ನೀಲಮ್ಮ ಕಡಾಂಬಿ
ನೀಲಮ್ಮ ಕಡಾಂಬಿ
ವಿದುಷಿ ನೀಲಮ್ಮ ಕಡಾಂಬಿ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು.
ನೀಲಮ್ಮ ಕಡಾಂಬಿಯವರು 1911ರ ಜುಲೈ 11ರಂದು ಮೇಲುಕೋಟೆಯಲ್ಲಿ ಜನಿಸಿದರು. ಇವರ ತಂದೆ ವೀಣೆ ವಿದ್ವಾಂಸರಾಗಿದ್ದ ವೆಂಕಟಾಚಾರ್ಯರು ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿದ್ದರು. ವೆಂಕಟಾಚಾರ್ಯರು ನಿವೃತ್ತರಾದ ನಂತರದಲ್ಲಿ ಮೇಲುಕೋಟೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಕೈಂಕರ್ಯ ಸಲ್ಲಿಸುತ್ತಿದ್ದರು. ನೀಲಮ್ಮನವರ ತಾಯಿಯವರೂ ವೈಣಿಕರು. ಅಣ್ಣ ಎಂ.ವಿ. ಶ್ರೀನಿವಾಸ ಅಯ್ಯಂಗಾರ್ ಅವರೂ ಸಂಗೀತ ವಿದ್ವಾಂಸರು. ನೀಲಮ್ಮನವರಿಗೆ ಚಿಕ್ಕಂದಿನಿಂದಲೇ ಅಣ್ಣನವರಲ್ಲಿ ವೀಣೆ ಪಾಠವಾಯಿತು. ತಂದೆಯವರೂ ಪಾಠ ಹೇಳುತ್ತಿದ್ದುದುಂಟು.
ಮುಂದೆ ನೀಲಮ್ಮನವರು ವಿದ್ವಾನ್ ಲಕ್ಷ್ಮಿನಾರಣಪ್ಪನವರಲ್ಲೂ ಅನಂತರ ವೀಣಾ ವೆಂಕಟಗಿರಿಯಪ್ಪನವರಲ್ಲೂ ವೀಣಾ ಪಾಠವನ್ನು ಮುಂದುವರಿಸಿದರು. ಜೊತೆಗೆ ಹಾಡುಗಾರಿಕೆಯನ್ನು ಮೈಸೂರು ವಾಸುದೇವಾಚಾರ್ಯರು, ಮೈಸೂರು ಟಿ.ಚೌಡಯ್ಯನವರು, ವಿ. ರಾಮರತ್ನಂರವರು ಮುಂತಾದ ಮಹಾನ್ ವಿದ್ವಾಂಸರಲ್ಲಿ ಕಲಿತರು. ನೀಲಮ್ಮನವರ ಪತಿ ಕಡಾಂಬಿ ಕೃಷ್ಣೈಯ್ಯಂಗಾರ್ಯರು ನಂಜನಗೂಡಿನಲ್ಲಿ ಪ್ರಸಿದ್ಧ ವಕೀಲರಾಗಿದ್ದು ಕೆಲ ವರ್ಷಗಳ ನಂತರ ಮೈಸೂರಿನಲ್ಲಿ ನೆಲೆಸಿದರು.
ಪ್ರಾದೇಶಿಕ ವಲಯದಲ್ಲಿ ನೀಲಮ್ಮನವರು ಆ ಕಾಲದಲ್ಲಿ ಸಾರ್ವಜನಿಕವಾಗಿ ವೇದಿಕೆಯ ಮೇಲೆ ಸಂಗೀತ ಕಚೇರಿ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ನೀಲಮ್ಮನವರು ತಮ್ಮ ವೀಣಾವಾದನದ ಜೊತೆಗೆ ಹಾಡುತ್ತಿದ್ದರು. ಕೋಮಲವಾದ ಧ್ವನಿಯೊಂದಿಗೆ ವೀಣೆಯ ತಂತಿನಾದ ಎರಡೂ ಹದವಾಗಿ ಬೆರೆತು ಅವರ ಕಚೇರಿಗಳು ವಿಶೇಷ ಅನುಭವ ಹುಟ್ಟಿಸುವಂತದ್ದಾಗಿದ್ದವು. ಇವರ ಕಚೇರಿಗಳಲ್ಲಿ ಕರ್ನಾಟಕ ಸಂಗೀತ ಸಂಪ್ರದಾಯದೊಂದಿಗೆ, ಕೊನೆಯಲ್ಲಿ ಹಿಂದುಸ್ತಾನಿ ಮಟ್ಟುಗಳನ್ನೂ ನುಡಿಸುತ್ತಿದ್ದುದು ಮತ್ತೊಂದು ಆಕರ್ಷಣೆಯಾಗಿತ್ತು.
