ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಧಾಕರ ಶರ್ಮ


 ಪಂಡಿತ ಸುಧಾಕರ ಶರ್ಮ


ವೇದಾಚಾರ್ಯ ಸುಧಾಕರಶರ್ಮ ಎಂದರೆ ‘ಚಂದನ’ ವಾಹಿನಿಯಲ್ಲಿ ಭಾನುವಾರಗಳಂದು ಪ್ರಸಾರವಾಗುತ್ತಿದ್ದ ‘ಹೊಸ ಬೆಳಕು’ ಕಾರ್ಯಕ್ರಮ ನೆನಪಾಗುತ್ತದೆ. ಸುಧಾಕರ ಶರ್ಮರು ಅನೇಕ ಜನಸಾಮಾನ್ಯ ಹೃದಯಗಳಲ್ಲಿನ ಅಜ್ಞಾನದ ಕತ್ತಲನ್ನು ಕಳೆದಿದ್ದವರು. ಅವರು ವೇದ, ವಿಜ್ಞಾನ ಮತ್ತು ವೈಚಾರಿಕತೆ ಮೂರನ್ನೂ ಮೇಳೈಸಿಕೊಂಡಿದ್ದ ವಿಶಿಷ್ಟರೆನಿಸಿದ್ದವರು. ಇಂದು ಅವರ ಸಂಸ್ಮರಣೆ ದಿನ.

ಪಂಡಿತ ಸುಧಾಕರ ಶರ್ಮರು ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದ ಎನ್. ಶ್ರೀಕಂಠಯ್ಯ ಅವರ ಪುತ್ರರು.  ಅವರು ಮಹಾತ್ಮ ಗಾಂಧಿಯವರ ನಿಕಟವರ್ತಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಚತುರ್ವೇದಗಳ ಪಂಡಿತ ಸುಧಾಕರ ಚತುರ್ವೇದಿ ಅವರ ಶಿಷ್ಯರಾಗಿದ್ದವರು.


1973ರಿಂದಲೂ ಬೆಂಗಳೂರು ಆಕಾಶವಾಣಿಯ ನಾಟಕ ಕಲಾವಿದರೂ, ಹಲವು ಮಹತ್ವದ ಕೃತಿಗಳ ರಚನಾಕಾರರೂ ಆಗಿದ್ದ ಸುಧಾಕರ ಶರ್ಮ ಅವರು ಅವೈಜ್ಞಾನಿಕ  ಸಂಪ್ರದಾಯಗಳ ವಿರೋಧಿಯಾಗಿ  ಸಂಪ್ರದಾಯಸ್ಥ ವೈದಿಕರ ಕೆಂಗಣ್ಣಿಗೂ ಗುರಿಯಾಗಿದ್ದವರು. ‘ಮದುವೆ-ಏಕೆ-ಯಾವಾಗ-ಹೇಗೆ?’, ‘ಮೃತ್ಯುವೇ ನಮಸ್ಕಾರ’, ‘ಜ್ಯೋತಿಷಿಗಳೇ ಸತ್ಯದ ಕೊಲೆ ಮಾಡಬೇಡಿ!’, ‘ವಾಸ್ತು ಬೀಳದಿರಿ ಬೇಸ್ತು!"; ‘ಜನಿವಾರದಲ್ಲಿ ಬ್ರಾಹ್ಮಣ್ಯವಿಲ್ಲ’ ಇತ್ಯಾದಿ ಮಹತ್ವದ ಕೃತಿಗಳ ರಚನಾಕಾರರಾದ ಸುಧಾಕರ ಶರ್ಮ ಅವರು  ನಮ್ಮ ರಾಜ್ಯವಷ್ಟೇ ಅಲ್ಲದೆದೇಶದ ಇತರೆಡೆಗಳಲ್ಲೂ ಉಪನ್ಯಾಸ ಹಾಗೂ ಪ್ರವಚನಗಳನ್ನು ನೀಡಿದ್ದರು.


