ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೊಳಂಬೆ ಪುಟ್ಟಣ್ಣ ಗೌಡರು


 ಕೊಳಂಬೆ ಪುಟ್ಟಣ್ಣ ಗೌಡರು


ಕೊಳಂಬೆ ಪುಟ್ಟಣ್ಣ ಗೌಡರು ಬರಹಗಾರರಾಗಿ, ಯಕ್ಷಗಾನ ಕಲೆಯ ಅರ್ಥಧಾರಿಗಳಾಗಿ ಪ್ರಸಿದ್ಧರು.

ಕೊಳಂಬೆ ಪುಟ್ಟಣ್ಣ ಗೌಡರು ಸುಳ್ಯತಾಲ್ಲೂಕಿನ ಚೊಕ್ಕಾಡಿಯಲ್ಲಿ 1903ರ ಜುಲೈ 15ರಂದು ಜನಿಸಿದರು. ತಂದೆ ಸುಬ್ರಾಯಗೌಡ. ತಾಯಿ ಸುಬ್ಬಮ್ಮ. ಸುಳ್ಯದ ಬಳಿಯ ಅಮರ ಪಡ್ನೂರು ಗ್ರಾಮದ ಅಜ್ಜನಗದ್ದೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಇವರಿಗೆ ಶಿಕ್ಷಕರಾಗಿ ದೊರೆತಿದ್ದವರು ಮೇರ್ಕಜೆ ಪುಟ್ಟಣ್ಣನವರು. ನಾಲ್ಕನೆಯ ತರಗತಿಯ ‘ದರ್ಬಾರ’ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲದೆ ಬಹುಮಾನವನ್ನು ಗಳಿಸಿದ್ದರು. 

ಪುಟ್ಟಣ್ಣ ಗೌಡರು 1924ರಲ್ಲಿ ಅಧ್ಯಾಪಕರ ತರಬೇತು ಪಡೆದು ತಾವು ಓದಿದ ಅಜ್ಜನಗದ್ದೆ ಶಾಲೆಯಲ್ಲೇ ಅಧ್ಯಾಪಕರಾಗಿ ಸೇರಿ, ವಿದ್ವಾನ್ ಪರೀಕ್ಷೆಯಲ್ಲಿ ಪಾಸಾದ ನಂತರ ಮುಖ್ಯೋಪಾಧ್ಯಾಯರಾಗಿ ಬಡತಿ ಪಡೆದರು. ನಂತರ ಪಂಜ, ಕೋಟಿಮುಂಡುಗಾರು, ಬೊಬ್ಬೆರೇರಿ, ಮಾಣಿ, ಪುತ್ತೂರು, ಉಪ್ಪಿನಂಗಡಿ ಮುಂತಾದೆಡೆಯಲ್ಲೆಲ್ಲಾ ಕಾರ್ಯ ನಿರ್ವಹಿಸಿ 1958ರಲ್ಲಿ ಸುಳ್ಯದ ಬೋರ್ಡ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ನಿವೃತ್ತರಾದರು. 

