ನೃಸಿಂಹಭಾರತೀ
ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು
Sri Sacchidananda Shivabhinava Nrusimha Bharati 🌷🙏🌷
ಭಗವತ್ಪಾದ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿತ ದಕ್ಷಿಣಾಮ್ನಾಯ ಶೃಂಗಗಿರಿ ಶ್ರೀ ಶಾರದಾ ಪೀಠದಲ್ಲಿ 33ನೇ ಅಧಿಪತಿಗಳಾಗಿ ಅಭಿನವ ಶಂಕರರು ಎಂದೇ ಪ್ರಸಿದ್ಧರಾಗಿ ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿ ಗಳವರು 33 ವರ್ಷಗಳ ಕಾಲ ಪೀಠಾಧಿಪತ್ಯವನ್ನು ವಹಿಸಿ (1879-1912)
ಸಂಪ್ರದಾಯನಿಷ್ಠರಾಗಿ ಧರ್ಮ ರಕ್ಷಣೆ ಮಾಡಿ ರಾರಾಜಿಸಿದರು.
ಶ್ರೀಗಳವರದ್ದು ಪಂಡಿತ ವಂಶ. ತಂದೆ ಕುಣಿಗಲ್ ರಾಮಾಶಾಸ್ತ್ರಿಗಳವರು, ತಾಯಿ ಲಕ್ಷಮ್ಮರವರು. ಪೈಂಗಳ ಸಂವತ್ಸರದ ಪಾಲ್ಗುಣ ಮಾಸದ ಬಹುಳ ಏಕಾದಶಿ ದಿವಸ (11.03.1858) ಶ್ರವಣ ನಕ್ಷತ್ರದಲ್ಲಿ ಪುತ್ರರತ್ನಕ್ಕೆ ನಂಜನಗೂಡು ಶ್ರೀಕಂಠೇಶ್ವರನ ಅನುಗ್ರಹದಿಂದ ಜನ್ಮವಿತ್ತರು. ನಂತರ ಶಿಶುವಿಗೆ "ಶಿವಸ್ವಾಮಿ" ಎಂದೇ ನಾಮಕರಣ ಮಾಡಿದರು.
ಬಾಲಕ ಶಿವಸ್ವಾಮಿಗೆ ಎರಡು ವರ್ಷವಿನ್ನೂ ತುಂಬಿರಲಿಲ್ಲ. ಆಗಲೇ ಪಿತೃ ವಿಯೋಗ ಉಂಟಾಗಿ ಹಿರಿಯ ಸಹೋದರರಾದ ಕುಣಿಗಲ್ ಲಕ್ಷ್ಮಿ ನರಸಿಂಹ ಶಾಸ್ತ್ರಿಗಳೇ ಇವರಿಗೆ ಪಿತೃ ಸದೃಶರಾಗಿ ಪ್ರೀತಿ, ವಿಶ್ವಾಸಗಳಿಂದ ಪೋಷಿಸಿದರು. ಯಾವುದೇ ಅಡೆತಡೆಗಳಿಲ್ಲದೆ ಇವರ ವೇದ ವಿದ್ಯಾಭ್ಯಾಸವು ನಿರ್ವಿಘ್ನವಾಗಿ ನಡೆಯಿತು. ಆಗ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ವಿರಾಜಮಾನರಾಗಿದ್ದವರು ಮಹಾತಪಸ್ವಿಗಳೂ ನಿಗ್ರಹಾನುಗ್ರಹ ಸಮರ್ಥರು ಆದ ಅಷ್ಟಮ ಜಗದ್ಗುರುಗಳು ಶ್ರೀ ನೃಸಿಂಹಭಾರತೀ ಮಹಾಸ್ವಾಮಿಗಳವರು ಮುಮ್ಮಡಿ ಕೃಷ್ಣರಾಜ ಒಡೆಯರ್ರ ಪ್ರಾರ್ಥನೆ ಮೇರೆಗೆ ಗುರುಗಳವರು ಮೈಸೂರಿಗೆ ದಯಮಾಡಿಸಿದ್ದರು. ಅವರ ದರ್ಶನಕ್ಕಾಗಿ ಆಸ್ಥಾನ ವಿದ್ವಾಂಸರಾಗಿದ್ದ ಕುಣಿಗಲ್ ಲಕ್ಷ್ಮಿ ನರಸಿಂಹಶಾಸ್ತ್ರಿಗಳೊಂದಿಗೆ ಅವರ ತಮ್ಮನಾದ ಬಾಲಕ ಶಿವಸ್ವಾಮಿಯೂ ಬಂದಿದ್ದರು. ಆಗ ಬಾಲಕನಾಗಿದ್ದ ಶಿವಸ್ವಾಮಿಗೆ ಕೇವಲ ಎಂಟು ವರ್ಷ ವಯಸ್ಸು. ಶ್ರೀಗಳವರು ಬಾಲಕನನ್ನು ನೋಡಿ ಸಮೀಪದಲ್ಲಿ ಕುಳ್ಳಿರಿಸಿಕೊಂಡು 'ನಿನಗೆ ಏನು ಬೇಕಪ್ಪಾ ಮಗೂ?' ಎಂದು ಕೇಳಿದರು. ಆಗ ಬಾಲಕ ಶಿವಸ್ವಾಮಿಯು “ಮಹಾಸ್ವಾಮಿಗಳೇ, ತಮ್ಮಲ್ಲಿ ಸ್ಥಿರವಾದ ಭಕ್ತಿ ಇರುವಂತೆ ನನ್ನನ್ನು ಅನುಗ್ರಹಿಸಿರಿ ಅದರಿಂದಲೇ ನಾನು ಕೃತಾರ್ಥನಾಗುವೆನು' ಎಂದು ಬಾಲಕ ಉತ್ತರಿಸಿದನು. ಅಂದೇ ಶ್ರೀಗಳವರು ಶಿವಸ್ವಾಮಿಯೇ ತಮಗೆ ತಕ್ಕ ಶಿಷ್ಯರೆಂದು ಯೋಜಿಸಿ ಫಲ-ವಸ್ತ್ರಾದಿಗಳನ್ನು ಅನುಗ್ರಹಿಸಿ ಶೃಂಗೇರಿ ಶ್ರೀಶಾರದಾ ಪೀಠಕ್ಕೆ
ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂದು
ನಿಶ್ಚಯಿಸಿ ಅಂದಿನ ದೊರೆಗಳಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಬಾಲಕ ಶಿವಸ್ವಾಮಿಯ ಸನ್ಯಾಸ ಸ್ವೀಕಾರ
ಸಮಾರಂಭವು 1866ನೇ ಅಕ್ಷಯ ಸಂವತ್ಸರದ ಆಷಾಢ ಬಹುಳ ಷಷ್ಠಿ ದಿವಸದಂದು ಗುರುಗಳಾದ ಅಷ್ಟಮ ಶ್ರೀನೃಸಿಂಹಭಾರತೀ ಮಹಾಸ್ವಾಮಿಗಳವರ ಅನುಜ್ಞೆಯಂತೆ ಪುರುಷ ಸೂಕ್ತ, ಹೋಮ, ಅಷ್ಟಶ್ರಾದ್ಧಗಳು, ಮೊದಲಾದ ಧಾರ್ಮಿಕ ಕಾರ್ಯಗಳೆಲ್ಲಾ ಮೈಸೂರು ಅರಮನೆಯ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ ವಿಧಿವತ್ತಾಗಿ ನೆರವೇರಿಸಿದರು. ನಂತರ ಕಾರಂಜಿಕೆರೆಗೆ ಆಗಮಿಸಿ ಪ್ರೈಷ ಮಂತ್ರವನ್ನುಚ್ಛರಿಸಿ ಶಿಖಾ, ಯಜ್ಞೋಪವೀತಾದಿಗಳನ್ನು ತ್ಯಜಿಸಿ ಆಶ್ರಮೋಚಿತವಾದ ಕೌಪೀನ ಕಟಿಸೂತ್ರ, ಕಾಷಾಯ ವಸ್ತ್ರಗಳನ್ನು, ದಂಡಕಮಂಡಲು, ಪಾದುಕೆಗಳನ್ನೂ ಸ್ವೀಕರಿಸಿ ಮಹಾವಾಕ್ಯೋಪದೇಶ ಪಡೆದು 'ಶ್ರೀಸಚ್ಚಿದಾನಂದ ಶಿವಾನಭಿನವ ನೃಸಿಂಹ ಭಾರತೀ' ಎಂಬುದಾಗಿ ಯೋಗಪಟ್ಟವನ್ನು ಸ್ವೀಕರಿಸಿದರು. ಆಗ ಶ್ರೀಗಳವರಿಗೆ ಎಂಟು ವರ್ಷ ವಯಸ್ಸು. ಶ್ರೀಗಳವರ ಸನ್ಯಾಸ ಸ್ವೀಕಾರ ಸಮಾರಂಭದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ರವರು, ಆಗಿನ ಸಂದರ್ಭದಲ್ಲಿ ಚೀಫ್ ಕಮೀಷನರ್ ಆಗಿದ್ದ ಮಿಸ್ಟರ್ ಬೌರಿಂಗ್ ಸಾಹೇಬರವರು, ಆಸ್ಥಾನ ವಿದ್ವಾಂಸರುಗಳು, ಅನೇಕ ಗಣ್ಯ ವ್ಯಕ್ತಿಗಳು, ಭಕ್ತರುಗಳು ಸಹ ಉಪಸ್ಥಿತರಿದ್ದರು.
