳು ಇದಕ್ಕೆ ಸಾಕ್ಷಿಯಾಗಿವೆ.  ಕರೋನಾ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿ ವ್ಯವಸ್ಥೆ ಒದಗಿಸಿದರು.

ಮಂಜುನಾಥ್ ‘ಅಭ್ಯುದಯ’ ಎಂಬ ಬಡ ಮಕ್ಕಳ ಉಚಿತ ವಿದ್ಯಾಭ್ಯಾಸ, ಸಕಲ ವಿದ್ಯಾಸಲಕರಣೆಗಳು ಮತ್ತು ಬದುಕಿನ ವ್ಯವಸ್ಥೆಗಳ ಪೋಷಣೆ,  ಮಾನಸಿಕ ಮತ್ತು ದೈಹಿಕ ಅಭಿವೃದ್ಧಿ ಪೋಷಣೆ ಇವುಗಳನ್ನು ಒದಗಿಸುವುದರ ಜೊತೆಗೆ ತಾವೂ ಶಿಕ್ಷಕರಾಗಿ ಮಾರ್ಗದರ್ಶಕರಾಗಿ ಅವರ ಜೊತೆ ಅಪ್ತವಾಗಿ ಜೊತೆಗೂಡುತ್ತಾರೆ. ಒಂದಿನಿತೂ ಸ್ವಾರ್ಥವಿಲ್ಲದ ಈತ ಮಕ್ಕಳ ಈ ಸಂಪನ್ಮೂಲ ಕ್ರೋಡೀಕರಣಕ್ಕೆ ಅಪಾರ ಶ್ರದ್ಧೆವಹಿಸುತ್ತಾರೆ.

ಮಂಜುನಾಥ್ ಅವರಿಗೆ ಹಲವು ವರ್ಷ ಸಹೋದ್ಯೋಗಿಯಾಗಿದ್ದ ನನ್ನ ಅನುಭವದಲ್ಲಿ, ಅವರು ತಮ್ಮ ಪರಿಸರದಲ್ಲಿ ಯಾರು ಯಾವುದೇ ರೀತಿಯಲ್ಲಿ ಜೀವನದಲ್ಲಿ ಬಳಲುತ್ತಿದ್ದರೂ ಅವರಿಗೆ ಮಾನಸಿಕ ಬೆಂಬಲ ಮತ್ತು ಸಹಾಯ ನೀಡಲು ಮುಂದಾದವರು.  ಹೀಗಾಗಿ ಅವರನ್ನು ಸಂಪರ್ಕಿಸಲು ಜನ ಸದಾ ಮುಂದು.  ಬಲಪಂಥೀಯ ನಿಲುವುಗಳ ಬಗ್ಗೆ ಒಲವುಳ್ಳವರಾದರೂ, ಮಾನವೀಯತೆ, ಸ್ನೇಹ, ಪ್ರೀತಿಗಳು ಅವರ ಪ್ರಧಾನ ಕಾಳಜಿ. ತಾವು ಕಂಡ ಪ್ರಾಮಾಣಿಕತೆ, ಕುಶಲತೆ, ದಕ್ಷತೆಗಳನ್ನು ಗೌರವಿಸಿ ಅವರಿಗೆ ಸಹಾಯ ನೀಡಿರುವುದು ಅವರ ಮತ್ತೊಂದು ದೊಡ್ಡಗುಣ.

ದೇಶ, ಆರ್ಥಿಕತೆ, ಸಮಾಜ, ರಾಜಕೀಯ ಮತ್ತು ಜನಜೀವನದ ವಸ್ತುಸ್ಥಿತಿಯ ವಿಶಿಷ್ಟ ವಿಶ್ಲೇಷಕರಾದ ಮಂಜುನಾಥ್ ಅವರ ಅನೇಕ ವಿಡಿಯೋ ಮಾತುಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಬಂದಿವೆ.  ಇವೆಲ್ಲಕ್ಕೂ ಮಿಗಿಲಾಗಿ ಅವರಿಗಿರುವ ದೇಶ ಮತ್ತು ಸಾಮಾಜಿಕ ಕಾಳಜಿಗಳು ಅವರ ಅಡಿಯಲ್ಲಿಟ್ಟಲ್ಲೆಲ್ಲ ಪ್ರಕಾಶಿಸಿ ಅನೇಕರ ಬಾಳಿಗೆ ಬೆಳಕಾಗಿವೆ.  ತಮ್ಮ ಬಗ್ಗೆ ಒಂದಿನಿತೂ ಚಿಂತಿಸದ ನನಗೆ ಈತ ಒಂದು ದೊಡ್ಡ ವಿಸ್ಮಯ. 

ಆತ್ಮೀಯರಾದ ಮಂಜನಾಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