ಪಿ. ಆರ್. ತಿಪ್ಪೇಸ್ವಾಮಿ
ಪಿ. ಆರ್. ತಿಪ್ಪೇಸ್ವಾಮಿ
ಪಿ. ಆರ್. ತಿಪ್ಪೇಸ್ವಾಮಿಯವರು ವಸ್ತು ಸಂಗ್ರಹಾಲಯಗಳ ರೂವಾರಿಯಾಗಿ, ಜನಪದ ಕಲಾತಜ್ಞರಾಗಿ, ಕಲಾವಿದರಾಗಿ, ಕಲಾಲೇಖನಗಳ ಸಾಹಿತಿಯಾಗಿ, ಮಹಾನ್ ಸಂಘಟಕರಾಗಿ ... ಹೀಗೆ ಹಲವು ರೀತಿಯಲ್ಲಿ ಸ್ಮರಣೀಯರು.
ಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿ ಅವರು ಚಿತ್ರದುರ್ಗದ ಹರ್ತಿಕೋಟೆಯಲ್ಲಿ1922ರ ಆಗಸ್ಟ್ 12ರಂದು ಜನಿಸಿದರು. ಚಿತ್ರಕಲೆಯತ್ತ ಆಕರ್ಷಿತರಾಗಿ ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಗೆ ಸೇರಿ ವಿಶೇಷವಾಗಿ ಕಲಾವಿದ ಎಸ್. ನಂಜುಂಡಸ್ವಾಮಿ ಅವರಲ್ಲಿ ನಿಸರ್ಗ ಚಿತ್ರರಚನೆ ಅಭ್ಯಸಿಸಿ ಅದನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಂಡರು.
ಪ್ರಸಿದ್ಧ ದೇವಾಲಯ, ಕೋಟೆ ಕೊತ್ತಲಗಳಲ್ಲದೆ ಅಲಕ್ಷಿತವಾದ ಭಗ್ನವಾದ ಅವಶೇಷಗಳ ಹಿನ್ನೆಲೆಯಲ್ಲಿ ಪ್ರಕೃತಿ ದೃಶ್ಯಗಳನ್ನು ಚಿಕ್ಕ ಅಳತೆಯಲ್ಲಿ, ಶುದ್ಧವಾದ ವರ್ಣಗಾರಿಕೆಯಲ್ಲಿ, ಸರಳ ಹಿತ, ಮಿತ, ಮೃದುವರ್ಣಗಳಲ್ಲಿ ನೆರಳು ಬೆಳಕಿನಾಟಗಳಲ್ಲಿ ಸಾಕಾರಗೊಳಿಸುತ್ತಿದ್ದು ತಿಪ್ಪೇಸ್ವಾಮಿ ಅವರದೇ ಆದ ಶೈಲಿಯೆಂಬಂತೆ ಪ್ರಖ್ಯಾತವಾಯಿತು.
ತಿಪ್ಪೆಸ್ವಾಮಿ ಅವರು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಭೂಗತ ಚಟುವಟಿಕೆಗಳೊಂದಿಗೆ ವ್ಯಂಗ್ಯಚಿತ್ರಗಳನ್ನು ರಚನೆ ಮಾಡಿ ಹಂಚಿದರು; ಆಳರಸರನ್ನು ಕಲೆಯ ಮೂಲಕ ಟೀಕಿಸಿದರು, ಅರಮನೆಯ ಕೃಪಾಶ್ರಯದಿಂದ ದೂರವೇ ಉಳಿದರು.