ಪ್ರಮಾದಿ ಸಂವತ್ಸರದ ಆಷಾಢ ಶುದ್ಧ ಅಷ್ಟಮಿ ಶುಕ್ರವಾರದಂದು (1879) ಸಂಪ್ರದಾಯಾನುಸಾರವಾಗಿ
ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರಿಗೆ ವ್ಯಾಖ್ಯಾನ ಸಿಂಹಾಸನದಲ್ಲಿ ಪಟ್ಟಾಭಿಷೇಕವು
ನಡೆಯಿತು.
ಪಟ್ಟಾಭಿಷಿಕ್ತರಾದ ಶ್ರೀಗಳವರು ವಿಜಯ ಯಾತ್ರೆಯನ್ನು ಕೈಗೊಳ್ಳಬೇಕೆಂದು ಹಲವಾರು ಭಕ್ತರು ಪ್ರಾರ್ಥಿಸುತ್ತಿದ್ದರು. ಹಾಗಾಗಿ ಮಹಾಸ್ವಾಮಿಗಳವರು ಪ್ರಥಮ ವಿಜಯ ಯಾತ್ರೆಯನ್ನು 1885ರ ಮಾರ್ಗಶಿರ ಶುದ್ಧ ಪಂಚಮಿ ಶುಕ್ರವಾರ ಶೃಂಗೇರಿಯಿಂದ ಪ್ರಾರಂಭಿಸಿ ಸುಮಾರು 11 ತಿಂಗಳ ಕಾಲ ಉತ್ತರ ಕನ್ನಡ ಪ್ರಾಂತ್ಯಗಳಲ್ಲಿ ವಿಜಯ ಯಾತ್ರೆಯನ್ನು ಮಾಡಿ ಸರ್ವಧಾರಿ ಸಂವತ್ಸರದ ಮಾಘಶುದ್ಧ ತ್ರಯೋದಶಿಯಂದು ಶೃಂಗೇರಿಗೆ ಆಗಮಿಸಿದರು. ನಂತರ ಖರಸಂವತ್ಸರದ ಜೇಷ್ಠ ಬಹುಳ ಪಂಚಮಿಯಂದು (1891) ಎರಡನೇ ವಿಜಯ ಯಾತ್ರೆಯನ್ನು ಪ್ರಾರಂಭಿಸಿ ಆಷಾಢ ಶುಕ್ಲ ದ್ವಿತೀಯಾದಂದು ಮೈಸೂರು ನಗರವನ್ನು ಪ್ರವೇಶಿಸಿದರು. ಹಿಂದಿನ ಪದ್ಧತಿಯಂತೆ ಮಹಾರಾಜ ಶ್ರೀ ಚಾಮರಾಜ ಒಡೆಯರ್ರವರು ಗುರುಗಳವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಶ್ರೀಮನ್ ಮಹಾರಾಜರವರ ಪ್ರಾರ್ಥನೆಯ ಮೇರೆಗೆ ಶ್ರೀಗಳವರು ಆ ವರ್ಷದ ಚಾತುರ್ಮಾಸ್ಯವನ್ನು, ಶರನ್ನವರಾತ್ರಿ ಮಹೋತ್ಸವವನ್ನು ಮೈಸೂರಿನಲ್ಲಿಯೇ ಆಚರಿಸಿದರು. ಈ ಸಂದರ್ಭದಲ್ಲಿ ಶ್ರೀಚಾಮರಾಜ ಒಡೆಯರ್ ರವರು ಪ್ರಾರಂಭಿಸಿದ್ದ 'ಶ್ರೀ ಚಾಮರಾಜೇಂದ್ರ ಸರಸ್ವತಿ ಪ್ರಸಾದ' ಎಂಬ ಹೆಸರಿನ ಸಂಸ್ಕೃತ ಪಾಠಶಾಲೆಗೆ ದಯಮಾಡಿಸಿ ಖರಸಂವತ್ಸರದ ಕಾರ್ತಿಕ ಶುಕ್ಲ
ತದಿಗೆಯಂದು ಶ್ರೀವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸಿ ತಮ್ಮ ಅಮೃತಹಸ್ತಗಳಿಂದ ಪೂಜೆ ಸಲ್ಲಿಸಿದರು. ಆ ಸಮಯದಲ್ಲಿ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ರವರಿಗೆ, ರಾಜ ಕುಟುಂಬದವರಿಗೆ, ದಿವಾನ್ ಶೇಷಾದ್ರಿ ಅಯ್ಯರ್ ರವರಿಗೆ ಹಾಗೂ ಭಕ್ತಾದಿಗಳಿಗೂ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. ನಂತರ ಮೈಸೂರಿನಿಂದ ಹೊರಟು, ನಂಜನಗೂಡಿನಲ್ಲಿ 22 ದಿವಸಗಳ ವಾಸ್ತವ್ಯ ಹೂಡಿ ಶ್ರೀಪಾರ್ವತೀ ಸಮೇತನಾದ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಪೂಜಾದಿಗಳನ್ನು ನೆರವೇರಿಸಿ ಭಕ್ತರುಗಳನ್ನು ಅನುಗ್ರಹಿಸಿದರು. ನಂತರ ಅಲ್ಲಿಂದ ಚಾಮರಾಜ ನಗರ, ಗುಂಡ್ಲುಪೇಟೆ, ಹೆಗ್ಗಡದೇವನ ಕೋಟೆ, ಎಡತೊರೆ, ಹುಣಸೂರು, ಅರಕಲಗೂಡು ಮಾರ್ಗವಾಗಿ ಕೊಡಗು ಪ್ರದೇಶವನ್ನು ಪ್ರವೇಶಿಸಿ ಯಾತ್ರೆ ಕೈಗೊಂಡು ಕಾವೇರಿ ಉತ್ಪತ್ತಿ ಸ್ಥಾನ ತಲಕಾವೇರಿಗೆ ಚಿತ್ರೈಸಿ ಸುವರ್ಣ ಪುಷ್ಪಗಳಿಂದ ಅರ್ಚನೆ ಮಾಡಿ ಪೂಜಿಸಿದರು. ನಂತರ ಯಾತ್ರೆಯನ್ನು ತಮಿಳುನಾಡು ಭಾಗಕ್ಕೆ ಮುಂದುವರಿಸಿ ಸುಮಾರು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಸಂಚರಿಸಿ ಧರ್ಮಪ್ರಸಾರ ಮಾಡಿ ಭಕ್ತಾದಿಗಳನ್ನು ಅನುಗ್ರಹಿಸಿ 1895ರಲ್ಲಿ
ಶೃಂಗೇರಿಗೆ ಮರಳಿದರು.
ಶ್ರೀಗಳವರು ಶೃಂಗೇರಿಯಲ್ಲಿ ವಾಸ್ತವ್ಯವಿದ್ದಾಗ ತುಂಗಾ ನದಿ ತೀರದಲ್ಲಿ ವಿವಿಕ್ತವಾಗಿಯೂ, ರಮಣೀಯವಾಗಿಯೂ ಇರುವ ಪ್ರದೇಶಗಳಲ್ಲೂ ಹಾಗೂ ನರಸಿಂಹ ಪರ್ವತದಲ್ಲಿ ಹೆಚ್ಚು ಆತ್ಮಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು. ಶ್ರೀಗಳವರ ಪೀಠಾವಧಿಯಲ್ಲಿ ಶೃಂಗೇರಿಯಲ್ಲಿ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆ ಸ್ಥಾಪನೆ ಹಾಗೂ 1907ರಲ್ಲಿ ಶ್ರೀಶಾರದಾ ಅಮ್ಮನವರ ದೇವಾಲಯದ ಜೀರ್ಣೋದ್ಧಾರ ನಡೆಯಿತು. ಬೆಂಗಳೂರಿನಲ್ಲಿ ಶ್ರೀಶಂಕರ ಮಠದ ನಿರ್ಮಾಣ, ಶ್ರೀಶಂಕರ ಭಗವತ್ಪಾದರ ಜನ್ಮಭೂಮಿಯಾದ ಕೇರಳದ ಕಾಲಟಿ ಕ್ಷೇತ್ರವನ್ನು ಪರಿಷ್ಕರಿಸಿ ಅಲ್ಲಿ ಶ್ರೀಶಂಕರರ, ಶ್ರೀಶಾರದಾಂಬ ಅಮ್ಮನವರ ದೇವಾಲಯ ಸ್ಥಾಪಿಸಿ ಅದನ್ನು ಭಾರತದ ಶ್ರೇಷ್ಠ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸಿದರು. ಎಲ್ಲೆಡೆ ಭಗವತ್ಪಾದ ಶ್ರೀಶಂಕರರ ಜಯಂತ್ಯುತ್ಸವವನ್ನು ಆಚರಿಸುವಂತೆ ವ್ಯವಸ್ಥೆ ಮಾಡಿದರು. ಶ್ರೀಗಳವರು ದೇಶಾದ್ಯಂತ ಸಂಚಾರ ಮಾಡಿ ಧರ್ಮವೆಂದರೇನು?, ಧರ್ಮ ಪಾಲಿಸುವುದರಿಂದ ದೊರಕುವ ಪ್ರಯೋಜನವೇನು, ಅದನ್ನು ಹೇಗೆ ಪಾಲಿಸಬೇಕು ಎಂದು ಭಕ್ತರಿಗೆ ತಿಳಿಸಿ, ಶ್ರೀಶಂಕರಾಚಾರ್ಯರ ಉಪದೇಶಗಳನ್ನು ಪ್ರಸಾರ ಮಾಡಿದರು. ಶ್ರೀಗಳವರ ರಚನೆಗಳು ‘ಭಕ್ತಿಸುಧಾ ತರಂಗಿಣೀ' ಎಂಬ ಗ್ರಂಥದಲ್ಲಿ ಮುದ್ರಿತವಾಗಿದೆ.
