ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾ. ನಾ. ರಾಮಣ್ಣ


 ಮಾ. ನಾ. ರಾಮಣ್ಣ


ಮಾ. ನಾ. ರಾಮಣ್ಣ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಮೌಲ್ಯಯುತ ರಾಜಕಾರಣಿಯಾಗಿ, ಸಾಮಾಜಿಕ ಬದ್ಧತೆಯುಳ್ಳ ಸರಳ ಸಮಾಜ ಸೇವಕರಾಗಿ ಸ್ಮರಣೀಯರೆನಿಸಿದ್ದಾರೆ. 

ರಾಮಣ್ಣ ಅವರು 1923ರ ಮಾರ್ಚ್ 1ರಂದು ಜನಿಸಿದರು. ತಾಯಿ ಲಕ್ಷ್ಮೀದೇವಮ್ಮ.   ತಂದೆ ನಾರಸಿದೇವರಯ್ಯ. ಮಾಯಸಂದ್ರ ಮತ್ತು ಮೈಸೂರುಗಳಲ್ಲಿ  ಇವರ ವಿದ್ಯಾಭ್ಯಾಸ ನಡೆಯಿತು. ರಾಮಣ್ಣನವರು ಗಾಂಧೀಜಿಯವರ ಗಾಢ ಪ್ರಭಾವ ಕ್ಕೊಳಗಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತಮ್ಮ 16ನೇ ವಯಸ್ಸಿನಲ್ಲಿಯೇ ಕಾಂಗ್ರೆಸ್‌ ಸೇರಿ ಸ್ವಾತಂತ್ಯ ಚಳುವಳಿಗೆ ಧುಮುಕಿದರು. ತಾಳಕೆರೆ
ಸುಬ್ರಹ್ಮಣ್ಯಂ ನೇತೃತ್ವ ದಲ್ಲಿ ಅರಣ್ಯ ಸತ್ಯಾಗ್ರಹ, ಪಾನನಿರೋಧ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ರಾಮಣ್ಣನವರು 10 ತಿಂಗಳ ಕಾಲ ಸೆರೆವಾಸವನ್ನೂ ಅನುಭವಿಸಿದರು. 1942ರ ಚಲೇಜಾವ್‌ ಚಳುವಳಿಯಲ್ಲಿಯೂ ಹಾಗೂ
1947ರ ಮೈಸೂರು ಚಲೋ ಚಳುವಳಿಯಲ್ಲಿಯೂ ಭಾಗವಹಿಸಿದ್ದರು. ಸ್ವಾತಂತ್ರಕ್ಕಾಗಿ ಮಾಡಿದ ವಿವಿಧ
ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿದರು.  

ರಾಮಣ್ಣನವರು ತಾಲ್ಲೂಕು, ಜಿಲ್ಲಾ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿಯ ಸದಸ್ಯರಾಗಿಯೂ ಪ್ರಾರಂಭದಿಂದಲೂ ಸೇವೆ ಸಲ್ಲಿಸುತ್ತಾ ಬಂದರು.  1943ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿಯೇ ಮಾಯಸಂದ್ರ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಆನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ, ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಅತ್ಯುತ್ತಮ ಸೇವೆ ಸಲ್ಲಿಸಿದರು. ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ 1963ರಿಂದ 1967ರವರೆಗೆ ಸೇವೆ ಸಲ್ಲಿಸಿದರು. ಇವುಗಳಲ್ಲದೆ ರಾಜ್ಯದ ಅಪೆಕ್ಸ್‌ ಬ್ಯಾಂಕ್‌, ಭೂ ಅಭಿವೃದ್ಧಿ ಬ್ಯಾಂಕ್‌, ಮಾರ್ಕೆಟಿಂಗ್‌ ಫೆಡರೇಷನ್ನಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ತುರುವೇಕೆರೆ, ತಿಪಟೂರು, ತುಮಕೂರಿನ ವೃವಸಾಯೋತ್ಪನ್ನ
ಮಾರಾಟ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  1967ರಲ್ಲಿ ವಿಧಾನಸಭಾ ಸದಸ್ಯರಾಗಿ ರಾಜ್ಯದ ಜನರ ಸೇವೆಯನ್ನು ಮಾಡಿದ್ದರು. ಸರ್ವೋದಯ ಶಿಕ್ಷಣ ಸಮಿತಿಯ ಸಂಸ್ಥಾಪಕ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು.  ದಿ॥ ಮಾ. ಕೃ. ನರಸಿಂಹಯ್ಕನವರು ಸ್ಥಾಪಿಸಿದ ಹರಿಜನ ವಿದ್ಯಾರ್ಥಿ ನಿಲಯದ ಸದಸ್ಯರಾಗಿ ಸೇವೆ ಸಲ್ಲಿಸಿದರು. ತುರುವೇಕೆರೆ ತಾಲ್ಲೂಕು ಬೋರ್ಡಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. 

ರಾಮಣ್ಣನವರು ಇಷ್ಟೆಲ್ಲ ಜನಪ್ರಿಯತೆ ಹೊಂದಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದರೂ, ಸರಳ ಜೀವನ ಮಾಡುತ್ತಾ ತನ್ನ ಮತ್ತು ಸುತ್ತಮುತ್ತಲ ಗ್ರಾಮದ ಜನರ ಹಿತವನ್ನು ಬಯಸುತ್ತ ತಮ್ಮಿಂದಾಗುವ ನೆರವನ್ನು ನೀಡುತ್ತ ಜೀವನ ನಡೆಸಿದರು. ಮಾಯಸಂದ್ರದಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಂಡು ಎಲ್ಲಾ ಕಾರ್ಯಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸುವ ಸ್ವಭಾವವನ್ನು ಹೊಂದಿದ್ದರು.