ಜನಪದ ಸಾಹಿತ್ಯದ ಸಂಗ್ರಹ, ವಿಶ್ಲೇಷಣೆ, ಹಾಗೂ ಪ್ರಕಟಣೆಗಳು ಭರದಿಂದ ನಡೆಯುತ್ತಿದ್ದ ಕಾಲವದು. ಈ ಕ್ಷೇತ್ರದ ತಜ್ಞರ ಒಡನಾಟದಿಂದ ತಿಪ್ಪೇಸ್ವಾಮಿಯವರು ನಾಡಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿದರು. ಅಲ್ಲಿಯ ದೈನಂದಿನ ಉಪಕರಣಗಳೂ ಕಲಾತ್ಮಕವಾಗಿರುವುದಲ್ಲದೆ ನಿರುಪಯೋಗಿ, ಮೂಲೆಗುಂಪಾಗಿ ನಾಶ ವಾಗುತ್ತಿದ್ದುದನ್ನು ಕಂಡು ಅವುಗಳ ಸಂಗ್ರಹಣೆಗೆ ತೊಡಗಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ರಾಷ್ಟ್ರದಲ್ಲೇ ಪ್ರಥಮವೆಂಬಂತೆ, ಜನಪದ ಉಪಕರಣಗಳು, ಆಟಿಕೆಗಳು, ತೊಗಲುಗೊಂಬೆ ಸೂತ್ರದಗೊಂಬೆ ಇತ್ಯಾದಿ ಗ್ರಾಮೀಣ ಪ್ರದೇಶದ ವಸ್ತುಗಳಿಗಾಗಿ ವ್ಯವಸ್ಥಿತವಾದ ಸಂಗ್ರಹಾಲಯವೊಂದನ್ನು ರೂಪಿಸಿದರು. ಅದರ ಮೇಲ್ವಿಚಾರಕವಾಗಿ ದುಡಿದು ನಿವೃತ್ತರಾದರು. ಸಂಗ್ರಹ ಹಾಗೂ ಜೋಡಣೆಗಳ ಕಾರ್ಯದಲ್ಲಿ ಸಿದ್ಧಹಸ್ತರೆನಿಸಿದರು. ಧರ್ಮಸ್ಥಳ ಹಾಗೂ ಸುತ್ತೂರಿನಲ್ಲಿಯೂ ಇದೇ ಬಗೆಯ ಸರ್ವವಸ್ತು ಸಂಗ್ರಹಾಲಯಗಳನ್ನು ರೂಪಿಸಿಕೊಟ್ಟರು. ಚಿತ್ರದುರ್ಗದಲ್ಲಿಯೂ ಇಂತಹದೊಂದು ಕಾರ್ಯನಡೆಸುತ್ತಿದ್ದರು.
ತಿಪ್ಪೇಸ್ವಾಮಿಯವರು ಕಲೆಯ ಕ್ಷೇತ್ರಕ್ಕೆ ಬರುವ ವೇಳೆಗೆ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಕಾಲ ಮುಗಿದ್ದಿದ್ದು, ಅಂದಿಗೆ ಹೊಸದೆನಿಸಬಹುದಾದ ನೈಜವಾದದ (ರಿಯಲಿಸಂ) ಹಾಗೂ ಭಾವಮುದ್ರಾ ಪಂಥದ (ಇಂಪ್ರೆಷನಿಸಂ) ಪಾಶ್ಚಿಮಾತ್ಯ ಕಲೆಯ ಪ್ರಭಾವ ಮುಂಬಯಿಯ ಜೆ.ಜೆ.ಶಾಲೆಯ ಮೂಲಕ ಬಂದಿತ್ತು. ಇವುಗಳ ಪ್ರಚಾರ ಕಾರ್ಯಕ್ಕಾಗಿ ಮೈಸೂರಿನಲ್ಲಿ ಚಿತ್ರಶಿಲ್ಪ ಅಕಾಡಮಿಯೊಂದು ಸ್ಥಾಪಿತವಾಗಿ ಆ ಮೂಲಕ ಅಂದಿನ ಕ್ರಿಯಾಶೀಲ ಕಲಾವಿದರ ಕೃತಿಗಳ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮ ಇತ್ಯಾದಿಗಳನ್ನು ಹಮ್ಮಿಕೊಂಡು ಕಲಾ ಸಂಘಟನೆಯನ್ನೂ ಮಾಡಿದರು. ಅದೇ ವೇಳೆಯಲ್ಲಿ 'ಕಲಾಕ್ಷೇತ್ರ' ಎಂಬ ಕೈಬರಹದ ಪತ್ರಿಕೆಯನ್ನು ಗೆಳೆಯರೊಂದಿಗೆ ಆರಂಭಿಸಿದರು. ಮುಂದೆ ಅದೊಂದು ಪ್ರಕಾಶನ ಸಂಸ್ಥೆಯಾಗಿ ಹಲವಾರು ಪುಸ್ತಕಗಳು ಹೊರಬಂದವು.
