ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಯಶ್ರೀ ಅರವಿಂದ್


 ಜಯಶ್ರೀ ಅರವಿಂದ್


ಗಾಯನ, ಸಂಗೀತ ಸಂಯೋಜನೆ ಮತ್ತು ಕನ್ನಡದ ಸುಗಮಸಂಗೀತದ ಬರಹಗಳಿಗೆ ಹೆಸರಾಗಿರುವವರು ಜಯಶ್ರೀ ಅರವಿಂದ್.  ಜಯಶ್ರೀಯವರ ಸಂಯೋಜನೆಯ  ಗೀತೆಗಳಿಗೆ ರಾಜ್ ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ಪಿ. ಸುಶೀಲಾ, ವಾಣಿ ಜಯರಾಂ, ಏಸುದಾಸ್, ಸಿ. ಅಶ್ವತ್ಥ್, ರತ್ನಮಾಲ ಪ್ರಕಾಶ್, ನರಸಿಂಹನಾಯಕ್ ಮುಂತಾದ ಸಕಲಗಣ್ಯರುಊ ಧ್ವನಿ ನೀಡಿದ್ದಾರೆ.  ಚಲನಚಿತ್ರರಂಗದ ಭೀಷ್ಮ  ಜಿ.ವಿ. ಅಯ್ಯರ್ ತಯಾರಿಸಿದ ‘ಕೃಷ್ಣಲೀಲಾ’ ಚಿತ್ರದ ಸಂಗೀತ ನಿರ್ದೇಶಕಿ ಕೂಡ ಜಯಶ್ರೀ ಅರವಿಂದ್.  ಯುವಕಲಾವಿದರಾಗಿ ಹೆಸರು ಮಾಡಿರುವ ಕೆ.ಎಸ್. ಸುರೇಖಾ, ರಮೇಶ್ ಚಂದ್ರ ಮುಂತಾದವರು ಜಯಶ್ರೀಯವರ ಗರಡಿಯಲ್ಲಿ ಬೆಳೆದು ಬಂದವರು.

