ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾದೇವಿ ವರ್ಮಾ


 ಮಹಾದೇವಿ ವರ್ಮಾ


ಮಹಾದೇವಿ ವರ್ಮಾ ಅವರು ಆಧುನಿಕ ಹಿಂದಿ ರಮ್ಯವಾದಿ (ಛಾಯವಾದಿ) ಕಾವ್ಯ ಪ್ರವರ್ತಕರಲ್ಲಿ ಒಬ್ಬರು. 

ಭಾರತೀಯ ಸಾಹಿತ್ಯಲೋಕದ ಮಹಾನ್ ಸಾಧಕರೂ, ಜ್ಞಾನಪೀಠಪುರಸ್ಕೃತರೂ ಆದ  ಮಹಾದೇವಿ ವರ್ಮಾ ಅವರು 1907ರ ಮಾರ್ಚ್ 26 ರಂದು ಉತ್ತರ ಪ್ರದೇಶದ ಫಾರುಖಾಬಾದ್ ಎಂಬಲ್ಲಿ ಜನಿಸಿದರು.  ವಿದ್ಯಾ ಪ್ರೇಮಿಗಳಾದ ಮಹಾದೇವಿ ಅವರ ತಂದೆತಾಯಿಗಳು ಮಗಳ ಓದು ಬರಹದ ಬಗ್ಗೆ ತುಂಬಾ ಆಸಕ್ತಿ ವಹಿಸಿದರು. ಇಂದೂರಿನಲ್ಲಿ ಇವರ ಪ್ರಾರಂಭಿಕ ಶಿಕ್ಪಣವಾಯಿತು. ಹನ್ನೆರಡನೆಯ ವಯಸ್ಸಿನಲ್ಲಿ ಸ್ವರೂಪನಾರಾಯಣ ವರ್ಮಾ ಅವರ ಜೊತೆಗೆ ವಿವಾಹವಾಯಿತು.

ಮಹಾದೇವಿ ವರ್ಮಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರದಲ್ಲಿ ಪದವಿ, ಹಾಗೂ ಸಂಸ್ಕೃತ ಮತ್ತು ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಮುಂದೆ ಅಲಹಾಬಾದಿನ ಪ್ರಯಾಗ ಮಹಿಳಾ ವಿದ್ಯಾಪೀಠದಲ್ಲಿ ಮುಖ್ಯ ಅಧ್ಯಾಪಿಕೆಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದರು. ಅವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಚಿತ್ರಕಲೆಯನ್ನೂ ರೂಢಿಸಿಕೊಂಡಿದ್ದರು. 

ಮಹಾದೇವಿ ವರ್ಮ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು. ಸಾಹಿತ್ಯಕಾರ ಸಂಸದ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಮಹಾದೇವಿ ವರ್ಮ ಅವರು ಹೈಸ್ಕೂಲ್ ಮುಗಿಸುವ ಹೊತ್ತಿಗಾಗಲೆ ತಮ್ಮ ರಹಸ್ಯವಾದಿ ಭಾವನೆಗಳಿಂದೊಡಗೂಡಿದ ಅನೇಕ ಕವನಗಳನ್ನು ರಚಿಸಿದ್ದರು. ಇವನ್ನು ಇವರ ಮೊದಲ ಕೃತಿ ನೀಹಾರದಲ್ಲಿ ಕಾಣಬಹುದು. ನೀಹಾರ (1930), ರಶಿಮ (1932), ನೀರಜಾ (1934) ಸಾಂಧ್ಯ ಗೀತ (1936), ಯಾಮ (1939), ದೀಪಶಿಖಾ (1942), ಅಧುನಿಕ ಕವಿ (ಸಂಗ್ರಹ 1946), ಸಪ್ತಪರ್ಣಾ (1060), ಸಂಧಿನೀ (ಸಂಗ್ರಹ 1964)- ಮುಂತಾದವು ಮಹಾದೇವಿ ವರ್ಮ ಅವರ ಕಾವ್ಯಸಂಕಲನಗಳು.

ಅತೀತ ಕೇ ಚಲನಚಿತ್ರ (1940), ಸ್ಮೃತಿಕಾ ರೇಖಾಯೇಂ (1943); ಶೃಂಖಲಾ ಕೀ ಖಿಡಿಯಾಮ್ (1950), ಪಥ ಕೇ ಸಾಥೀ, ಮೇರಾ ಪರಿಷತ್ ಮುಂತಾದವುಗಳಲ್ಲಿ ಓರ್ವ ಸಾಧಕ ಅನುಭಾವಿಯ ಸಾಧನೆಯ ವಿಭಿನ್ನ ಸೋಪಾನಗಳು, ಅತ್ಯಂತ ಸರಸ ಮತ್ತು ವ್ಯಂಜಕತೆಗಳ ಮೂಲಕ ವಿಪುಲವಾಗಿ ಅಭಿವ್ಯಕ್ತಗೊಂಡಿವೆ. ನಿಸರ್ಗ ಇಲ್ಲಿ ಉದ್ದೀಪನ ಮತ್ತು ಅಲಂಕಾರ ಹಾಗೂ ಪ್ರತೀಕವಾಗಿ ಬಳಸಲ್ಪಟ್ಟಿದೆ. ಕವನಗಳ ಭಾವಾಭಿವ್ಯಕ್ತಿಯನ್ನು ಪ್ರಭಾವಶಾಲಿಗೊಳಿಸಲು ಇವರು ತಮ್ಮ ಪ್ರಬುದ್ಧ ಚಿತ್ರಕಲೆಯನ್ನೂ ಬಳಸಿಕೊಂಡಿದ್ದಾರೆ. ಕಾವ್ಯದಲ್ಲಿರುವ ಕರುಣರಸ, ಕೋಮಲಭಾವ, ಭಾವಗೀತದ ಗೇಯತೆ ಇವುಗಳಿಂದಾಗಿ ಇವರ ಕಾವ್ಯಗಳು ತುಂಬ ಜನಪ್ರಿಯವಾಗಿದ್ದರೂ ರಹಸ್ಯವಾದಿ ಪ್ರತೀಕಗಳು ಮತ್ತು ದಾರ್ಶಕನಿಕತೆಯ ಅಧಿಕ್ಯದಿಂದಾಗಿ ಕೆಲವೆಡೆ  ಕ್ಲಿಷ್ಟವಾಗಿಯೂ ಕಾಣುತ್ತದೆ.

ಅತೀತ ಕೇ ಚಲನಚಿತ್ರ ಮೊದಲಾದ ಗದ್ಯಗ್ರಂಥಗಳು ವ್ಯಕ್ತಿ ಚಿತ್ರಗಳ ಶ್ರೇಣಿಗೆ ಸೇರಿದ ಪ್ರಸಿದ್ಧ ಕೃತಿಗಳು, ಇವರ ಕವನಗಳು, ಆತ್ಮಕೇಂದ್ರಿತವಾಗಿದ್ದರೂ ಗದ್ಯಕೃತಿಗಳು ಸಮಾಜ ಕೇಂದ್ರಿತವಾಗಿರುವುದು ಒಂದು ವೈಶಿಷ್ಟ್ಯ.  ಕವನಗಳಲ್ಲಿ ಕಲ್ಪನೆಯೇ ಪ್ರಧಾನವಾದರೆ ಗದ್ಯದಲ್ಲಿ ವಾಸ್ತವಿಕತೆಯೇ ಪ್ರಧಾನವಾಗಿದೆ. ಮಹಾದೇವಿಯವರು ಗ್ರಾಮೀಣ ಪ್ರದೇಶದ ಶೋಷಿತ ದೀನ ದಲಿತರೊಡನೆ ನಿಕಟ ಸಂಪರ್ಕ ಹೊಂದಿ ಅವರ ಸುಖದುಃಖಗಳನ್ನರಿತು ಅವರ ಕಡು ಬಡತನ, ಅಜ್ಞಾನ ಮೊದಲಾದವನ್ನು ವ್ಯಕ್ತಿಚಿತ್ರಣಗಳಲ್ಲಿ ತೋರಿಸಿದ್ದಾರೆ. ಇಂದಿನ ಸಮಾಜದ ನಾರಿಯರ ಬಹುಮುಖ ಸಮಸ್ಯೆಗಳೂ ಇವುಗಳಲ್ಲಿ ಮೂಡಿಬಂದಿವೆ. ಮಹಾದೇವಿ ಅವರು ತಮ್ಮ ಪಾತ್ರಚಿತ್ರಣಗಳಲ್ಲಿ ಮನೋವೈಜ್ಞಾನಿಕ ಶೈಲಿಯನ್ನು ಬಳಸಿದ್ದಾರೆ. ಪಥ ಕೇ ಸಾಥೀ ಎಂಬ ಗ್ರಂಥದಲ್ಲಿ ಸಮಕಾಲೀನ ಲೇಖಕರ ಸುಂದರ ವ್ಯಕ್ತಿಚಿತ್ರಗಳಿವೆ. ಗದ್ಯದ ಶೈಲಿ ಸರಳವೂ ಅಕರ್ಷಕವೂ ಕಾವ್ಯದ ಗೇಯತೆಯಿಂದ ಕೂಡಿದುದೂ ಆಗಿದೆ. 

ಮಹಾದೇವಿ ವರ್ಮ ಅವರಿಗೆ   ಸಾಹಿತ್ಯ ಅಕಾಡೆಮಿ ಫೆಲೀಷಿಪ್, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು  ಸಂದಿದ್ದವು. 1982ರಲ್ಲಿ ಅವರ 'ಯಾಮಾ' ಕವನ ಸಂಕಲಕ್ಕೆ ಜ್ಞಾನಪೀಠ ಪ್ರಶಸ್ತಿ ಸಂದಿತು.

ಮಹಾದೇವಿ ವರ್ಮಾ ಅವರು 1987 ವರ್ಷದ ಸೆಪ್ಟೆಂಬರ್ 11 ರಂದು ಈ ಲೋಕವನ್ನಗಲಿದರು.

On the birth anniversary of great poet Mahadevi Varma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