ಜಿ. ವೆಂಕಟಯ್ಯ
ಜಿ. ವೆಂಕಟಯ್ಯ
ಜಿ. ವೆಂಕಟಯ್ಯನವರು ಕಳೆದ ಶತಮಾನದ ಸಾಹಿತ್ಯಲೋಕದ ಗಮನಾರ್ಹ ಬರಹಗಾರರಲ್ಲೊಬ್ಬರೆನಿಸಿದ್ದಾರೆ. ಅಕ್ಷರಜ್ಞಾನವಿಲ್ಲದ ಕುಟುಂಬದಲ್ಲಿ ಜನಿಸಿದ ವೆಂಕಟಯ್ಯನವರು ಮಾಡಿದ ಸಾಧನೆ ಅಚ್ಚರಿ ತರುವಂತದ್ದು.
ಜಿ. ವೆಂಕಟಯ್ಯನವರು 1916ರ ಏಪ್ರಿಲ್ 10ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಮ್ಮನ ಹಳ್ಳಿಯಲ್ಲಿ ಜನಿಸಿದರು. ತಂದೆ ಗಿರಿಯಯ್ಯ. ತಾಯಿ ಸಿದ್ಧಮ್ಮ. ಮೊದಲಮಗನಾಗಿ ಹುಟ್ಟಿದ ವೆಂಕಟಯ್ಯನವರು ಅಕ್ಷರ ಜ್ಞಾನ ಸಂಪಾದಿಸಿದ್ದರಿಂದ ನಂತರ ಹುಟ್ಟಿದವರಿಗೂ ಅಕ್ಷರಜ್ಞಾನ ಮೂಡಿತು. ಇವರ ತಮ್ಮ ಜಿ. ಗೋಪಾಲ್ ವೈದ್ಯರಾಗಿದಷ್ಟೇ ಅಲ್ಲದೆ ವಿದೇಶ ಪ್ರವಾಸ ಕುರಿತು ‘ವಿದೇಶ ಪ್ರವಾಸ’ ಹಾಗೂ ‘ಮೈಸೂರಿನಿಂದ ಮೆಕ್ಸಿಕೊ’ ಎಂಬ ಎರಡು ಪ್ರವಾಸ ಕೃತಿಗಳನ್ನು ರಚಿಸಿದರು.
ಜಿ. ವೆಂಕಟಯ್ಯನವರ ಪ್ರಾರಂಭಿಕ ಶಿಕ್ಷಣ ಕೂಲಿ ಮಠದಲ್ಲಿ ನಡೆದು ಮುಂದೆ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಪ್ರೌಢಶಾಲಾಭ್ಯಾಸ ಮತ್ತು ಸರಕಾರಿ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ನಡೆಯಿತು. ಮುಂದೆ ಡಿ.ಎಲ್.ಎನ್., ಕುವೆಂಪು, ತೀ.ನಂ.ಶ್ರೀಯವರುಗಳು ಇವರ ಗುರುಗಳಾದರು.
ವೆಂಕಟಯ್ಯನವರು ಸರಕಾರಿ ಇಲಾಖೆಯಲ್ಲಿ ಗುಮಾಸ್ತರಾಗಿ ಉದ್ಯೋಗ ಆರಂಭಿಸಿ ಹಂತಹಂತವಾಗಿ ಮೇಲೇರಿ ಹೆಡ್ಮುನಿಶಿಗಳಾಗಿ, ಲೆಕ್ಕತನಿಖಾಧಿಕಾರಿಗಳಾಗಿ ನಿವೃತ್ತಿ ಹೊಂದಿದರು.
