ಎಂ. ರಂಗರಾವ್
ಎಂ. ರಂಗರಾವ್
ಎಂ. ರಂಗರಾವ್ ಅಂದರೆ ವೀಣೆಯ ಸುಮಧುರ ನಾದದ ನೆನಪಾಗುತ್ತದೆ. ವೀಣೆಯ ನಾದ ನೀಡುವ ಆತ್ಮಾನಂದ, ಅನುಭೂತಿ ಒಂದು ರೀತಿಯ ವಿಶಿಷ್ಟತೆಯದು. ಸಿನಿಮಾ ಮತ್ತು ಭಕ್ತಿಸಂಗೀತದಲ್ಲಿ ಎಂ. ರಂಗರಾಯರು ವೀಣೆಯ ಸುಮಧುರತೆಯನ್ನು ಅಳವಡಿಸಿಕೊಂಡು ಈ ಸಂಗೀತ ಮಾಧ್ಯಮಕ್ಕೆ ನಾವೀನ್ಯತೆ, ಮಧುರತೆ ಮತ್ತು ಸುಶ್ರಾವ್ಯತೆಗಳನ್ನು ಹರಿಸಿದವರು.
ರಂಗರಾಯರು 1932ರ ಏಪ್ರಿಲ್ 26ರಂದು
ಆಂಧ್ರಪ್ರದೇಶದ ಕವಲೇರು ಗ್ರಾಮದಲ್ಲಿ ಜನಿಸಿದರು (ಬಹುತೇಕ ಉಲ್ಲೇಖಗಳಲ್ಲಿ 1932ರ ಅಕ್ಟೋಬರ್ 15 ಎಂದಿದೆ). ತಂದೆ ವೈಷ್ಣವರಾಜ್ ಅವರು ಸಂಗೀತ ವಿದ್ವಾಂಸರಾಗಿದ್ದರು. ವೈಷ್ಣವರಾಜರ ತಂಗಿಯ ಮಗ ಮಹಾನ್ ಗಾಯಕ ಪಿ. ಬಿ. ಶ್ರೀನಿವಾಸ್. ತಾಯಿ ಅಲಮೇಲು ತಂಗಮ್ಮ ವೀಣಾವಾದನದಲ್ಲಿ ಹೆಸರಾಗಿದ್ದರು.ಅವರು ಪೀತಾಪುರಂ ಸಂಗಮೇಶ್ವರ ರಾವ್ ಅವರ ಬಳಿ ವೀಣೆ ಕಲಿತು ಕೆಲಕಾಲ ಟೈಗರ್ ವರದಾಚಾರ್ಯರಲ್ಲಿ ಗಾಯನವನ್ನೂ ಕಲಿತಿದ್ದರು.
ತಮ್ಮ ತಾಯಿಯವರಿಂದ ರಂಗರಾಯರು ಸಂಗೀತದ ಸದಭಿರುಚಿಯನ್ನು ಬೆಳೆಸಿಕೊಂಡರು. ಸಣ್ಣ ವಯಸ್ಸಿನಲ್ಲೇ ವೀಣೆ ನುಡಿಸುವ ಕಲೆ ಅವರಿಗೆ ಕರಗತವಾಯಿತು. ತಂದೆಯವರ ಅಕಾಲಿಕ ಮರಣ ಜೀವನದ ಗತಿಗೆ ಕಷ್ಟ ತಂದಿತು. ಮದರಾಸಿಗೆ ಬಂದ ತಾಯಿಯವರಿಗೆ ಆಕಾಶವಾಣಿಯಲ್ಲಿ ಸಿಕ್ಕ ಸಣ್ಣಪುಟ್ಟ ಕಾರ್ಯಕ್ರಮಗಳ ಅವಕಾಶಗಳ ದೆಸೆಯಲ್ಲಿ ಜೀವನ ನಡೆಯತೊಡಗಿತು.