ಜಯಶ್ರೀ 1955ರ ಏಪ್ರಿಲ್ 26ರಂದು ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ಜನಿಸಿದರು.  ತಂದೆ ಗೋವಿಂದರಾಜು ಅಯ್ಯಂಗಾರ್.  ತಾಯಿ ಶ್ರೀರಂಗನಾಯಕಿ ಸಾಹಿತ್ಯ ಸಂಗೀತದಲ್ಲಿ ಬಹಳಷ್ಟು ಆಸಕ್ತಿ ತಳೆದಿದ್ದರು.  ಚೀನಾ ಯುದ್ಧದ ಸಂದರ್ಭದಲ್ಲಿ ತಾವೇ ಸ್ವತಃ ಹಾಡು ಬರೆದು ಅದಕ್ಕೆ ರಾಗ ಹೊಂದಿಸಿ ಹಾಡಿ ಜನಪ್ರಿಯತೆ ಪಡೆದಿದ್ದರು.   ಶಾಸ್ತೀಯ ಸಂಗೀತದ ನೆಲೆಗಟ್ಟಿನ ಗೀತೆಗಳ ರಾಗಕ್ಕೆ ಪದ ಜೋಡಿಸುವ ಕೆಲಸವನ್ನು ಮಾಡುತ್ತಿದ್ದರು.  ಶ್ರೀರಂಗನಾಯಕಮ್ಮನವರಿಗಿದ್ದ ಸಂಗಿತ-ಸಾಹಿತ್ಯಾಸಕ್ತಿ ಜಯಶ್ರೀಯವರಿಗೂ ಹುಟ್ಟಿನಿಂದಲೇ ಬಂದಿತ್ತು.  ತಾಯಿ ಹಾಡುತ್ತಿದ್ದ ಸ್ವರಚಿತ ಗೀತೆಗಳಲ್ಲದೆ, ಸಂಪ್ರದಾಯ ಗೀತೆಗಳು, ಭಕ್ತಿ ಗೀತೆಗಳು ಜಯಶ್ರೀಯವರನ್ನು ಬಹಳಷ್ಟು ಆಕರ್ಷಿಸಿತು.  ಕೆಲವು ಹಾಡುಗಳನ್ನು ಕಲಿತು ಹಾಡುತ್ತಾ ಅದರ ಬಗ್ಗೆ ಒಲವು ಬೆಳೆಸಿಕೊಂಡ ಜಯಶ್ರೀ ಹೈಸ್ಕೂಲಿಗೆ ಬಂದ ಮೇಲೆ ಸಂಗೀತವನ್ನು ದ್ವೀತೀಯ ಭಾಷೆಯನ್ನಾಗಿ ತೆಗೆದುಕೊಂಡರು. ಇಲ್ಲಿಂದ ಶಾಸ್ತೀಯ ಸಂಗಿತ ಪಾಠ ಆರಂಭಗೊಂಡಿತು.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಜಯಶ್ರೀ  ಮಾನಸ ಗಂಗೋತ್ರಿಯಲ್ಲಿ  ಉನ್ನತ ಶಿಕ್ಷಣ ಆರಂಭಿಸಿದರು.  ಇಲ್ಲಿ  ಸಂಗೀತದ ಒಳ ಹೊರಗನ್ನು  ತಿಳಿಯುವುದೇ ಇವರ ಕೃಷಿಯಾಯಿತು.  ವಿವಿಧ ರಾಗಗಳ ಪರಿಚಯ, ವಾಗ್ಗೇಯಕಾರರ ರಚಿತ ಕೃತಿಗಳ ಪರಿಚಯ ಮನನವಾಗತೊಡಗಿತು.  ಹಾಗೆಯೇ ಹಲವಾರು ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ನೀಡತೊಡಗಿದರು.  ಈ ಹಿಂದೆಯೇ ವೀಣಾಭ್ಯಾಸವನ್ನು 4 ವರ್ಷಗಳ ಕಾಲ ತಮ್ಮ ಚಿಕ್ಕಮ್ಮನಿಂದ ಕಲಿತಿದ್ದ ಜಯಶ್ರೀ ವಿವಿಧ ವಾದ್ಯಗಳ ವಿಶೇಷತೆಯನ್ನು ಅಭ್ಯಸಿಸಿದರು.

ಮತ್ತೆ ವಿದ್ಯಾಭ್ಯಾಸ ಮುಂದುವರೆದು ಕನ್ನಡದಲ್ಲಿ ಎಂ.ಎ. ಪದವಿ ಪಡೆದರು.  1977-78ರ ಅವಧಿಯಲ್ಲಿ  ಪು.ತಿ. ನರಸಿಂಹಾಚಾರ್ ರಚಿತ ರಾಮಾಯಣ ಗೀತರೂಪಕಗಳ ಮೇಲೆ ಎಂ.ಫಿಲ್. ಪಡೆದರು.  ಮುಂದೆ ತವರೂರಿಗೆ ವಾಪಸ್ಸು ಬಂದು ಕನ್ನಡ ಪ್ರಾಧ್ಯಾಪಕರಾಗಿ ಕಾವೇರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದರು.  ಇದೇ ಸಂದರ್ಭದಲ್ಲಿ  ಕಲಾವಿದ ಹಾಗೂ ತಂತ್ರಜ್ಞ ಅರವಿಂದ್  ಅವರನ್ನು ವರಿಸಿದರು.  ಮದುವೆಯ ನಂತರ ಕಲೆಯ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದ ಅರವಿಂದ್ ಜಯಶ್ರೀಯವರಲ್ಲಿ ಹುದುಗಿದ್ದ ಸಂಗೀತದ ಪ್ರತಿಭೆಯನ್ನು ಅರಳಿಸಲು ನಾದಲಹರಿ ಎಂಬ ಧ್ವನಿ ಸುರುಳಿ ಸಂಸ್ಥೆಯನ್ನು ಹುಟ್ಟುಹಾಕಿದರು.  ‘ನವೋದಯ’, ‘ನಾಕುತಂತಿ’ ಮುಂತಾದ ಧ್ವನಿ ಸುರುಳಿಯನ್ನು ತಯಾರಿಸಿ ಇದರಲ್ಲಿ ಕೆಲವು ಗೀತೆಗಳನ್ನು ಜಯಶ್ರೀಯವರಿಂದ  ಹಾಡಿಸಿದರು.  ಧ್ವನಿಸುರುಳಿ ಪ್ರಪಂಚಕ್ಕೆ ಕಾಲಿರಿಸಿದ ಜಯಶ್ರೀಯವರು ಮುಂದೆ ಮತ್ತಷ್ಟು ಗೀತೆಗಳನ್ನು ಹಾಡಿದರು. ಅರವಿಂದ್  ಕೆಲವು ಕಾರಣಾಂತರದಿಂದ  ನಾದಲಹರಿ ಸಂಸ್ಥೆಯಿಂದ ಹೊರಬಂದು ತಮ್ಮದೇ ಆದ ರೆಕಾರ್ಡಿಂಗ್ ಸ್ಟುಡಿಯೋ ಗಾನಲಹರಿಯನ್ನು ಆರಂಭಿಸಿದರು.  ಜಯಶ್ರೀ ಅವರಿಗೆ ಮುಂದೆ ಹಿಂದಿರುಗಿ ನೋಡುವ ಪ್ರಸಂಗಗಳೇ ಬರಲಿಲ್ಲ.  ತಮ್ಮದೇ ಆದ ಸ್ಟುಡಿಯೋ ಇರುವಾಗ ಎಷ್ಟು ಬೇಕಾದರೂ ಪ್ರಯೋಗಗಳನ್ನು ಮಾಡಬಹುದು ಎಂಬ ಧೈರ್ಯ ಬಂತು.  ಜನಪದ ಗೀತೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿ ಅದರ  ಬಗ್ಗೆ ಆಳವಾದ ಅಧ್ಯಯನದಲ್ಲಿ ತೊಡಗಿದರು ಧ್ವನಿ ಸುರುಳಿಯೊಂದನ್ನು ಹೊರತರಲು ತೀರ್ಮಾನಿಸಿದರು.  ಇದರ ಫಲವಾಗಿ ಹೊರಬಂದದ್ದೇ ‘ಆಡೋಣ ಬನ್ನಿ’ ಎಂಬ ಧ್ವನಿಸುರುಳಿ. ಸಂಬಂಧಗಳೇ ಇರದ ಸಾಲುಗಳನ್ನು ಪರಿಷ್ಕರಿಸಿ ಹಾಡಾಗಿ ರೂಪಿಸುವುದರಲ್ಲಿ ಜಯಶ್ರೀ ಸಿದ್ದಹಸ್ತರು.  ಹೀಗೇ ಮುಂದುವರೆದ ಇವರ ಕಾಯಕದಲ್ಲಿ ಬಹಳಷ್ಟು ಧ್ವನಿಸುರುಳಿಗಳು ಹೊರಬಂದವು.

