ಸುಮಾ ರಮೇಶ್
ಜನವರಿ 20, ಸುಮಾ ರಮೇಶ್ ಅವರ ಜನ್ಮದಿನ. ಇವರು ಮೂಲತಃ ಹಾಸನದವರು. ತಂದೆ ವಿ.ಬಿ. ರಾಜೇಗೌಡರು, ನಿವೃತ್ತ ಉಪನ್ಯಾಸಕರು. ತಾಯಿ ಶಾರದ ಗೃಹಿಣಿ. ಸುಮಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹಾಸನದ ರಾಮಕೃಷ್ಣ ವಿದ್ಯಾಲಯದಲ್ಲಿ ನಡೆಯಿತು. ಚಿಕ್ಕಮಗಳೂರಿನ ಮೌಂಟೇನ್ ವ್ಯೂ ಶಾಲೆಯಲ್ಲಿ ಹೈಸ್ಕೂಲು ವಿದ್ಯಾಬ್ಯಾಸ ನಡೆಸಿದರು. ಎ ವಿ ಕಾಂತಮ್ಮ ಕಾಲೇಜಿನಲ್ಲಿ ಬಿ.ಕಾಂ. ಪದವಿ ಹಾಗು ಮಹಿಳಾ ಪಾಲಿಟೆಕ್ನಿಕ್ ನಲ್ಲಿ ಕಮರ್ಷಿಯಲ್ ಪ್ರ್ಯಾಕ್ಟಿಸ್ ಡಿಪ್ಲೊಮಾವನ್ನು ಪಡೆದರು. ಉತ್ತಮ ಚೆಸ್ ಆಟಗಾರ್ತಿಯಾದ ಇವರು ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದವರು.
ಸುಮಾ ಅವರ ಸಾಹಿತ್ಯ ಪಯಣ ಪ್ರಾರಂಭವಾದದ್ದು ನಲವತ್ತರ ನಂತರ. ಪ್ರಮುಖವಾಗಿ ಹಾಸ್ಯ ಲೇಖಕಿಯಾಗಿ ಗುರುತಿಸಿಕೊಂಡಿದ್ದು ಇವರ ಮುನ್ನೂರಕ್ಕೂ ಹೆಚ್ಚು ಹಾಸ್ಯ ಲೇಖನಗಳು, ಲಲಿತ ಪ್ರಬಂಧಗಳು, ಸಣ್ಣ ಕಥೆಗಳು ಹಾಗು ಕವಿತೆಗಳು ಸುಧಾ, ಮಯೂರ, ತರಂಗ , ತುಷಾರ, ಪ್ರಿಯಾಂಕ, ಜನತಾ ಮಾಧ್ಯಮ, ಸಮಾಜಮುಖಿ ಸೇರಿದಂತೆ ನಾಡಿನ ಎಲ್ಲ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
'ಟೀ ಬ್ರೇಕ್' , ' ಹಚ್ಚೆ ದಿನ್', 'ಅಮಟೆ... ಎಸ್' ಇವು ಇವರ ಪ್ರಕಟಿತ ಹಾಸ್ಯ ಸಂಕಲನಗಳು. 'ಪರಿಭ್ರಮಣ' ಪ್ರಕಟಿತ ಕಥಾ ಸಂಕಲನ. 'ಚೆಲ್ಲಿದರು ಮಲ್ಲಿಗೆಯ' ಕೃತಿ ಮುದ್ರಣದ ಹಂತದಲ್ಲಿದೆ.
ಸುಮಾ ಅವರ 'ಟೀ ಬ್ರೇಕ್' ಕೃತಿಗೆ ಲೇಖಿಕಾ ಸಾಹಿತ್ಯ ವೇದಿಕೆ 2022 ರ ಪುಸ್ತಕ ಪ್ರಶಸ್ತಿ ಲಭಿಸಿದೆ. 'ಹಚ್ಚೆ ದಿನ್' ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ 'ನುಗ್ಗೆ ಹಳ್ಳಿ ಪಂಕಜ ದತ್ತಿ ಪ್ರಶಸ್ತಿ' 2023ರಲ್ಲಿ ಲಭಿಸಿದೆ. ಹಚ್ಚೆ ದಿನ್ ಕೃತಿಗೆ ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ ಹಾಸ್ಯ ಮಾಣಿಕ್ಯ ಪ್ರಶಸ್ತಿ 2024 ಲಭಿಸಿದೆ. ಇವರ 'ಋತು ಬಂಧ' ಕತೆಗೆ ಕರ್ಮವೀರ ದೀಪಾವಳಿ ಕಥಾಸ್ಪರ್ಧೆ -2023 ರಲ್ಲಿ ಪ್ರಥಮ ಬಹುಮಾನ ಸಂದಿದೆ. ‘ಹಾಸ್ಯ ದರ್ಶನ’ ಮಾಸಪತ್ರಿಕೆಯ ರಾಜ್ಯಮಟ್ಟದ ಹಾಸ್ಯ ಲೇಖನ ಸ್ಪರ್ಧೆ 2013 ರಲ್ಲಿ ಪ್ರಥಮ ಬಹುಮಾನ ಹಾಗು ಸಾಹಿತ್ಯ ಸಖಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ 2022 ರಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ವಿಜಯ ಕರ್ನಾಟಕ ಪುಟ್ಕತೆ ಸ್ಪರ್ಧೆ, ವಾಣಿ ಕೌಟುಂಬಿಕ ಕಥಾ ಸ್ಪರ್ಧೆ, ವ್ಯಾಸರಾಯ ಬಲ್ಲಾಳ ಕಥಾ ಸ್ಪರ್ಧೆ, ಸಮಾಜಮುಖಿ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ, ವಿಕಸನ ವೃಂದ ರಾಜ್ಯ ಮಟ್ಟದ ಕಥಾ ಸ್ಪರ್ಧೆ ಮುಂತಾದ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳು ಬಂದಿವೆ.
ಸುಮಾ ರಮೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Suma Ramesh 🌷🌷🌷
ಕಾಮೆಂಟ್ಗಳು