1967ರಲ್ಲಿ ಶಾಸಕರಾಗಿ ಆಯ್ಕೆಯಾದ ರಾಮಣ್ಣನವರು ನಿರ್ವಹಿಸಿದ ಆದ್ಯತೆಯ ವಿಷಯಗಳು ಒಂದೆರಡಲ್ಲ. ಬರಪರಿಹಾರಕ್ಕೆ ಶಾಶ್ವತ ಮಾರ್ಗೋಪಾಯಗಳು, ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಸಾಮಾನ್ಯರಿಗೆ ಆಹಾರ, ವಸತಿ, ಆರೋಗ್ಯ ಈ ಮೂರೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ
ಕಾಳಜಿ, ರೈತರ ಹಿತಾಸಕ್ತಿ ಇವೆಲ್ಲಾ ಒಬ್ಬ ಜನಪ್ರತಿನಿಧಿಯಾಗಿ. ರಾಮಣ್ಣನವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿ ನಿಂತಿವೆ ಎಂದು ಜನ ಇಂದೂ ಸ್ಮರಿಸುತ್ತಾರೆ.  ಅಧಿಕಾರವನ್ನು ಒಂದಿನಿತೂ ಸ್ವಂತಿಕೆಗೆ ಬಳಸದೆ ಅದಕ್ಕೇ ಅಂಟಿ ಕೂರದೇ ಅದನ್ನೊಂದು ವೇಷವನ್ನಾಗಿ ತೊಟ್ಟು
ತಮ್ಮ ಪಾತ್ರ ಮುಗಿದ ನಂತರ ಸೀದಾ ಕಳಚಿಟ್ಟು ನಿರುಮ್ಮಳರಾಗಿ ಹೊರಟುಹೋದರು. ಶಾಸಕರಾದಾಗ ಅವರು ಅಂದಿನ ಕಾಲಕ್ಕೇ ಒಬ್ಬ
ವ್ಯಕ್ತಿ ಒಂದು ಹುದ್ದೆ ತತ್ವವನ್ನು ಸ್ವಯಂಪ್ರೇರಿತರಾಗಿ ಅಳವಡಿಸಿಕೊಂಡು ಡಿಸಿಸಿ ಬ್ಯಾಂಕ್‌ ಹಾಗೂ ಜಿಲ್ಲಾ ಸಗಟು ವ್ಯಾಪಾರಿ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷ, ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹಿರಿಯ ಮಾದರಿ ತೋರಿದರು. 1965ರಲ್ಲಿ ತೀವ್ರ ಬರ ಕಾಣಿಸಿಕೊಂಡಾಗ ರಾಮಣ್ಣನವರು ಜಿಲ್ಲಾ ಸಗಟು ವ್ಯಾಪಾರಿ ಸಹಕಾರ ಬ್ಯಾಂಕ್‌ ಮುಖಾಂತರ ಇಡೀ ಜಿಲ್ಲೆಯಲ್ಲಿ ಜನರಿಗೆ ಆಹಾರ ವಿತರಿಸುವ
ಒಂದು ಹೊಸ ವ್ಯವಸ್ಥೆಯನ್ನೇ ರೂಪಿಸಿದ್ದರು.
ಶಾಸನ ಸಭೆಗಳಲ್ಲಿ ಅವರು ಪಡಿತರ ಅಕ್ಕಿಯ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಪದೇ ಪದೇ ಸರ್ಕಾರದ ಗಮನ ಸೆಳೆದಿದ್ದರು. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ದರ ಏರಿಸಿರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಗುತ್ತಿದ್ದ ಶಿಕ್ಷಣದಲ್ಲಿನ ತಾರತಮ್ಯ ನೀತಿಯನ್ನು
ಕಟುವಾಗಿ ಟೀಕಿಸಿ ಅಂದೇ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದರು.

ರಾಮಣ್ಣನವರು ಗಾಂಧೀಜಿಯವರ ಪಡಿಯಚ್ಚೇ ಎಂಬಂತೆ ಬದುಕಿದರು.  ವೇಷ, ಭೂಷಣಗಳಿಂದ ಹಿಡಿದು ನಡೆನುಡಿಯಲ್ಲೂ ಅವರು ಪಕ್ಕಾ ಗಾಂಧಿ ಅನುಯಾಯಿ. ಮಾಯಸಂದ್ರದ ಅವರ ಮನೆ ಒಂದು ರೀತಿಯಲ್ಲಿ ಸಬರಮತಿ ಆಶ್ರಮವೇ ಆಗಿತ್ತು ಎಂಬ ಮಾತಿತ್ತು. 

ಮಾ. ನಾ. ರಾಮಣ್ಣ ಅವರು 1989ರ ಜೂನ್ 29ರಂದು ಈ ಲೋಕವನ್ನಗಲಿದರು. 2023 ನೆಯ ವರ್ಷದಲ್ಲಿ, ರಾಮಣ್ಣನವರು ಹುಟ್ಟಿ 100 ವರ್ಷಗಳಾದ ಸವಿನೆನಪಿಗೆ ಅವರ ಹುಟ್ಟೂರು ಮಾಯಸಂದ್ರದಲ್ಲಿ ಜನ್ಮಶತಾಬ್ಧಿ ಸಮಾರಂಭವನ್ನು ಅವರ ಅಭಿಮಾನಿಗಳು ನೆರವೇರಿಸಿದರು.

ಕೃತಜ್ಞತೆ:. ರಾಮಣ್ಣನವರ ಸುಪುತ್ರರಾದ Swamy Mrn 

On the birth anniversary freedom fighter, honest politician and social worker of M. N. Ramanna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