ಪುಟ್ಟಣ್ಣ ಗೌಡರು ಅಧ್ಯಾಪಕರಾಗಿದ್ದ ಕಾಲದಲ್ಲಿ ಇವರಿಗೆ ಸಾಹಿತ್ಯದ ಸಂಗಾತಿಗಳಾಗಿದ್ದವರು ಎಂ.ಎಸ್. ಕಾಮತ್, ಉಗ್ರಾಣ ಮಂಗೇಶರಾವ್, ಮೊಳಹಳ್ಳಿ ಶಿವರಾಯರು. ಇವರುಗಳ ಪ್ರೋತ್ಸಾಹದಿಂದ ಕತೆ, ಕವನ, ನಾಟಕಗಳನ್ನು ರಚಿಸತೊಡಗಿದರು. ಯಕ್ಷಗಾನ ಕಲೆ ಮನೆತನಕ್ಕೆ ಬಂದ ಹವ್ಯಾಸ, ಯಕ್ಷಗಾನದ ಬಗ್ಗೆ ಇವರು ಬರೆದ ಮೊದಲ ಕೃತಿ ‘ಅಂಧಕಾಸುರ ಕಾಳಗ’ 1926ರಲ್ಲಿ ಪ್ರಕಟವಾಯಿತು. ಯಕ್ಷಗಾನ ಕಲೆಯಲ್ಲಿ ಖ್ಯಾತರಾಗಿದ್ದು ರಂಗದ ಮೇಲೂ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅದರಲ್ಲಿ ಕೃಷ್ಣಸಂಧಾನ ಪ್ರಸಂಗದಲ್ಲಿ ಕೌರವನ ಪಾತ್ರಧಾರಿಯಾಗಿ ತಮ್ಮ ಮಾತಿನ ವೈಖರಿಯಿಂದ ಜನಪ್ರಿಯ ನಟರೆನಿಸಿದ್ದರು. ದೇರಾಜೆ ಸೀತಾರಾಮಯ್ಯ, ಅಜ್ಜನಗದ್ದೆ ಕಲಾವಿದರೊಡನೆ ನಾಟಕ ರಂಗವನ್ನು ಬೆಳೆಸಿದ್ದಲ್ಲದೆ ‘ಶಾರದಾಂಬ ಕೃಪಾ ಪೋಷಿತ ಯಕ್ಷಗಾನ ಮಂಡಲಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಕವನ ಸಣ್ಣಕತೆ, ನಾಟಕ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದು ‘ಹೂವೀಡು’, ‘ಮಾತಿಲ್ಲ ಮಾತಿಲ್ಲ’ ಎಂಬ ಎರಡು ಶಿಶು ಸಾಹಿತ್ಯ ಕೃತಿಗಳು ಇದರಲ್ಲಿವೆ. ‘ಕಾಲೂರ ಚೆಲುವೆ’, ‘ನುಡಿವಣಿಗಳು’ ಅಚ್ಚಕನ್ನಡದ ವಿಶಿಷ್ಟ ಕೃತಿಗಳು. ಸುಮಾರು 440 ಚೌಪದಿಗಳಿಂದ ಕೂಡಿರುವ ‘ಕಾಲೂರ ಚೆಲುವೆ’ ಮನೋಹರ ಕಾವ್ಯವಾಗಿದ್ದರೆ 'ನುಡಿವಣಿಗಳು' ಮುಕ್ತಕಗಳ ಸಂಕಲನ. ಇವರ ಮತ್ತೊಂದು ಪ್ರಮುಖ ಕೃತಿ ಎಂದರೆ ‘ಅಚ್ಚ ಕನ್ನಡದ ನಿಘಂಟು’.  ಹಸ್ತ ಸಾಮುದ್ರಿಕಾ ಶಾಸ್ತ್ರವನ್ನು ಕುತೂಹಲಕ್ಕಾಗಿ ಕಲಿತಿದ್ದ ಪುಟ್ಟಣ್ಣ ಗೌಡರು ‘ಬೆರಳುಗಳಿಂದ ಅದೃಷ್ಟ’ ಎಂಬ ಹಸ್ತ ಸಾಮುದ್ರಿಕಾ ಶಾಸ್ತ್ರದ ಪುಸ್ತಕವನ್ನೂ ರಚಿಸಿದ್ದರು. 

ಬಹುಮುಖ ಪ್ರತಿಭೆಯಿಂದ ಕೂಡಿದ್ದ ಪುಟ್ಟಣ್ಣ ಗೌಡರು ಯಕ್ಷಗಾನದಲ್ಲಿ ಪಾತ್ರವಹಿಸಿದಂತೆ ಹರಿಕಥೆಗಳನ್ನೂ ಮಾಡಿ ಜನರನ್ನು ರಂಜಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹಲವಾರು ದೇಶಭಕ್ತಿಗೀತೆಗಳನ್ನು ರಚಿಸಿದ್ದ ಇವರ ‘ಪರಡೆ ಕಳಿ ಗಂಗಸರ’ ಎಂಬ ತುಳು ಹಾಡು ಜನಪ್ರಿಯವಾಗಿತ್ತು. 

ಕೊಳಂಬೆ ಪುಟ್ಟಣ್ಣ ಗೌಡರು 1981ರ ಜನವರಿ 26ರಂದು ನಿಧನರಾದರು.

On the birth anniversary of great scholar, writer and artiste Kolambe Puttanna Gowda 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