ರಂಗರಾಯರು ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ, ಆದರೆ ಬೆಳೆದದ್ದು ಸಂಗೀತದಿಂದ.
ರಂಗರಾವ್ ಚಿತ್ರರಂಗಕ್ಕೆ ಬರುವ ಮೊದಲು ಎಚ್ಎಎಲ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದರು. ಎಷ್ಟು ದಿನ ಆದರೂ ಕಂಪನಿ ಬಸ್ ಪಾಸ್ ಸಿಗಲಿಲ್ಲ. ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಹಣವಿಲ್ಲದೆ ದಿನಾ ಸೈಕಲ್ ಅಲ್ಲಿ ದೂರ ಹೋಗಿಬರುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರತೊಡಗಿತು. ಹೀಗಾಗಿ ಒಂದು ಸಣ್ಣ ಅವಕಾಶ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಬಂದೊಡನೆ ಕೆಲಸ ಬಿಟ್ಟರು. ಮುಂದೆ ಅದು ಚಿತ್ರರಂಗಕ್ಕೆ ವರದಾನವಾಯಿತು. ಅವರಿಗೆ ಬಸ್ ಪಾಸ್ ಕೊಡದವರಿಗೆ ಸಂಗೀತಲೋಕ ಕೃತಜ್ಞವಾಗಿರಬೇಕೇನೊ!
ತೆಲುಗಿನ 'ಸ್ವರ್ಗ ಸೀಮಾ ಯೋಗಿ ವೇಮನ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಂಗರಾಯರಿಗೆ 'ತ್ಯಾಗಯ್ಯ' ಚಿತ್ರದಲ್ಲಿ ಆಕಸ್ಮಿಕವಾಗಿ ವೀಣೆ ನುಡಿಸುವ ಅವಕಾಶ ಒದಗಿ ಬಂತು. 'ವೇಮನ', 'ಸ್ವರ್ಗಸೀಮಾ' ಮುಂತಾದ ಮಹತ್ವದ ಚಿತ್ರಗಳ ಸಂಗೀತದಲ್ಲಿ ಪಾಲ್ಗೊಂಡರು. ಆದಿ ನಾರಾಯಣರಾವ್ ಅವರಿಗೆ ಸಹಾಯಕರಾಗಿಯೂ ದುಡಿದರು.
ಮುಂದೆ ರಂಗರಾಯರು ಎಂ. ವೆಂಕಟರಾಜು ಅವರಿಗೆ 'ಭಕ್ತ ಕನಕದಾಸ' ಚಿತ್ರದಲ್ಲಿ ಸಹಕಾರ ನೀಡುವುದರ ಮೂಲಕ ಕನ್ನಡ ಚಿತ್ರರಂಗದತ್ತ ಬಂದರು. ತಮಿಳಿನ 'ಸುಮಂಗಲಿ' ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು.
1967ರಲ್ಲಿ ಪ್ರಸಿದ್ಧ ನಿರ್ದೇಶಕರಾದ ಎಂ. ಆರ್. ವಿಠಲ್ ನಿರ್ದೇಶನದ ಕನ್ನಡ ಚಿತ್ರ ‘ನಕ್ಕರೆ ಅದೇ ಸ್ವರ್ಗ’ದ ಮೂಲಕ ಎಂ. ರಂಗರಾವ್ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಇದು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಮೊದಲ ಚಿತ್ರವೂ ಹೌದು. ವಿಠ್ಠಲ್ ಅವರ 'ಮನಸ್ಸಿದ್ದರೆ ಮಾರ್ಗ', 'ಮಾರ್ಗದರ್ಶಿ' ಚಿತ್ರಗಳಲ್ಲಿನ ಸಂಗೀತ ಅವರಿಗೆ ಹೆಸರು ತಂದವು.
