ನಾ ದಾಮೋದರ ಶೆಟ್ಟಿ
ನಾ ದಾಮೋದರ ಶೆಟ್ಟಿ
ನಾದಾ ಎಂದೇ ಪ್ರಖ್ಯಾತರಾದ ಡಾ. ನಾ ದಾಮೋದರ ಶೆಟ್ಟಿ ಅವರು ಪ್ರಾಧ್ಯಾಪಕರಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಸಾಹಿತಿಯಾಗಿ, ಮಹಾನ್ ಸಂಘಟನಾಕಾರರಾಗಿ ಹೀಗೆ ಬಹುಮುಖಿ ಸಾಧಕರು.
ನಾ.ದಾಮೋದರ ಶೆಟ್ಟಿಯವರು 1951ರ ಆಗಸ್ಟ್ 2ರಂದು ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ ಜನಿಸಿದರು. ತಂದೆ ಕುಂಞಕಣ್ಣ ಚೆಟ್ಟಿಯಾರ್. ತಾಯಿ ಕುಂಞಮ್ಮ. ಇವರ ಪ್ರಾರಂಭಿಕ ಶಿಕ್ಷಣ ಕುಂಬಳೆಯಲ್ಲಿ, ಪದವಿ ವ್ಯಾಸಂಗ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಮತ್ತು ಎಂ. ಎ. ವ್ಯಾಸಂಗ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯಿತು. ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು.
ದಾಮೋದರ ಶೆಟ್ಟಿಯವರು ಪ್ರಾರಂಭದಲ್ಲಿ ಕೊಡಗಿನ ನೆಲಜಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಮುಂದೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ 36 ವರ್ಷಗಳ ದೀರ್ಘಸೇವೆಯ ನಂತರ ನಿವೃತ್ತರಾದರು.
ನಾದಾ ಅವರು ಎಳೆಯ ವಯಸ್ಸಿನಿಂದಲೇ ನಾಟಕದಲ್ಲಿ ಅಭಿನಯ, ಯಕ್ಷಗಾನಗಳತ್ತ ಒಲವು ಮೂಡಿಸಿಕೊಂಡರು. ಕೇರಳದ ತ್ರಿಶೂರಿನ ಸ್ಕೂಲ್ ಆಫ್ ಡ್ರಾಮದಲ್ಲಿ ತರಬೇತಿ ಪಡೆದ ನಂತರ ಸಮುದಾಯ ನಾಟಕ ಸಂಸ್ಥೆಯಲ್ಲಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಭಾಗಿಯಾದರು. ಮಂಗಳೂರಿನಲ್ಲಿ ಸಮಾನ ಮನಸ್ಕರೊಡನೆ ಸೇರಿ 'ಭೂಮಿಕಾ' ಎಂಬ ನಾಟಕ ತಂಡ ಕಟ್ಟಿದರು. ಅದರ ಸ್ಥಾಪಕ ಕಾರ್ಯದರ್ಶಿಯಾಗಿ, ನಟರಾಗಿ, ನಿರ್ದೇಶಕರಾಗಿ ಅನೇಕ ರಂಗಪ್ರಯೋಗಗಳಿಗೆ ಕಾರಣಕರ್ತರಾದರು. ಹಲವಾರು ಕಲಾತ್ಮಕ ಸಿನಿಮಾಗಳಲ್ಲಿ ಹಾಗೂ ಕಿರುತೆರೆಯ ಕಥಾನಕಗಳಲ್ಲಿಯೂ ಅಭಿನಯಿಸಿದರು. ಮಂಗಳೂರಿನ ಕನ್ನಡ ಸಂಘ, ವೇದಿಕಾ ಪ್ರಕಾಶನ, ಭಾವಗಂಗೋತ್ರಿ, ಮಂಗಳಾ ಫಿಲಂ ಸೊಸೈಟಿ, ದರ್ಶನ್ ಫಿಲಂ ಸೊಸೈಟಿ, ಅಭಿವ್ಯಕ್ತ, ರಂಗ ಸಂಗಾತಿ, ಮುಂತಾದ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾದರು. ಸಾಂಸ್ಕೃತಿಕ ರಂಗದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಗೆಳೆಯರುಗಳಾದ ದಾಮೋದರ ಶೆಟ್ಟಿ, ಸತ್ಯನಾರಾಯಣ ಮಲ್ಲಿಪಟ್ಟಣ, ಜವಳಿ ನಾಗರಾಜರಾವ್, ನರಸಿಂಹ ಮೂರ್ತಿ ಸೇರಿ ‘ದಾಸಜನ’ವಾಗಿ ರೂಪುಗೊಂಡ ಒಕ್ಕೂಟ ಮಂಗಳೂರಿನಲ್ಲಿ ಕ್ರಿಯಾಶೀಲವಾಗಿತ್ತು. ಬೆಂಗಳೂರಿಗೆ ಬಂದಾಗ ಗೆಳೆಯರೊಂದಿಗೆ ಸೇರಿ ಕಟ್ಟಿಕೊಂಡ ಸಂಸ್ಥೆ 'ತಿಂಮಸೇನೆ', ತಿಂಗಳಿಗೊಂದು ಬಾರಿ ಮನೆಯಲ್ಲಿ ಸೇರಲೊಂದು ನೆಪವಾಗಿ ಭವ್ಯ ಕಾರ್ಯಕ್ರಮಗಳಿಗೂ ನಾಂದಿಯಾಯ್ತು. ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಪುಸ್ತಕದ ಜೋಳಿಗೆಯೆಂಬ ಹೆಸರಿನಲ್ಲಿ ನಾಡಿನ ಹಲವೆಡೆಗಳಿಂದ ಪುಸ್ತಕಗಳ ಸಂಗ್ರಹದ ಕೆಲಸಗಳನ್ನು ಮಾಡಿದರು. ಇದಕ್ಕಾಗಿ ಒಂದು ವಿದ್ಯಾರ್ಥಿ ತಂಡವನ್ನು ಕಟ್ಟಿ ಹಿರಿಯ ಸಾಹಿತಿಗಳು ಮತ್ತು ಪುಸ್ತಕ ಆಸಕ್ತರ ಮನೆಗೆ ಹೋಗಿ ಅವರಲ್ಲಿ ಹೆಚ್ಚಿರುವ ಪುಸ್ತಕಗಳನ್ನು ಸಂಗ್ರಹಿಸುವುದು ಈ ಯೋಜನೆಯ ಉದ್ದೇಶ. ಹೀಗೆ ಕನ್ನಡ ವಿಭಾಗದಲ್ಲಿ ಸುಮಾರು 5600 ದಾನ ಪಡೆದ ಪುಸ್ತಕಗಳನ್ನು ಕೆಟಲಾಗ್ ಮಾಡಿ ಇಡಲಾಗಿದೆ.
ನಾದಾ ಅವರು ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಗೆಜೆಟಿಯರ್, ಕರ್ನಾಟಕ ನಾಟಕ ರಂಗಾಯಣ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ, ಕರ್ನಾಟಕ ಸರಕಾರದ ವಿವಿಧ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಸಂಘಟನೆಗಳಿಗೆ ಮತ್ತು ಕಾರ್ಯಕ್ರಮಗಳಿಗೆ ನೆರವು ನೀಡಲು ನಮ್ಮ ನಾಡು, ಜಾಗರೂಕ, ಜನದನಿ, ಮನತೆರೆ, ನಾದಭಾವ ಮುಂತಾದವುಗಳಿಗಾಗಿ ಬರೆದು ಸಿದ್ಧಪಡಿಸಿದ ಹಾಡುಗಳ ಸಿಡಿ ಬಿಡುಗಡೆ ಮಾಡಿದ್ದಾರೆ. ತೆಂಕುತಿಟ್ಟು ಯಕ್ಷಗಾನ ಕಾಲೇಜಿನ ಯಕ್ಷಗಾನ ತಂಡವನ್ನು 1988 ರಲ್ಲಿ ಇಂಗ್ಲೆಂಡಿಗೆ ಕರೆದೊಯ್ದು ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದರು. 1992ರ ಇಂಗ್ಲೆಂಡ್ ಪ್ರವಾಸದಲ್ಲಿ ಯಕ್ಷಗಾನದ ಜೊತೆ ಭರತನಾಟ್ಯತಂಡವನ್ನೂ ಕೊಂಡೊಯ್ದಿದ್ದರು.