ವೇದಗಳ ಕುರಿತಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಹತ್ವಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದ ಸುಧಾಕರ ಶರ್ಮ ಅವರು, ವೇದ ಮಂತ್ರಾರ್ಥಗಳ ವಿವರಣೆ ಸಹಿತವಾಗಿ ಬ್ರಾಹ್ಮಣೇತರರು, ಮಹಿಳೆಯರು ಹಾಗೂ ಬಾಲಕಿಯರಿಗೂ ಸಹ ಉಪನಯನ ಸಂಸ್ಕಾರ ಮಾಡಿಸಿದ್ದರು. ವ್ಯಕ್ತಿತ್ವ ವಿಕಸನ, ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕೌನ್ಸಿಲಿಂಗ್ (ಸಮಾಲೋಚನೆ) ಸಹಾ ಮಾಡುತ್ತಿದ್ದರು. 


ಪಂಡಿತ ಸುಧಾಕರ ಶರ್ಮ ಅವರದ್ದು ಅಪರೂಪದ ವ್ಯಕ್ತಿತ್ವ. ಕಡು ಆರ್ಯ ಸಮಾಜಿಯಾಗಿದ್ದು ಶುದ್ಧ ವೇದವನ್ನೇ ಬದುಕಿಗೆ ಮಾರ್ಗದರ್ಶಕವಾಗಿ ಇರಿಸಿಕೊಂಡವರು. ತಮ್ಮ ಮಕ್ಕಳನ್ನು ಶಾಲೆಗೂ ಕಳಿಸದೇ ಮುಕ್ತ ಅಧ್ಯಯನಕ್ಕೆ ಅಣಿಗೊಳಿಸಿದವರು. ವೇದಕ್ಕೆ ಮರಳಿ ಎಂಬ ದಯಾನಂದ ಸರಸ್ವತಿಯವರ ಆಲೋಚನೆಗಳನ್ನು ಜನಸಾಮಾನ್ಯರಲ್ಲಿ ಬಿತ್ತಲು ವೇದ ಪ್ರಚಾರಕ್ಕೆ ಬದುಕನ್ನು ಮುಡಿಪಾಗಿರಿಸಿದರು. ತೀವ್ರ ಅನಾರೋಗ್ಯದ ಹೊತ್ತಲ್ಲೂ ಮುಖ ಎಂದಿಗೂ ಬಾಡಿಸಿಕೊಂಡವರಲ್ಲ. ಅವರ ಓದು, ಬರವಣಿಗೆ ಬಹುಶಃ ಕೊನೆಯವರೆಗೂ ನಿಂತಿರಲಿಲ್ಲ. ಸ್ಫೂರ್ತಿಯ ಸೆಲೆಯೇ ಆಗಿದ್ದವರು. ಅವರು ಥೇಟು ರಾಮಕೃಷ್ಣರಂತೆ ಕಾಣುತ್ತಿದ್ದರು. ವಿವೇಕಾನಂದರ ಕುರಿತಂತೆ ಯಾರು ಚಿತ್ರಗಳನ್ನು ಮಾಡಿದರೂ ರಾಮಕೃಷ್ಣರ ಪಾತ್ರ ಮಾತ್ರ ಶರ್ಮಾಜಿಯದ್ದೇ ಆಗಿರುತ್ತಿತ್ತು.


ಪಂಡಿತ ಸುಧಾಕರ ಶರ್ಮ ಅವರು 2022ರ ಮೇ 9 ರಂದು ಈ ಲೋಕವನ್ನಗಲಿದರು. 


ಜಯಂತಿ ತೇ ಸುಕೃತಿನೋ

ರಸಸಿದ್ದಾಃ ಕವೀಶ್ವರಾಃ |

ನಾಸ್ತಿ ಯೇಷಾಂ ಯಶಃಕಾಯೇ

ಜರಾಮರಣಜಂ ಭಯಮ್ ||


“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು  ಇರುವುದೇ ಇಲ್ಲ.”

Respects to Vedic Scholar Pandit Sudhakara Sharma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