ರಂಗರಾಯರ ಸಂಗೀತವೆಂದರೆ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತೆಗಳ ಚಿತ್ರಗಳೆನಿಸಿರುವ 'ಹಣ್ಣೆಲೆ ಚಿಗುರಿದಾಗ’, ‘ನಕ್ಕರೆ ಅದೇ ಸ್ವರ್ಗ’, ‘ಸಾಕ್ಷಾತ್ಕಾರ’, ‘ಎಡಕಲ್ಲು ಗುಡ್ಡದ ಮೇಲೆ’, ‘ಬಂಧನ’, ಬಿಡುಗಡೆಯಾಗದಿದ್ದರೂ ಗೀತೆಗಳಿಂದ ಪ್ರಖ್ಯಾತಿ ಪಡೆದ ‘ಗಾನಯೋಗಿ ರಾಮಣ್ಣ’, ‘ಹುಡುಗಾಟದ ಹುಡುಗಿ’, ‘ದೇವರು ಕೊಟ್ಟ ವರ’, ‘ಕಾವೇರಿ’, ‘ಹೊಸ ಬೆಳಕು’, ‘ಶ್ರಾವಣ ಬಂತು’, ‘ಕವಿರತ್ನ ಕಾಳಿದಾಸ’, ‘ಕಲ್ಲು ವೀಣೆ ನುಡಿಯಿತು’, ‘ಕಥಾನಾಯಕ’, ‘ಬಹದ್ದೂರ್ ಗಂಡು', ‘ಹೃದಯ ಪಲ್ಲವಿ’, ‘ಮುದುಡಿದ ತಾವರೆ ಅರಳಿತು’, ‘ಅರುಣ ರಾಗ’, ‘ಸಮಯದ ಗೊಂಬೆ’, ‘ಬದುಕು ಬಂಗಾರವಾಯಿತು’, ‘ರಂಗನಾಯಕಿ' ಹೀಗೆ ಅನೇಕ ಉತ್ತಮ ಸಂಗೀತವಿರುವ ಚಿತ್ರಗಳ ಪಟ್ಟಿಯೇ ನೆನಪಿಗೆ ಬರುತ್ತದೆ.
ಹೂವು ಚೆಲುವೆಲ್ಲಾ ನಂದೆಂದಿತು, ಬಾಳೊಂದು ಭಾವ ಗೀತೆ, ಒಲವೆ ಜೀವನ ಸಾಕ್ಷಾತ್ಕಾರ, ಬಾನಿಗೆ ನೀಲಿಯಾ ಮೇಘಕೆ ಬಣ್ಣವ, ಜನುಮ ಜನುಮದ ಅನುಬಂಧ, ಒಲವೆ ಜೀವನ ಸಾಕ್ಷಾತ್ಕಾರ, ವಿರಹಾ ನೂರು ನೂರು ತರಹ, ಬಣ್ಣ ನನ್ನ ಒಲವಿನ ಬಣ್ಣ, ನೂರೊಂದು ನೆನಪು ಎದೆಯಾಳದಿಂದ, ಕೇಳನೋ ಹರಿ ತಾಳನೋ, ನಾ ನಿನ್ನ ಧ್ಯಾನದೊಳಿರಲು, ಬೆಳ್ಳಿಯ ತೆರೆಯ ಮೋಡದ ಮರೆಯ, ಬೇಲೂರ ಗುಡಿಯಲ್ಲಿ ಶಿಲೆಯಾಗಿ ನಿಂತೋಳೆ, ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ, ಶೃಂಗೇರಿ ಗೀರ್ವಾಣಿ, ಈ ದೇಶ ಚೆನ್ನ ಈ ಮಣ್ಣು ಚಿನ್ನ, ತೆರೆದಿದೆ ಮನೆ ಓ ಬಾ ಅತಿಥಿ, ಶ್ರಾವಣ ಮಾಸ ಬಂದಾಗ, ಇದೇ ರಾಗದಲ್ಲಿ ಇದೇ ತಾಳದಲ್ಲಿ, ಬಾನಿನ ಅಂಚಿಂದ ಬಂದೆ, ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ, ಪ್ರಿಯತಮಾ ಕರುಣೆಯಾ ತೋರೆಯಾ, ನನ್ನಾ ದೇವನ ವೀಣಾ ವಾದನ, ನನ್ನೆದೆ ವೀಣೆಯು ಮಿಡಿಯುವುದು, ಮುತ್ತಿನಂತ ಮಾತೊಂದು ಗೊತ್ತೇನಮ್ಮ, ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ, ನೂರು ಕಣ್ಣು ಸಾಲದು, ಕನ್ನಡನಾಡಿನ ರಸಿಕರ ಮನವಾ, ರಾಗಕೆ ಸ್ವರವಾಗಿ, ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ, ನಾನೊಂದು ತೀರ ನೀನೊಂದು ತೀರ, ಕೋಗಿಲೆ ಹಾಡಿದೆ ಕೇಳಿದೆಯಾ, ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ, ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ, ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ ಇಂತಹ ನೂರಾರು ಸುಶ್ರಾವ್ಯ ಗೀತೆಗಳ ಇಂಪನ್ನು ನಮಗೆ ತಂದಿತ್ತವರು ರಂಗರಾಯರು.
