ರಾ.ಯ. ಧಾರವಾಡಕರ
ಡಾ. ರಾ. ಯ. ಧಾರವಾಡಕರ ಕನ್ನಡ ಸಾಹಿತ್ಯ ಲೋಕದ ಮಹಾನ್ ವಿದ್ವಾಂಸರಾಗಿ ಪ್ರಸಿದ್ಧರು
ರಾ. ಯ. ಧಾರವಾಡಕರ 1919ರ ಜುಲೈ 15ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ಭಾಷಾಶಾಸ್ತ್ರ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ರಾಜಕಾರಣ, ಕನ್ನಡಭಾಷೆ, ಸಾಹಿತ್ಯದ ಕುರಿತಾಗಿ ಮಹತ್ವದ ಅಧ್ಯಯನ ಕೈಗೊಂಡವರೆಂದು ಅವರು ನಾಡಿನಲ್ಲಿ ಪ್ರಖ್ಯಾತರಾಗಿದ್ದಾರೆ. ಅವರ ತಂದೆ ಯಲಗುರ್ದರಾವ್ ವಕೀಲಿ ವೃತ್ತಿ ಕೈಗೊಂಡಿದ್ದರು. ತಾಯಿ ಗಂಗಾಬಾಯಿ.
ಧಾರವಾಡಕರ ಅವರ ಪ್ರಾರಂಭಿಕ ಶಾಲಾ ಶಿಕ್ಷಣ ಬಾಗಲಕೋಟೆಯಲ್ಲಿ ನೆರವೇರಿತು. 1936ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ತೇರ್ಗಡೆಯಾದ ನಂತರ, ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿಗೆ ಸೇರಿ 1940ರಲ್ಲಿ ಉನ್ನತಸ್ಥಾನದಲ್ಲಿ ಬಿ.ಎ. ಆನರ್ಸ್ ಕನ್ನಡ ಪದವಿಯನ್ನೂ, 1942ರಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಐಚ್ಚಿಕ ವಿಷಯವಾದ ಇಂಗ್ಲಿಷಿನಲ್ಲಿ ಗಳಿಸಿದ ಉತ್ತಮ ಅಂಕಗಳಿಂದ ಅದೇ ಕಾಲೇಜಿನ ಫೆಲೊ ಆಗಿ ಆಯ್ಕೆಯಾಗಿ, ಇಂಗ್ಲಿಷ್ ಟ್ಯೂಟರ್ ಆಗಿಯೂ ಕೆಲಸಮಾಡಿದರು. ಕೆಲಕಾಲ ಮುಂಬಯಿಯ ಸೆಕ್ರಟರಿಯೆಟ್ನಲ್ಲಿ ರೇಷನಿಂಗ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದರು.
ಮುಂದೆ ಧಾರವಾಡಕರ ಅವರು 1944ರಲ್ಲಿ ಅದೇ ತಾನೆ ಪ್ರಾರಂಭವಾಗಿದ್ದ ಧಾರವಾಡದ ಕೆ. ಇ. ಬೋರ್ಡ್ ಕಾಲೇಜಿನಲ್ಲಿ (ಇಂದಿನ ಜೆ.ಎಸ್.ಎಸ್ ಕಾಲೇಜು) ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡರು. ಬಿ.ಎಂ.ಶ್ರೀ.ಯವರು ಪ್ರಿನ್ಸಿಪಾಲರಾಗಿದ್ದು ಅವರ ಮರಣಾನಂತರ ತಮ್ಮ 27ನೆಯ ವಯಸ್ಸಿನಲ್ಲಿಯೇ ತಾತ್ಕಾಲಿಕ ಪ್ರಿನ್ಸಿಪಾಲರೆಂದು ನೇಮಕಗೊಂಡ ಅವರು, ಖಾಯಂ ಪ್ರಿನ್ಸಿಪಾಲರಾಗಿ ಸುಮಾರು ಕಾಲು ಶತಮಾನಗಳ ಕಾಲ ಕಾಲೇಜಿನ ಅಭಿವೃದ್ಧಿಗಾಗಿ ದುಡಿದರು. ಕಾಲೇಜಿಗೊಂದು ಭದ್ರ ಬುನಾದಿ ಹಾಕಿ, ದಕ್ಷ ಆಡಳಿತದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದರು. 1964ರಲ್ಲಿ ಫುಲ್ಬ್ರೈಟ್ ಸ್ಕಾಲರ್ ಶಿಪ್ ಪಡೆದು ಅಮೆರಿಕಾವನ್ನು ಸಂದರ್ಶಿಸಿ ಬಂದ ಧಾರವಾಡಕರ್ ಅವರು ಕಡೆಯವರೆಗೂ ನಾಡು-ನುಡಿಗಾಗಿ ಅಪಾರವಾಗಿ ಶ್ರಮಿಸಿದರು. 1973ರಲ್ಲಿ ಅವರಿಗೆ ಪಿಎಚ್.ಡಿ. ತಂದು ಕೊಟ್ಟ ಪ್ರೌಢ ಪ್ರಬಂಧ ‘ಹೊಸಗನ್ನಡ ಉದಯಕಾಲ’.