ತಿಪ್ಪೇಸ್ವಾಮಿಯವರು ಕುಂಚದ ಜೊತೆಗೆ ಲೇಖನಿಯನ್ನೂ ಹಿಡಿದರು. ಲೇಖನಗಳ ವ್ಯಾಪ್ತಿ ವಾಚಕರವಾಣಿಗೆ ಪತ್ರ ಬರೆಯುವುದರಿಂದ ಮೊದಲ್ಗೊಂಡು ಕಲೆ ಹಾಗೂ ಕಲಾವಿದರ ಪರಿಚಯ ಕಲಾಗ್ರಂಥಗಳು ಹಾಗೂ ಕಲಾ ಪ್ರದರ್ಶನಗಳ ವಿಮರ್ಶೆ, ಐತಿಹಾಸಿಕ ಭಿತ್ತಿ ಚಿತ್ರಗಳ ಹಾಗೂ ಕಲಾ ಸಂಗ್ರಹಾಲಯಗಳ ಪರಿಚಯ ಇತ್ಯಾದಿಯಾಗಿ ಕಲೆಯ ನಾನಾ ಮುಖಗಳ ಕುರಿತು ಬರೆದರು. ನಿಯತಕಾಲಿಕೆ, ವಿಶೇಷ ಸಂಚಿಕೆಗಳಿಂದ ಹಿಡಿದು ಸಂಭಾವನಾ ಗ್ರಂಥಗಳವರೆಗೆ ನೂರಾರು ಲೇಖನಗಳನ್ನು ಬರೆದರು. ವ್ಯಕ್ತಿಚಿತ್ರ ಅವರಿಗೆ ಪ್ರಿಯವಾದ ಸಂಗತಿಯಾಗಿತ್ತು. ಈ ಬಗೆಯ ಚಿತ್ರ ಕಲಾವಿದರ ಲೇಖನಗಳನ್ನು ಸೇರಿಸಿ 'ಕಲೋಪಾಸಕರು' ಎಂಬ ಹೆಸರಿನಲ್ಲಿಯೂ ಅವರು ಶಿಲ್ಪ ಕಲಾವಿದರನ್ನು ಕುರಿತು ಬರೆದ 'ಶಿಲ್ಪಿ ಸಂಕುಲ'ವನ್ನು ಶಿಲ್ಪಕಲಾ ಅಕಾಡೆಮಿಯಿಂದಲೂ ಹೊರತರಲಾಗಿದೆ.
ಇದಲ್ಲದೆ ತಿಪ್ಪೇಸ್ವಾಮಿ ಬೆಳೆದು ಬಂದ ಭಾರತೀಯಕಲೆ, ಕನ್ನಡ ಚಿತ್ರಕಲೆಯ ಇತಿಹಾಸ, ಕಲಾವಿದನ ನೆನಪುಗಳು ಇತ್ಯಾದಿ ಲೇಖನ ಸಂಗ್ರಹಗಳನ್ನು ಮೂಡಿಸಿದ್ದಾರೆ.