ಗಾನಯೋಗಿ ರಾಮಣ್ಣ ಚಿತ್ರ ತೆರೆಕಾಣಲಿಲ್ಲ. ಆದರೆ ಆ ಚಿತ್ರದ ‘ನಾ ನಿನ್ನ ಧ್ಯಾನದೊಳಿರಲು’, ಮತ್ತು ‘ಕೇಳನೋ ಹರಿ ತಾಳನೋ’ ಗೀತೆಗಳು ಡಾ. ಎಂ. ಬಾಲಮುರಳಿ ಕೃಷ್ಣರ ಧ್ವನಿಯಲ್ಲಿ ಮೂಡಿಬಂದಿರುವ ರೀತಿ ಮತ್ತು ಭೀಮ್ ಪಲಾಸ್ ರಾಗದಲ್ಲಿ ಬಂದ ಹಣ್ಣೆಲೆ ಚಿಗುರಿದಾಗ ಚಿತ್ರದ ‘ಹೂವು ಚೆಲುವೆಲ್ಲಾ ನಂದೆಂದಿತು’, ಬಂಧನ ಚಿತ್ರದ ‘ಬಣ್ಣ ನನ್ನ ಒಲವಿನ ಬಣ್ಣ' ಗೀತೆಗಳು ಮತ್ತು ಎಡಕಲ್ಲು ಗುಡ್ಡದ ಮೇಲೆ ಚಿತ್ರದ ‘ವಿರಹಾ ನೋವು ನೂರು ತರಹ’ ಗೀತೆಗಳು ರಂಗರಾಯರಿಗೆ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದಲ್ಲಿದ್ದ ಪರಿಣತಿಯನ್ನುಯನ್ನು ಎತ್ತಿ ತೋರುತ್ತವೆ.