ವೆಂಕಟಯ್ಯನವರು ತಮ್ಮ ಬರಹಗಳಲ್ಲಿ ದಲಿತರ ನೋವನ್ನು ಅಂತರಾಳದಿಂದ ಅನಾವರಣಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಇವರು ಬರೆದ ಕಾದಂಬರಿಗಳಲ್ಲಿ ಮೊದಲ ಕಾದಂಬರಿ 'ಮುರಿದ ಮದುವೆ' (1951). ತಂದೆಯ ಸ್ವಾರ್ಥಕ್ಕೆ ಸಿಕ್ಕಿ ದುರಂತದ ಪರಾಕಾಷ್ಠೆಯನ್ನು ಚಿತ್ರಿಸಿರುವ ಚೆಲುವೆಯೊಬ್ಬಳ ಕತೆಯಿದು. ಸಹಜವಾಗಿ ಆಗಬೇಕಿದ್ದ ಮದುವೆಯನ್ನು ತಪ್ಪಿಸಿ, ಒಲ್ಲದವನೊಡನೆ ಸಂಬಂಧವನ್ನು ತಂದೆಯೇ ಏರ್ಪಡಿಸಿ ದುರಂತಕ್ಕೆ ಕಾರಣನಾಗುತ್ತಾನೆ. ವೆಂಕಟಯ್ಯನವರ ಎರಡನೆ-ಕಾದಂಬರಿ 'ನೊಂದ ಜೀವ' (1955). ಈ ಕಾದಂಬರಿಯಲ್ಲಿ ಅಯ್ಯನವರು ಒಂದು ಪ್ರದೇಶದ, ಒಂದು ಜಾತಿಯ, ಒಂದು ಕುಟುಂಬದ ಜೀವನದ ಸರ್ವಸಂಗತಿಗಳನ್ನೂ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮೂರನೆಯ ಕಾದಂಬರಿ ‘ಚಂದನದ ಕೊರಡು’ 1965ರಲ್ಲಿ ಪ್ರಕಟವಾಗಿದೆ.
ವೆಂಕಟಯ್ಯನವರು ಸೊಗಸಾದ ಪ್ರವಾಸ, ಪ್ರಕೃತಿ ಚಿತ್ರಣಗಳ ಕಥನಗಳನ್ನೂ ರಚಿಸಿದ್ದಾರೆ. ಚಿನ್ನದ ನಾಲಗೆಯನ್ನು ತಿರುಪತಿಯ ಶ್ರೀನಿವಾಸನಿಗೆ ಅರ್ಪಿಸಲು ತಿರುಪತೆ ಯಾತ್ರೆ ಹೊರಡುವ ಕೃತಿ ‘ಚಿನ್ನದ ಗಿರಿಯಾತ್ರ’ (1952) – ಭಕ್ತಿಯ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು, ಜನರ ಮೂಢ ನಂಬಿಕೆಗಳನ್ನು ಚಿತ್ರಿಸಿರುವ ಕೃತಿ. ಯೂರೋಪಿನಲ್ಲಿ ನಡೆಯುವ ಮದುವೆಗಾಗಿ ಹೊರಟ ತಂಡವು ಹಾದಿಯಲ್ಲಿ ಅನುಭವಿಸುವ ಕಷ್ಟಗಳು, ಆಸ್ವಾದಿಸುವ ಪ್ರಕೃತಿ ಸೌಂದರ್ಯ ಮುಂತಾದವುಗಳ ವರ್ಣನೆಯ ಕೃತಿ ‘ಬನದ ಸೆರಗು’ (1962). ಬಿಳಿಗಿರಿ ರಂಗನ ಬೆಟ್ಟದ ಕಾಡುದಾರಿಯಲ್ಲಿ ಆನೆಗಳ ಕೈಗೆ ಸಿಕ್ಕಿ ಪಾರಾಗುವ, ಹುಲಿಬೇಟೆಗಾಗಿ ರಾತ್ರಿ ಇಡೀ ಕಾಯುವ, ಮೈನವಿರೇಳಿಸುವ ಪ್ರಸಂಗಗಳ ಸ್ವಾರಸ್ಯಕರ ವರ್ಣನೆಯ ಪ್ರವಾಸ ಕೃತಿ ‘ನಿಸರ್ಗದ ಮಡಿಲು’ (1967). ಇವರು ಮಕ್ಕಳಿಗಾಗಿಯೇ ಬರೆದ ಕೃತಿ ‘ಬುದ್ಧದೇವ’ (ಜೀವನಚಿತ್ರಣ). ಸಿದ್ಧಾರ್ಥನು ಲೋಕದ ದುಃಖವನ್ನು ಕಣ್ಣಾರೆ ಕಂಡು ಹೃದಯಕರಗಿ ಅರಮನೆ ಅಷ್ಟೈಶ್ವರ್ಯ, ಹೆಂಡತಿ-ಮಗುವನ್ನು ತೊರೆದು ಜ್ಞಾನೋದಯ ಪಡೆಯುವ ಕೃತಿ ಬುದ್ಧದೇವ. ಇವರ ಮತ್ತೊಂದು ಜೀವನದ ಚಿತ್ರಣ ಕೊಡುವ ಕೃತಿ ಶಾರದಾಮಾತೆ ಅವರ ಜೀವನ ಚರಿತ್ರೆ. ಶಿಕ್ಷಣ, ಸಂಸ್ಕೃತಿ, ನೀತಿ, ಮೌಲ್ಯಗಳು ಹೇಗೆ ಹೆಂಗಸಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ, ರಾಮಕೃಷ್ಣ ಪರಮಹಂಸರಿಂದ ಮಾತೆಯವರು ಹೇಗೆ ಜೀವನ ಸಾರ್ಥಕ್ಯ ಪಡೆದರು ಎಂದು ತಿಳಿಸುವ ಕೃತಿಯಿದು.