'ಕಲಾವಿದ ಕಂಡ ಫ್ರಾನ್ಸ್' ತಿಪ್ಪೇಸ್ವಾಮಿಯವರು ಗೊಂಬೆಯಾಟದ ತಂಡವೊಂದರ ಜೊತೆಯಲ್ಲಿ ಫ್ರಾನ್ಸ್ ದೇಶಕ್ಕೆ ಹೋಗಿದ್ದ ಅನುಭವದ ಪ್ರವಾಸ ಕಥನ. ಅವರು ಎನ್.ಬಿ.ಟಿ ಅವರಿಗೆ ಸಿ. ಶಿವರಾಮಮೂರ್ತಿಯವರು ಬರೆದು ಕೊಟ್ಟಿದ್ದ ಗ್ರಂಥದ ಕನ್ನಡ ಅನುವಾದ 'ಭಾರತೀಯ ಚಿತ್ರಕಲೆ' 1998ರಲ್ಲಿ ಪ್ರಕಟಗೊಂಡಿತು.
ತಿಪ್ಪೇಸ್ವಾಮಿಯವರು 1991-94ರ ಅವಧಿಯಲ್ಲಿ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಮಹತ್ವದ ಕೆಲಸ ನಿರ್ವಹಿಸಿದರು. ಚಿತ್ರಕಲಾ ಪ್ರಪಂಚ ಶಿಲ್ಪಕಲಾಪ್ರಪಂಚ, ಕಲಾಕೋಶಗಳಂತಹ ಹೆಬ್ಬೊತ್ತಿಗೆಗಳು, ಆಧುನಿಕ ಕಲೆ ಮುಂತಾದ ವಿಚಾರಗಳ ಕುರಿತು ವಿಚಾರ ಸಂಕಿರಣ ಹಾಗೂ ಪುಸ್ತಕ ರೂಪದಲ್ಲಿ ಪ್ರಕಟಣೆಗಳಲ್ಲದೆ ಕಾವಿಕಲೆ, ಫ್ರಾನ್ಸ್ ಇತಿಹಾಸಕಲೆ, ಚಿತ್ರಕಲಾ ದರ್ಪಣ ಇತ್ಯಾದಿಯಾಗಿ ಮೂರು ವರ್ಷಗಳ ಅವಧಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಅಧ್ಯಕ್ಷರ ಮುಖ್ಯ ಸಂಪಾದಕತ್ವದಲ್ಲಿ ಹೊರತರಲಾಯಿತು. ವಿವಿಧ ಕಾರಣಗಳಿಂದ ಆವರೆಗೆ ಅಕಾಡೆಮಿ ಗುರುತಿಸದೇ ಇದ್ದ ಅನೇಕ ಹಿರಿಯ, ಪ್ರಸಿದ್ಧ ಕಲಾವಿದರಿಗೆ ಈ ಅವಧಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕದ ಎಲ್ಲ ಭಿತ್ತಿಚಿತ್ರಗಳ ಛಾಯಾಚಿತ್ರ, ವರ್ಣಪಾರದರ್ಶಿಕೆ ಹಾಗೂ ಚಿತ್ರಸುರಳಿ (ವಿಡಿಯೊ) ಮಾಡಿಸಿ ಅಕಾಡೆಮಿಯಲ್ಲಿ ಸಂಗ್ರಹಿಸಲಾಯಿತು. ಛಾಯಾ ಚಿತ್ರಕಲೆಗೂ ವಿಶೇಷ ಮನ್ನಣೆ ನೀಡಿ ಅಖಿಲಭಾರತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ತಿಪ್ಪೇಸ್ವಾಮಿಯವರು ಏಕವ್ಯಕ್ತಿ ಕಲಾಪ್ರದರ್ಶನ ನೀಡಿದ್ದು ಕಡಿಮೆ. ತಾವು ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಂಡಿರಲಿಲ್ಲವಾಗಿ ಚಿತ್ರಕಲಾ ಪರಿಷತ್ತಿನಂತಹ ಕೆಲವೇ ಪ್ರದರ್ಶನಗಳಲ್ಲಿ ಶ್ರೀಯುತರ ಕೃತಿಗಳನ್ನು ಕಾಣಬಹುದಿತ್ತು. ಅಲ್ಲದೆ ಕೃತಿಗಳನ್ನು ಮಾರಾಟಕ್ಕೆಂಬಂತೆ ರಚಿಸದೆ ಹವ್ಯಾಸವಾಗಿ ಇರಿಸಿಕೊಂಡಿದ್ದು ತಾವೇ ತಮ್ಮ ಕೃತಿಗಳನ್ನು ಉದಾರವಾಗಿ, ಬಹುಮಾನವಾಗಿ ಇಲ್ಲವೆ ಸಾಂಕೇತಿಕ ಬೆಲೆಗೆ ನೀಡುತ್ತಿದ್ದರು. ಕವಿ ಕುವೆಂಪುರವರೇ ಇಷ್ಟಪಟ್ಟು ತಮ್ಮ ಬಾಲ್ಯದ ಕುಪ್ಪಳ್ಳಿಯ ಪರಿಸರದ ಚಿತ್ರಗಳನ್ನು ತಿಪ್ಪೇಸ್ವಾಮಿಯವರಿಂದ ಬರೆಯಿಸಿದರು. ಕವಿ ಸಾಕಷ್ಟು ಸಂಭ್ರಮಿಸಿದ್ದಲ್ಲದೆ, ಆ ಚಿತ್ರಗಳನ್ನು ಮುಂದಿರಿಸಿಕೊಂಡು ಕವಿತೆಗಳನ್ನೂ ರಚಿಸಿದರು. ಇದೇ ರೀತಿ ಇನ್ನೂ ಹಲವಾರು ಅಭಿಮಾನಿಗಳಲ್ಲಿ ಚಿತ್ರಕಲಾ ಪರಿಷತ್, ಲಲಿತಕಲಾ ಅಕಾಡೆಮಿ, ಸರ್ಕಾರಿ ವಸ್ತುಸಂಗ್ರಹಾಲಯ, ಜಗನ್ಮೋಹನ ಅರಮನೆ, ದೆಹಲಿಯ ಕೆಂಪುಕೋಟೆಯ ಅತಿಥಿಗೃಹ ಇವೇ ಮೊದಲಾದ ಸ್ಥಳಗಳಲ್ಲಿ ತಿಪ್ಪೇಸ್ವಾಮಿ ಅವರ ಕೃತಿಗಳು ಚದುರಿಹೋಗಿವೆ. ಅಮೆರಿಕಾ, ಇಂಗ್ಲೆಂಡ್, ರಷ್ಯಾ, ಡೆನ್ಮಾರ್ಕ್ ದೇಶಗಳಲ್ಲೂ ಶ್ರೀಯುತರ ಕೃತಿಗಳು ಸಂಗ್ರಹಿತವಾಗಿರುವುದಾಗಿ ತಿಳಿದು ಬರುತ್ತದೆ.
ತಿಪ್ಪೇಸ್ವಾಮಿಯವರಿಗೆ ಕಲಾಕೋವಿದ ಚಿತ್ರಲೇಖನ ಚತುರ, ಚಿತ್ರಕಲಾರತ್ನ ಚಿತ್ರಕಲಾಪ್ರವೀಣ ಇತ್ಯಾದಿ ಬಿರುದುಗಳಲ್ಲದೆ ಕರ್ನಾಟಕ ರಾಜ್ಯ ಪ್ರಶಸ್ತಿ 1974, ಲಲಿತಕಲಾ ಅಕಾಡೆಮಿ ಪ್ರಶಸ್ತಿ (1981), ಎಂಟಿವಿ ಅಚಾರ್ಯ ಪ್ರಶಸ್ತಿ. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ (1997) ಗಳು ಸಂದಿದ್ದವು.
ತಿಪ್ಪೇಸ್ವಾಮಿಯವರು 2000ದ ಏಪ್ರಿಲ್ 7ರಂದು ಈ ಲೋಕವನ್ನಗಲಿದರು.
On the birth anniversary of great artist and folklorist P.R. Thippeswamy 🌷🙏🌷
ಕಾಮೆಂಟ್ಗಳು