ಹಲವಾರು ಗ್ರಂಥಗಳನ್ನು ರಚಿಸಿದ್ದ ಧಾರವಾಡಕರ, ಪತ್ರಿಕೋದ್ಯಮಕ್ಕಾಗಿ ನೀಡಿದ ಕೃತಿಗಳೆಂದರೆ ಪತ್ರಿಕಾ ವ್ಯವಸಾಯ (1948) ಮತ್ತು ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು (1949). ನಂತರ ಪ್ರಕಟವಾದದ್ದು ಸಾಹಿತ್ಯ ಸಮೀಕ್ಷೆ. 1950ರಲ್ಲಿ ಪ್ರಕಟವಾದ ‘ಕನ್ನಡ ಭಾಷಾ ಶಾಸ್ತ್ರ’ವು ಕನ್ನಡ ಭಾಷೆಯ ಉಗಮ, ವಿಕಾಸ, ವ್ಯಾಕರಣ ವಿಚಾರ, ಭಾಷೆಯ ವೈಶಿಷ್ಟ್ಯಗಳನ್ನು ಸೊಗಸಾಗಿ ನಿರೂಪಿಸಿರುವ ಗ್ರಂಥವೆನಿಸಿದೆ. ಇದಕ್ಕೆ ದೇವರಾಜ ಬಹದ್ದೂರ್ ಬಹುಮಾನವೂ ಸಂದಿತು. ಧಾರವಾಡಕರ ಅವರಿಗೆ ಹೆಚ್ಚು ಹೆಸರು ತಂದು ಕೊಟ್ಟ ಕ್ಷೇತ್ರವೆಂದರೆ ಪ್ರಬಂಧ ಕ್ಷೇತ್ರ. ಧೂಮ್ರವಲಯಗಳು, ತೂರಿದ ಚಿಂತನೆಗಳು, ನವಿಲುಗರಿ ಮತ್ತು ಸೂರ್ಯಪಾನ ಎಂಬ ಅವರ ನಾಲ್ಕು ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ.
ಕತೆಗಾರರಾಗಿಯೂ ಹೆಸರು ಗಳಿಸಿರುವ ಧಾರವಾಡಕರರು ಏಳು ಜನ ನಿಗ್ರೋ ಕತೆಗಾರರ ಕತೆಗಳನ್ನಾರಿಸಿಕೊಂಡು ಕನ್ನಡಕ್ಕೆ ರೂಪಾಂತರಿಸಿ ‘ತೆರೆಯ ಹಿಂದೆ’ ಅಮೆರಿಕನ್ ನಿಗ್ರೋ ಕಥೆಗಳು ಮತ್ತು ಸಾಗರೋತ್ತರ ಕಥೆಗಳು ಎಂಬ ಸಂಕಲನಗಳನ್ನು ತಂದು ಹೊಸ ಮಾದರಿಯ ಕತೆಗಳನ್ನು ಓದುಗರಿಗೆ ನೀಡಿದ್ದಾರೆ. ತಮ್ಮ ಅಮೆರಿಕಾ ಪ್ರವಾಸಾನುಭವವನ್ನು ನಿರೂಪಿಸುವ ಕೃತಿ ‘ನಾ ಕಂಡ ಅಮರಿಕೆ’ ಕೃತಿಗೆ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದಿದ್ದರು. ಇದಲ್ಲದೆ ವ್ಯಕ್ತಿ ಪರಿಚಯಗಳಾದ ವೆಂಕಟರಂಗೋಕಟ್ಟಿ, ಶ್ರೀನಮನ, ಡಾ. ನಂದಿಮಠರ ನೆನಪು, ರೊದ್ದ ಶ್ರೀನಿವಾಸರಾಯರು, ಕಾವ್ಯಾನಂದ, ಪುಣೇಕರ ಮುಂತಾದ ಕೃತಿಗಳನ್ನೂ ಆವರು ರಚಿಸಿದ್ದರು.