ವೆಂಕಟಯ್ಯನವರ ಕಥೆಗಳ ಸಂಗ್ರಹ ‘ಮಗಳ ಮಾಂಗಲ್ಯ’ (1957). ಈ ಸಂಗ್ರಹದಲ್ಲಿ ನಾಲ್ಕು ಕತೆಗಳಿವೆ. ಅನ್ಯಮತೀಯರು ಸಂತಾನಾಪೇಕ್ಷೆಯಿಂದ ಬಾಬಯ್ಯ (ಮುಸ್ಲಿಮ್)ನನ್ನು ಪೂಜಿಸಿ ಸಂತಾನ ಪಡೆಯುವ ‘ಬಾಬಯ್ಯನ ಜಲ್ದಿ’; ಬೇಟೆಗಾರರ ಅನುಭವ ‘ಕೆಂಚಿ ಚೀಲದ ಹಣ್ಣು’; ಮನುಷ್ಯನ ಮಾನಸಿಕ ವ್ಯಾಪಾರಕ್ಕೆ ಸಂಬಂಧಿಸಿದ್ದ ನಿತ್ಯ ಜೀವನದಲ್ಲಿ ನಡೆಯುವ ಘಟನೆಗಳನ್ನು ಕುರಿತ ಕತೆ ‘ಕಾಸಿಲ್ಲದೆ ಕೈಲಾಸ’ ಮತ್ತು ಬಡತನದಲ್ಲಿ ನೊಂದ ತಂದೆಯೊಬ್ಬ ಅಪರಾಧಿಯೊಬ್ಬನ ನೆರವಿನಿಂದ ಮಗಳ ಮದುವೆಯನ್ನು ನೆರವೇರಿಸುವ ಕಥೆ ‘ಮಗಳ ಮಾಂಗಲ್ಯ’. ಈ ನಾಲ್ಕು ಕತೆಗಳು ಅಂದಿನ ಜೀವನ ಚಿತ್ರಣವನ್ನು ಸೊಗಸಾಗಿ ಕಟ್ಟಿ ಕೊಡುತ್ತವೆ. ವೆಂಕಟಯ್ಯನವರು ಲಕ್ಷ್ಮೀ ಸ್ಮಾರಕ ಗ್ರಂಥಮಾಲೆ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಕೃತಿಗಳನ್ನು ಹೊರತಂದರು.
1984ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜಿ.ಆರ್. ತಿಪ್ಪೇಸ್ವಾಮಿಯವರ ಸಂಪಾದಕತ್ವದಲ್ಲಿ ‘ಜಿ. ವೆಂಕಟಯ್ಯ ಸಾಹಿತ್ಯ ವಾಚಿಕೆ’ಯನ್ನು ಪ್ರಕಟಿಸಿದೆ. ಇವರು ಬರೆದ ‘ಬನದ ಸೆರಗು’ ಪ್ರವಾಸ ಕೃತಿಯು ದ್ವಿತೀಯ ಪಿ.ಯು. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿದ್ದರೆ, ‘ಬುದ್ಧದೇವ’ ಕೃತಿಯು ಹೈಸ್ಕೂಲು ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿ ನಿಯಮಿತವಾಗಿದ್ದರ ಜೊತೆಗೆ ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಪುರಸ್ಕಾರ ಗಳಿಸಿತು. ಇದರ ಇಂಗ್ಲಿಷ್ ಆವೃತ್ತಿಯೂ 1965ರಲ್ಲಿ ಪ್ರಕಟವಾಯಿತು.
ಜಿ. ವೆಂಕಟಯ್ಯನವರ ಗಮನಾರ್ಹ ಸಾಹಿತ್ಯ ಸೇವೆಯನ್ನು ಪರಿಗಣಿಸಿದ ರಾಜ್ಯ ಸಾಹಿತ್ಯ ಅಕಾಡಮಿಯು 1976ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು.
ಜಿ. ವೆಂಕಟಯ್ಯನವರು 1979ರ ಸೆಪ್ಟೆಂಬರ್ 22ರಂದು ಈ ಲೋಕವನ್ನಗಲಿದರು.
On the birth anniversary of G. Venkataiah
ಕಾಮೆಂಟ್ಗಳು