ತಮ್ಮ ಸಂಗೀತ ನಿರ್ದೇಶನದಿಂದ ಕನ್ನಡ ಚಿತ್ರರಂಗಕ್ಕೆ ಮಾಧುರ್ಯದ ಹೊಳೆಯನ್ನೇ ಹರಿಸಿದ ರಂಗರಾವ್, ಅನೇಕ ಭಕ್ತಿಗೀತೆಗಳ ರಾಗ ಸಂಯೋಜನೆಯಿಂದಲೂ ಜನಪ್ರಿಯರಾಗಿದ್ದಾರೆ. ‘ಗಜಮುಖನೆ ಗಣಪತಿಯೇ ನಿನಗೆ ವಂದನೆ’, ‘ಶರಣು ಶರಣಯ್ಯ ಶರಣು ಬೆನಕ’, ‘ಎದ್ದೇಳು ಮಂಜುನಾಥ ಏಳು ಬೆಳಗಾಯಿತು’, ‘ಉಡುಪಿಯಿದು ಉಡುಪಿಯಿದು ಗೀತಾಚಾರ್ಯರ ಕ್ಷೇತ್ರವಿದು’, ‘ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶ್ರಂಗೇರಿ’, ‘ವಾರ ಬಂತಮ್ಮ ಗುರುವಾರ ಬಂತಮ್ಮ’, ‘ನೋಡು ನೋಡು ಕಣ್ಣಾರ ನಿಂತಿಹಳು’, ‘ಶರಣರ ಕಾಯೇ ಚಾಮುಂಡೇಶ್ವರಿ’ ಮುಂತಾದ ಬಹುತೇಕ ದಿನನಿತ್ಯದ ಭಕ್ತಿ ಸಂದರ್ಭಗಳಲ್ಲಿ ಮತ್ತು ಹಬ್ಬದ ಸಂದರ್ಭಗಳಲ್ಲಿ ಕೇಳಿಬರುವ ಸುಶ್ರಾವ್ಯ ಗೀತೆಗಳು ಎಂ. ರಂಗರಾವ್ ಅವರಿಂದ ಮೂಡಿಬಂದಿದೆ.
ಜಯಶ್ರೀ ಅವರು ಇತ್ತೀಚೆಗೆ ಸುಗಮ ಸಂಗೀತ ಕೋಗಿಲೆ ಕಾಳಿಂಗರಾಯರು ಹಾಗು ಮೈಸೂರು ಅನಂತಸ್ವಾಮಿಯವರ ಹಾಡುಗಳನ್ನು ನಾಡಿನ ಮೂಲೆಮೂಲೆಯಲ್ಲಿರುವ ಕಲಾವಿದರಿಂದ. ಹಾಡಿಸಿ ಈ ಹಿರಿಯರಿಗೆ ಫೇಸ್ ಬುಕ್ ಮೂಲಕ ನಿತ್ಯಪೂಜೆಯ ಲೈವ್ ಅಭಯಾನ ತಿಂಗಳುಗಳ ಕಾಲ ನಡೆಸಿದರು. ಅದು ಬಹು ದೊಡ್ಡ ಸಾರ್ಥಕ ಗಾನನಮನ ಎನಿಸಿದೆ.
ಕನ್ನಡ ಭಾಷೆಯಲ್ಲದೆ ಇತರ ಭಾಷೆಗಳಲ್ಲೂ ರಂಗರಾಯರ ಸಂಗೀತದ ಸುಮಧುರ ನಿನಾದ ಹರಿದಿದೆ. 1991ರ ಆಗಸ್ಟ್ 3ರಂದು ನಿಧನರಾದ ರಂಗರಾಯರು ನೂರಾರು ಚಿತ್ರಗಳ ಸಾವಿರಾರು ಸುಮಧುರ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗಕ್ಕೆ ಮರೆಯಲಾರದ ಕೊಡುಗೆ ನೀಡಿದವರು. ಈ ಮಹಾನ್ ಸಂಗೀತಗಾರನ ನೆನಪಿಗೆ ನಮ್ಮ ಗೌರವಪೂರ್ವಕ ನಮನ.
ಕೃತಜ್ಞತೆ: ಎಂ. ರಂಗರಾಯರ ಬದುಕಿನ ಕುರಿತು ಅನೇಕ ಅಧಿಕೃತ ಮಾಹಿತಿಗಳನ್ನು ನನ್ನೊಡನೆ ಆಪ್ತತೆಯಿಂದ ತೆರೆದಿಟ್ಟ ಮಹತ್ವದ ಸಂಶೋಧಕ ಬರಹಗಾರ ಎನ್. ಎಸ್. ಶ್ರೀಧರಮೂರ್ತಿ Sreedhara Murthy ಅವರಿಗೆ ಋಣಿಯಾಗಿದ್ದೇನೆ.
On the birthday of great music director M. Rangarao
ಕಾಮೆಂಟ್ಗಳು