ಶ್ರೀಗಳವರು ಶ್ರೀಶಂಕರ ಭಗವತ್ಪಾದರ ಎಲ್ಲಾ ಕೃತಿಗಳನ್ನು ಸಂಪಾದಿಸಿ, ಸಂಶೋಧಿಸಿ ಪುನರ್ ಮುದ್ರಣ ಮಾಡಿಸಿದರು. ವಿಶೇಷವಾಗಿ ವಿವೇಕ ಚೂಡಾಮಣಿಗೆ ವ್ಯಾಖ್ಯಾನವನ್ನು ರಚಿಸಲು ಸಂಕಲ್ಪಿಸಿ ಮೊದಲ ಏಳು ಶ್ಲೋಕಗಳಿಗೆ ಹೃದ್ಯವಾದ ವ್ಯಾಖ್ಯಾನವನ್ನು ರಚಿಸಿದರು. ಈ ವ್ಯಾಖ್ಯಾನವು "ವಿವೇಕೋದಯಃ' ಎಂಬ ಹೆಸರಿನಿಂದ ಶ್ರೀಮಠದ ವತಿಯಿಂದ ಪ್ರಕಟಿತವಾಗಿದೆ.
ಶ್ರೀಗಳವರು ಕೊನೆಯ ದಿವಸಗಳಲ್ಲಿ ಹೆಚ್ಚು ಹೆಚ್ಚು ಅಂತರ್ಮುಖಿಗಳಾಗುತ್ತಾ ಪರೀಧಾವಿ ಸಂವತ್ಸರದ ಚೈತ್ರ ಶುದ್ಧ ಬಿದಿಗೆಯಂದು ಬೆಳಿಗ್ಗೆ ಧ್ಯಾನ ಪರವಶರಾಗಿ ಶರೀರವನ್ನು ತ್ಯಜಿಸಿ ಪರಬ್ರಹ್ಮರಲ್ಲಿ ಐಕ್ಯರಾದರು (1912).
34ನೇ ಪೀಠಾಧಿಪತಿಗಳಾದ ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರು ವಿಜಯ ಯಾತ್ರೆಯನ್ನು ಕೈಗೊಂಡು 1924ರಲ್ಲಿ ಮೈಸೂರಿಗೆ ಆಗಮಿಸಿದಾಗ ತಮ್ಮ ಗುರುಗಳಾದ ಶ್ರೀ ಜಗದ್ಗುರು ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರು ಜನ್ಮತಾಳಿ, ತಮ್ಮ ಬಾಲ್ಯವನ್ನು ಕಳೆದಿದ್ದ ಜಾಗದಲ್ಲಿ ಅವರ ಸ್ಮರಣಾರ್ಥ ವಾಗಿ ಭವ್ಯವಾದ ಮಂದಿರವನ್ನು ನಿರ್ಮಿಸಿ ಅಲ್ಲಿ ಮಹಾಸ್ವಾಮಿಗಳವರ ಅಮೃತ ಶಿಲಾಮೂರ್ತಿಯನ್ನು ಸ್ಥಾಪಿಸಿ 'ಅಭಿನವ ಶಂಕರಾಲಯ' ಎಂದು ನಾಮಕರಣ ಮಾಡಿದರು.
ಲೇಖನ ಕೃಪೆ: ಶ್ರೀಕಂಠ ಕುಮಾರ್
ಕಾಮೆಂಟ್ಗಳು