ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಮಾಶ್ರೀ


 ಉಮಾಶ್ರೀ


ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಮಹಾನ್ ಕಲಾವಿದೆ.

ಉಮಾಶ್ರೀ 1957ರ ಮೇ 10ರಂದು ಜನಿಸಿದರು. ಭಾವುಕತೆಯಲ್ಲಾಗಲಿ, ಹಾವಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರನ್ನು ಚಿಂತಿಸುವುದೂ ಕಷ್ಟ ಸಾಧ್ಯ.  ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿಕೊಡುವ ನಟನೆಯ ಪೂರ್ಣತ್ವವನ್ನು ನೆನೆಯುವುದೇ ಒಂದು ವಿಶಿಷ್ಟ ಅನುಭವವೆನಿಸುತ್ತದೆ.  

“ನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ” ಎಂಬ ಅವರ ಸಂದರ್ಶನ ಓದಿದಾಗ ಮನಸ್ಸು ಮೂಕವಾಯ್ತು.  ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದಾಕೆ ಉಮಾಶ್ರೀ.  ಅವರ 'ಒಡಲಾಳ' ನಾಟಕದ ಅಭಿನಯ ಅಂದಿನ ದಿನಗಳಲ್ಲಿ  ಅತ್ಯಂತ ಜನಪ್ರಿಯವಾಗಿತ್ತು.  

“ನನ್ನನ್ನು ಅತ್ಯಂತವಾಗಿ ಕಾಡಿದ ಪಾತ್ರ ಶರ್ಮಿಷ್ಠೆಯದು” ಎಂದು ಉಮಾಶ್ರೀ ಒಂದು ಕಡೆ ಹೇಳಿದ್ದಾರೆ.  “ಯಯಾತಿಗೆ ಕೊನೆವರೆಗೂ ಸಾಥ್ ನೀಡಿದ ಶರ್ಮಿಷ್ಠೆ ರಾಕ್ಷಸ ಕುಲದಲ್ಲಿ ಹುಟ್ಟಿದರೂ ನನಗೆ ಆದರ್ಶ ಎಂದು ತೋರುತ್ತಾಳೆ. ತನ್ನ ಲಾಭದವರೆಗೆ ಕಾದು, ಕೂಡಲೇ ಹೊರಟು ಹೋದ ದೇವಯಾನಿ ಮಾನವ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸಳಂತೆಯೇ ವರ್ತಿಸಿದಳು”.  ಹೀಗೆ ಹೇಳುವ ಉಮಾಶ್ರೀ ಗಮನಾರ್ಹ ಚಿಂತಕಿ.

ಬದುಕಿಗಾಗಿ ಕಲೆಯನ್ನು ಅನಿವಾರ್ಯವಾಗಿ ಅಪ್ಪಿಕೊಂಡ ಉಮಾಶ್ರೀ ಅದಕ್ಕೆ ತೋರಿದ ನಿಷ್ಠೆ ಮಾತ್ರ ಅನನ್ಯವಾದದ್ದು.  ‘ಅನುಭವ’ ಚಿತ್ರದಲ್ಲಿನ ಅವರ ಪಾತ್ರ ಕಾಶೀನಾಥರ ಹೊಸ ರೀತಿಯ ಒಂದು ಬೋಲ್ಡ್ ಪ್ರಯೋಗ.  ಅದರಲ್ಲಿ ಉಮಾಶ್ರೀ ತೋರಿದ ಗಮನಾರ್ಹ ಅಭಿನಯ ನೆನಪಿನಲ್ಲಿ ಉಳಿಯುವಂತದ್ದು.  ಆ ಪಾತ್ರದಲ್ಲಿ ಯುವಜನಾಂಗದ ಭಾಗವಾಗಿದ್ದ ನಮಗೆ ಉಮಾಶ್ರೀ ಅವರ ಪಾತ್ರ ಹೇಗೇ ಇದ್ದರೂ ಅವರು ನೆನಪಲ್ಲಿ ಉಳಿದದ್ದು ಮಾತ್ರ ಆಕೆಯ ಅಭಿನಯ ಸಾಮರ್ಥ್ಯದಿಂದ.  ಒಬ್ಬ ಕಲಾವಿದರು ತನಗೆ ನೀಡಿದ ಯಾವುದೇ ಪಾತ್ರದಲ್ಲೂ ತನ್ನನ್ನು ಅಡಗಿಸಿ, ತನ್ನ ಪಾತ್ರವನ್ನೂ ಅಡಗಿಸಿ ಕಲೆಯನ್ನು ಸುಗಮವಾಗಿ ಹೊರಚೆಲ್ಲುವ ವಿಶಿಷ್ಟ ಪರಿ ಇದು.  

ಆ ಚಿತ್ರದ ಹೆಸರು ಗೋಲ್ ಮಾಲ್ ರಾಧಾಕೃಷ್ಣ ಇರಬೇಕು.  ಉಮೇಶ್, ಸಿಹಿ ಕಹಿ ಚಂದ್ರು, ಮೈಸೂರು ಲೋಕೇಶ್, ಮುಖ್ಯಮಂತ್ರಿ ಚಂದ್ರು, ಅನಂತನಾಗ್ ಇವರುಗಳ ಸುತ್ತ ತಿರುಗುವ ಆ ಕತೆಯಲ್ಲಿ, ಹಲವೊಮ್ಮೆ ಅಲ್ಲಿನ ಹಾಸ್ಯ ಸನ್ನಿವೇಶ ಮೇರೆ ಮೀರಿದ್ದು ಎಂದು ಭಾವ ಕೊಡುತ್ತಿದ್ದರೂ ಕೂಡ, ಉಮಾಶ್ರೀ ತಮ್ಮ ಪಾತ್ರಕ್ಕೆ ನೀಡುವ ಹೊಳಪು ನೆನಪಲ್ಲಿ ಉಳಿಯುವಂತದ್ದು.  

ನಾಟಕ ರಂಗ ಕೊಡುವ ವೈವಿಧ್ಯತೆಯನ್ನು ದುರದೃಷ್ಟವಶಾತ್ ಚಿತ್ರರಂಗ ಮತ್ತು ದೂರದರ್ಶನ ನೀಡಲು ಆಶಕ್ಯವಾಗಿವೆ.  ಇಲ್ಲಿ ಎಲ್ಲವೂ ಜೆರಾಕ್ಸ್ ಕಾಪಿಯಂತೆ ನಡೆದು ಬಿಡಬೇಕು.  ಹೀಗಾಗಿ ಇಲ್ಲಿನ ಕಲಾವಿದರು ಅದರಲ್ಲೂ ಪೋಷಕ ಪಾತ್ರದವರು ಟೈಪ್ ಕಾಸ್ಟ್ ಆಗಿ ಸವೆದು ಹೋಗುವುದೇ ಹೆಚ್ಚು.  ಅತ್ಯಂತ ಆಳವಾದ ಸಾಮರ್ಥ್ಯವುಳ್ಳವರು ಮಾತ್ರವೇ ಸಿಕ್ಕ ಒಂದೆರಡು ಮುತ್ತಿನ ಅವಕಾಶಗಳನ್ನೇ ಹಾದಿಗಳನ್ನಾಗಿ ಪರಿವರ್ತಿಸಿಕೊಳ್ಳುವ ಸಂಯಮ ತೋರುತ್ತಾರೆ.  ಉಮಾಶ್ರೀ ಅಂತಹ ಶ್ರೇಷ್ಟರ ಸಾಲಿಗೆ ಸೇರುವವರು.  

ಉಮಾಶ್ರೀ ಅವರ ‘ಪುಟ್ನಂಜ’ ಚಿತ್ರದ ಮುದುಕಿ ಪಾತ್ರ; ‘ಕೋತಿಗಳು ಸಾರ್ ಕೋತಿಗಳು’ ಚಿತ್ರದಲ್ಲಿನ ಮುನಿಯಮ್ಮ ಪಾತ್ರ; ವಿಷ್ಣು – ಅಂಬರೀಶ್ ಇಬ್ಬರಿಗೂ ಹಿರಿಯಳಾಗಿ ಮೂಡಿದ ‘ದಿಗ್ಗಜರು’ ಚಿತ್ರದ ಪಾತ್ರ; ಸಂಗ್ಯಾಬಾಳ್ಯ, ಕೊಟ್ರೇಶಿ ಕನಸು, ಯಾರಿಗೆ ಸಾಲುತ್ತೆ ಸಂಭಳ ಹೀಗೆ ಹಲವು ತಕ್ಷಣಕ್ಕೆ ನೆನಪಿಗೆ ಬರುವ ಪಾತ್ರಗಳು ಆಕೆಯ ವಿಶಾಲ ವ್ಯಾಪ್ತಿಯ ಕುರುಹುಗಳನ್ನು ತೋರುತ್ತವೆ.