ನಾ.ದಾಮೋದರ ಶೆಟ್ಟಿಯವರು ಪ್ರಜಾವಾಣಿಯಲ್ಲಿ ಬರೆದ ವಿಶಿಷ್ಟ ಅಂಕಣ ‘ತೆಂಕಣದ ಸುಳಿಗಾಳಿ’ (೧೯೯೫-೨೦೦೦). ಇದು ಪುಸ್ತಕವಾಗಿಯೂ ಪ್ರಕಟವಾಗಿದೆ. ಇವರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಒಡೆದ ಮುತ್ತುಗಳು, ನಮ್ಮನಾಡು, ಇಂಗ್ಲೆಂಡ್ ಕವನಗಳು, ಹಾಡು ಮನವೆ ಹಾಡು, ತಟ್ಟೆಯೊಳಗಿನ ಜೀವ
ಮುಂತಾದವು ಇವರ ಕವನ ಸಂಕಲನಗಳಲ್ಲಿ ಸೇರಿವೆ. ಕಾದಂಬರಿಗಳಲ್ಲಿ, ಸುಳುವಿನೊಳಗೆ, ಪರಿಧಿ, ಗೆರೆ, ಸರದಿ ಸೇರಿವೆ. ವ್ಯಕ್ತಿ ಚಿತ್ರಗಳಲ್ಲಿ ಪೇಜಾವರ ಸದಾಶಿವರಾಯರು, ಕೆ.ಎನ್.ಟೇಲರ್, ಮುದ್ದಣ: ಬದುಕ-ಬರೆಹ, ನಾರಾಯಣ ಗುರು, ಕೆ.ವಿ. ಸುಬ್ಬಣ್ಣ, ಅಮೃತ ಸೋಮೇಶ್ವರ ಮುಂತಾದವು ಸೇರಿವೆ. ಅನುವಾದಿತ ಕೃತಿಗಳಲ್ಲಿ ಭತ್ತದ ಕಾಳುಗಳು (ಮೂಲ: ಪಿಎಎಂ ಹನೀಫ್), ಕರಿಯದೇವರ ಹುಡುಕಿ (ಮೂಲ: ಜಿ. ಶಂಕರ ಪಿಳ್ಳೈ), ಸಾಕ್ಷಾತ್ಕಾರ (ಮೂಲ: ಕೆ.ಟಿ.ಮಹಮದ್), ಭರತವಾಕ್ಯ (ಮೂಲ: ಜಿ.ಶಂಕರ ಪಿಳ್ಳೈ), ಅಶ್ವತ್ಥಾಮ (ಮೂಲ: ಮಾಡಂಬ್ ಕುಂಞುಕುಟ್ಟನ್), ಬಾಲ್ಯದ ನೆನಪುಗಳು (ಮೂಲ:ಕಮಲಾ ದಾಸ್), ದೇವರ ವಿಕರಾಳಗಳು (ಮೂಲ: ಎಂ.ಮುಕುಂದನ್), ಕೊಚ್ಚರೇತ್ತಿ (ಮೂಲ: ಎಂ.ನಾರಾಯಣ್), ಮಹಾಕವಿ ಜಿ. ಶಂಕರ ಕುರುಪ್, ಮೂರುಹೆಜ್ಜೆ ಮೂರುಲೋಕ (ತುಳು ಮೂಲ:ಡಿ.ಕೆ.ಚೌಟ), ಪುರಾತನ ಕಿನ್ನರಿ. (ಮೂಲ: ಒಎನ್ ವಿ ಕುರುಪ್), ಕಂಪನ ಮಾಪಕಗಳೇ ವಂದನೆ (ಮೂಲ: ಸಿ.ರಾಧಾಕೃಷ್ಣನ್) ಸೇರಿವೆ. ನಾಟಕಗಳಲ್ಲಿ ಅರ್ಪಣೆ, ಹೂ ಮನಸು, ಸಿರಿ, ಚಾರು ವಸಂತ ಸೇರಿವೆ. ಸಂಪಾದನೆಗಳಲ್ಲಿ ಕರಾವಳಿ ಕಮ್ಮೆ, ನವಭಾರತದಲ್ಲಿ ಶಿಂಗಣ್ಣ, ಸಿರಿನಿವಾಸ, ಅಪ್ರಮೇಯ, ಅಡೇಮನೆ ಅಪ್ರಮೇಯ, ಸಂಕಥನ - ಶ್ರೀನಿವಾಸ ಹಾವನೂರರ ಅಯ್ದ ಬರಹಗಳು, ಪೊಲಿ ( ದ.