ಅಂದಿನ ದಿನಗಳಲ್ಲಿ ತಮಿಳುನಾಡಿನಲ್ಲೇ ನೀಲಮ್ಮ ಕಡಾಂಬಿಯವರ ಸಂಗೀತ ಕಚೇರಿಗಳಿಗೆ ಹೆಚ್ಚಾಗಿ ಬೇಡಿಕೆಯಿದ್ದವು. ಮೈಸೂರು ಅರಮನೆಯಲ್ಲೂ ಇವರು ಅನೇಕ ಬಾರಿ ಕಚೇರಿ ನೀಡಿದ್ದರು. 1954ರಲ್ಲಿ ದೆಹಲಿಯಲ್ಲಿ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ಮೈಸೂರಿನಿಂದ ನೀಲಮ್ಮನವರು ವೀಣಾವಾದನ ಕಚೇರಿ ನೀಡಲು ಆಯ್ಕೆಯಾಗಿದ್ದರು. ಆ ಕಚೇರಿಯಲ್ಲಿ ಅಂದಿನ ಪ್ರಧಾನಮಂತ್ರಿ ಪಂಡಿತ್ ಜವಹರಲಾಲ್ ನೆಹರು ಮತ್ತು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಉಪಸ್ಥಿತರಿದ್ದರು. ದೇಶದ ವಿವಿಧೆಡೆಗಳಲ್ಲಿ ಇವರ ಕಚೇರಿಗಳು ನಿರಂತರವಾಗಿ ನಡೆಯುತ್ತಿದ್ದವು. ಬೆಂಗಳೂರಿನ ಆಕಾಶವಾಣಿ ನಿಲಯವು ಪ್ರಾರಂಭಗೊಂಡಾಗ ಮೊದಲ ವೀಣಾ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಯೂ ನೀಲಮ್ಮನವರದಾಗಿತ್ತು. ಇವರು ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಅನೇಕ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
1972ರಲ್ಲಿ ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್ನ ವಾರ್ಷಿಕ ಸಮ್ಮೇಳನದಲ್ಲಿ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಗೊಂಡ ನೀಲಮ್ಮ ಕಡಾಂಬಿಯವರು ಗಾನ ಕಲಾ ಭೂಷಣ ಎಂಬ ಬಿರುದು ಸ್ವೀಕರಿಸಿದರು. ಮೈಸೂರು ಅರಮನೆಯಲ್ಲಿ ಗಂಡಭೇರುಂಡ ಲಾಂಛನದ ಪೆಂಡೆಂಟ್ ಚಿನ್ನದ ಸರವನ್ನು ನೀಡಿ ಅವರನ್ನು ಗೌರವಿಸಲಾಯಿತು. 1987-88ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಸನ್ಮಾನಿಸಲ್ಪಟ್ಟರು. ತಂಜಾವೂರಿನಲ್ಲಿ ಬಾಲಕೇಸರಿ ಎಂಬ ಬಿರುದು ಲಭಿಸಿತ್ತು. ಟಿ.ವಿ.ಎಸ್. ಗ್ರೂಪ್ ವತಿಯಿಂದ ಇವರ ಸಂಗೀತ ಕಚೇರಿ ನಡೆದು ಉತ್ತಮ ಕುಸುರಿ ಕೆತ್ತನೆಯಿರುವ ಬೆಳ್ಳಿವೀಣೆಯನ್ನು ಪ್ರಧಾನಿಸಲಾಗಿತ್ತು.
ಕೊಲಂಬಿಯಾ ಕಂಪೆನಿಯಿಂದ ನೀಲಮ್ಮ ಕಡಾಂಬಿಯವರ ಗಾಯನ ಧ್ವನಿ ಮುದ್ರಣವಾಗಿತ್ತು. ‘ಸತಿ ತುಳಸಿ’ ಎಂಬ ಕನ್ನಡ ಚಲನಚಿತ್ರದಲ್ಲಿ (1943-44) ನೀಲಮ್ಮ ಕಡಾಂಬಿಯವರ ವೀಣೆ ಕಚೇರಿಯ ದೃಶ್ಯವಿದೆ. ನೀಲಮ್ಮ ಕಡಾಂಬಿಯವರು ಧಾರವಾಡ ಆಕಾಶವಾಣಿ ನಿಲಯದಲ್ಲೂ ಆಗಾಗ್ಗೆ ವೀಣೆಯ ಕಾರ್ಯಕ್ರಮ ನೀಡುತ್ತಿದ್ದರು. ದೂರದರ್ಶನದಿಂದಲೂ ಇವರ ಕಚೇರಿ ಪ್ರಸಾರವಾಗಿತ್ತು.
ನೀಲಮ್ಮನವರು ಸಂಗೀತ ಗುರುಗಳಾಗಿ ಅನೇಕ ಮಹತ್ವದ ಸಂಗೀತಗಾರರನ್ನು ತಯಾರುಮಾಡಿದ್ದರು. ಟಿ.ವಿ.ಎಸ್. ಸಂಸ್ಥೆಯ ಮಾಲೀಕ ಟಿ.ವಿ. ಸುಂದರಂ ಅವರ ಮಗ ದೊರೆಸ್ವಾಮಿಯವರು ಆಗಾಗ ಮೈಸೂರಿಗೆ ಬಂದು ಇವರಲ್ಲಿ ಸಂಗೀತವನ್ನು ಹೇಳಿಸಿಕೊಂಡು ಹೋಗುತ್ತಿದ್ದರಲ್ಲದೆ, ಮದರಾಸಿನಲ್ಲಿ ಕಚೇರಿಗಳನ್ನು ಏರ್ಪಡಿಸಿ ತಮ್ಮ ಗುರುಗಳನ್ನು ಕರೆಸಿಕೊಳ್ಳುತ್ತಿದ್ದರು. ಅಂದಿನ ಇವರ ಶಿಷ್ಯರಲ್ಲಿ ಪ್ರಸಿದ್ಧರಾದ ಕೆಲವರೆಂದರೆ ಎಂ.ಎಸ್. ಜಯಮ್ಮ, ವತ್ಸಲ ರಾಮಕೃಷ್ಣ, ಶ್ರೀದೇವಿ, ಜಾನಕಮ್ಮ, ಜಿ.ವಿ. ರಂಗನಾಯಕಮ್ಮ ಮುಂತಾದವರು.
ನೀಲಮ್ಮ ಕಡಾಂಬಿಯವರು 1998ರ ಡಿಸೆಂಬರ್ 14ರಂದು ಈ ಲೋಕವನ್ನಗಲಿದರು.
On the birth anniversary of musician Neelamma Kadambi
ಕಾಮೆಂಟ್ಗಳು