ಬರವಣಿಗೆಯಲ್ಲಿ ಬಹಳಷ್ಟು ಅಧ್ಯಯನ ನಡೆಸಿದ್ದ ಜಯಶ್ರೀಯವರು ತಮ್ಮದೇ ಆದ ‘ತೂಗೀರೇ ಉಯ್ಯಾಲೆ ಲಕ್ಷ್ಮಿ’ಗೆ ಎಂಬ ಪುಸ್ತಕವನ್ನು ಹೊರತಂದರು.  ನಂತರ ‘ಸುವ್ವಿ ಸುವ್ವಾಲೆ’ ಎಂಬ ಭಾವಗೀತೆ ಸಂಕಲನವನ್ನು ಹೊರತಂದರು.  ಹೀಗೆ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದು.  1996ರಲ್ಲಿ  ಇವರ ಸಾಹಿತ್ಯ ಭಂಡಾರದಿಂದ ಹೊರಹೊಮ್ಮಿದ ಧ್ವನಿಸುರುಳಿ ‘ಚೆಲ್ಲಾಟಗಾರ ಮಾದಪ್ಪ’ ದಾಖಲೆಯನ್ನೇ ನಿರ್ಮಿಸಿತು.  ಇದರಲ್ಲಿನ ಗೀತೆಗಳನ್ನು ಡಾ. ರಾಜಕುಮಾರ್ ಹಾಡಿದ್ದಾರೆ.  ಈ ದಾಖಲೆಯ ನಂತರ ಒಂದರಮೇಲೊಂದರಂತೆ  ಐದು ಧ್ವನಿಸುರುಳಿಗಳು ಹೊರಬಂದವು.  ಅಲ್ಲದೆ ‘ಆಮೋದ’ ‘ಒಲವೇ’, ‘ಹೂಜೇನು’, ‘ಮಧುಕೋಗಿಲೆ’, ‘ನಿನ್ನ ಬಾಂದಳದಂತೆ’ ಮುಂತಾದ ಭಾವಗೀತೆಗಳ ಧ್ವನಿಸುರುಳಿಗೂ ಸಂಯೋಜನೆಯನ್ನು  ಮಾಡಿದರು.  ಸಂಯೋಜಕರಾಗಿ ಭಡ್ತಿ ಹೊಂದಿದ ನಂತರ ಹಾಡುವುದರ ಕಡೆಗೆ ಒಲವನ್ನು ಕಡಿಮೆ ಮಾಡಿದರು.  500ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಹೆಗ್ಗಳಿಕೆ ಇವರದು.

ಪುಸ್ತಕ ಪ್ರಾಧಿಕಾರದಿಂದ 2000ದ ವರ್ಷದ  ‘ಪುಸ್ತಕ ಸೊಗಸು’  ಪ್ರಶಸ್ತಿಯನ್ನು ಜಯಶ್ರೀಯವರ ರಚಿತ ‘ತುಂಟ ಕೃಷ್ಣನ ಕಂಡರೆ ಹೇಳಿ’  ಕವಿತಾ ಸಂಕಲನಕ್ಕೆ  ನೀಡಲಾಯಿತು.

ಇತ್ತೀಚಿನ ವರ್ಷಗಳಲ್ಲಿ ‘ಸುಗಮಸಂಗಿತ ಒಂದು ಸಮಗ್ರ ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ ಹಂಪಿ ಯೂನಿವರ್ಸಿಟಿಯ ಡಿಲಿಟ್ ಪಡೆದು ಡಾ. ಜಯಶ್ರೀ ಅರವಿಂದ್ ಆಗಿದ್ದಾರೆ.  ಸುಗಮ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಜಯಶ್ರೀ ಅವರು  ಪ್ರಸಿದ್ಧ ಸಂಯೋಜಕ ಪದ್ಮಚರಣ್ ಹಾಗೂ ಪಿ.ಕಾಳಿಂಗರಾವ್‌ರವರ ಬಗ್ಗೆ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 

ಜಯಶ್ರೀಯವರನ್ನು ಹಲವಾರು ಸಂಘ ಸಂಸ್ಥೆಗಳು, ಸಂಗೀತ ಸಾಹಿತ್ಯ ಕಲಾನಿಧಿ, ಸ್ವರ ಮಂದಾರ, ಅತ್ತಿಮಬ್ಬೆ ಮುಂತಾದ ಪ್ರಶಸ್ತಿಗಳ ಮೂಲಕ ಗೌರವಿಸಿವೆ.  ಜಯಶ್ರೀ ಅವರ ಸಂಗೀತ ಸೇವೆಯಲ್ಲಿ ಇನ್ನೂ ಉತ್ಕೃಷ್ಟ ಸಂಗೀತ ಕುಸುಮಗಳು ಮೂಡಿಬರುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳೋಣ.

On the birth day of our musician Jayashree Aravind

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