ಕ. ಜಿಲ್ಲೆ. ಕೆನರಾ ೨೦೦), ಸ್ವಾತಂತ್ರ್ಯದ ಸುವರ್ಣ ಹೆಜ್ಜೆ, ಸಾನ್ನಿಧ್ಯ, ಅದ್ಭುತ ರಾಮಾಯಣಮ್,
ಹೊಂಬಿದಿರು (ಕಸಾಪ ಸಮ್ಮೇಳನ),ಸುಗಮ ಸಂಗೀತ ಸಾಧಕಿ ಬಿ.ಕೆ.ಸುಮಿತ್ರ, ಹಾಡು ಹಿಡಿದ ಜಾಡು ವೈಕೆಎಂ-75, ಕನಸುಗಣ್ಣಿನ ಕಪ್ಪಣ್ಣ -75 ಮುಂತಾದವು ಸೇರಿವೆ. ವಿಮರ್ಶೆಗಳಲ್ಲಿ ರಂಗಶೋಧನ, ತೆಂಕಣದ ಸುಳಿಗಾಳಿ, ನಾಟಕದ ಅಮೃತ - ವಿಮರ್ಶೆಯ ಗರುಡ, ರಂಗ ನಿಮಿತ್ತ, ಮೇಲೋಗರ, ರಂಗ ಚಿತ್ರರಂಗ, ಯಕ್ಷಪಥದ ಯಾತ್ರಿಕ ಕುಂಬಳೆ ಸುಂದರರಾವ್ ಜೀವನ ಸ್ಮೃತಿ ಸಂಚಯ ಮುಂತಾದವು ಸೇರಿವೆ.
ನಾ.ದಾಮೋದರ ಶೆಟ್ಟಿ ಅವರ 'ಕೊಚ್ಚರೇತ್ತಿ’ ಕಾದಂಬರಿಯ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ದೇವರ ವಿಕರಾಳ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ ಹಾಗೂ ಭಾರತೀಯ ಭಾಷಾ ಸಂಸ್ಥೆಯ ಭಾಷಾ ಭಾರತಿ ಸಮ್ಮಾನ್, ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ಆಳ್ವಾಸ್ ಶಿಕ್ಷಕ ಪ್ರಶಸ್ತಿ, ಉಡುಪಿಯ ಬೆಳ್ಳೆ ಉಪಾಧ್ಯಾಯ ಪ್ರಶಸ್ತಿ, ಮಂಗಳೂರಿನಲ್ಲಿ ನಾದಾಭಿನಂದನೆ, ಬೈಕಾಡಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಮಹಾನ್ ಸಾಧಕರಾದ ಡಾ. ನಾ. ದಾಮೋದರ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of our great writer, artiste, organizer Dr. Damodara Shetty N Sir 🌷🙏🌷
ಕಾಮೆಂಟ್ಗಳು