ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಳಪ್ಪ ಪತ್ತಾರ


 

ಕಾಳಪ್ಪ ಪತ್ತಾರ


ಕಾಳಪ್ಪ ಪತ್ತಾರ ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದವರು.

ಕಾಳಪ್ಪ ಪತ್ತಾರ ಅವರು 1916ರ ಮಾರ್ಚ್ 28ರಂದು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬವೊಂದರಲ್ಲಿ ಜನಿಸಿದರು.

ಪತ್ತಾರರು ಶಾಲಾ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತದ್ದಕ್ಕಿಂತ ವಿಶಾಲ ಪ್ರಪಂಚದಲ್ಲಿ ತಿರುಗಾಟದ ಅನುಭವದಿಂದ ಕಲಿತದ್ದೇ ಅಪಾರ.  1934ರಲ್ಲಿ ಗಾಂಧೀಜಿಯವರು ಕರ್ನಾಟಕ ಪ್ರವಾಸ ಕೈಗೊಂಡು ಬಳ್ಳಾರಿಯಿಂದ ರೈಲಿನಲ್ಲಿ ಗದಗಿಗೆ ಪ್ರಯಾಣಿಸುವಾಗ ಭಾನಾಪುರ ರೈಲು ನಿಲ್ದಾಣದಲ್ಲಿ ತಂಗಿದ್ದಾಗ ಗಾಂಧೀಜಿಯವರ ಚಿತ್ರವನ್ನು ಅಲ್ಲೇ ಬರೆದು ಅರ್ಪಿಸಿದರಂತೆ. ಇವರ ಕಲಾಭಿಜ್ಞತೆಗೆ ಮಾರುಹೋದ ಗಾಂಧೀಜಿ  ತಮ್ಮ ಭಾವಚಿತ್ರವನ್ನು ಹರಾಜು ಹಾಕಿ ಬಂದ ಹಣವನ್ನು ಹರಿಜನ ನಿಧಿಗೆ ಸೇರಿಸಿದರಂತೆ.

ಬಾಲ್ಯದ ನೆನಪಿನಿಂದಲೇ ಆಗಿಹೋಗಿದ್ದ ಸಂತ ಅಜ್ಜಾರಾಮರ ಚಿತ್ರ ಬರೆದು ಮಠಕ್ಕೆ ಕೊಟ್ಟಿದ್ದು;  ಶೃಂಗೇರಿ ಮಠಕ್ಕಾಗಿ ಲಕ್ಷ್ಮೀ, ಶಾರದೆ, ಕೃಷ್ಣರ ಬಂಗಾರದ ಮೂರ್ತಿ ಚಿತ್ರಿಸಿದ್ದು;  ಹೈದರಾಬಾದ್ ನಿಜಾಮ ಸಂಬಂಧಿ ಪ್ರಸಿದ್ಧ ಕಲಾರಸಿಕರಾದ  ಸಾಲಾರಜಂಗರಿಂದಲೂ  ಪ್ರಶಂಸೆ ಪಡೆದದ್ದು; ಸಂತ, ಮಹಾತ್ಮ, ಮಹಾರಾಜರೆನ್ನದೆ ಸಾಮಾನ್ಯರ ಚಿತ್ರಗಳನ್ನೂ ಬಿಡದೆ ರಚನೆ ಮಾಡಿದ್ದು ಇವು ಚಿತ್ರಕಾರರಾಗಿ ಕಾಳಪ್ಪನವರ ವಿಶಿಷ್ಟ ಸಾಧನೆಗಳು.  ಮಣ್ಣು, ಹಿತ್ತಾಳೆ, ಬೆಳ್ಳಿ ಮುಂತಾದುವುಗಳಿಂದಲೂ ಅವರು ಕೃತಿ ರಚನೆ ಮಾಡುತ್ತಿದ್ದರು.

ಕಾಳಪ್ಪ ಪತ್ತಾರರಿಗೆ ರಂಗಭೂಮಿ  ಮತ್ತೊಂದು ನಲ್ಮೆಯ ಕ್ಷೇತ್ರವಾಗಿತ್ತು. ಯಲಬುರ್ಗಿ, ಕೊಪ್ಪಳ, ಗಂಗಾವತಿ ತಂಡಗಳು ಅಭಿನಯಿಸುತ್ತಿ‌ದ್ದ ನಾಟಕಗಳಿಗೆ ಸಂಗೀತ ನೀಡಿದ್ದೇ ಅಲ್ಲದೆ, ತಳಕಲ್ಲಿನ ಪ್ರಸಿದ್ಧ ರೆಡ್ಡಿ ಕಂಪನಿ, ಹಮ್ಮಿಗಿ ನೀಲಕಂಠಪ್ಪನವರ ಭುವನೇಶ್ವರಿ ನಾಟ್ಯ ಸಂಘ ಮುಂತಾದುವುಗಳಲ್ಲಿ ನಾರದ, ಕೃಷ್ಣನ ಪಾತ್ರ ನಿರ್ವಹಿಸಿ ಅಪಾರ ಜನಪ್ರಿಯತೆ ಪಡೆದಿದ್ದರು.

ತಬಲ ವಾದಕರಾಗಿ ಕಾಳಪ್ಪ ಪತ್ತಾರರದು ಮತ್ತೊಂದು ಅಪ್ರತಿಮ ಸಾಧನೆ. ಹಿಂದೂಸ್ತಾನಿ ಗಾಯಕರಾದ ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ ಮೊದಲಾದವರಿಗೆ ತಬಲ ಸಾಥಿ ನೀಡಿದ ಕೀರ್ತಿ ಕೂಡಾ ಅವರದಾಗಿತ್ತು.. 

1971ರ  ಆಗಸ್ಟ್ 5ರಂದು ಈ ಲೋಕವನ್ನಗಲಿದ ಕಾಳಪ್ಪ ಪತ್ತಾರರು, ಪ್ರಸಿದ್ಧರ ನಡುವೆ ಇದ್ದರೂ ಪ್ರಚಾರ ಬಯಸದೆ ನೇಪಥ್ಯದಲ್ಲೆ ಸರಿದು ಹೋದ ವ್ಯಕ್ತಿ .

On the birth anniversary artiste, musician and theatre personality Kalappa Pattar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