ಅಷ್ಟೊಂದು ಕಲಾವಿದರನ್ನು ಹುಟ್ಟುಹಾಕಿದ ಕರ್ನಾಟಕಕ್ಕೆ, ಪುಣ್ಯಕ್ಕೆ ಗಿರೀಶ್ ಕಾಸರವಳ್ಳಿ ಅವರ ಬೆಂಬಲ ದೊರಕಿದೆ.  ನಟಿಯರಾದ ತಾರಾ, ಜಯಮಾಲ, ಉಮಾಶ್ರೀ, ಸೌಂದರ್ಯ, ಮಾಳವಿಕಾ ಅಂತಹ ಕನ್ನಡದ ಪ್ರತಿಭೆಗಳಿಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮನ್ನಣೆ ತಂದುಕೊಟ್ಟ ಕೀರ್ತಿ ಗಿರೀಶರಿಗೆ ಸಲ್ಲಬೇಕು.  ಉಮಾಶ್ರೀ ಅವರಿಗೆ ‘ಗುಲಾಬಿ ಟಾಕೀಸ್’ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟ ಗಿರೀಶ್ ಕಾಸರವಳ್ಳಿ, ಆಕೆಗೆ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್  ಅಂತರರಾಷ್ಟ್ರೀಯ ಕಲಾಭಿಮಾನಿಗಳ  ಪ್ರಶಸ್ತಿ  ದೊರಕುವಂತಹ ಪಾತ್ರ ಕೊಟ್ಟು ಸೊಗಸಾದ ಅಭಿನಯ ಹೊರಹೊಮ್ಮುವಂತೆ ಮಾಡಿದ್ದಾರೆ.  ಕಾಸರವಳ್ಳಿಯವರ ‘ಕನಸೆಂಬ ಕುದುರೆಯನ್ನೇರಿ’ ಚಿತ್ರದಲ್ಲೂ ಉಮಾಶ್ರೀ ನಟಿಸಿದ್ದಾರೆ.

ಸಮಾಜಸೇವೆ ಮತ್ತು ರಾಜಕೀಯದಲ್ಲೂ ತಮ್ಮ ಚಟುವಟಿಕೆಗಳನ್ನು ಹರಡಿಕೊಂಡಿರುವ ಉಮಾಶ್ರೀ, ಸಿನಿಮಾ, ದೂರದರ್ಶನಗಳಲ್ಲಿನ ಹಲವು ಪಾತ್ರಗಳಲ್ಲಿ ನಟಿಸಿದ ನಂತರದಲ್ಲಿ  ಕರ್ನಾಟಕ ಸರ್ಕಾರದ ಸಚಿವೆಯಾಗಿಯೂ ಸೇವೆ ಸಲ್ಲಿಸಿದವರು.

ಕಷ್ಟಪಟ್ಟು ದುಡಿದು ತಮ್ಮಿಬ್ಬರು ಮಕ್ಕಳನ್ನು ಉತ್ತಮ ವಿದ್ಯಾವಂತರಾಗಿಸಿರುವ ಉಮಾಶ್ರೀ ತಮ್ಮ ಬದುಕಿನ ಜವಾಬ್ಧಾರಿಗಳನ್ನು ಕೂಡಾ ಸಮರ್ಥವಾಗಿ ಪೂರೈಸಿದ್ದಾರೆ.  

ಕಷ್ಟಗಳ ಕೋಟಲೆಗಳಲ್ಲಿ ಬೆಳೆದು ಬಂದ ‘ಉಮಾಶ್ರೀ’ ತನ್ನ ದಿಟ್ಟತನದಿಂದ ಚಿತ್ರರಂಗದ  ಬದುಕನ್ನು ಉನ್ನತ ಸಾಧನೆಯವರೆಗೆ ನಡೆಸಿರುವ ರೀತಿ ಮೆಚ್ಚುವಂತದ್ದು.

On the birth day of our great artiste Umashri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