ಧಾರವಾಡಕರ ಅವರು ಶಾಂತ ಕವಿಗಳ ಮೂರು ಕೀರ್ತನೆಗಳಾದ ವಿದ್ಯಾರಣ್ಯ ವಿಜಯ, ರಾವಣ-ವೇದವತಿ ಮತ್ತು ಶ್ರೀಕೃಷ್ಣ ದಾನಾಮೃತಗಳನ್ನೂ ಬೆಳಕಿಗೆ ತಂದರು.
ಧಾರವಾಡಕರ ಅವರು ರಚಿಸಿದ ಇತರ ಕೃತಿಗಳೆಂದರೆ ನಮ್ಮ ದೇಶದ ಯೋಜನೆಗಳು, ದೇವರು-ಧರ್ಮ. ಇಂಗ್ಲಿಷಿನಲ್ಲಿ ದಿ ಗೋಲ್ಡನ್ ಜರ್ಸಿ, ಶ್ರೀಗಂಧ, ದಿ ಲಿಂಗರಿಂಗ್ ಮುಂತಾದವು.
ಧಾರವಾಡಕರ ಅವರು ಇತರರೊಂದಿಗೆ ಕೂಡಿ ಲೋಕಮಾನ್ಯ ತಿಲಕರು, ವಿಜಯದುಂದುಭಿ, ಭೀಷ್ಮಪರ್ವಸಂಗ್ರಹ, ಕರ್ಮಯೋಗಿ ಹಾಗೂ ಗಾಂಧಿಸಾಹಿತ್ಯದ ಸುಮಾರು 30 ಕೃತಿಗಳನ್ನೂ ಸಂಪಾದಿಸಿದರು.
ದೇವರಾಜ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯಮ ಅಕಾಡೆಮಿ ಪ್ರಶಸ್ತಿಗಳಲ್ಲದೆ, ಸಾರಸ್ವತ ಲೋಕದಲ್ಲಿ ವಿಶಿಷ್ಟರೀತಿಯಲ್ಲಿ ದುಡಿದ ರಾ.ಯ. ಧಾರವಾಡಕರ ಅವರಿಗೆ ಮೈಸೂರು ಸರಕಾರದಿಂದ ಸಾರ್ವಜನಿಕ ಸೇವಾ ಪ್ರಶಸ್ತಿ, ಮೂರು ಸಾವಿರ ಮಠದ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಜೊತೆಗೆ ಅಭಿಮಾನಿಗಳು 1990ರಲ್ಲಿ ಅರ್ಪಿಸಿದ ಬೃಹತ್ ಗ್ರಂಥ ‘ಪ್ರಬಂಧ ಪ್ರಪಂಚ’.
ಕನ್ನಡ ಸಾರಸ್ವತ ಲೋಕದಲ್ಲಿ ‘ರಾಯ’ರೆಂದೇ ಕರೆಸಿಕೊಂಡಿದ್ದ ಧಾರವಾಡಕರ ಅವರು 1991ರ ಏಪ್ರಿಲ್ 12ರಂದು ಈ ಲೋಕವನ್ನಗಲಿದರು.
ಚಿತ್ರಕೃಪೆ: www.kamat.com.
On the birth anniversary of great scholar, writer and educationist Dr. R.Y. Dharwadkar
ಕಾಮೆಂಟ್ಗಳು